ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರ ಆಪ್ತ ಹಾಗೂ ಬೆಳಗಾವಿ ಬಿಜೆಪಿ ಮುಖಂಡ ಪೃಥ್ವಿ ಸಿಂಗ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಹುದ್ದೆ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಆರೊಪಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ವಕ್ತಾರ ಹಾಗೂ ಮಾಜಿ ಶಾಸಕ ಪಿ.ರಾಜೀವ್, ಈ ಪ್ರಕರಣದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅಧಿಕಾರ ದುರ್ಬಳಕೆ ಮಾಡಿಕೊಂಡು ಪೊಲೀಸರ ಮೂಲಕ ಕೋರ್ಟ್ ಗೆ ಸುಳ್ಳು ಮಾಹಿತಿ ಕೊಡಿಸಿದ್ದಾರೆ ಎಂದು ಆರೋಪಿಸಿದರು. ಜೊತೆಗೆ ಇದೇ ವೇಳೆ ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಿದರು.
ಪ್ರಕರಣ ಕುರಿತಂತೆ ದೂರಿನ ಮರುಸೃಷ್ಟಿ ಮಾಡಲಾಗಿದೆ. ಇದೊಂದು ರಾಜ್ಯ ಸರಕಾರ ಪ್ರಾಯೋಜಿತ ದೌರ್ಜನ್ಯ. ಇಂತಹದನ್ನು ನಿಯಂತ್ರಿಸುವಲ್ಲಿ ವಿಫಲರಾದ ಗೃಹಸಚಿವ ಡಾ. ಪರಮೇಶ್ವರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
ತಮ್ಮ ಸೋದರನನ್ನು ರಕ್ಷಿಸುವ ದೃಷ್ಟಿಯಿಂದ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ತಮ್ಮ ಹುದ್ದೆ ದುರ್ಬಳಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಅವರು ಕೂಡ ರಾಜೀನಾಮೆ ಕೊಡಬೇಕು. ಇಲ್ಲವಾದರೆ ಮುಖ್ಯಮಂತ್ರಿಗಳು ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ನಮ್ಮ ಕಾರ್ಯಕರ್ತ ಪೃಥ್ವಿ ಸಿಂಗ್ ಮೇಲೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಹೋದರ ಚನ್ನರಾಜ ಹಟ್ಟಿಹೊಳಿ ಅವರ ಬೆಂಬಲಿಗರ ಜೊತೆ ಸೇರಿ ಹಲ್ಲೆ ಮಾಡಿ ಅವರ ಕೈಯಿಂದ ಮೊಬೈಲ್ ಕಿತ್ತುಕೊಂಡಿದ್ದ ಘಟನೆ ನಡೆದಿದೆ. ಇದರಿಂದ ಗಾಯಗೊಂಡಿರುವ ಅವರು ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಹಲ್ಲೆ ಸಂಬಂಧ ಪೃಥ್ವಿ ಸಿಂಗ್ ಅವರು 6 ಪುಟಗಳ ದೂರು ದಾಖಲಿಸಿದ್ದರು ಎಂದರು.
ತಮ್ಮ ದೂರಿನ ಬಗ್ಗೆ ನಿನ್ನೆ ಪೃಥ್ವಿ ಸಿಂಗ್ ಅವರು ಸಂಶಯಗೊಂಡು ಟ್ರೂ ಕಾಪಿಗೆ ಮನವಿ ಸಲ್ಲಿಸಿದ್ದರು. ಆದರೆ, ಪೊಲೀಸರು ಎಫ್ಐಆರ್ ಪ್ರತಿ, ದೂರಿನ ಪ್ರತಿ ಕೊಡಲು ತಕರಾರು ಮಾಡಿದ್ದಾರೆ. ಹಾಗಾಗಿ ಅವರು ಸಂಶಯಗೊಂಡು ನ್ಯಾಯಾಲಯದಿಂದ ಟ್ರೂ ಕಾಪಿ ಪಡೆದಿದ್ದಾರೆ. ಆಗ ಗೋಲ್ ಮಾಲ್ ನಡೆದಿರುವುದು ಬೆಳಕಿಗೆ ಬಂದಿದೆ. ಪೃಥ್ವಿ ಸಿಂಗ್ ಅವರು ದಾಖಲಿಸಿರುವ 6 ಪುಟಗಳ ದೂರಿನ ಬದಲಾಗಿ ಪೊಲೀಸರು ನಕಲಿ ದೂರಿನ ಕಾಪಿ ಸೃಷ್ಟಿಸಿ, 2 ಪುಟಗಳ ದೂರನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ ಎಂದು ದಾಖಲೆ ಬಿಡುಗಡೆ ಮಾಡಿದರು.
ಇದು ಸಣ್ಣ ಅಪರಾಧವಲ್ಲ; ಸಂವಿಧಾನದ ಉಲ್ಲಂಘನೆ, ಮೂಲಭೂತ ಹಕ್ಕುಗಳ ಉಲ್ಲಂಘನೆ. ಸರ್ಕಾರ ಇದರಲ್ಲಿ ಶಾಮೀಲಾಗಿದೆ .ಕಾಪಿ ಪೇಸ್ಟ್ ಮೂಲಕ ಎಡಿಟ್ ಮಾಡಿ ಬೇಕಾದ ಕೆಲವೇ ವಾಕ್ಯಗಳನ್ನು ಬಳಸಿಕೊಂಡು ಪೊಲೀಸರೇ ನಕಲಿ ದೂರು ಸೃಷ್ಟಿಸಿದಂತಿದೆ. ಇದು ಸರಕಾರವೇ ನ್ಯಾಯಾಲಯಕ್ಕೆ ವಂಚಿಸಿದ ಪ್ರಕರಣ ಎಂದರು.
ಒಬ್ಬ ಬಲಿಪಶು, ಫಿರ್ಯಾದುದಾರನ ದೂರು ಯಥಾವತ್ತಾಗಿ ನ್ಯಾಯಾಲಯಕ್ಕೆ ಹೋಗಬೇಕು. ಅದಾಗದಿದ್ದರೆ ಪೊಲೀಸರಿಂದ ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಂತೆ. ನ್ಯಾಯಾಲಯಕ್ಕೆ ನಕಲಿ ಅಥವಾ ಮರುಸೃಷ್ಟಿಯ ದಾಖಲೆ ಸಲ್ಲಿಸಲಾಗಿದೆ ಎಂದು ಆರೋಪಿಸಿದರು.
ಐಪಿಸಿ ಕಲಂ 471 ಪ್ರಕಾರ ನಕಲಿ ದಾಖಲೆಯನ್ನು ಸತ್ಯವಾದ ದಾಖಲೆ ಎಂದು ತೋರಿಸಿದ ಪ್ರಯತ್ನ ನಡೆದಿದೆ. ಇದೊಂದು ಗಂಭೀರ ಪ್ರಕರಣ. ಹೈಕೋರ್ಟ್ ಇದರ ಬಗ್ಗೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ತನಿಖೆಗೆ ಆದೇಶಿಸಬೇಕು ಎಂದು ಕೋರಿದರು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ದೂರನ್ನು ಮರುಸೃಷ್ಟಿಸಲು ತಮ್ಮ ಸಚಿವ ಸ್ಥಾನವನ್ನು, ಪೊಲೀಸ್ ಇಲಾಖೆಯನ್ನೇ ದುರ್ಬಳಕೆ ಮಾಡಿದ್ದಾರೆ. ಭಾರತದ ಇತಿಹಾಸದಲ್ಲೇ ಎಫ್ಐಆರ್ ಮರುಸೃಷ್ಟಿ ಮಾಡಿದ ಪ್ರಕರಣ ಇದಾಗಿದೆ. ತಮ್ಮ ಇಲಾಖೆಯಲ್ಲಿ ಇಂತಹ ಘಟನೆ ನಡೆದಿದ್ದರೂ ಗೃಹಸಚಿವರಿಗೆ ಮಾಹಿತಿ ಇಲ್ಲ. ಅವರು ಇಲಾಖೆಯನ್ನು ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ಸೋತಿದ್ದಾರೆ ಎಂದರು.
ಪೃಥ್ವಿ ಸಿಂಗ್ ಬರೆದು ಕೊಟ್ಟ ಮೂಲ ಸಹಿ ಇರುವ ದೂರನ್ನು ಕೋರ್ಟಿಗೆ ಕಳುಹಿಸಿಲ್ಲ. ಯಾವುದೋ ಸ್ಕ್ಯಾನ್ ಮಾಡಿದ ನಕಲಿ ಮರುಸೃಷ್ಟಿಸಿದ ದಾಖಲೆಯನ್ನು ಕಳುಹಿಸಿದ್ದಾರೆ. ಕೋರ್ಟ್ ಗೆ ಸಲ್ಲಿಸಿರುವುದು ಮೂಲ ಎಫ್ಐಆರ್ ಎಂದು ಸರಕಾರ ಸಾಬೀತುಪಡಿಸಿದರೆ ನಾನು ಮಂಡಿಯೂರಿ ರಾಜ್ಯದ ಜನರ ಕ್ಷಮೆ ಕೇಳುವೆ. ಆದರೆ ಇದು ನಕಲಿ ಎಂದು ಸಾಬೀತಾದರೆ ತಕ್ಷಣ ಹೆಬ್ಬಾಳ್ಕರ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಗೃಹ ಸಚಿವರಿಂದ ರಾಜೀನಾಮೆ ಪಡೆಯಬೇಕು ಎಂದರು.
ಪೃಥ್ವಿ ಸಿಂಗ್ ನೀಡಿರುವ 6 ಪುಟದ ದೂರಿನಲ್ಲಿ, ಲಕ್ಷ್ಮೀ ಹೆಬ್ಬಾಳ್ಕರ್ ಅವರು ನನ್ನಿಂದ 10 ಲಕ್ಷ ರೂಪಾಯಿ ಕಿತ್ತುಕೊಂಡಿದ್ದಾರೆ ಎಂದು ತಿಳಿಸಿದ್ದರು. ಇದನ್ನು ದೂರನಲ್ಲಿ ಅಳಿಸಿ ಹಾಕಲಾಗಿದೆ. ತಮ್ಮ ಮೇಲೆ ಹಲ್ಲೆ ಮಾಡಿ, ಬಲಪ್ರಯೋಗಿಸಿ ನನ್ನ ಕೈಯಿಂದ ಚನ್ನರಾಜ್ ಹಟ್ಟಿಹೊಳಿ ಮೊಬೈಲ್ ಕಿತ್ತುಕೊಂಡರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ಮಾಡಿದ್ದಾಗಿ ತಿಳಿಸಿದ್ದಾರೆ. ಆದರೆ ಇದನ್ನು ಕೂಡಾ ಅಳಿಸಿ ಹಾಕಲಾಗಿದೆ. ಈ ಮೂಲಕ ಪೊಲೀಸರು ಕೋರ್ಟ್ ಗೆ ಎಡಿಟ್ ಮಾಡಿದ ದೂರಿನ ಪ್ರತಿ ಸಲ್ಲಿಸಿದ್ದಾರೆ. ಈ ಮೂಲಕ ವಿಧಾನಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ರಕ್ಷಿಸಲು ಹೀಗೆ ಮಾಡುತ್ತಿದ್ದಾರೆ ಎಂದರು.




