ಮಾಡೆಲ್‌ ಧೃುವನಾಯ್ಕ್ ಮೇಲೆ ಬಸ್ ಸಿಬ್ಬಂದಿಯಿಂದ ಹಲ್ಲೆ

10 months ago

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಹುಬ್ಬಳ್ಳಿ ಮೂಲದ ಮಾಡೆಲ್‌ ಮೇಲೆ ಖಾಸಗಿ ಬಸ್‌‍ ಸಿಬ್ಬಂದಿ ಹಲ್ಲೆ ನಡೆಸಿ ಬೆಲೆ ಬಾಳುವ ವಸ್ತುಗಳನ್ನು ದೋಚಿರುವ ಘಟನೆ ಉಪ್ಪಾರಪೇಟೆ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮಾಡೆಲ್‌ ಧೃುವನಾಯ್ಕ್ ಎಂಬುವವರು ಥೈಲ್ಯಾಂಡ್‌ಗೆ ಹೋಗಿ ಜು.1 ರಂದು ಬೆಂಗಳೂರಿಗೆ ಬಂದು ಖಾಸಗಿ ಹೋಟೇಲ್‌ನಲ್ಲಿ ಉಳಿದುಕೊಂಡಿದ್ದರು. ಅಂದು ರಾತ್ರಿ 11.30ರ ಸುಮಾರಿನಲ್ಲಿ ಹುಬ್ಬಳ್ಳಿಗೆ ಹಿಂದಿರುಗಲು ಧೃುವನಾಯ್ಕ್ ಅವರು ಸೀ ಬರ್ಡ್‌ ಬಸ್‌‍ ಬುಕ್‌ ಮಾಡಿದ್ದು, ಸ್ನೇಹಿತನ ಜೊತೆ ಆನಂದ್‌ರಾವ್‌ ಸರ್ಕಲ್‌ ಬಳಿ ಬಂದಿದ್ದಾರೆ.

ಆ ವೇಳೆ ಸಿಗರೇಟ್‌ ಸೇದುತ್ತಾ ಸ್ನೇಹಿತನ ಜೊತೆ ಮಾತನಾಡುತ್ತಾ ತಾನು ಹೊರಡಬೇಕಿದ್ದ ಬಸ್‌‍ ಬಳಿ ಧೃುವನಾಯ್ಕ್ ನಿಂತಿದ್ದಾಗ ಏಕಾಏಕಿ ಚಾಲಕ ಬಸ್‌‍ ಬಾಗಿಲು ಹಾಕಿಕೊಂಡು ನಿಧಾನವಾಗಿ ಬಸ್‌‍ ಚಾಲನೆ ಮಾಡಿಕೊಂಡು ಮುಂದೆ ಹೋಗಿದ್ದಾನೆ.

ಇದನ್ನು ಗಮನಿಸಿದ ಧೃುವನಾಯ್ಕ್ ತಕ್ಷಣ ಬಸ್‌‍ ಅಡ್ಡಗಟ್ಟಿ ನಿಲ್ಲಿಸಿ ನಾನು ಈ ಬಸ್‌‍ನಲ್ಲಿ ಬರುವುದಿದೆ ಎಂದು ಹೇಳಿದ್ದಾರೆ. ಆ ವೇಳೆ ಬಸ್‌‍ ಸಿಬ್ಬಂದಿ ಹಾಗೂ ಧೃುವನಾಯ‌್ಕ ನಡುವೆ ಗಲಾಟೆಯಾಗಿದ್ದು, ಸಿಬ್ಬಂದಿ ಸೇರಿಕೊಂಡು ಧೃುವನಾಯ್ಕ್ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.

ಹಲ್ಲೆಯಿಂದಾಗಿ ಮುಖ, ಕತ್ತು, ಎದೆ ಸೇರಿದಂತೆ ದೇಹದ ಇನ್ನಿತರ ಭಾಗಗಳ ಮೇಲೆ ಗಂಭೀರ ಗಾಯಗಳಾಗಿವೆ. ಅಲ್ಲದೆ ಧೃುವನಾಯ್ಕ್ ಅವರ ಬ್ಯಾಗ್‌ನಲ್ಲಿದ್ದ ದುಬಾರಿ ಬೆಲೆಯ ಶೂ, ಇಯರ್ ಬಡ್, 44 ಸಾವಿರ ಬೆಲೆಯ ಸನ್‌ಗ್ಲಾಸ್‌‍, 1.85 ಲಕ್ಷ ರೂ. ಬೆಲೆಯ ಪ್ಲಾಟಿನಂ ಪೆಂಡೆಂಟ್‌ ಇರುವ ಬೆಳ್ಳಿ ಸರ, ಪಾಸ್‌‍ಪೋರ್ಟ್‌, 45 ಸಾವಿರ ರೂ. ಬೆಲೆ ಬಾಳುವ ವಾಚ್‌, 40 ಸಾವಿರ ರೂ ಮೌಲ್ಯದ ಪ್ಲಾಟಿನಂ ರಿಂಗ್‌ ಹಾಗೂ ಪರ್ಸ್‌ನಲ್ಲಿದ್ದ 10 ಸಾವಿರ ಹಣ ಕಳವು ಮಾಡಿರುವುದಾಗಿ ಧೃುವನಾಯ್ಕ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೇಳಿದ್ದಾರೆ.

ಘಟನೆ ಸಂಬಂಧ ಉಪ್ಪಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾಡೆಲ್‌ ಧೃುವನಾಯ್ಕ್ ಸಿಗರೇಟ್‌ ಸೇದುತ್ತಾ ಬಸ್‌‍ ಹತ್ತುವ ವಿಚಾರಕ್ಕೆ ಗಲಾಟೆ ನಡೆದಿದೆಯೇ ಅಥವಾ ಬಸ್‌‍ ಸಿಬ್ಬಂದಿ ಮೇಲೆ ಆತ ಹಲ್ಲೆ ಮಾಡಿದ್ದಾರೋ ಎಂಬುದು ಪೊಲೀಸರ ತನಿಖೆಯಿಂದಷ್ಟೆ ಬದಲಾಗಬೇಕಿದೆ. 

Leave a Reply