ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕನ್ನಡ ಕಲಿಕೆ ಕುರಿತು ತಪ್ಪು ಮಾಹಿತಿ: ಡಾ. ಮಹೇಶ ಜೋಶಿ ಅಸಮಾಧಾನ

3 years ago

#Misinformation #learning #Kannada #NEP #MaheshJoshi #upset

ಬೆಂಗಳೂರು: ಕನ್ನಡ ಭಾಷೆ ಎಂದರೆ ʻಸುಲಿದ ಬಾಳೆಯ ಹಣ್ಣಿನಷ್ಟು ಸರಳʼ ಎಂದು ಹೇಳಿದವರು ಅನುಭವಾಮೃತದ ಕವಿ ಮಹಾಲಿಂಗರಂಗ. ಆದರೆ ರಾಷ್ಟೀಯ ಶಿಕ್ಷಣ ನೀತಿ ಇಲಾಖೆಯು ಹೊರ ತಂದಿರುವ ಮೂರರಿಂದ ಎಂಟನೆಯ ವಯಸ್ಸಿನ ಕನ್ನಡ ಮಕ್ಕಳು ಕಲಿಯುವ ಕನ್ನಡ ಪಠ್ಯ ಕ್ರಮ ʻಚೌಕಟ್ಟು ಬುನಾದಿ ಹಂತʼದಲ್ಲಿ ಕನ್ನಡದ ಲಿಪಿ ದೇವನಾಗರಿ ಹಾಗೂ ಇಂಗ್ಲಿಷ್ಕ್ಕಿಂತಲೂ  ಹೆಚ್ಚು ಸಂಕೀರ್ಣ ಎಂದು ಹೇಳಿರುವುದನ್ನು ಕನ್ನಡ ಸಾಹಿತ್ಯ ಪರಿಷತ್ತು ತೀವ್ರವಾಗಿ ಖಂಡಿಸುತ್ತದೆ. ಎಳೆಯ ಮನಸ್ಸುಗಳ ಮೇಲೆ ಭಾಷೆಯ ಕುರಿತು ತಪ್ಪಾದ ಅಭಿಪ್ರಾಯ ಬೆಳೆಯಲು ಇದು ಕಾರಣವಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ಆತಂಕ ವ್ಯಕ್ತ ಪಡಿಸಿದ್ದಾರೆ. 

ಕನ್ನಡ ಭಾಷೆಯನ್ನು ಜಗತ್ತಿನಲ್ಲಿಯೇ ಅತ್ಯಂತ ವೈಜ್ಞಾನಿಕ ಭಾಷೆ ಎಂದು ಹಿರಿಯ ಸಂಶೋಧಕರಾದ ಡಾ. ಎಂ.ಗೋವಿಂದ ಪೈ ಅವರೇ ಹೇಳಿದ್ದಾರೆ. ಅದನ್ನು ಪ್ರಪಂಚದ ಬಹುತೇಕ ಭಾಷಾ ತಜ್ಞರು ಕನ್ನಡ ಭಾಷೆಯನ್ನು ಸಂಪೂರ್ಣವಾಗಿ ಪರಿಶೀಲಿಸಿ ಒಪ್ಪಿಕೊಂಡಿರುವುದು ಎಲ್ಲರಿಗೂ  ಗೊತ್ತಿರುವ ಸಂಗತಿ. ಕನ್ನಡ ಭಾಷೆಯನ್ನು ಆಡಿದಂತೆ ಬರೆಯಬಹುದು, ಬರೆದಂತೆ ನುಡಿಯಬಹುದು ಎನ್ನುವುದು ಸಾರ್ವಕಾಲಿಕ ಸತ್ಯ. ಜಗತ್ತಿನ ಪರಿಪೂರ್ಣ ಎಂದು ಗುರುತಿಸಿಕೊಂಡ ಮೂರು ಭಾಷೆಗಳಲ್ಲಿ ಕನ್ನಡವೂ ಒಂದು ಎನ್ನುವುದು ನಮ್ಮಲ್ಲರ ಹೆಮ್ಮೆಯ ಸಂಗತಿಯಾಗಿದೆ. ಈ ಕಾರಣದಿಂದಲೇ ಆರ್ಚಾರ್ಯ ವಿನಾಭಾ ಭಾವೆಯವರು ಕನ್ನಡವನ್ನು ಲಿಪಿಗಳ ರಾಣಿ ಎಂದು ಕರೆದಿದ್ದಾರೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಕೇಶಿರಾಜನು ಶಬ್ದಮಣಿ ದರ್ಪಣದಲ್ಲಿ ಕನ್ನಡ ಲಿಪಿಯ ವೈಶಿಷ್ಟ್ಯವನ್ನು ವರ್ಣಿಸಿ ಮೂಲ ಕನ್ನಡ ಪದಕ್ಕೆ ಮಹಾಪ್ರಾಣಗಳ ಅಗತ್ಯವಿಲ್ಲ ಎನ್ನುವುದನ್ನು ಸಾಧಿಸಿ ತೋರಿಸಿಕೊಟ್ಟಿದ್ದಾನೆ. ಕೇಶಿರಾಜನ ಪ್ರಕಾರ ಕನ್ನಡ ಭಾಷೆಯ ವಿಶೇಷವೆಂದರೆ ಭಾಷೆಯ ಲಿಪಿಯಲ್ಲಿ ಕನ್ನಡ ಭಾಷೆಯನ್ನು ಮಾತ್ರವಲ್ಲದೆ ಬೇರೆ ಭಾಷೆಗಳಿಂದ ಬಂದ ಪದಗಳನ್ನು ಸಹಜವಾಗಿಯೇ ಉಚ್ಚರಣೆ ಮಾಡಬಹುದು. ಇಂತಹ ವೈಶಿಷ್ಟ್ಯ  ಭಾರತ ಯಾವುದೇ ಭಾಷೆಗಳಿಗೂ ಇಲ್ಲವೆಂದು ಹೇಳಿರುವುದನ್ನು ಅವರು ನೆನಪಿಸಿಕೊಂಡಿದ್ದಾರೆ.

ಎನ್ಸಿಆರ್ಟಿ ಪಠ್ಯ ಕ್ರಮದಲ್ಲಿ ಕನ್ನಡ ಭಾಷೆಯ ಅಕ್ಷರ ಜೋಡಣೆಯ ನಿಯಮಗಳು ಸಂಕೀರ್ಣವಾಗಿದೆ, ಮೂಲಾಕ್ಷರಕ್ಕೆ ವಿಭಿನ್ನ ರೀತಿಯಲ್ಲಿ ಸ್ವರಗಳ ಜೋಡಣೆಯಾಗುತ್ತವೆ,  ಹೀಗಾಗಿ ಕನ್ನಡ ಲಿಪಿಯಲ್ಲಿ ಹಿಡಿತ ಸಾಧಿಸಲು ಬಹಳ ವರ್ಷಗಳೇ ಬೇಕಾಗುತ್ತವೆ ಎಂದು ಉಲ್ಲೇಖಿಸಿರುವುದನ್ನು ಗಂಭೀರವಾಗಿ ಆಕ್ಷೇಪಿಸಿರುವ ಅವರು ಕನ್ನಡದ ಮಕ್ಕಳು ತಿಂಗಳೊಪ್ಪತ್ತಿನಲ್ಲಿಯೇ  ಕನ್ನಡ ಅಕ್ಷರ ಮಾಲೆಯನ್ನು ಸುಲಲಿತವಾಗಿ ಕಲಿಯುತ್ತಿರುವುದನ್ನು ನಾವು ಹಿಂದಿನಿಂದಲೂ ನೋಡಿಕೊಂಡು ಬರುತ್ತಿದ್ದೇವೆ. ಕನ್ನಡ ವ್ಯಾಕರಣ ನಿಯಮಗಳು ಕಲಿಯಲು ಅತೀ ಸುಲಭವಾಗಿದ್ದು ಅಕ್ಷರ ಮಾಲೆಯ ಕ್ರಮವೂ ಕಂಠ, ನಾಭಿ, ಜಿಹ್ವಾ(ನಾಲಿಗೆ)ಗಳ ಚಲನೆಗೆ ಅನ್ವಯಕವಾಗಿ ಇರುವುದು ಭಾಷಾ ಶಾಸ್ತ್ರದ ನಿಯಮಗಳಂತೆ ದೃಡಪಟ್ಟಿದೆ. ಹೀಗಾಗಿ ಕನ್ನಡ ಭಾಷೆಯ ವೈಜ್ಞಾನಿಕತೆಯನ್ನು ಎತ್ತಿ ಹಿಡಿಯುವ ಕೆಲಸ ಇನ್ನಷ್ಟು ಆಗಬೇಕಿದೆಯೇ, ಹೊರತು ಇಂತಹ ತಪ್ಪು ಕಲ್ಪನೆಗಳನ್ನು ಬೆಳೆಸುವುದಲ್ಲ  ಎಂದು ತಿಳಿಸಿದ್ದಾರೆ.

ಅಕ್ಷರ ಮಾಲೆಯ ಮೇಲೆ ಪರಿಣಿತಿ ಸಾಧಿಸಲು ಎಷ್ಟು ಸಮಯ ಬೇಕಾಗಬಹುದು ಎಂಬ ಸ್ಪಷ್ಟ ತಿಳುವಳಿಕೆ ಪಠ್ಯ ಪುಸ್ತಕ ರೂಪಿಸಿದವರಿಗೆ ಇಲ್ಲದಿರುವುದು ರಾಷ್ಟ್ರೀಯ ಶಿಕ್ಷಣ ನೀತಿಯ್ನು ಅನುಷ್ಠಾನ ಮಾಡುವ ಸಂಬಂಧ ರಾಜ್ಯ ಸರ್ಕಾರ ಇತ್ತೀಚೆಗೆ ಪ್ರಕಟಿಸಿರುವ ಕರ್ನಾಟಕ ಪಠ್ಯಕ್ರಮದ ಚೌಕಟ್ಟು ನೋಡಿದರೆ  ಸ್ಪಷ್ಟವಾಗುತ್ತಿದೆ. ಒಂದನೇ ತರಗತಿಯಲ್ಲಿ ಸ್ವರ ಚಿಹ್ನೆ, ಎರಡನೆಯ ತರಗತಿಯಲ್ಲಿ ಗುಣಿತಾಕ್ಷರಗಳನ್ನು ಕಲಿಯಬಹುದು ಎನ್ನುವುದನ್ನು ವಿನ್ಯಾಸಕಾರರ ಅಭಿಮತ, ಆದರೆ ಸಾಕ್ಷರತೆ ಲಿಪಿಗಳನ್ನು ಒಟ್ಟಾಗಿ ಕಲಿಯುವ ಮೂಲಕ ಮಾತ್ರ ಲಭ್ಯವಾಗಲು ಸಾಧ್ಯ. ಪಠ್ಯದಲ್ಲಿ ತಪ್ಪು ಮಾದರಿಯನ್ನು ನೀಡಿದರೆ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಅದು ಗಂಭಿರ ಪರಿಣಾಮ ಬೀರಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಕನ್ನಡವನ್ನು ಎಲ್ಲಾ ಹಂತಗಳಲ್ಲಿ ಅನುಷ್ಠಾನಕ್ಕೆ ತರುವ ಸಮಗ್ರ ಭಾಷಾ ಅಭಿವೃದ್ಧಿ ಕಾನೂನು ಜಾರಿಗೆ ಬಂದಿರುವಾಗ ಎನ್ಇಪಿ ಮಾಡುತ್ತಿರುವ ಇಂತಹ ತಪ್ಪು ವ್ಯಾಖ್ಯಾನಗಳು ಕನ್ನಡ ಕಲಿಕೆಯ ಮೇಲೆ ಗದಾ ಪ್ರಹಾರ ಮಾಡಿದಂತಾಗುತ್ತದೆ. ಆದ್ದರಿಂದ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕನ್ನಡ ಕಲಿಕಾ ಕ್ರಮದಲ್ಲಿನ ದೋಷವನ್ನು ಈ ಕೂಡಲೇ  ಸರಿ ಪಡಿಸಬೇಕು ಎಂದು ಆಗ್ರಹಿಸಿದ್ದಾರೆ.  

Leave a Reply