ಜಾತಿ ಗಣತಿ ವರದಿಗೆ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯ ವಿರೋಧ

1 year ago

ಬೆಂಗಳೂರು: ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಿರುವ ಹಿಂದುಳಿದ ವರ್ಗಗಳ ಆಯೋಗದ ಜಾತಿವಾರು ಜನಗಣತಿ ವರದಿ ಬಗ್ಗೆ ಪ್ರಬಲ ಸಮುದಾಯಗಳಾದ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿವೆ. ಯಾವುದೇ ಕಾರಣಕ್ಕೂ ಈ ವರದಿಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿವೆ.

ಕಾಂಗ್ರೆಸ್ ಹಿರಿಯ ನಾಯಕರು ಆಗಿರುವ ಮಾಜಿ ಸಚಿವ ಹಾಗೂ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಜಾತಿವಾರು ಜನಗಣತಿಗೆ ವೀರಶೈವ ಸಮುದಾಯ ವಿರೋಧವಿಲ್ಲ ಆದರೆ ಈಗ ಸರ್ಕಾರ ಮಂಡನೆ ಮಾಡಿರುವ ವರದಿ ಸಂಪೂರ್ಣ ಅವೈಜ್ಞಾನಿಕವಾಗಿದೆ ಹೀಗಾಗಿ ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದರು.

ಜಾತಿವಾರು ಜನಗಣತಿ ವಿಚಾರದಲ್ಲಿ ಸರ್ಕಾರ ತನ್ನ ನಿರ್ಧಾರ ಪುನರ್ ಪರಿಶೀಲನೆ ಮಾಡಬೇಕು ಮರು ಸಮೀಕ್ಷೆಗೆ ಆದೇಶಿಸಬೇಕು ಇಲ್ಲವಾದರೆ ವೀರಶೈವ ಸಮುದಾಯವೇ ಪ್ರತ್ಯೇಕವಾಗಿ ಮನೆಮನೆ ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ನೀಡಲಿದೆ ಎಂದರು.

ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ ಮಾತನಾಡಿ, ಸದ್ಯ ಸಂಪುಟ ಸಭೆಯಲ್ಲಿ ಮಂಡನೆ ಮಾಡಿರುವ ವರದಿ ಅಪೂರ್ಣವಾಗಿದೆ. ಕಾಂತರಾಜು ನೇತೃತ್ವದ ಆಯೋಗ ಸಮೀಕ್ಷೆ ಮಾಡಿತ್ತು. ಆನಂತರ ಅದು ನೀಡಿದ ದತ್ತಾಂಶ ಬಳಸಿ ಜಯಪ್ರಕಾಶ್ ಹೆಗಡೆ ನೇತೃತ್ವದ ಆಯೋಗ ಅಂತಿಮ ವರದಿ ತಯಾರಿಸಿದೆ ಹೀಗಾಗಿ ಇದು ಅಪೂರ್ಣ ವರದಿಯಾಗಿದೆ ಎಂದರು.

ಯಾವುದೇ ಕಾರಣಕ್ಕೂ ಸರ್ಕಾರ ಇದರ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಬಾರದು, ವೈಜ್ಞಾನಿಕ ರೀತಿಯಲ್ಲಿ ಮರು ಸಮೀಕ್ಷೆ ನಡೆಸಿ ಅದರ ವರದಿಯನ್ನು ಜಾರಿಗೆ ತರಬೇಕು ಎಂದರು.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು, 169 ಕೋಟಿ ಖರ್ಚು ಮಾಡಿ ಸಿದ್ದಪಡಿಸಲಾಗಿರುವ ವರದಿ ಬಹಿರಂಗಗೊಳ್ಳದೆ, ಅವೈಜ್ಞಾನಿಕ ಎಂದೆಲ್ಲ ಟೀಕೆ ಮಾಡಿರುವುದು ಸರಿಯಲ್ಲ ಎಂದರು.

ಮೊದಲು ವರದಿಯಲ್ಲಿನ ಅಂಶಗಳನ್ನು ಹಿಡಿದು ಅದರ ಮೇಲೆ ಚರ್ಚೆ ಮಾಡಲಿ. ಆಗ ಅದರಲ್ಲಿನ ಸರಿತಪ್ಪುಗಳು ಚರ್ಚೆಯಾಗಲಿ, ವಿಧಾನಮಂಡಲದಲ್ಲಿ ಎಲ್ಲರಿಗೂ ತಮ್ಮ ಅಭಿಪ್ರಾಯಗಳನ್ನು ಹೇಳಲು ಮುಕ್ತ ಅವಕಾಶವಿದೆ ಎಂದರು.

ಸಂಪುಟ ಸಭೆಯಲ್ಲಿ ವರದಿ ಮಂಡನೆಗೆಯಾಗಿದೆ. ವರದಿಯಲ್ಲಿ ಏನಿದೆ? ಏನಿಲ್ಲ ಎಂಬುದು ಯಾರಿಗೂ ಗೊತ್ತಿಲ್ಲ. ಅದು ಮೊದಲು ಬಹಿರಂಗವಾಗಲಿ. ಆನಂತರ ಎಲ್ಲರ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಬಹುದು. ಯಾವ ನಿರ್ಧಾರ ಎಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂದರು.

ಗ್ರಾಮೀಣ ಅಭಿವೃದ್ಧಿ ಮಂತ್ರಿ ಪ್ರಿಯಾಂಕ ಖರ್ಗೆ ಪ್ರಕ್ರಿಯೆ ನೀಡಿ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಸಿದ್ದಪಡಿಸಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ವರದಿಯ ಸಾಧಕ-ಬಾಧಕಗಳ ಬಗ್ಗೆ ಸಮಗ್ರ ಪರಿಶೀಲನೆ ನಡೆಸುವ ಅಗತ್ಯವಿದೆ ಎಂದರು.

ಆಯೋಗದ ಸಲ್ಲಿಸಿರುವ ವರದಿ ಜಾತಿ ಗಣತಿ ಅಲ್ಲ, ಮನೆ ಮನೆ ಸಮೀಕ್ಷೆ ನಡೆದಿಲ್ಲ. ಅವೈಜ್ಞಾನಿಕವಾಗಿದೆ ಎಂಬೆಲ್ಲ ವಿಚಾರಗಳು ಚರ್ಚೆಯಾಗುತ್ತಿವೆ. ವರದಿ ಬಹಿರಂಗಗೊಳ್ಳದ ಹೊರತು ಅದರಲ್ಲಿನ ಅಂಶಗಳ ಬಗ್ಗೆ ಹೇಳಿಕೆ ನೀಡುವುದು ಅಪ್ರಸ್ತುತವಾಗಿದೆ. ವರದಿ ವೈಜ್ಞಾನಿಕವೋ, ಅವೈಜ್ಞಾನಿಕವೋ? ದತ್ತಾಂಶಗಳು ಸರಿಯಾಗಿವೆ, ಯಾವ ರೀತಿಯ ಅಂಶ ಸಂಗ್ರಹಿಸಲಾಗಿದೆ, ಜಾತಿ ಗಣತಿಯ ಅಂಕಿಸಂಖ್ಯೆಗಳ ಜೊತೆ ಹೋಲಿಕೆಯಾಗುತ್ತದೆಯೇ? ಎಂಬೆಲ್ಲ ವಿಚಾರಗಳನ್ನು ಪರಿಶೀಲಿಸಲಾಗುವುದು ಎಂದರು.

ಒಳಮೀಸಲಾತಿ ವಿಚಾರ ಬಂದಾಗ ನ್ಯಾಯಮೂರ್ತಿ ನಾಗಮೋಹನ್ ದಾಸ್ ವೈಜ್ಞಾನಿಕವಾಗಿ ಮರು ಸಮೀಕ್ಷೆ ಮಾಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆ ಪ್ರಕ್ರಿಯೆಗಳು ಹೇಗಿರಬೇಕು ಎಂಬ ನಿಟ್ಟಿನಲ್ಲಿ ತೀರ್ಮಾನ ತೆಗೆದುಕೊಳ್ಳಲಿದ್ದೇವೆ. ಅದೇ ರೀತಿ ಹಿಂದುಳಿದ ವರ್ಗಗಳ ಆಯೋಗದ ವರದಿಯ ಬಗ್ಗೆಯೂ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.

Leave a Reply