ಸಂಪೂರ್ಣ ವಿವರಣೆ ಕೇಳಿ ಕೇಂದ್ರದ ಡ್ರಗ್ಸ್ ಕಂಟ್ರೋಲ್ ಇಲಾಖೆಗೆ ಪತ್ರ

1 year ago

ಬಾಣಂತಿಯರ ಸರಣಿ ಸಾವು ಪ್ರಕರಣ: ಸಂಪೂರ್ಣ ವಿವರಣೆ ಕೇಳಿ ಕೇಂದ್ರದ ಡ್ರಗ್ಸ್ ಕಂಟ್ರೋಲ್ ಇಲಾಖೆಗೆ ಪತ್ರ

ಬೆಂಗಳೂರು: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣಕ್ಕೆ ಸಂಬಂಧ ರಾಜ್ಯದ ಆಸ್ಪತ್ರೆಗಳಲ್ಲಿ  ಬಳಕೆ ಮಾಡುತ್ತಿರುವ 92 ಐವಿ ಫ್ಲೂಯಿಡ್ ಸ್ಯಾಂಪಲ್ ಗಳ ವರದಿಯಲ್ಲಿ ಫಂಗಸ್ ಸೇರಿದಂತೆ ಬ್ಯಾಕ್ಟೀರಿಯಾ ಅಂಶ ಕಂಡುಬಂದಿದೆ.

ಈ ಐವಿ ಫ್ಲೂಯಿಡ್ ಅಸುರಕ್ಷಿತ ಎಂದು ವರದಿಯಲ್ಲಿ ಉಲ್ಲೇಖಿಸಿರುವುದನ್ನು ಗಂಭೀರವಾಗಿ ಪರಿಗಣಿಸಿರುವ  ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತಾ, ಈ ಬಗ್ಗೆ ಸಂಪೂರ್ಣ ವಿವರಣೆ ಕೇಳಿ ಕೇಂದ್ರದ ಡ್ರಗ್ಸ್ ಕಂಟ್ರೋಲ್ ಇಲಾಖೆಗೆ ಪತ್ರ ಬರೆದಿದ್ದಾರೆ.

ಪಶ್ಚಿಮ ಬಂಗಾಳದ ಕಂಪನಿಯು 192 ಬ್ಯಾಚ್ ಗಳಲ್ಲಿ ಈ ಐವಿ ಫ್ಲೂಯಿಡ್ ಪೂರೈಕೆ ಮಾಡಿತ್ತು. ಇದನ್ನು ಬಳಕೆ ಮಾಡುವುದಕ್ಕೆ ಶುರು ಮಾಡಿದ ಆರಂಭದಲ್ಲೇ ಐವಿ ರಿಂಗರ್ ಲ್ಯಾಕ್ಟೇಟ್ ಬಗ್ಗೆ ಶಂಕೆ ಎದ್ದಿತ್ತು. ಬಳಿಕ 22 ಬ್ಯಾಚ್ ಗಳು ಉತ್ತಮ ಗುಣಮಟ್ಟ ಹೊಂದಿಲ್ಲವೆಂಬ ವರದಿ ಹೊರಬಿದ್ದಿತ್ತು.

ಖುದ್ದು ರಾಜ್ಯದ ಡ್ರಗ್ ಕಂಟ್ರೋಲ್ ಐವಿ ರಿಂಗರ್ ಲ್ಯಾಕ್ಟೇಟ್ ಗುಣಮಟ್ಟ ಉತ್ತಮವಾಗಿಲ್ಲ ಎನ್ನುವ ವರದಿ ಕೊಟ್ಟಿತ್ತು. ನಂತರ ಐವಿ ರಿಂಗ್ ಬಳಸಬೇಡಿ ಎಂದು ತಡೆಹಿಡಿದು ಎಲ್ಲ ಆಸ್ಪತ್ರೆಗಳಿಗೂ ಸುತ್ತೋಲೆ ಹೊರಡಿಸಿತ್ತು. ಪಶ್ಚಿಮ ಬಂಗಾಳದಿಂದ ಬಂದಿದ್ದ ಅಷ್ಟು ಬ್ಯಾಚ್ ಗಳಿಗೆ ಬ್ರೇಕ್ ಹಾಕಿ, ಬಳಿಕ ಕಪ್ಪು ಪಟ್ಟಿಗೆ ಸೇರಿಸಿತ್ತು. ಆದರೆ ಕೇಂದ್ರ ಡ್ರಗ್ ಲ್ಯಾಬ್ ನಲ್ಲಿ ಇದೇ ಔಷಧಿಯ 22 ಬ್ಯಾಚ್ ಗಳು ಪಾಸ್ ಆಗಿವೆ ಎನ್ನಲಾಗಿದೆ.

ಕೇಂದ್ರ ಡ್ರಗ್ ಲ್ಯಾಬ್ ನೀಡಿದ್ದ ಪಾಸಿಟಿವ್ ವರದಿಯನ್ನೇ ಪಶ್ಚಿಮ ಬಂಗಾಳದ ಕಂಪನಿ ರಾಜ್ಯದ ಔಷಧಿ ನಿಗಮದ ಮುಂದಿಟ್ಟಿತ್ತು. ನಿಯಮಗಳ ಪ್ರಕಾರ ಸೆಂಟ್ರಲ್ ಡ್ರಗ್ ಲ್ಯಾಬ್ ನಲ್ಲಿ ವರದಿ ಅಂತಿಮ. ಹೀಗಾಗಿ ಟೆಂಡರ್ ರೂಲ್ಸ್ ಪ್ರಕಾರ ಕಂಪನಿಯ ದ್ರಾವಣ ನಿರಾಕರಿಸುವಂತಿಲ್ಲ ಎಂದು ತಿಳಿದುಬಂದಿದೆ. ಈಗಾಗಲೇ ಪಶ್ಚಿಮ ಬಂಗಾಳದಲ್ಲಿರುವ ಕೇಂದ್ರದ ಲ್ಯಾಬ್ ಗೆ ಸ್ಯಾಂಪಲ್ಸ್ ರವಾನೆ ಮಾಡಲಾಗಿದ್ದು, ಅದರ ವರದಿ ಡಿಸೆಂಬರ್ 9ರಂದು ಬರುವ ಸಾಧ್ಯತೆ ಇದೆ.

ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣದ ಬೆನ್ನಲ್ಲೇ ಎಚ್ಚೆತ್ತ ಸಿಎಂ ಸಿದ್ದರಾಮಯ್ಯ ಸರ್ಕಾರ, ರಾಜ್ಯ ಔಷಧ ನಿಯಂತ್ರಣ ‌ಇಲಾಖೆಗೆ ಆಡಳಿತಾತ್ಮಕ ಮುಖ್ಯಸ್ಥರನ್ನು ನೇಮಕ ಮಾಡಿದೆ.

ಇಷ್ಟು ದಿನ ಇಲಾಖೆಯ ಮುಖ್ಯಸ್ಥರ ಹುದ್ದೆ ಖಾಲಿ ಇತ್ತು. ಆದರೆ, ಈ ಪ್ರಕರಣ ಬಳಿಕ ಮುಂದಿನ ಆದೇಶದವರೆಗೂ ಆಹಾರ ಇಲಾಖೆ ಆಯುಕ್ತ, ಐಎಎಸ್ ಅಧಿಕಾರಿ ಕೆ.‌ಶ್ರೀನಿವಾಸ ಅವರನ್ನು ಔಷಧ ನಿಯಂತ್ರಣ ‌ಇಲಾಖೆಗೆ ಆಡಳಿತಾತ್ಮಕ ಮುಖ್ಯಸ್ಥರನ್ನಾಗಿ ನೇಮಕ ಮಾಡಿ ಆದೇಶಿಸಿದೆ.

Leave a Reply