ರಾಜ್ಯಾದ್ಯಂತ 2.5 ಸಾವಿರ ಕೋಟಿ ವೆಚ್ಚದಲ್ಲಿ ಕೆಪಿಎಸ್ ಶಾಲೆ ಆರಂಭ: ಮಧು ಬಂಗಾರಪ್ಪ

1 year ago

ಶಿವಮೊಗ್ಗ: ಸರ್ಕಾರಿ ಶಾಲೆಗಳಿಗೀಗ ಬದಲಾವಣೆಯ ಗಾಳಿ ಬೀಸುತ್ತಿದ್ದು, ರಾಜ್ಯಾದ್ಯಂತ 450ಕ್ಕೂ ಹೆಚ್ಚು ಕೆಪಿಎಸ್ ಶಾಲೆ ತೆರೆಯಲು ಉದ್ದೇಶಿ ಸಿದ್ದು, ಇದಕ್ಕಾಗಿ ಸರ್ಕಾರದಿಂದ 500 ಕೋಟಿ ರೂ ಸೇರಿಸಿ ಎರಡೂವರೆ ಸಾವಿರ ಕೋಟಿ ರೂ ವೆಚ್ಚ  ಮಾಡಲಾಗುತ್ತದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಇಲಾಖೆಯ ಸಿಹಿ ಸುದ್ದಿಗಳು ಬರತೊಡಗಿವೆ. ಏಷ್ಯನ್ ಡೆವಲಪ್ ಮೆಂಟ್ ಬ್ಯಾಂಕ್ (ಎಡಿಬಿ)ನಿಂದ ದೀರ್ಘಾವಧಿ ಸಾಲದ ರೂಪದಲ್ಲಿ 2 ಸಾವಿರ ಕೋಟಿ ರೂ. ಪಡೆಯಲಾಗುತ್ತಿದೆ ಎಂದರು.

ಜೊತೆಗೆ ಸರ್ಕಾರದಿಂದ 500 ಕೋಟಿ ರೂ  ಸೇರಿಸಿ ಎರಡೂವರೆ ಸಾವಿರ ಕೋಟಿ ರೂ. ವೆಚ್ಚದಲ್ಲಿ ರಾಜ್ಯದಲ್ಲಿ ಸುಮಾರು 450ಕ್ಕೂ ಕೆಪಿಎಸ್ ಶಾಲೆಗಳನ್ನು ತೆರೆಯಲಾಗುವುದು. ಇದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗುತ್ತದೆ. ಸುತ್ತಮುತ್ತಲ ಹಳ್ಳಿಗಳ ಶಾಲೆಗಳು ಕೂಡ ಈ ಶಾಲೆಗೆ ವಿಲೀನಗೊಳ್ಳುತ್ತವೆ ಎಂದರು.

ಈ ಮೂಲಕ ಸರ್ಕಾರಿ ಶಾಲೆಗಳ ಅಭಿವೃದ್ಧಿ ಪಡಿಸಲಾಗುವುದು. ಬಹಳಷ್ಟು ಶಾಲೆಗಳಲ್ಲಿ ಆಟದ ಮೈದಾನವಿಲ್ಲ. ಅವುಗಳನ್ನು ಆಟದ ಮೈದಾನ, ಶಾಲೆಗಳಿಗೆ ಮೂಲಭೂತ ವ್ಯವಸ್ಥೆ, ನೀರಿನ ಸಂಪರ್ಕ ಮಾಡ ಲಾಗುತ್ತಿದೆ. ಸರ್ಕಾರಿ ಶಾಲೆಗಳಿಗೆ ವಿದ್ಯುತ್ ಅನ್ನು ಉಚಿತವಾಗಿ ನೀಡುತ್ತಿರುವುದರಿಂದ ಸಂಜೆ ವಿಶೇಷ ತರಗತಿಗಳನ್ನು ನಡೆಸಲು ಸಹಾಯಕವಾಗುತ್ತದೆ. ಸರ್ಕಾರಿ ಶಾಲೆಗಳಲ್ಲಿ ಫಲಿತಾಂಶ ಹೆಚ್ಚಲು ಇದು ಕಾರಣವಾಗುತ್ತದೆ ಎಂದರು.

ಈಗಾಗಲೇ ಸರ್ಕಾರದ ವತಿಯಿಂದ ಅನೇಕ ಕಡೆ ಸಿಇಟಿ ಹಾಗೂ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗಬಾರದು ಎಂದು ಶಾಲೆಯ ಪ್ರಾರಂಭದಿಂದಲೇ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುತ್ತಿದ್ದೇವೆ. ಸಂಘ, ಸಂಸ್ಥೆಗಳು ದಾನಿಗಳು, ಪೋಷಕರು, ಎಸ್‌ಡಿಎಂಸಿ ಸಮಿತಿ ಹೀಗೆ ಎಲ್ಲರ ಸಹಕಾರದಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಈಗಾಗಲೇ ಶ್ರಮಿಸಲಾಗುತ್ತಿದೆ ಎಂದರು.

ಮ್ಯಾಮೋಸ್ ಅಡಿಕೆ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆ ಫೆ.4ರಂದು ನಡೆಯಲಿದ್ದು, ಇದಕ್ಕಾಗಿ ರಾಷ್ಟ್ರೀಯ ಸಹಕಾರಿ ಪ್ರತಿಷ್ಠಾನದ ಹೆಸರಿನಲ್ಲಿ 19 ಜನ ಸ್ಪರ್ಧಿಸಿದ್ದಾರೆ. ಈ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾಗಿ ಮಧು ಬಂಗಾರಪ್ಪ ವಿನಂತಿಸಿದರು.

ಮಾಮ್ಮೋಸ್ ಅಭಿವೃದ್ಧಿಗಾಗಿ ನಾವು ಶ್ರಮಿಸುತ್ತೇವೆ. ಈಗ ಅದು ಒಂದು ಪಕ್ಷದ ಹಿಡಿತದಲ್ಲಿದ್ದು, ಅದನ್ನು ತಪ್ಪಿಸಿ ಸಾರ್ವಜನಿಕ ವ್ಯಾಪ್ತಿ ಗೆ ತರಲಾಗುವುದು ಎಂದರು.

ನೀಟ್ ತರಗತಿ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಇದನ್ನು ತುಂಬಾ ಮೆಚ್ಚಿಕೊಂಡಿದ್ದಾರೆ. ಸುಮಾರು 16 ಜಿಲ್ಲೆಗಳಲ್ಲಿ ಈ ತರಗತಿ ನಡೆಸಲಾಗುತ್ತಿದ್ದು. ಇದನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದರು.

ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ LKG ಮತ್ತು ಯುಕೆಜಿ ತರಗತಿಗಳನ್ನು ಈಗಾಗಲೇ SDMC ಸಹಕಾರದಲ್ಲಿ ತೆರೆಯಲಾಗುತ್ತಿದೆ. ಇದರಿಂದ ಶಾಲಾ ಪ್ರವೇಶಾತಿ ಹೆಚ್ಚಾಗುತ್ತದೆ. ಸರ್ಕಾರಿ ಶಾಲೆಗಳ ಉಳಿವಿಗೂ ಇದು ಕಾರಣವಾಗುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.

Leave a Reply