ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಬಿಪಿಎಲ್ ಕಾರ್ಡ್ ಕರ್ನಾಟಕದಲ್ಲಿವೆ: ಕೆ ಎಚ್ ಮುನಿಯಪ್ಪ

8 months ago

ಬೆಂಗಳೂರು: ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಬಿಪಿಎಲ್ ಕಾರ್ಡ್ ಇರುವುದು ಕರ್ನಾಟಕದಲ್ಲಿ. ಕರ್ನಾಟಕದಲ್ಲೇ 75%. ಬಿಪಿಎಲ್ ಕಾರ್ಡ್ ಇವೆ. 1.28 ಕೋಟಿ ಬಿಪಿಎಲ್ ಕಾರ್ಡ್‌ಗಳಿದ್ದು, 4 ಕೋಟಿ ಜನ ಇದ್ದಾರೆ. ಈ ಹಿಂದೆ ಎಪಿಎಲ್ ಅರ್ಹತೆ ಇರೋರು ಬಿಪಿಎಲ್‌ನಲ್ಲಿ ಇದ್ದರು. ಅದನ್ನ ಸರಿ ಮಾಡೋಕೆ ಮುಂದಾಗಿದ್ದೆವು, ಆಗ ಗಲಾಟೆ ಆಯ್ತು. ಈಗ ಮತ್ತೆ ಅದನ್ನ ಪರಿಷ್ಕರಣೆ ಮಾಡ್ತೀವಿ. ಇದಕ್ಕೆ ಎಲ್ಲಾ ಸದಸ್ಯರ ಸಹಕಾರ ಬೇಕು ಎಂದು ಆಹಾರ ಮಂತ್ರಿ ಕೆ ಎಚ್ ಮುನಿಯಪ್ಪ ಹೇಳಿದ್ದಾರೆ.

ವಿಧಾನಪರಿಷತ್ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಎನ್‌.ನಾಗರಾಜ್‌ ಯಾದವ್  ಅವರ ಪ್ರಶ್ನೆಗೆ ಉತ್ತರಿಸಿದ ಅವರು,‌ ಹಿಂದೆ ಬಿಪಿಎಲ್‌ ಕಾರ್ಡ್‌ನಲ್ಲಿದ್ದ ಫಲಾನುಭವಿಗಳನ್ನು ಎಪಿಎಲ್‌ಗೆ ವರ್ಗಾವಣೆ ಮಾಡಲು ಇಲಾಖೆ ಮುಂದಾದಾಗ ದೊಡ್ಡ ವಿವಾದವೇ ಸೃಷ್ಟಿಯಾಯಿತು ಎಂದರು.

ಸದನದ ಸದಸ್ಯರೆಲ್ಲರೂ ಒಪ್ಪಿಗೆಯನ್ನು ಸೂಚಿಸಿದರೆ ಎಪಿಎಲ್‌ನಿಂದ ಬಿಪಿಎಲ್‌ಗೆ ಅನರ್ಹ ಫಲಾನುಭವಿಗಳನ್ನು ವರ್ಗಾವಣೆ ಮಾಡಲಾಗುವುದು. ನಮ್ಮ ಇಲಾಖೆ ನಡೆಸಿರುವ ಸಮೀಕ್ಷೆ ಪ್ರಕಾರ ಇಂತಹ 15 ಲಕ್ಷ ಫಲಾನುಭವಿಗಳು ಬಿಪಿಎಲ್‌ಗೆ ಸೇರ್ಪಡೆಯಾಗಿದ್ದಾರೆ. ಅಂದಾಜು 50 ರಿಂದ 60 ಲಕ್ಷ ಫಲಾನುಭವಿಗಳು ಲಾಭ ಪಡೆಯುತ್ತಿದ್ದಾರೆ ಎಂದರು.

ಸುಸ್ಥಿತಿಯಲ್ಲಿರುವ ಬಹಳಷ್ಟು ಫಲಾನುಭವಿಗಳು ಬಿಪಿಎಲ್ ಪಡಿತರ ಆಹಾರಧಾನ್ಯಗಳನ್ನು ಪಡೆಯುತ್ತಿರುವ ಪರಿಣಾಮ ಸರ್ಕಾರದ ಬೊಕ್ಕಸಕ್ಕೂ ಹೊರೆಯಾಗುತ್ತದೆ. ಇದನ್ನು ಮಾಡುವಾಗ ಕೆಲವು ಸಮಸ್ಯೆಗಳು ಎದುರಾಗುತ್ತವೆ. ಕೆಲವರು ಅರ್ಹ ಫಲಾನುಭವಿಗಳನ್ನೇ ತೆಗೆದುಹಾಕುತ್ತಾರೆ ಎಂದು ಅಪಪ್ರಚಾರ ನಡೆಸುತ್ತಾರೆ. ಇದಕ್ಕೆ ಸದಸ್ಯರು ಅವಕಾಶ ಮಾಡಿಕೊಡಬಾರದು. ನಿಮ್ಮ ಒಪ್ಪಿಗೆ ಇದ್ದರೆ ಅನರ್ಹರನ್ನು ತೆಗೆದುಹಾಕಲು ಸರ್ಕಾರ ಸಿದ್ಧವಿದೆ ಎಂದರು.

ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕದಲ್ಲೇ ಅತೀ ಹೆಚ್ಚು ಬಿಪಿಎಲ್‌ ಫಲಾನುಭವಿಗಳಿದ್ದಾರೆ. ತಮಿಳುನಾಡು ಶೇ.50, ಕೇರಳ ಶೇ.45, ತೆಲಂಗಾಣ ಶೇ.50, ಆಂಧ್ರಪ್ರದೇಶ ಶೇ.50, ನಮಲ್ಲಿ ಮಾತ್ರ ಶೇ. 70 ರಿಂದ 75ರಷ್ಟು ಬಿಪಿಎಲ್‌ ಫಲಾನುಭವಿಗಳು ಇದ್ದಾರೆ ಎಂದು ಅಂಕಿ ಸಂಖ್ಯೆಗಳ ವಿವರ ನೀಡಿದರು.

ಓರ್ವ ಬಿಪಿಎಲ್‌ ಫಲಾನುಭವಿ ಎಂದು ಗುರುತಿಸಬೇಕಾದರೆ ಕೇಂದ್ರ ಸರ್ಕಾರ 11 ಹಾಗೂ ರಾಜ್ಯಸರ್ಕಾರ 5 ಮಾನದಂಡಗಳನ್ನು ನಿಗದಿಪಡಿಸಿದೆ. ಈ ಮಾನದಂಡವನ್ನು ನಾವು ಪಾಲನೆ ಮಾಡಿದರೆ ಬಿಪಿಎಲ್‌ ಫಲಾನುಭವಿಗಳ ಸಂಖ್ಯೆ 35ಕ್ಕೆ ಇಳಿಕೆಯಾಗುತ್ತದೆ ಎಂದರು.

ರಾಜ್ಯದಲ್ಲಿ ಪಡಿತರ ಧಾನ್ಯಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವವರ ಮೇಲೆ ಇಲಾಖೆ ಹಲವು ದಿಟ್ಟ ಕ್ರಮಗಳನ್ನು ತೆಗೆದುಕೊಂಡಿದೆ. 2023-24ರಲ್ಲಿ 404 ಪ್ರಕರಣಗಳು- 20 ಕೋಟಿ ರೂ.ದಂಡ, 2024-25 ರಲ್ಲಿ 505 ಪ್ರಕರಣಗಳು-10 ಕೋಟಿ ರೂ. ದಂಡ, ಪ್ರಸಕ್ತ ವರ್ಷ 287 ಪ್ರಕರಣಗಳು-4 ಕೋಟಿ ರೂ. ದಂಡವನ್ನು ವಸೂಲಿ ಮಾಡಲಾಗಿದೆ. ಪಡಿತರ ಆಹಾರಧಾನ್ಯಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಮಾಹಿತಿ ಬಂದ ತಕ್ಷಣ ನಮ ಅಧಿಕಾರಿಗಳು ಕೂಡ ತಕ್ಷಣ ದಾಳಿ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ತೆಗೆದುಕೊಂಡಿದ್ದಾರೆ. ಬಿಪಿಎಲ್‌ ಪಡಿತರ ಚೀಟಿಗೆ ಅರ್ಜಿ ಹಾಕಲು ತಂತ್ರಾಂಶದ ಕೊರತೆ ಎದುರಾಗಿತ್ತು. ಈಗ ಯಾವುದೇ ಸಮಸ್ಯೆಯಿಲ್ಲ ಎಂದರು.

Leave a Reply