ಥಗ್ ಲೈಫ್ ಚಿತ್ರ ಬಿಡುಗಡೆ ಮಾಡದಂತೆ ಕರ್ನಾಟಕ ಬಂದ್ ಕರೆ ನೀಡಲಾಗುವುದು: ವಾಟಾಳ್ ನಾಗರಾಜ್

11 months ago

ಬೆಂಗಳೂರು: ಕಮಲಹಾಸನ್ ಕನ್ನಡದ ಮುಂದೆ ತೀರ ಸಣ್ಣ ವ್ಯಕ್ತಿ, ತಮಿಳುನಾಡಿನಲ್ಲಿ ಅವರ ಜನಬೆಂಬಲ ಇಲ್ಲ, ಪಾರ್ಟಿ ಕಟ್ಟಿ ಸೋತಿದ್ದಾರೆ ಎಂದು ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು.

ಪ್ರೆಸ್ ಕ್ಲಬ್ ನಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟ ಮತ್ತು ವಾಟಾಳ್ ಪಕ್ಷದಿಂದ ಕನ್ನಡ ಭಾಷೆಯ ಕುರಿತು ನಟ ಕಮಲಹಾಸನ್ ನೀಡಿರುವ ಹೇಳಿಕೆ ಖಂಡಿಸಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಿಳಿನಿಂದ ಕನ್ನಡ ಬಂತು. ಈ ಮಾತನ್ನ ಆಡಿದ್ದಾರೆ. ಯಾರು ಮಾತನಾಡಿದರು ಎಂಬುದು ಅರ್ಥವಾಗುತ್ತಿಲ್ಲ. ಈ ಪದ ಯಾಕೆ ಉಪಯೋಗಿಸಿದರು ಎಂಬುದು ಅರಿವಾಗುತ್ತಿಲ್ಲ ಎಂದರು.

ತಮಿಳಿನಿಂದ ಕನ್ನಡ ಹುಟ್ಟಿದೆ ಎಂದು ಹೇಳಿರುವುದು ಕೆಟ್ಟ ಸಂಸ್ಕೃತಿ, ಅಪರಾಧವಾಗಿದೆ. ನ್ಯಾ. ನಾಗಪ್ರಸನ್ನ ಅವರ ಪೀಠದಲ್ಲಿ ವಾದಮಂಡನೆಯಾಗುತ್ತಿದೆ. ಭಾಷೆ ವಿಚಾರದಲ್ಲಿ ರಾಜಿ ಇಲ್ಲ. ಈ ಹಿಂದೆ ಸಿ.ರಾಜಗೋಪಾಲಚಾರಿ ಅವರು ಕ್ಷಮಾಪಣೆ ಕೇಳಿದ್ದರು. ಪೆರಿಯಾರ್ ಕಾಲದಿಂದಲು ಭಾಷಾ ವಿವಾದವಿದೆ. ತಮಿಳುನಾಡು ಸರ್ಕಾರಕ್ಕೆ ದೇಶ ಒಡೆಯುವ ವಾಸನೆ ಹೋಗಿಲ್ಲ ಎಂದರು.

ಯಾವ ಕಾರಣಕ್ಕೂ ಕ್ಷಮಾಪಣೆ ಕೇಳದೇ ವಿಚಾರಣೆ ಮಾಡುವುದಿಲ್ಲ ಎಂದು ನ್ಯಾಯಧೀಶರಾದ ನಾಗಪ್ರಸನ್ನರವರು ಹೇಳಿದರು. ಈ ನಾಡಿನ ಜನರ ನಾಡಿ ಮಿಡಿತವನ್ನು ಅರಿತಿರುವ ನ್ಯಾಯಧೀಶರಿಗೆ ಕನ್ನಡ ನಾಗಪ್ರಸನ್ನ ಎಂದು ಗೌರವಿಸಲಾಗುತ್ತದೆ ಎಂದರು.

ಜಲ, ನೆಲದ ವಿಷಯದಲ್ಲಿ ರಾಜಿ ಇಲ್ಲ. ಕಮಲಹಾಸನ್ ಕ್ಷಮಾಪಣೆ ಹೇಳಬೇಕು. ನಾವು ಬಿಡುವುದಿಲ್ಲ. ಅಂತಿಮವಾಗಿ ಕನ್ನಡ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಕರ್ನಾಟಕ ಬಂದ್ ಕರೆ ನೀಡಲಾಗುವುದು. ಕಮಲಹಾಸನ್ ಕರ್ನಾಟಕ್ಕೆ ಬರಬಾರದು, ಬಹಿಷ್ಕಾರ ಮಾಡಲಾಗುವುದು ಎಂದರು.

Leave a Reply