ಎಸ್‌ ಎಸ್‌ ಎಸ್‌ ಪರೀಕ್ಷೆಗಳಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಪ್ರತಿಭಟನೆ

4 years ago

ಎಸ್‌ ಎಸ್‌ ಎಸ್‌ ಪರೀಕ್ಷೆಗಳಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಪ್ರತಿಭಟನೆ

ಬೆಂಗಳೂರು: ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ (ಎಸ್‌ ಎಸ್‌ ಸಿ) ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡದ ಒಕ್ಕೂಟ ಸರ್ಕಾರದ ಕ್ರಮವನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿತು.

ಕರ್ನಾಟಕದ ಅತಿ ದೊಡ್ಡ ಸಂಘಟನೆಯಾದ ಕರ್ನಾಟಕ ರಕ್ಷಣಾ ವೇದಿಕೆ ಕಳೆದ ಇಪ್ಪತ್ತೈದು ವರ್ಷಗಳಿಂದ ನಾಡು-ನುಡಿಗೆ ಸಂಬಂಧಿಸಿದಂತೆ ಚಳವಳಿಗಳನ್ನು ಸಂಘಟಿಸುತ್ತ ಬರುತ್ತಿದೆ. ನಾಡಿನ ಯುವಜನರ ಉದ್ಯೋಗಾವಕಾಶಗಳ ಹಕ್ಕಿಗಾಗಿ ಸದಾಕಾಲ ದನಿಯೆತ್ತುತ್ತ ಬಂದಿದೆ. ಈ ನಿಟ್ಟಿನಲ್ಲಿ ಹಲವಾರು ಯಶಸ್ವಿ ಹೋರಾಟಗಳನ್ನೂ ನಡೆಸಿದೆ.
ಇದೀಗ ಒಕ್ಕೂಟ ಸರ್ಕಾರ, ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಖಾಲಿಯಿರುವ 20,000ಕ್ಕೂ ಹೆಚ್ಚಿನ ’ಬಿ’ ಮತ್ತು ’ಸಿ’ ದರ್ಜೆಯ ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಈ ಇಡೀ ಪ್ರಕ್ರಿಯೆ 17ನೇ ಸೆಪ್ಟೆಂಬರ್ 2002ರಿಂದ ಆರಂಭವಾಗಿದ್ದು, ಸದರಿ ನೇಮಕಾತಿ ಅರ್ಜಿ ಸಲ್ಲಿಸುವಿಕೆಯಿಂದ ಹಿಡಿದು ಎಲ್ಲಾ ಹಂತಗಳ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳ ತನಕ ಕೇವಲ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನಡೆಯಲಿವೆ. ಇದು ಕನ್ನಡಿಗರ ಉದ್ಯೋಗಾವಕಾಶಗಳನ್ನು ಕಸಿಯುವ ತಾರತಮ್ಯದ ನಡೆಯಾಗಿದೆ. ನೇಮಕಾತಿಯ ಎಲ್ಲಾ ಹಂತದ ಪರೀಕ್ಷೆಗಳೂ ಹಿಂದೀ/ ಇಂಗ್ಲಿಷ್ ಭಾಷೆಗಳಲ್ಲಿ ಮಾತ್ರ ನಡೆಸುವುದು ಹಿಂದಿ ತಾಯ್ನುಡಿಯ ಅಭ್ಯರ್ಥಿಗಳಿಗೆ ನ್ಯಾಯಸಮ್ಮತವಲ್ಲದ ಅನುಕೂಲವನ್ನು ಮಾಡಿಕೊಡುತ್ತದೆ. ಹಿಂದಿ ತಾಯ್ನುಡಿಯವರಿಗೆ ಮಾತ್ರ ಅವರ ತಾಯ್ನುಡಿಯಲ್ಲಿ ಅರ್ಜಿ ಸಲ್ಲಿಸುವ, ಪರೀಕ್ಷೆ ಬರೆಯುವ ಅನುಕೂಲ ಮಾಡಿಕೊಟ್ಟಿರುವುದು ಎಲ್ಲಾ ಹಿಂದೀಯೇತರ ಜನಗಳಿಗೆ ಭಾರತ ಸರ್ಕಾರ ಎಸಗುತ್ತಿರುವ ದ್ರೋಹವಾಗಿದೆ.
ಇದಷ್ಟೇ ಅಲ್ಲದೆ, ಹೀಗೆ ದೇಶಾದ್ಯಂತ ನಡೆಯುವ ನೇಮಕಾತಿ ಈ ಹಿಂದಿನಂತೆ ವಲಯವಾರು ಆಗುವುದು ನಾಡಿನ ಜನತೆಯ ಸುಲಲಿತತೆಯ ದೃಷ್ಟಿಯಿಂದ ಮಹತ್ವದ್ದಾಗಿದೆ. ಏಕೆಂದರೆ ಕರ್ನಾಟಕ-ಕೇರಳ ವಲಯಕ್ಕೆ ನೇಮಕಾತಿಯಾಗುವಾಗ ಇಲ್ಲಿನ ಎಲ್ಲಾ ಹುದ್ದೆಗಳೂ ಈ ವಲಯದ ಅಭ್ಯರ್ಥಿಗಳಿಗೆ ಸಿಗುತ್ತಿದ್ದುದರಿಂದ (ಪರೀಕ್ಷೆಗಳು ಕನ್ನಡದಲ್ಲಿ ನಡೆಯದಿದ್ದಾಗಲೂ) ಸ್ಥಳೀಯರಿಗೆ ಸದರಿ ಕೇಂದ್ರಕಚೇರಿಗಳಲ್ಲಿ ಅನನುಕೂಲಗಳ ಪ್ರಮಾಣ ಬಹುಶಃ ಕಡಿಮೆಯಿರುತ್ತಿತ್ತು. ಈ ದೇಶದಾದ್ಯಂತದ ನೇಮಕಾತಿಯಿಂದಾಗಿ ಪರಭಾಷೆಯ ಅಧಿಕಾರಿಗೊಳೊಂದಿಗೆ ವ್ಯವಹರಿಸಬೇಕಾದ ಅನಿವಾರ್ಯತೆ ಹೆಚ್ಚಲಿದ್ದು, ನಾಗರಿಕರಿಗೆ ಉಂಟಾಗುವ ಭಾಷಾಸಂಬಂಧಿತ ಅನನುಕೂಲಗಳು ಉಲ್ಬಣಗೊಳ್ಳುವ ಸಾಧ್ಯತೆಗಳು ಹೆಚ್ಚಲಿವೆ.
ಹಾಗಾಗಿ ಈ ಇಡೀ ನೇಮಕಾತಿ ಪ್ರಕ್ರಿಯೆಯು ವಲಯವಾರು ನಡೆಯುವುದು ಮತ್ತು ಕನ್ನಡದಲ್ಲಿ ಕೂಡಾ ನಡೆಯುವುದು ಕನ್ನಡಿಗರು ಅರ್ಜಿ ಸಲ್ಲಿಸಲು ಮತ್ತು ನೇಮಕವಾಗಲು ಸಹಕಾರಿಯಾಗುತ್ತದೆ. ಒಕ್ಕೂಟ ಸರ್ಕಾರ ಕೂಡಲೇ ಎಸ್‌ ಎಸ್‌ ಸಿ ಪರೀಕ್ಷೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ರದ್ದುಪಡಿಸಿ, ಹೊಸದಾಗಿ ಅಧಿಸೂಚನೆ ಹೊರಡಿಸಬೇಕು. ಕನ್ನಡದಲ್ಲೂ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ಒತ್ತಾಯಿಸುತ್ತೇವೆ.
– ಟಿ.ಎ.ನಾರಾಯಣ ಗೌಡ, ಕರವೇ ಅಧ್ಯಕ್ಷ

Leave a Reply