ಕಾಶಿಯಲ್ಲಿ ಮೊಳಗಿತು ಕನ್ನಡದ ಕಹಳೆ
ಕನ್ನಡ ಡಿಂಡಿಂಮೋತ್ಸವದಲ್ಲಿ 5000 ಕನ್ನಡಿಗರು ಭಾಗಿ
ನಟಿ ಪ್ರೇಮಾ ಮತ್ತು ಪತ್ರಕರ್ತ ಆನಂದ್ ಬುರುಲಿರವರಿಗೆ ಶ್ರೀ ಗಂಧದಗುಡಿ ಪ್ರಶಸ್ತಿ ಪ್ರಧಾನ
ಲಖ್ನೋ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕಾಶಿ ಗಂಗಾನದಿ ತೀರದಲ್ಲಿರುವ ಚೌಕಿ ಘಾಟ್ ನಲದಲಿ “ಕನ್ನಡ ಡಿಂಡಿಂಮೋತ್ಸವ” ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಶ್ರೀ ಗಂಧದಗುಡಿ ಪ್ರಶಸ್ತಿ ಸಮಾರಂಭ ನಡೆಯಿತು.

ಜಂಗಮವಾಡಿ ಮಠದ ಕಾಶಿ ಜಗದ್ಗುರು ಪೀಠದ ಶ್ರೀಶ್ರೀಶ್ರೀ 1008 ಜಗದ್ಗುರು ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ವಿಶೇಷ ಆಯುಕ್ತ (ಆಡಳಿತ) ರಂಗಪ್ಪ, ಚಲನಚಿತ್ರ ನಟಿ ಶಿಲ್ಪಾ ಶೆಟ್ಟಿ, ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನುರಾಧ, ಬಿಬಿಎಂಪಿಯ ಉಪ ಆಯುಕ್ತೆ (ಕಂದಾಯ) ಆರ್.ಲಕ್ಷ್ಮೀದೇವಿ, ಮಾಜಿ ಮಹಾಪೌರರಾದ ಗೌತಮ್ ಕುಮಾರ್, ಬಿ.ಬಿ.ಎಂ.ಪಿ. ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಎ.ಅಮೃತ್ ರಾಜ್, ಖ್ಯಾತ ಹಿನ್ನೆಲೆ ಗಾಯಕಿ ಕು.ರಮ್ಯಾ ವಶಿಷ್ಠ, ಚಲನಚಿತ್ರ ನಟ ಧನ್ವೀರ್ ಗೌಡ ಉದ್ಘಾಟನೆ ಮಾಡಿದರು.
ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮಾತನಾಡಿ ಕಾಶಿ ಮತ್ತು ಕರ್ನಾಟಕ ರಾಜ್ಯಕ್ಕೂ ಅವಿನಾಭವ ಸಂಭಂದವಿದೆ. ಕನ್ನಡ ಭಾಷೆ ಪ್ರಾಚೀನ ಭಾಷೆಯಾಗಿದೆ. ಕನ್ನಡ ಭಾಷೆ ಸರಳ, ಸುಂದರವಾದ ಭಾಷೆ. ಅನ್ಯ ಭಾಷಿಕರು ಕನ್ನಡ ಭಾಷೆ ಕಲಿಯಲು ಬಹಳ ಸುಲಭ. ಕಾಶಿ ವಿಶ್ವನಾಥ ಸನ್ನಿಧಾನದಲ್ಲಿ ಕನ್ನಡ ಡಿಂಡಿಮೋತ್ಸವ ಕನ್ನಡಿಗರಿಗೆ ಹೆಚ್ಚು ಶಕ್ತಿ ತುಂಬುತ್ತದೆ ಎಂದರು.
ಬಾಲಿವುಡ್ ಚಿತ್ರನಟಿ ಶಿಲ್ಪಾ ಶೆಟ್ಟಿ ಮಾತನಾಡಿ, ಕರ್ನಾಟಕ ನನ್ನ ಮಾತೃ ಭೂಮಿ. ಕನ್ನಡ ನೆಲ ನನ್ನ ಅಚ್ಚು ಮೆಚ್ಚಿನ ನಾಡು. ಕನ್ನಡಿಗರು ಆಯೋಜಿಸುವ ಪ್ರತಿಯೊಂದು ಕಾರ್ಯಕ್ರಮಕ್ಕೆ ನಾನು ಬರುತ್ತೇನೆ. ಬಿ.ಬಿ.ಎಂ.ಪಿ. ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಪ್ರೀತಿ, ವಿಶ್ವಾಸ ಆಹ್ವಾನ ಮೆಚ್ಚಿ ನನ್ನ ತಾಯಿ ಜೊತೆಯಲ್ಲಿ ಭಾಗವಹಿಸಿದ್ದೇನೆ. ಕರ್ನಾಟಕ ಮತ್ತು ಕನ್ನಡಿಗರನ್ನ ನಾನು ಮರೆಯುವುದಿಲ್ಲ ಎಂದರು.
ವಿಶೇಷ ಆಯುಕ್ತ ರಂಗಪ್ಪ ಮಾತನಾಡಿ, ಬೆಂಗಳೂರು ನಗರದಲ್ಲಿ ಕನ್ನಡ ಮಯವಾಗುತ್ತಿದೆ ಎಂದು ಹೇಳುತ್ತಾರೆ. ಆದರೆ ಬಿ.ಬಿ.ಎಂ.ಪಿ. ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ರಾಷ್ಟ್ರ ಮತ್ತು ಅಂತರರಾಷ್ಟ್ರ ಮಟ್ಟದಲ್ಲಿ ರಾಜ್ಯೋತ್ಸವ ಅಚರಣೆ ಮಾಡಿರುವುದು ಸಂತೋಷಕರ ವಿಷಯ. ನಮ್ಮ ಬಿ.ಬಿ.ಎಂ.ಪಿ.ಯಲ್ಲಿ ಸಂಪೂರ್ಣ ಕನ್ನಡದಲ್ಲಿ ಆಡಳಿತ ವ್ಯವಹಾರ ನಡೆಯುತ್ತದೆ. ಅಮೇರಿಕಾದ ಅಕ್ಕ ಸಮ್ಮೇಳನದಂತೆ ಕನ್ನಡ ಡಿಂಡಿಂಮೋತ್ಸವ ಬಹಳ ಯಶ್ವಸಿಯಾಗಿದೆ ಎಂದರು.
ತಾರ ಅನುರಾಧ ಮಾತನಾಡಿ, ಹೊರ ರಾಜ್ಯದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಕನ್ನಡಗರಿಗೆ ಹೆಮ್ಮೆಯ ವಿಷಯ. ಕನ್ನಡ ಭಾಷೆಗೆ 2500 ವರ್ಷ ಇತಿಹಾಸವಿದೆ. ಭಾಷೆ ಉಳಿಯಬೇಕಾದರೆ ಪ್ರತಿಯೊಬ್ಬರು ಕನ್ನಡ ಭಾಷೆ ಬಳಸಬೇಕು. ಕನ್ನಡ ಭಾಷೆ ಉಳಿಸಿ, ಬೆಳಸಲು ಮತ್ತು ಅನ್ಯ ಭಾಷಿಕರಿಗೆ ಕನ್ನಡ ಕಲಿಸಲು ಪ್ರತಿಯೊಬ್ಬ ಕನ್ನಡಿಗ ಹೋರಾಟ ಮಾಡಬೇಕು ಎಂದರು.
ಮಾಜಿ ಮೇಯರ್ ಗೌತಮ್ ಕುಮಾರ್ ಮಾತನಾಡಿ, ಇತಿಹಾಸದಲ್ಲಿ ಮೊದಲನೇ ಬಾರಿಗೆ ಗಂಗಾ ತೀರದಲ್ಲಿ ಕನ್ನಡ ರಾಜ್ಯೋತ್ಸವ ನಡೆಯುತ್ತಿರುವ ಹೆಮ್ಮೆಯ ವಿಷಯ. ಗಂಗಾ ಆರತಿ, ಕಾಶಿ ವಿಶ್ವನಾಥನ ದರ್ಶನ ಜೊತೆಯಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ವಿಶೇಷವಾಗಿದೆ. ಕನ್ನಡ ನಾಡಿನಲ್ಲಿ ಹುಟ್ಟಬೇಕಾದರೆ ಏಳು ಜನ್ಮದ ಪುಣ್ಯ ಮಾಡಿರಬೇಕು ಎಂದರು.
ಕನ್ನಡ ತಾಯಿ ಭುವನೇಶ್ವರಿಯ ಆಶೀರ್ವಾದದಿಂದ ಕಾಶಿಗೆ ಬಂದು ಸಾವಿರಾರು ಕನ್ನಡಿಗರ ರಾಜ್ಯೋತ್ಸವ ಕಾರ್ಯಕ್ರಮ ಮಾಡಲು ಅವಕಾಶ ಮಾಡಿಕೊಟ್ಟ ಕರ್ನಾಟಕ ಮತ್ತು ಉತ್ತರಪ್ರದೇಶ ಸರ್ಕಾರಕ್ಕೆ ಧನ್ಯವಾದಗಳು ಎಂದರು.
ಚಲನಚಿತ್ರ ನಟಿ ಪ್ರೇಮಾ ಮಾತನಾಡಿ ಇದೇ ಮೊದಲನೇ ಬಾರಿಗೆ ಕಾಶಿ ನಗರಕ್ಕೆ ಬಂದಿದ್ದೇನೆ. ಕನ್ನಡ ಭಾಷೆ ಉಳಿಯಬೇಕು, ಬೆಳೆಯಬೇಕು. ರಾಜ್ಯೋತ್ಸವ ಕಾರ್ಯಕ್ರಮ ರಾಷ್ಟ್ರ ಮಟ್ಟ, ಅಂತರಾಷ್ಟ್ರ ಮಟ್ಟದಲ್ಲಿ ಸಮಾರಂಭವಾಗಿ ನಡೆಯಬೇಕು ಎಂದರು.
ಅಮೃತ್ ರಾಜ್ ಮಾತನಾಡಿ, ಬಿ.ಬಿ.ಎಂ.ಪಿ. ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘ ರಾಜ್ಯದ ನೆಲ, ಜಲ ಮತ್ತು ನಾಡು, ನುಡಿಗೆ ಕಟಿಬದ್ಧರಾಗಿ ಸಂಘಟನೆ, ಹೋರಾಟ ಮಾಡುತ್ತಾ ಬಂದಿದ್ದೇವೆ. ಹೊರನಾಡ ಕನ್ನಡಿಗರ ಜೊತೆಯಲ್ಲಿ ಕನ್ನಡ ಡಿಂಡಿಂಮೋತ್ಸವ ಆಚರಿಸಬೇಕು ಎಂದು ಕಾಶಿಯಲ್ಲಿ ಏರ್ಪಡಿಸಲಾಗಿದೆ. ಕನ್ನಡ ಭಾಷೆ ಉಳಿಸಿ, ಬೆಳಸಲು ಸಂಘದ ವತಿಯಿಂದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಮತ್ತು ರಂಗಕಲಾವಿದರು, ಚಲನಚಿತ್ರ ಕಲಾವಿದರನ್ನು ಗೌರವಿಸಿ, ಪ್ರೋತ್ಸಾಹ ನೀಡುವುದು. ಕನ್ನಡ ಭಾಷೆ ರಾಷ್ಟ್ರ, ಅಂತರರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಗಳಿಸಬೇಕು ಎಂಬುದು ನಮ್ಮ ಆಶಯ. ಕಾಶಿಯಲ್ಲಿ ನಡೆದ ನಮ್ಮ ಕಾರ್ಯಕ್ರಮಕ್ಕೆ ಬಿ.ಬಿ.ಎಂ.ಪಿ. ಆಡಳಿತಾಧಿಕಾರಿಗಳಾದ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ರವರ ಸಹಕಾರ ನೀಡಿದ್ದಾರೆ ಎಂದರು.
ಜಾನಪದ ನೃತ್ಯ, ಸಂಗೀತ ಕಾರ್ಯಕ್ರಮ, ಡೊಳ್ಳು ಕುಣಿತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಚಲನಚಿತ್ರ ನಟಿ ಪ್ರೇಮಾ ಹಾಗೂ ಪತ್ರಕರ್ತ ಆನಂದ ಬುರಲಿ ಅವರಿಗೆ “ಶ್ರೀಗಂಧದ ಗುಡಿ” ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಬಿ.ಬಿ.ಎಂ.ಪಿ. ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಗಂಗಾಧರ್, ಸೂರ್ಯಕುಮಾರಿ,
ಹೆಚ್.ವಿ.ಅಶ್ವಥ್, ಕೆ.ಜಿ.ರವಿ, ರಾಮಚಂದ್ರ, ಕೆ.ಮಂಜೇಗೌಡ, ಎಸ್.ಜಿ.ಸುರೇಶ್, ಕೆ.ನರಸಿಂಹ, ಸಾಯಿಶಂಕರ್, ಸಂತೋಷ್ ಕುಮಾರ್ ನಾಯಕ್, ಮಂಜು, ರುದ್ರೇಶ್ ಪಾಲ್ಗೊಂಡಿದ್ದರು.




