ಬಿಜೆಪಿ ಜೊತೆ ಸೇರಿದ ಜಾತ್ಯತೀತ ಜನತಾದಳ “ಮಹಿಳಾ ಪೀಡಕ ಜನತಾ ದಳ”ವಾಗಿ ಮಾರ್ಪಟ್ಟಿದೆ: ಕಾಂಗ್ರೆಸ್

2 years ago

ಬೆಂಗಳೂರು: ಪೆನ್ ಡ್ರೈವ್ ಕುಮಾರನ ಅವಕಾಶವಾದಿತನಕ್ಕೆ ಜಾತ್ಯಾತೀತ ಜನತಾ ದಳವು ಬಿಜೆಪಿಯೊಂದಿಗೆ ಸೇರಿ ಜಾತ್ಯಾತೀತತೆಯನ್ನು ವಿಸರ್ಜಿಸಿ “ಮಹಿಳಾ ಪೀಡಕ ಜನತಾ ದಳ”ವಾಗಿ ಮಾರ್ಪಟ್ಟಿದೆ ಎಂದು ಕೆಪಿಸಿಸಿ ಹೇಳಿದೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿರುವ ಕೆಪಿಸಿಸಿ, ಹಿಂದಿನ ಕಾಲದ ಸಿನೆಮಾಗಳಲ್ಲಿನ ಖಳನಾಯಕರ ಪಾತ್ರಗಳನ್ನು ಇಂದು ನಾವು ಜೆಡಿಎಸ್ ಪಕ್ಷದಲ್ಲಿ ಕಾಣುತ್ತಿದ್ದೇವೆ! ಎಂದಿದೆ.

ತಮ್ಮ ಕುಟುಂಬದ ಸದಸ್ಯನೊಬ್ಬ ಎಲ್ಲಿ ಅಡಗಿದ್ದಾನೆ ಎನ್ನುವ ಮಾಹಿತಿ ಇಲ್ಲದಿರುವಷ್ಟು ಅಮಾಯಕನೂ ಅಲ್ಲ, ಮುಗ್ದನೂ ಅಲ್ಲ ಬ್ರದರ್ ಸ್ವಾಮಿ! ಗೆಜ್ಜೆ ಶಬ್ದ ಕಂಡರೆ ಕಳ್ಳ ಹೆಜ್ಜೆ ಇಡುವ ಮಾನಗೇಡಿಗಳು ತಾವು ಕೊಳಕು ತಿಂದು ಇತರರ ಬಾಯಿಗೆ ಒರೆಸಲು ಬರುತ್ತಿರುವುದು ಮೂರನ್ನೂ ಬಿಟ್ಟಿರುವ ನಿರ್ಲಜ್ಜತನದ ಪರಮಾವಧಿ ಎಂದಿದೆ.

ಪೆನ್ ಡ್ರೈವ್ ಬಿಡ್ತೀನಿ, ಬಿಡ್ತೀನಿ ಎಂದು ಒಂದು ವರ್ಷದಿಂದ ಬಾಯಿ ಬಡಿದುಕೊಳ್ಳುತ್ತಿದ್ದ ಬಿಜೆಪಿಯ ದೇವರಾಜೇಗೌಡನ ಜೊತೆ ರಹಸ್ಯ ಒಪ್ಪಂದ ಮಾಡಿಕೊಂಡು “ಅಖಿಲ ಕರ್ನಾಟಕಕ್ಕೆ ಹಂಚಿಕೆ” ಮಾಡಿದ್ದು ಇದೇ ಬ್ರದರ್ ಸ್ವಾಮಿಯಲ್ಲವೇ? ಪೂರ್ವಾಶ್ರಮದ ಸಿನೆಮಾ ಹಂಚಿಕೆಯ ವೃತ್ತಿ ಇದರಲ್ಲೂ ಸಹಾಯಕ್ಕೆ ಬಂದಿರಬಹುದು! ಎಂದಿದೆ.

ಜೆಡಿಎಸ್ ಪಕ್ಷದವರು ನಿಜವಾಗಿಯೂ ಮರ್ಯಾದೆಗೆ ಅಂಜುವವರೇ ಆಗಿದ್ದರೆ, ಪ್ರಜ್ವಲ್ ರೇವಣ್ಣ ಮಾಡಿದ ಮಾನಗೇಡಿ ಕೆಲಸಕ್ಕೆ ಜನತೆಗೆ ಮುಖ ತೋರಿಸಲಾಗದೆ ಮನೆಯೊಳಗೆ ಮುಸುಕು ಹಾಕಿಕೊಂಡು ಕೂರಬೇಕಿತ್ತು. ಸಾರ್ವಜನಿಕ ಜೀವನ ತೊರೆದು ಮನೆ ಸೇರಿಸಬೇಕಿತ್ತು. ಆದರೆ ಅದ್ಯಾವ ಪಾಪಪ್ರಜ್ಞೆಯೂ ಕಾಡದೆ ಲಜ್ಜೆಯ ಲವಲೇಶವೂ ಇಲ್ಲದೆ, ಕಂಡ ಕಂಡವರ ಕಡೆ ಕೈ ತೋರಿಸುತ್ತಿರುವುದು ಪ್ರಜ್ವಲ್ ಮಾಡಿದ ಹೀನ ಕೆಲಸಕ್ಕಿಂತಲೂ ಮಾನಗೇಡಿ ಕೆಲಸ ಎಂದಿದೆ.

Leave a Reply