ಬಾಬೂಜಿಯವರನ್ನು ಪ್ರಧಾನಿಯಾಗಿ ಬೆಳೆಯಲು ಬಿಡಲೇ ಇಲ್ಲ: ಡಾ.ಕೆ.ಸುಧಾಕರ್ ವಿಷಾದ

4 years ago

ಮಂಚೇನಹಳ್ಳಿ ಸೇರಿದಂತೆ ಚಿಕ್ಕಬಳ್ಳಾಪುರದಲ್ಲಿ 23 ಸಾವಿರ ನಿವೇಶನಗಳ ಹಂಚಿಕೆ

ಪಿಎಚ್‍ಡಿ ಅಧ್ಯಯನಕ್ಕೆ ನೆರವು

ಚಿಕ್ಕಬಳ್ಳಾಪುರ: ಅತ್ಯುತ್ತಮ ಆಡಳಿತಗಾರರಾಗಿ ಉಪ ಪ್ರಧಾನಿ ಹುದ್ದೆಗೇರಿದ ಡಾ.ಬಾಬು ಜಗಜೀವನರಾಂ ಅವರಿಗೆ ಪ್ರಧಾನಿಯಾಗುವ ಅವಕಾಶವಿತ್ತು. ಆದರೆ ಅವರನ್ನು ಪ್ರಧಾನಿಯಾಗಿ ಬೆಳೆಯಲು ಬಿಡಲೇ ಇಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಬೇಸರ ವ್ಯಕ್ತಪಡಿಸಿದರು.

ಡಾ.ಬಾಬು ಜಗಜೀವನರಾಂ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನದಂತೆಯೇ ಬಾಲ್ಯದಲ್ಲಿ ಜಗಜೀವನರಾಂ ಅವರ ಜೀವನವೂ ಸಂಕಷ್ಟದಿಂದ ಕೂಡಿತ್ತು. ಕಡು ಬಡತನದಲ್ಲಿದ್ದರೂ ಅವರು ಉತ್ತಮವಾಗಿ ವಿದ್ಯಾಭ್ಯಾಸ ಹೊಂದಿ ಇಂಗ್ಲಿಷ್, ಗಣಿತ, ಸಂಸ್ಕೃತ ಭಾಷೆಯಲ್ಲಿ ಪಾಂಡಿತ್ಯ ಪಡೆದರು. ಅತಿ ಕಡಿಮೆ ವಯಸ್ಸಿನಲ್ಲಿ ಅವರು ರಾಜಕೀಯ ಪ್ರವೇಶ ಮಾಡಿದ್ದು, ಸುಮಾರು 50 ವರ್ಷಗಳ ಕಾಲ ಸಂಸದರಾಗಿ ಸೇವೆ ಸಲ್ಲಿಸಿದ್ದರು. ಆದರೆ ಅಂದಿನ ಕಾಲದಲ್ಲಿ ಅವರನ್ನು ರಾಜಕೀಯದಲ್ಲಿ ಮತ್ತಷ್ಟು ಬೆಳೆಯಲು ಕೆಲವರು ಬಿಡಲಿಲ್ಲ ಎಂದರು.

ಮಾನವತಾವಾದಿಯಾಗಿ, ಶೋಷಿತ ವರ್ಗಗಳ ನಾಯಕರಾಗಿ ಬೆಳೆದ ಅವರು, ಹಸಿರು ಕ್ರಾಂತಿ ಮಾಡಿ, ಕಾರ್ಮಿಕ ಕಾಯ್ದೆಗಳಲ್ಲಿ ಸುಧಾರಣೆ ತಂದರು. ನವಭಾರತ ನಿರ್ಮಿಸಿರುವವರಲ್ಲಿ ಬಾಬೂಜಿಯವರೇ ಪ್ರಮುಖರಾಗಿದ್ದಾರೆ. ಶೋಷಿತರು ರಾಜಕೀಯ ಅಧಿಕಾರವನ್ನೂ ಪಡೆಯಬೇಕು ಎಂಬುದು ಅವರ ಆಶಯವಾಗಿತ್ತು ಎಂದರು.

ಪರಿಶಿಷ್ಟರಿಗೆ ಭೂಮಿಯ ನೆರವು

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯ ಒಟ್ಟು 421 ಜನರಿಗೆ ಈವರೆಗೆ 879 ಎಕರೆ ಜಮೀನು ಮಂಜೂರು ಮಾಡಲಾಗಿದೆ. ಪರಿಶಿಷ್ಟ ಪಂಗಡದವರಿಗಾಗಿ 400 ಎಕರೆ ಮಂಜೂರು ಮಾಡಲಾಗಿದೆ. 59 ಭವನಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ. ಪರಿಶಿಷ್ಟ ಜಾತಿಯ 281 ಜನರಿಗೆ ಗಂಗಾಕಲ್ಯಾಣದಡಿ ಕೊಳವೆಬಾವಿ ನಿರ್ಮಿಸಿಕೊಡಲಾಗಿದೆ. ಕ್ಷೇತ್ರದಲ್ಲಿ ನಗರದ ಪ್ರದೇಶದ ಜನರಿಗೆ 5,000 ನಿವೇಶನಗಳನ್ನು ಗುರುತಿಸಿದ್ದು, ಶೀಘ್ರದಲ್ಲಿ ನೀಡಲಾಗುವುದು. ಗ್ರಾಮೀಣ ಭಾಗದಲ್ಲಿ ಸುಮಾರು 10 ಸಾವಿರ ನಿವೇಶನ ಗುರುತಿಸುವ ಕೆಲಸ ನಡೆಯುತ್ತಿದೆ. ಮಂಚೇನಹಳ್ಳಿಯೂ ಸೇರಿ ಒಟ್ಟು 23 ಸಾವಿರ ನಿವೇಶನ ನೀಡಲಾಗುವುದು ಎಂದರು.

ಅಧ್ಯಯನ ಪೀಠ, ಸಂಶೋಧನೆಗೆ ನೆರವು

ಬಾಬು ಜಗಜೀವನರಾಂ ಅವರ ಜೀವನ ಎಲ್ಲರಿಗೂ ದಾರಿದೀಪವಾಗಬೇಕಿದೆ. ಅದಕ್ಕಾಗಿ ಅವರ ಹೆಸರಿನಲ್ಲಿ ಜಿಲ್ಲಾ ಭವನದ ಜೊತೆಗೆ ಅಧ್ಯಯನ ಪೀಠವನ್ನು ಸ್ಥಾಪಿಸಬೇಕಿದೆ. ಅವರ ಬಗ್ಗೆ ಪಿಎಚ್‍ಡಿ ಮಾಡುವ ಓರ್ವ ಅಭ್ಯರ್ಥಿಯ ಸಂಪೂರ್ಣ ಅಧ್ಯಯನ ವೆಚ್ಚವನ್ನು ಭರಿಸಲಾಗುವುದು. ಇದರಿಂದ ಎಲ್ಲರಿಗೂ ಅವರ ವಿಚಾರಗಳು ತಲುಪುತ್ತವೆ ಎಂದು ತಿಳಿಸಿದರು.

ಶಾಂತಿ ಕಾಪಾಡುವ ಕೆಲಸ ಸರ್ಕಾರ ಮಾಡಲಿದೆ

ಅನೇಕ ವರ್ಷಗಳಿಂದ ಆಜಾನ್ ಕೂಗುವ ಪದ್ಧತಿ ನಡೆಯುತ್ತಿದೆ. ಆದರೆ ಇದರಿಂದ ಶಬ್ದಮಾಲಿನ್ಯವಾಗಬಾರದು ಎಂಬ ಅಭಿಪ್ರಾಯ ಬಂದಿದೆ. ಧಾರ್ಮಿಕ ಆಚರಣೆಗೆ ಸಂವಿಧಾನದಲ್ಲಿ ಸ್ವಾತಂತ್ರ್ಯವಿದೆ. ಆದರೆ ಆ ಆಚರಣೆಯಿಂದಾಗಿ ಇತರರಿಗೆ ತೊಂದರೆಯಾಗಬಾರದು. ಇದನ್ನೇ ಮುಂದಿಟ್ಟುಕೊಂಡು ಧರ್ಮಗಳ ನಡುವೆ ಅಶಾಂತಿಗೆ ಅವಕಾಶ ನೀಡಬಾರದು. ರಾಜ್ಯದಲ್ಲಿ ಶಾಂತಿ ಕಾಪಾಡುವ ಕೆಲಸವನ್ನು ಸರ್ಕಾರ ಮಾಡಲಿದೆ. ಯಾವುದೇ ಕೋರ್ಟ್ ಆದೇಶವನ್ನು ಸರ್ಕಾರವು ತಪ್ಪದೇ ಪಾಲಿಸಲಿದೆ ಎಂದರು.

Leave a Reply