ಭಜರಂಗದಳ ಮತ್ತು ಪಿಎಫ್ಐ ನಿಷೇಧ ಮಾಡಲಾಗುವುದು ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಲಾಗಿದೆ ಎಂಬ ಚರ್ಚೆಗಳು ಪ್ರಾರಂಭವಾಗಿದೆ. ನಿಷೇಧ ಸರಿಯೋ ತಪ್ಪೊ ಬೇರೆಯದ್ದೇ ಚರ್ಚೆ. ಆದರೆ ರಾಜಕೀಯ ಪಕ್ಷವೊಂದರ ಅತ್ಯುತ್ತಮ ಪ್ರಣಾಳಿಕೆಯೊಂದು ಈ ರೀತಿಯ ಸಂಘಟನೆಯ ನಿಷೇಧದ ಚರ್ಚೆಗೆ ಬಲಿಯಾಗಿದೆ. ಹಾಗಾಗಿ ಪ್ರಣಾಳಿಕೆಯಲ್ಲಿನ ನಿಷೇಧದ ವಾಕ್ಯವು ಏನನ್ನು ಧ್ವನಿಸುತ್ತದೆ ? ಮತ್ತು ಮಾಧ್ಯಮಗಳೂ ಸೇರಿದಂತೆ ಹಿಂದುತ್ವವಾದಿಗಳು ಯಾವ ರೀತಿ ಪ್ರಣಾಳಿಕೆಯನ್ನು ತಿರುಚಿ ಪುಕಾರು ಹಬ್ಬಿಸುತ್ತಿದ್ದಾರೆ ಎಂಬುದನ್ನು ನಾವು ನೋಡಬೇಕಾಗುತ್ತದೆ.
“ಸಂವಿಧಾನದ ವಿಧಿಗಳನ್ನು ಉಲ್ಲಂಘಿಸುವ ವ್ಯಕ್ತಿಗಳು ಮತ್ತು ಸಂಘಟನೆಗಳ ನಿಷೇಧವೂ ಸೇರಿದಂತೆ ಬಲವಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು” ಎಂದು ಕಾಂಗ್ರೆಸ್ ಪ್ರಣಾಳಿಕೆಯ ಕಾನೂನು ಮತ್ತು ನ್ಯಾಯ ಕೋಷ್ಟಕದಲ್ಲಿ ಹೇಳಲಾಗಿದೆ. ಈ ವಾಕ್ಯದಲ್ಲಿ ಭಜರಂಗದಳ, ಪಿಎಫ್ಐ ಹೆಸರು ಎಲ್ಲಿದೆ ? ಪಿಎಫ್ಐ ಈಗಾಗಲೇ ನಿಷೇಧಕ್ಕೆ ಒಳಗಾಗಿರುವ ಸಂಘಟನೆ. ಅದನ್ನು ಮತ್ತೆ ನಿಷೇಧ ಮಾಡುವ ಪ್ರಸ್ತಾಪವೇ ಬರುವುದಿಲ್ಲ. ಹಾಗಾಗಿ ಭಜರಂಗದಳ ಮತ್ತು ಪಿಎಫ್ಐ ನಿಷೇಧ ಮಾಡುತ್ತೇವೆ ಎಂದು ಘೋಷಿಸಲಾಗಲ್ಲ. ಇಲ್ಲದೇ ಇರುವುದನ್ನು ಜೋಡಿಸಿ ಚರ್ಚೆ ಮಾಡುವ ಉದ್ದೇಶ ಏನು ?
“ಸಂವಿಧಾನವೇ ಪವಿತ್ರ ಎಂದು ನಂಬಿರುವ ನಾವು ಯಾವುದೇ ವ್ಯಕ್ತಿಗಳಾಗಲೀ, ಭಜರಂಗದಳ ಮತ್ತು ಪಿಎಫ್ಐಗಳು ಸೇರಿದಂತೆ ಬಹುಸಂಖ್ಯಾತ ಅಥವಾ ಅಲ್ಪಸಂಖ್ಯಾತ ಇತರರಾಗಲೀ ಸಂವಿಧಾನದ ವಿಧಿಗಳನ್ನು ಉಲ್ಲಂಘಿಸುವುದನ್ನು ಸಹಿಸುವುದಿಲ್ಲ” ಎಂದು ಪ್ರಣಾಳಿಕೆಯ ಒಂದು ವಾಕ್ಯ ಹೇಳುತ್ತದೆ. ಇದರಲ್ಲಿ ಅಂತಹ ವಿವಾದ ಏನಿದೆ ? ಈ ವಾಕ್ಯದಲ್ಲಿ ನಿಷೇಧದ ಪ್ರಸ್ತಾಪ ಎಲ್ಲಿದೆ ?
ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ, ಉಚಿತ ಬಸ್ ಪ್ರಯಾಣ, ಅಂಗನವಾಡಿ ಕಾರ್ಯಕರ್ತೆಯರ ಸಂಬಳ ಹೆಚ್ಚಳ, ಪೌರಕಾರ್ಮಿಕರ ಖಾಯಂ, ಆಶಾ ಕಾರ್ಯಕರ್ತೆಯರಿಗೆ ಸಂಬಳ ಹೆಚ್ಚಳ, ಬಿಸಿಯೂಟ ಕಾರ್ಯಕರ್ತರ ಸಂಬಳ ಹೆಚ್ಚಳ, ವಿಧವಾ ವೇತನ ಹೆಚ್ಚಳ, ಒಪಿಎಸ್ ಮರುಜಾರಿ, ವಕೀಲರ ರಕ್ಷಣಾ ಕಾಯ್ದೆ ಅಕ್ಷರಶಃ ಜಾರಿ ಸೇರಿದಂತೆ ಅತ್ಯದ್ಬುತ ಪ್ರಣಾಳಿಕೆ ಚರ್ಚೆಯಾಗದಂತೆ ತಡೆಯಲು ಭಜರಂಗದಳ ನಿಷೇಧದ ಚರ್ಚೆಯನ್ನು ಚಾಲ್ತಿಯಲ್ಲಿಡಲಾಗಿದೆ. ಭಜರಂಗದಳ ನಿಷೇಧ ಪ್ರಣಾಳಿಕೆಯಲ್ಲಿ ಇರಬೇಕಿತ್ತಾ ? ಇರಬಾರದಾ ಎನ್ನುವುದು ಬೇರೆ ವಿಷಯ. ಆದರೆ ಇಡೀ ಜನಪರ ಪ್ರಣಾಳಿಕೆಯನ್ನು ಆ ಚರ್ಚೆ ನುಂಗಿ ಹಾಕಬಾರದು.
“ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಸಮಾಜದಲ್ಲಿ ಧ್ವೇಷವನ್ನು ಬಿತ್ತಿ ವಿಭಜನೆಗೆ ಜಾರಣವಾಗುವ, ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ದ ಕಠಿಣ ಮತ್ತು ನಿರ್ಣಾಯಕ ಕಾನೂನು ಕ್ರಮವನ್ನು ತೆಗೆದುಕೊಳ್ಳಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ.” ಎಂಬ ವಾಕ್ಯದೊಂದಿಗೆ ಪ್ರಾರಂಭವಾಗುವ ಪ್ಯಾರದೊಂದಿಗೆ ನಿಷೇಧದ ಪ್ರಸ್ತಾಪ ಬರುತ್ತದೆ. ಈ ವಾಕ್ಯಗಳಿಗೆ ಯಾರದ್ದಾದರೂ ಆಕ್ಷೇಪ ಇರಲು ಸಾಧ್ಯವೇ ?
ಭಜರಂಗದಳ, ಪಿಎಫ್ಐ ನಿಷೇಧದ ಚರ್ಚೆ ಪಕ್ಷವೊಂದರ ಅತ್ಯದ್ಬುತ ಪ್ರಣಾಳಿಕೆಯನ್ನು ಬಲಿ ತೆಗೆದುಕೊಳ್ಳುವ ಹುನ್ನಾರವಲ್ಲದೇ ಇನ್ನೇನೂ ಅಲ್ಲ. ಎಲ್ಲವೂ, ಎಲ್ಲರೂ ಸರಿ ಇದ್ದಿದ್ದರೆ ಇಂದು ಕಾಂಗ್ರೆಸ್ ಪ್ರಣಾಳಿಕೆಯ ಕುರಿತಾಗಿನ ಮೀಡಿಯಾ ಚರ್ಚೆಯಲ್ಲಿ ಅಂಗನವಾಡಿ ಹೋರಾಟಗಾರರು, ಮಹಿಳಾ ಹೋರಾಟಗಾರರು, ರೈತರು, ಅರ್ಥಿಕ ತಜ್ಞರು ಭಾಗವಹಿಸಬೇಕಿತ್ತು. ಆದರೆ ವಿಪರ್ಯಾಸ ಎಂಬಂತೆ ನೆಟ್ಟಗೆ ಪ್ರಣಾಳಿಕೆ ಓದಲೂ ಬಾರದ ಹಿಂದುತ್ವವಾದಿಗಳು ಚರ್ಚೆಯ ಭಾಗವಾಗಿದ್ದಾರೆ.
ಯಾವುದೇ ವ್ಯಕ್ತಿ, ಭಜರಂಗದಳ, ಪಿಎಫ್ಐ ಅಂತಹ ಯಾವುದೇ ಸಂಘಟನೆಗಳು ಸಂವಿಧಾನದ ವಿಧಿಗಳನ್ನು ಉಲ್ಲಂಘಿಸುವುದನ್ನು ನಾವು ಸಹಿಸೋದಿಲ್ಲ ಎಂಬುದೇ ಒಂದು ವಾಕ್ಯ. ಸಂವಿಧಾನದ ವಿಧಿಗಳನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿ, ಸಂಘಟನೆಗಳ ನಿಷೇಧವೂ ಸೇರಿದಂತೆ ಬಲವಾದ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎನ್ನುವುದೇ ಬೇರೆ ವಾಕ್ಯ.
- ನವೀನ್ ಸೂರಿಂಜೆ, ಹಿರಿಯ ಪತ್ರಕರ್ತರು



