ಹನಿಟ್ರ್ಯಾಪ್ ಪ್ರಕರಣ ಅತ್ಯಂತ ಸೂಕ್ಷ್ಮವಾಗಿದೆ: ಡಾ.ಜಿ. ಪರಮೇಶ್ವರ್

1 year ago

ಬೆಂಗಳೂರು: ಹನಿಟ್ರ್ಯಾಪ್ ಪ್ರಕರಣ ಅತ್ಯಂತ ಸೂಕ್ಷ್ಮವಾಗಿದೆ. ಈ ಬಗ್ಗೆ ತಾವು ಯಾವುದೇ ರೀತಿಯ ಪ್ರತಿಕ್ರಿಯೆಗಳನ್ನು ನೀಡುವುದಿಲ್ಲ ಎಂದು ಗೃಹಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹನಿಟ್ರ್ಯಾಪ್ ಪ್ರಕರಣದಲ್ಲಿ ಬಹಳ ಸೂಕ್ಷ್ಮ ಪ್ರಶ್ನೆಗಳು ಉದ್ಭವಿಸುತ್ತವೆ. ಏಕಾಏಕಿ ಎದುರಾಗುವ ಪ್ರಶ್ನೆಗಳಿಗೆ ಉತ್ತರಿಸುವುದು ಸರಿಯಲ್ಲ. ತುಂಬಾ ಸೂಕ್ಷ್ಮ ಎಂದು  ಪ್ರತಿಕ್ರಿಯಿಸಲು ನಿರಾಕರಿಸಿದರು.

ಈ ನಡುವೆ ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಹಕಾರ ಸಚಿವ ಕೆ ಎನ್ ರಾಜಣ್ಣ, ಈ ವಿಷಯವಾಗಿ ತಾವು ಹೇಳಬೇಕಾದುದೆಲ್ಲವನ್ನು ವಿಧಾನಸಭೆಯಲ್ಲಿಯೇ ಹೇಳಿದ್ದೇನೆ. ಹೊಸದಾಗಿ ಹೇಳಲು ಏನೂ ಇಲ್ಲ ಎಂದರು.

ಈ ಕುರಿತಂತೆ ಲಿಖಿತ ದೂರು ನೀಡುವುದು ಬಾಕಿ ಇದೆ. ಕೆಲಸದ ಒತ್ತಡದಿಂದ ತಾವು ಇನ್ನೂ ದೂರು ನೀಡಿಲ್ಲ. ಸಿಎಂ ಮತ್ತು ಗೃಹಸಚಿವರನ್ನು ಬುಧವಾರ ಅಥವಾ ಗುರುವಾರ ಭೇಟಿ ಮಾಡಿ ದೂರು ನೀಡುತ್ತೇನೆ ಎಂದರು.

ಸಿಎಂ ಯಾವತ್ತೂ ನನ್ನ ಜೊತೆ ಇರುತ್ತಾರೆ. ಎಲ್ಲ ಒಳ್ಳೆ ಕೆಲಸಗಳಿಗೂ ಮಂತ್ರಿಗಳೂ ಜೊತೆ ಇರುತ್ತಾರೆ. ಸದನದಲ್ಲಿ ನಾನೊಂದು ಹೇಳಿಕೆ ಕೊಟ್ಟಿದ್ದೇನೆ. ಅದಕ್ಕೆ ಬದ್ಧನಿದ್ದೇನೆ. ಕಾನೂನು ಕ್ರಮ ತೆಗೆದುಕೊಳ್ಳುವುದಕ್ಕಾಗಿ ಗೃಹಮಂತ್ರಿಯವರನ್ನು ಭೇಟಿ ಮಾಡಿ ಲಿಖಿತ ರೂಪದಲ್ಲಿ ದೂರು ಕೊಡುತ್ತೇನೆ ಎಂದರು.

ಸದ್ಯ ರಾಜ್ಯದಲ್ಲಿ ನಡೆದಿರುವ ಈ ಎಲ್ಲ ರಾಜಕೀಯ ವಿದ್ಯಮಾನಗಳ ಬಗ್ಗೆ ಗುರುವಾರ ಸತೀಶ್ ಜಾರಕಿಹೊಳಿಯವರು ಸೇರಿದಂತೆ ಸಮಾನಮನಸ್ಕರೆಲ್ಲರೂ ಸೇರಿ ಚರ್ಚಿಸುತ್ತೇವೆ. ಅವಶ್ಯಕತೆ ಬಿದ್ದರೆ ಸಿಎಂ ಅವರನ್ನು ಭೇಟಿ ಮಾಡುತ್ತೇನೆ ಎಂದರು.

ಮೈಸೂರಿನಲ್ಲಿ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ ಮಹದೇವಪ್ಪ, ವ್ಯಕ್ತಿಗಳ  ಖಾಸಗಿ ಕ್ಷಣಗಳನ್ನು ಬಹಿರಂಗ ಮಾಡಿ ವ್ಯಕ್ತಿತ್ವ ಹರಣ ಮಾಡುವ ಸಂಚು ಇದು. ಇದಕ್ಕೆ ತಕ್ಕ ಶಿಕ್ಷೆ ಆಗಬೇಕು, ಸದೃಢ ಕಾಯ್ದೆ ಜಾರಿಗೆ ನನ್ನ ಒತ್ತಾಯ ಇದೆ ಎಂದರು.

ನಾನು ಎಲ್ಲರಿಗೂ ಹಲೋ ಎನ್ನುತ್ತೇನೆ. ಎಲ್ಲರೂ ನನಗೆ ಪ್ರತಿಕ್ರಿಯೆ ಕೊಡುತ್ತಾರೆ. ಅದರಿಂದಲೇ ಟ್ರ್ಯಾಪ್ ಅನ್ನೋದು ಹೇಗೆ? ನನಗೆ ಅಂತಹ ಯಾವ ವಿಚಾರಗಳು ಗೊತ್ತಾಗುವುದಿಲ್ಲ. ನನ್ನನ್ನು ತುಳಿಯುವ ಪ್ರಯತ್ನ ಯಾರ ಮಾಡುತ್ತಾರೋ, ಮಾಡಿದಾರೋ ಅದು ನನಗೆ ಗೊತ್ತಿಲ್ಲ. ಆದರೆ ನಾನಂತೂ ಸದೃಢವಾಗಿ ಕುಳಿತ್ತಿದ್ದೇನೆ. ಹನಿ ಟ್ರ್ಯಾಪ್ ವಿಚಾರದಲ್ಲಿ ರಾಜಣ್ಣ ಜೊತೆ ಪ್ರತ್ಯೇಕ ಸಭೆ ನಡೆಸುವ ಅಗತ್ಯವೇನು ಇಲ್ಲ. ಏಕೆಂದರೆ ಈ ವಿಚಾರ ಈಗಾಗಲೇ ತೀರ್ಮಾನ ಆಗಿದೆ. ಉನ್ನತ ಮಟ್ಟದ ತನಿಖೆ ನಡೆಯಲಿ ಎಂದರು.

Leave a Reply