ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿದ ಹನಿಟ್ರ್ಯಾಪ್ ಪ್ರಕರಣ

1 year ago

ಬೆಂಗಳೂರು: ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರ ಹೇಳಿಕೆಯ ಮೂಲಕ ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿರುವ ಹನಿ ಟ್ರ್ಯಾಪ್ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯುವ ಜೊತೆಗೆ ಇದರ ಮಾಸ್ಟರ್ ಮೈಂಡ್ ಗಳ ವಿವರ ಬಹಿರಂಗಗೊಳ್ಳಬೇಕು ಎಂಬ ಆಗ್ರಹ ಜೋರಾಗಿದೆ. 

ಮತ್ತೊಂದಡೆ ಈ ಪ್ರಕರಣ ಮತ್ತು ರಾಜ್ಯ ವಿಧಾನಸಭೆಯ ಕಲಾಪದ ಮೇಲೆ ನಡೆದ ವಿದ್ಯಮಾನಗಳ ಬಗ್ಗೆ ಅತೀವ ಬೇಸರ ವ್ಯಕ್ತಪಡಿಸಿರುವ ಹಿರಿಯ ಶಾಸಕ ಬಿ ಆರ್ ಪಾಟೀಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದಾರೆ.

ಸದ್ಯ ಇವರು  ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದು, ಈ ಹಿಂದೆ ವಿಧಾನ ಪರಿಷತ್ ಉಪ ಸಭಾಪತಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಶಾಸಕರು, ಮಂತ್ರಿಗಳು ನೈತಿಕತೆ ಮರೆತು ಹನಿ ಟ್ರ್ಯಾಪ್  ಜಾಲದಲ್ಲಿ ಸಿಲುಕುವ ವಿಚಾರ ತಮಗೆ ಅತೀವ ನೋವನ್ನು ತಂದಿದೆ ಎಂದು ಹೇಳಿರುವ ಬಿ ಆರ್ ಪಾಟೀಲ್ ಶಾಸಕ ಸ್ಥಾನ ತೊರೆಯುವ ಬಗ್ಗೆ ಚಿಂತನೆ ಮಾಡುತ್ತಿದ್ದೇನೆ ಎಂದಿದ್ದಾರೆ.

ಸತೀಶ್ ಜಾರಕಿಹೊಳಿ ಆಕ್ರೋಶ: ಹನಿ ಟ್ರ್ಯಾಪ್ ಘಟನೆ ಕುರಿತು ತೀವ್ರ ಅಕ್ರೋಶ ವ್ಯಕ್ತಪಡಿಸಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಕೇವಲ ಸಹಕಾರ ಸಚಿವ ಮಾತ್ರವಲ್ಲ ಇನ್ನೂ ಹಲವರನ್ನು ಈ ಜಾಲದಲ್ಲಿ ಸಿಲುಕಿಸಲು ವ್ಯವಸ್ಥಿತವಾಗಿ ತಂತ್ರ ರೂಪಿಸಲಾಗಿದೆ ಎಂದು ಆರೋಪಿಸಿದರು. 

ತಮಗೆ ಆಗಿರುವ ಅನುಭವದ ಕುರಿತು ಹಲವು ಮಂತ್ರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ವಿವರ ನೀಡಿದ್ದಾರೆ. ತಾವು ಕೂಡ ಹಲವು ಮಾಹಿತಿಗಳನ್ನು ಅವರ ಜೊತೆ ಹಂಚಿಕೊಂಡಿದ್ದೇವೆ. ಇಂತಹದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದರು.

ಹನಿ ಟ್ರ್ಯಾಪ್ ಘಟನೆಯಿಂದ ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಮಾನ ಹರಾಜು ಆಗುತ್ತಿದೆ. ಇದಕ್ಕೆ ಕಾರಣವಾದ ವ್ಯಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು. ಕೇವಲ ಇದು ಚರ್ಚೆಗಳಿಗೆ ಮಾತ್ರ ಸೀಮಿತವಾಗಬಾರದು ಎಂದರು.

ಈ ಹಿಂದೆ ತಮ್ಮ ಸೋದರನ ಮೇಲೆ ಇಂತಹ ಪ್ರಯೋಗ ನಡೆದ ಸಮಯದಲ್ಲಿ ಕೇವಲ ಮೂರು ಮಂದಿಯನ್ನು ಮಾತ್ರ ಬಂಧಿಸಲಾಯಿತು. ಆದರೆ ಇದರ ಹಿಂದಿರುವ ವ್ಯಕ್ತಿಗಳು ಯಾರು ಎಂಬ ಬಗ್ಗೆ ಯಾವುದೇ ಮಾಹಿತಿ ಹೊರಗೆ ಬರಲಿಲ್ಲ. ಈಗ ಆ ಪ್ರಕರಣ ತಣ್ಣಗಾದಂತಿದೆ. ಈಗಲಾದರೂ ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು. ಇದರ ಹಿಂದಿರುವ ಶಕ್ತಿಗಳ ವಿವರ ಬಹಿರಂಗವಾಗಬೇಕು ಎಂದರು.

ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿ ಕೆ ಶಿವಕುಮಾರ್, ಇದು ಗಂಭೀರವಾದ ಪ್ರಕರಣ. ಆದರೆ ಸದ್ಯ ಇದು ಹಿಟ್ ಅಂಡ್ ರನ್ ರೀತಿ ಆಗಿದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಇದು ಹೋಗಬೇಕಾದರೆ ಇದರ ಬಗ್ಗೆ ಕ್ರಮ ತೆಗೆದುಕೊಳ್ಳಲು ತಡ ಮಾಡಬಾರದು. ಶೀಘ್ರವೇ ತನಿಖೆಯಾಗಬೇಕು ಎಂದರು.

ಸುಮ್ಮನೆ ಹನಿಟ್ರ್ಯಾಪ್ ಮಾಡುವವರು ನಿಮ್ಮ ಬಳಿ ಬರುತ್ತಾರೆಯೇ? ನೀವು ಹಲೋ ಎಂದರೆ ಅವರು ಹಲೋ ಎನ್ನುತ್ತಾರೆ. ನೀವು ಪ್ರತಿಕ್ರಿಯೆ ನೀಡಲಿಲ್ಲ ಎಂದರೆ ಯಾರಾದರೂ ಮಾತನಾಡಿಸುತ್ತಾರಾ? ಎಂದರು.

Leave a Reply