ಎಚ್ ಡಿ ಕುಮಾರಸ್ವಾಮಿ ಅಕ್ರಮ ಭೂಕಬಳಿಕೆ ತೆರವು ಕಾರ್ಯಾಚರಣೆ

1 year ago

ಬೆಂಗಳೂರು: ಕೇಂದ್ರ ಕೈಗಾರಿಕೆ ಮಂತ್ರಿ ಕುಮಾರಸ್ವಾಮಿ ಬಿಜೆಪಿ ಸಂಸದ ಡಾ. ಮಂಜುನಾಥ್ ಮತ್ತು ಅವರ ಸಂಬಂಧಿಕರ ವಿರುದ್ಧ ಕೇಳಿ ಬಂದಿರುವ ಭೂ ಕಬಳಿಕೆ ಆರೋಪ ಪ್ರಕರಣ ಇದೀಗ ಕುತೂಹಲಕರ ತಿರುವು ಪಡೆದುಕೊಂಡಿದೆ.

ಬೆಂಗಳೂರು ಹೊರ ವಲಯದ ಬಿಡದಿ ಸಮೀಪದ ಕೇತಗಾನಹಳ್ಳಿಯಲ್ಲಿ ನಡೆದಿದೆ ಎಂದು ಆರೋಪಿಸಲಾದ ಭೂ ಒತ್ತುವರಿಯನ್ನು ಹೈಕೋರ್ಟ್ ಆದೇಶದಂತೆ ರಾಮನಗರ ಜಿಲ್ಲಾ ಆಡಳಿತ ತೆರವು ಕಾರ್ಯಾಚರಣೆ ಆರಂಭಿಸಿದೆ.

ಪ್ರಕರಣ ಸಂಬಂಧ ಕಂದಾಯ ಇಲಾಖೆ ಬಿಡದಿಯ ಕೇತಗಾನಹಳ್ಳಿ ಸರ್ವೇ ನಂ 7,8,9,10,16,17 ಮತ್ತು 79ರಲ್ಲಿ ಸರ್ವೇ ನಡೆಸಿದ್ದು, ಜಾಗ ಒತ್ತುವರಿ ಬಗ್ಗೆ ವರದಿ ಮಾಡಿತ್ತು. 14 ಎಕರೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂಬ ಆರೋಪದ ವಿಚಾರದಲ್ಲಿ ತೆರವು ಕಾರ್ಯಾಚರಣೆ ಮಾಡಲು ಹೈಕೋರ್ಟ್ ಆದೇಶ ನೀಡಿತ್ತು.

ಕೋರ್ಟ್ ಆದೇಶದೊಂದಿಗೆ ರಾಮನಗರ ಜಿಲ್ಲಾಧಿಕಾರಿ ಯಶವಂತ್ ವಿ ಗುರ್ ಕರ್ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರ ನೆರವಿನೊಂದಿಗೆ ಸ್ಥಳಕ್ಕೆ ಆಗಮಿಸಿ ಆಚರಣೆಗೆ ಚಾಲನೆ ನೀಡಿದರು.

ಈ ವೇಳೆ ಯಶವಂತ್ ವಿ ಗುರುಕರ್ ಸುದ್ದಿಗಾರರೊಂದಿಗೆ ಮಾತನಾಡಿ, ಕೋರ್ಟ್ ಆದೇಶದಂತೆ ತೆರವು ಕಾರ್ಯಾಚರಣೆ ಮಾಡುತ್ತಿದ್ದೇವೆ .14ಕ್ಕೂ ಹೆಚ್ಚು ಎಕರೆ ಕುಮಾರಸ್ವಾಮಿ ಸೇರಿ ಇತರರಿಂದ ಒತ್ತುವರಿ ಆಗಿದೆ ಎಂದು ಆರೋಪಿಸಲಾಗಿದೆ.10 ಕ್ಕೂ ಹೆಚ್ಚು ಸರ್ವೇ ನಂಬರ್ ಗಳನ್ನ ಪರಿಶೀಲನೆ ಮಾಡಿದ್ದೇವೆ. ಒತ್ತುವರಿ ತೆರವು ಮಾಡಿ ಕೋರ್ಟ್ ಗೆ ವರದಿ ಕೊಡುತ್ತೇವೆ ಎಂದರು.

ಈ ನಡುವೆ ಅಕ್ರಮ ತೆರವು ಕಾರ್ಯಾಚರಣೆಯನ್ನು ಸ್ವಾಗತಿಸಿರುವ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ, ಇಂತಹ ತೆರವು ಕಾರ್ಯಾಚರಣೆ ಸಮಯದಲ್ಲಿ ನೋಟೀಸ್ ನೀಡಬೇಕೆನ್ನುವ ಸಾಮಾನ್ಯ ನಿಯಮವನ್ನು ಪಾಲಿಸಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾವು ಈ ಹಿಂದೆಯೇ, ತಮ್ಮ ಕುಟುಂಬದ ವಿರುದ್ಧ ಕೇಳಿ ಬಂದಿರುವ ಭೂ ಒತ್ತುವರಿ ಆರೋಪ ಕುರಿತಂತೆ  ಭೂದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕರಿಗೆ ಪತ್ರ ಬರೆದಿದ್ದು, ಕಾನೂನುಬಾಹಿರವಾಗಿ ಹೆಚ್ಚುವರಿ ಜಮೀನು ಇದ್ದರೆ ವಶಪಡಿಸಿಕೊಳ್ಳಿ ಎಂದು ತಿಳಿಸಿದ್ದೇನೆ. ಸರ್ವೇ ನಂ.7 ರಲ್ಲಿ 5 ಎಕರೆ 20 ಗುಂಟೆ ಜಮೀನು ಖರೀದಿಸಿದ್ದೇನೆ. ಈ ಪೈಕಿ 1.25 ಎಕರೆ ಜಮೀನು ಮಾತ್ರ ಅನುಭವದಲ್ಲಿರುತ್ತೇನೆ. ಉಳಿದ ಜಮೀನನ್ನು ಗುರುತಿಸಿ ಹುಡುಕಿಕೊಡುವಂತೆ ಕೋರಿದ್ದೇನೆ ಎಂದಿದ್ದಾರೆ.

ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಭೂಮಿ ಒತ್ತುವರಿ ಸೇರಿದಂತೆ ನಾನು ಯಾವ ಅಕ್ರಮವನ್ನೂ ಮಾಡಿಲ್ಲ, ಮಾಡುವುದೂ ಇಲ್ಲ. ನಾನು ಒಬ್ಬ ರೈತನಾಗಿ ಬದುಕಲು 40 ವರ್ಷಗಳ ಹಿಂದೆ ಖರೀದಿಸಿರುವ ಜಮೀನು ಅದು. ಒಬ್ಬ ಸಾಮಾನ್ಯ ಪ್ರಜೆಗೆ ಯಾವುದೇ ತೆರವು ಮಾಡಬೇಕು ಎಂದರೂ ಕಾನೂನು ಪ್ರಕಾರ ಹದಿನೈದು ದಿನಗಳ ಮೊದಲೇ ನೋಟಿಸ್ ನೀಡಬೇಕು. ಅದರೆ ನನಗೆ ಈವರೆಗೆ ಯಾವುದೇ ಮಾಹಿತಿ ಅಥವಾ ನೋಟಿಸ್ ನೀಡಿಲ್ಲ ಎಂದರು

ಈ ಸರ್ಕಾರ ನಡೆಸುತ್ತಿರುವ ದಬ್ಬಾಳಿಕೆ ಏನು ಎಂದು ಎಲ್ಲರಿಗೂ ಗೊತ್ತಿದೆ. ಈ ಸರ್ಕಾರ ಬೆಂಗಳೂರು ನಗರವನ್ನು ಲೂಟಿ ಮಾಡುತ್ತಿದೆ. ದೇಶದ ಇತಿಹಾಸದಲ್ಲೇ ಇದೆ ಮೊದಲ‌ ಬಾರಿಗೆ ಈ ರೀತಿ ಪ್ರಕರಣಕ್ಕೆ ಎಸ್‌ಐಟಿ ರಚನೆ ಮಾಡಿದ್ದಾರೆ. ಇಂತಹ ನಡವಳಿಕೆಗಳಿಗೆ ಒಂದಲ್ಲ ಒಂದು ದಿನ ಬೇರೆ ರೀತಿಯ ಉತ್ತರ ಬರುತ್ತಿದೆ ಎಂದರು.

ಕಾಂಗ್ರೆಸ್ ಸರ್ಕಾರಕ್ಕೆ ನಾನೇ ಟಾರ್ಗೆಟ್ ಅಗಿದ್ದೇನೆ. ನನ್ನ ಬಿಟ್ಟರೆ ಯಾರು ಇಲ್ಲ ಈ ಸರ್ಕಾರಕ್ಕೆ. ಸದ್ಯ ನಡೆಯುತ್ತಿರುವ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತಿದ್ದೇನೆ. 40 ವರ್ಷದ ಹಿಂದೆ ಖರೀದಿ ಮಾಡಿದ ಈ ಭೂಮಿಗೆ ನೂರು ಬಾರಿ ತನಿಖೆಯಾಗಿದೆ. 40 ವರ್ಷದಿಂದಲೂ ತನಿಖೆ ನಡೆಯುತ್ತಲೆ‌ ಇದೆ. ನನ್ನ ಪರಿಸ್ಥಿತಿಯೇ ಹೀಗಾದರೆ ಜನ ಸಾಮಾನ್ಯರ ಪರಿಸ್ಥಿತಿ ಹೇಗಿರಬಹುದು ಎಂದರು.

One Response

  1. ಅವರ ಪ್ರಕಾರ ಸರ್ವೆ ನಂಬರ್ 7 ರಲ್ಲಿ 5.20 ಗುಂಟೆ ಬಿಟ್ಟು ಎಲ್ಲವನ್ನು ಸರ್ಕಾರ ವಶಕ್ಕೆ ಪಡೆಯಬಹುದಾಗಿದೆ

Leave a Reply