ಮಂಗಳೂರು: ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ರೀತಿಯ ಪ್ರತಿಭೆ ಇರುತ್ತದೆ.ಮೊಳಕೆಯಲ್ಲೇ ಅವುಗಳನ್ನು ಗುರುತಿಸಿ ನೀರೆರೆದು ಪೋಷಿಸಿ ಹೆಮ್ಮರವಾಗಿ ಬೆಳೆಸಲು ಪ್ರೋತ್ಸಾಹ ಅತ್ಯಗತ್ಯ.ಎಲ್ಲಕ್ಕಿಂತ ದೊಡ್ಡ ಪ್ರತಿಭೆ ಪ್ರೀತಿಸುವುದು. ಒಬ್ಬರನ್ನೊಬ್ಬರು ನಿಷ್ಕಲ್ಮಶ ಹೃದಯದಿಂದ ಪ್ರೀತಿಸಿದಾಗ ಮಾತ್ರವೇ ಸಾಮರಸ್ಯದ ಸಮಾಜ ನಿರ್ಮಾಣ ಸಾಧ್ಯ ಎಂದು ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ರೆಕ್ಟರ್ ರೆ. ಫಾ. ಮೆಲ್ವಿನ್ ಪಿಂಟೋ ಎಸ್ ಜೆ. ಅಭಿಪ್ರಾಯಪಟ್ಟರು
ಚಿಣ್ಣರ ಚಾವಡಿ ಮಂಗಳೂರು ಇದರ ಆಶ್ರಯದಲ್ಲಿ ನಗರದ ಸಂತ ಅಲೋಶಿಯಸ್ ಹೈಸ್ಕೂಲ್ ಸಭಾಂಗಣದಲ್ಲಿ ಇಂದಿನಿಂದ ಪ್ರಾರಂಭಗೊಂಡ ಚಿಣ್ಣರ ಕಲರವ – 2023 ಮಕ್ಕಳ ಸಂತಸ ಕಲಿಕಾ ಕಾರ್ಯಾಗಾರವನ್ನು ಉದ್ಘಾಟಿಸುತ್ತಾ ಅವರು, ಈ ಮಾತುಗಳನ್ನು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಾಮರಸ್ಯ ಮಂಗಳೂರು ಇದರ ಅಧ್ಯಕ್ಷರಾದ ಮಂಜುಳಾ ನಾಯಕ್ ರವರು ಮಾತನಾಡುತ್ತಾ, ನಲಿಯುತ್ತಾ ಕುಣಿಯುತ್ತಾ ಇರಬೇಕಾದ ಮಕ್ಕಳ ಪ್ರತಿಭೆಗಳು ಇಂದಿನ ಆಧುನಿಕ ಜಗತ್ತಿನಲ್ಲಿ ಕಮರಿ ಹೋಗುವ ಸಂದರ್ಭದಲ್ಲಿ ಇಂತಹ ಚಿಣ್ಣರ ಕಲರವದಂತಹ ಕಾರ್ಯಾಗಾರಗಳು ಮಕ್ಕಳ ಪ್ರತಿಭೆಗಳನ್ನು ಬಾನೆತ್ತರಕ್ಕೆ ಏರಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದೆ.ಮೊಬೈಲ್ ಜಗತ್ತಿನಿಂದ ಮಕ್ಕಳು ಹೊರ ಬರುವಂತೆ ಮಾಡುವಲ್ಲಿ ಸಮಾಜದ ಹಿರಿಯರು ಗಮನ ನೀಡಬೇಕು.ಮಾತ್ರವಲ್ಲದೆ ಅವರಲ್ಲಿರುವ ಸುಪ್ತ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕಾಗಿದೆ ಎಂದು ಹೇಳಿದರು.
ಇನ್ನೋರ್ವ ಮುಖ ಅತಿಥಿಗಳಾದ ಜಿಲ್ಲಾ ಯುವಜನ ಮುಖಂಡರಾದ ಬಿ ಕೆ ಇಮ್ತಿಯಾಜ್ ರವರು ಮಾತನಾಡುತ್ತಾ, ಮುಗ್ಧ ಮನಸ್ಸಿನ ಎಳೆಯ ಪ್ರಾಯದ ಮಕ್ಕಳ ಮನಸನ್ನು ವಿಷಮಯಗೊಳಿಸುವ ಈ ವ್ಯವಸ್ಥೆಯಲ್ಲಿ ಬಾಲ್ಯಾವಸ್ಥೆಯಲ್ಲಿಯೇ ಮಕ್ಕಳಲ್ಲಿ ಹೃದಯ ಹೃದಯಗಳನ್ನು ಬೆಸೆದು ಒಂದಾಗಿ ಬಾಳುವಂತಹ ಮನೋಭಾವವನ್ನು ಮೂಡಿಸಬೇಕಾಗಿದೆ ಎಂದು ಹೇಳಿದರು.
ಚಿಣ್ಣರ ಚಾವಡಿ ಮಂಗಳೂರು ಇದರ ಸಂಚಾಲಕರಾದ ಸುನಿಲ್ ಕುಮಾರ್ ಬಜಾಲ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಮಕ್ಕಳ ಪರ ಹೋರಾಟಗಾರರಾದ ಅಸುಂತ ಡಿಸೋಜ,ಸಾಮಾಜಿಕ ಚಿಂತಕರಾದ ಶಾಂತಿ ಡಾಯಸ್, ಸ್ಟೆಲ್ಲಾ ಪಾಯಸ್, ಶಿಬಿರದ ನಿರ್ದೇಶಕರಾದ ಪ್ರವೀಣ್ ವಿಸ್ಮಯ ಉಪಸ್ಥಿತರಿದ್ದರು.



