ಜಿ ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿಯಾಗುವ ಎಲ್ಲಾ ಅವಕಾಶಗಳನ್ನು ಕಲ್ಪಿಸಬೇಕು: ಕೆ ಎನ್ ರಾಜಣ್ಣ

4 months ago

ಬೆಳಗಾವಿ: ರಾಜ್ಯದಲ್ಲಿ ಸಾಮೂಹಿಕ ನಾಯಕತ್ವದ ಅಡಿಯಲ್ಲಿ ಕಾಂಗ್ರೆಸ್ ಪಕ್ಷ ಚುನಾವಣೆ ಎದುರಿಸಿದ್ದು ಎಲ್ಲರ ಶ್ರಮದ ಫಲವಾಗಿ ಅಧಿಕಾರಕ್ಕೆ ಬಂದಿದೆ. ಯಾರೋ ಒಬ್ಬರ ಶ್ರಮದಿಂದ ಅಲ್ಲ ಎಂದು ಮಾಜಿ ಮಂತ್ರಿ ಕೆ ಎನ್ ರಾಜಣ್ಣ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಶ್ರಮದಿಂದಲೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ ಎಂದು ಹೇಳುತ್ತಾ ಕೆಲವರು ಮುಖ್ಯಮಂತ್ರಿ ಆಗಲು ಸಿದ್ದರಾಗಿದ್ದಾರೆ ಇವರೆಲ್ಲ ಅರ್ಥಮಾಡಿಕೊಳ್ಳಬೇಕು ಎಂದು ಪರೋಕ್ಷವಾಗಿ ಡಿ ಕೆ ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ.

ರಾಜಕಾರಣ ನಿಂತ ನೀರಲ್ಲ ಅದು ಚಲನಶೀಲ. ಆದರೆ ವಿಧಾನಮಂಡಲದ ಅಧಿವೇಶನ ಮುಗಿದ ನಂತರ ಯಾವುದೇ ಮಹತ್ವದ ಬದಲಾವಣೆ ಆಗುವುದಿಲ್ಲ. ಕೆಲವೊಂದು ಬದಲಾವಣೆಗಳು ನಡೆಯಬಹುದು. ನಮ್ಮ ಪಕ್ಷದಲ್ಲೂ ಆಗುತ್ತದೆ, ಬಿಜೆಪಿಯಲ್ಲೂ ಆಗುತ್ತದೆ. ಈಗಾಗಲೇ ಬಿಜೆಪಿಯಲ್ಲಿ ಬದಲಾವಣೆಯ ಕೂಗು ಎದ್ದಿದೆ. ಹಲವರ ಸ್ಥಾನಪಲ್ಲಟಕ್ಕೆ ದೊಡ್ಡ ದಂಡೆ ಸಿದ್ಧವಾಗಿದೆ ಎಂದರು.

ಕಾಂಗ್ರೆಸ್ ನಲ್ಲಿ ಮಂತ್ರಿಮಂಡಲ ಪುನರ್ರಚನೆ ಬಗ್ಗೆ ಹಲವರು ಮಾತನಾಡುತ್ತಿದ್ದಾರೆ. ಈ ಕುರಿತಂತೆ ಚರ್ಚೆಗಳು ನಡೆಯುತ್ತಿವೆ. ಆದರೆ ಮುಖ್ಯಮಂತ್ರಿ ಬದಲಾವಣೆ ಅಂತ ವಿಚಾರಗಳು ಇಲ್ಲ. ಆದರೂ ಕೂಡ ಕೆಲವರು ಮುಖ್ಯಮಂತ್ರಿಯಾಗಲು ತಯಾರಾಗಿದ್ದಾರೆ ಎಂದರು.

ಗೃಹ ಸಚಿವ ಜಿ. ಪರಮೇಶ್ವರ್ ಮುಖ್ಯಮಂತ್ರಿಯಾಗಬೇಕಾದವರ ಸಾಲಿನಲ್ಲಿ ಮೊದಲಿಗರಾಗಿದ್ದಾರೆ. ಅವರು ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಮೊದಲ ಸ್ಥಾನದಲ್ಲಿ ಇಲ್ಲ. ಕಳೆದ 2013ರಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ಅವರ ಶ್ರಮ ದೊಡ್ಡದಿದೆ. ಅಂದು ಅವರು ಮುಖ್ಯಮಂತ್ರಿ ಆಗಬೇಕಿತ್ತು. ಆದರೆ ಚುನಾವಣೆಯಲ್ಲಿ ಸೋತ ಕಾರಣಕ್ಕೆ ಮುಖ್ಯಮಂತ್ರಿಯಾಗಿಲ್ಲ. ಈಗ ಅವರಿಗೆ ಮುಖ್ಯಮಂತ್ರಿಯಾಗುವ ಎಲ್ಲಾ ಅವಕಾಶಗಳನ್ನು ಕಲ್ಪಿಸಬೇಕು ಎಂದರು.

Leave a Reply