ಖಾಸಗಿ ಶಿಕ್ಷಣ ಸಂಸ್ಥೆಗಳ ವೇತನ ನಿರ್ಧಾರ ಆಡಳಿತಮಂಡಳಿ ವ್ಯಾಪ್ತಿಗೆ
ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಗೆ ಒತ್ತಡ ಹೇರುವಂತಿಲ್ಲ
ಬೆಂಗಳೂರು: ಇನ್ನು ಮುಂದೆ ಯಾವುದೇ ಕಾನೂನಿನ ಭಯ ತೋರಿಸಿ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ವಿರುದ್ಧ ಸರಕಾರಿ ಅಧಿಕಾರಿಗಳು ಕಿರುಕುಳ ನೀಡುವಂತಿಲ್ಲ. ಇದರಿಂದ ಕಳೆದ ೨೮ ವರ್ಷಗಳ ಕರ್ನಾಟಕ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘ(ಕುಸ್ಮಾ)ದ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಸರ್ವೋಚ್ಚ ನ್ಯಾಯಾಲಯದ ವಕೀಲ ಕೆ.ವಿ. ಧನಂಜಯ ಹೇಳಿದ್ದಾರೆ.
ಶನಿವಾರ ಬೆಂಗಳೂರಿನ ಜಯನಗರದಲ್ಲಿರುವ ಆರ್. ವಿ. ಟೀಚರ್ಸ್ ಕಾಲೇಜಿನಲ್ಲಿ ಕರ್ನಾಟಕ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘವು (ಕುಸ್ಮಾ) ತನ್ನ 40ನೇ ವಾರ್ಷಿಕೋತ್ಸವದ ವಿಶೇಷ ಸಮ್ಮೇಳನದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ೧೯೯೫ರಲ್ಲಿ ಕರ್ನಾಟಕ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘದ (ಕುಸ್ಮಾ) ಸಂಸ್ಥಾಪಕ ಜಿ.ಎಸ್. ಶರ್ಮಾ ಅವರು ಸರಕಾರದ ಅಸಂಬದ್ಧ ಧೋರಣೆಗಳ ವಿರುದ್ಧ ನ್ಯಾಯಾಲಯದ ಮೂಲಕ ಹೋರಾಟಕ್ಕೆ ಮುಂದಾಗಿದ್ದರು. ಅವರ ದೂರದರ್ಶಿತ್ವದ ಹಾಗೂ ಕ್ರಿಯಾಶೀಲ ಹೋರಾಟದ ಪರಿಣಾಮ ಇಂದು ಕರ್ನಾಟಕ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘಕ್ಕೆ (ಕುಸ್ಮಾ) ಜಯ ಸಿಕ್ಕಿದೆ ಎಂದರು.
ಕಳೆದ ಡಿಸೆಂಬರ್ ೧ರಂದು ಕುಸ್ಮಾ ಹಾಗೂ ಸರಕಾರದ ನಡುವೆ ಇದ್ದ ವಾದಕ್ಕೆ ಘನತೆವೆತ್ತ ಕರ್ನಾಟಕ ಉಚ್ಚ ನ್ಯಾಯಾಲಯದ ದ್ವಿಸದಸ್ಯ ಪೀಠ ಸ್ಪಷ್ಟ ತೀರ್ಪನ್ನು ನೀಡುವ ಮೂಲಕ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಬಲವರ್ಧನೆಗೆ ಕಾರಣವಾಗಿದೆ. ಈ ಮೂಲಕ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ಹೆಚ್ಚಿದಂತಾಗಿದೆ ಎಂದರು.
ಶತ-ಶತಮಾನಗಳಿಂದ ಕರ್ನಾಟಕ ಅನುದಾನರಹಿತ ಶಾಲೆಗಳ ಮೇಲೆ ಕಾನೂನಿನ ಹೆಸರಲ್ಲಿ ನಿರಂತರ ದೌರ್ಜನ್ಯ ನಡೆಸುತ್ತಲೇ ಬಂದಿತ್ತು. ಪರಿಣಾಮ ಈ ಮೂಲಕ ದೊಡ್ಡ ಪ್ರಮಾಣದ ಭ್ರಷ್ಟಾಚಾರಕ್ಕೆ ರಹದಾರಿಯಾಗಿತ್ತು. ಹಿಂದೆ ಇದ್ದ ಬಹುತೇಕ ಎಲ್ಲಾ ಕಾನೂನುಗಳನ್ನು ಹೈಕೋರ್ಟ್ ರದ್ದುಪಡಿಸುವ ಮೂಲಕ ಉತ್ತಮ ತೀರ್ಪನ್ನು ನೀಡಿದೆ. ಇನ್ನು ಮುಂದೆ ಖಾಸಗಿ ಶಿಕ್ಷಕರ ವೇತನವನ್ನು ಆಯಾ ಖಾಸಗಿ ಶಿಕ್ಷಣ ಸಂಸ್ಥೆಯೇ ನಿರ್ಧಾರ ಮಾಡಲು ಅವಕಾಶ ಕಲ್ಪಿಸಿದೆ ಎಂದರು.
ಹಿಂದೆ ಸರಕಾರಿ ಶಿಕ್ಷಕರ ವೇತನಕ್ಕೆ ಸರಿ ತೂಗುವಂತೆ ವೇತನ ನೀಡಬೇಕು ಎನ್ನುವ ಸರಕಾರದ ಕಾನೂನು ಇತ್ತು. ಆದರೆ ಇನ್ನು ಮುಂದೆ ಖಾಸಗಿ ಅನುದಾನರಹಿತ ಶಾಲೆಗಳ ಶಿಕ್ಷರ ವೇತನವನ್ನು ಆಯಾ ಶಿಕ್ಷಣ ಸಂಸ್ಥೆಯೇ ನಿರ್ಧರಿಸಲಿದೆ. ಕೆಲವು ಮಾನದಂಡಗಳನ್ನು ಸರಕಾರಿ ಶಾಲೆಗಳು ಪಾಲಿಸದಿದ್ದರೂ ಖಾಸಗಿ ಶಾಲೆಗಳು ಪಾಲಿಸಲೇಬೇಕು ಎನ್ನುವ ನಿಯಮಗಳನ್ನು ಹೇರುತ್ತಿದ್ದ ಅಧಿಕಾರಿಗಳ ಇನ್ನು ಮುಂದೆ ಹೀಗೆ ಮಾಡುವಂತಿಲ್ಲ ಎಂದರು.
ಇನ್ನೂ ರಾಜ್ಯದ ಕೆಲವು ಭಾಗಗಳಲ್ಲಿ ಖಾಸಗಿ ಶಾಲೆಗಳಲ್ಲಿ ಸಿಬ್ಬಂದಿ ನೇಮಕಾತಿಯಲ್ಲಿ ಮೀಸಲಾತಿಯನ್ನು ಪಾಲಿಸಬೇಕೆಂಬ ಕಾನೂನನ್ನು ಆಗಾಗ ಪ್ರತಿಪಾದಿಸುತ್ತಿದ್ದರು. ಇನ್ನೂ ಮುಂದೆ ಅಧಿಕಾರಿಗಳು ಈ ಬಗ್ಗೆ ಯಾವುದೇ ಪ್ರಶ್ನೆ ಮಾಡುವಂತಿಲ್ಲ. ಸೂಕ್ತ ಅಭ್ಯರ್ಥಿಗಳನ್ನು ತಮ್ಮ ತಮ್ಮ ಸಂಸ್ಥೆಯಲ್ಲಿ ಸಿಬ್ಬಂದಿಯಾಗಿ ನೆಮಿಸಿಕೊಳ್ಳುವ ಸಂಪೂರ್ಣ ಅಧಿಕಾರ ಆಯಾ ಸಂಸ್ಥೆಗಳಿಗೆ ಇರುತ್ತದೆ. ತಮ್ಮ ಸಂಸ್ಥೆಯ ಶುಲ್ಕ ಪ್ರಮಾಣ ನಿರ್ಧರಿಸುವ ಅಧಿಕಾರವೂ ಆಯಾ ಸಂಸ್ಥೆಗೆ ಕೋರ್ಟ್ ನೀಡುವ ಮೂಲಕ ಉತ್ತಮ ತೀರ್ಪನ್ನು ನೀಡಿದೆ ಎಂದರು.
ಸಮಾಜದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಅವಶ್ಯಕತೆ ಮನಗಂಡು ಹೈಕೋರ್ಟ್ ನೀಡಿರುವ ತೀರ್ಪನ್ನು ಕುಸ್ಮಾ ಗೌರವದಿಂದ ಸ್ವಾಗತಿಸುತ್ತದೆ. ಜೊತೆಗೆ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳು ಜವಾಬ್ದಾರಿಯಂದ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ಚಾರ್ಟರ್ಡ್ ಅಕೌಂಟಂಟ್ ಮಧುಕರ ಹೆಗಡೆ ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ವೇತನ ಹಂಚುವಿಕೆಯನ್ನು ಸೂಕ್ತ ರೀತಿಯಲ್ಲಿ ಮಾಡಿಕೊಳ್ಳಬೇಕಾಗುತ್ತದೆ. ಸಿಬ್ಬಂದಿಗೆ ನೀಡುವ ಆರ್ಥಿಕ ಸೌಲಭ್ಯಗಳನ್ನು ಕಾಲಕಾಲಕ್ಕೆ ನೀಡುವ ವ್ಯವಸ್ಥೆಯನ್ನು ಸಂಸ್ಥೆಗಳು ಮಾಡಿಕೊಂಡು ಬರುವ ಮೂಲಕ ತಮ್ಮ ಸಂಸ್ಥೆಗಳಲ್ಲಿ ಆಗುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತಾಡಿದ ಕುಸ್ಮಾದ ಅಧ್ಯಕ್ಷ ಎಸ್. ಸತ್ಯಮೂರ್ತಿ, ಕುಸ್ಮಾ ಕಟ್ಟುವಾಗ ನಮ್ಮ ಹಿರಿಯರು ಕಂಡ ಕನಸು ಈಗ ನನಸಾಗುತ್ತಿದೆ. ಸರಕಾರಿ ಅಧಿಕಾರಿಗಳಿಂದ ಆಗುತ್ತಿರುವ ಕಿರುಕುಳದ ಮುಂದಾಲೋಚನೆ ಇಟ್ಟುಕೊಂಡೇ ನ್ಯಾಯಕ್ಕಾಗಿ ಹೋರಾಟ ಮಾಡುತ್ತ ಬಂದಿರುವ ರಾಜ್ಯದ ಏಕೈಕ ಸಂಸ್ಥೆ ನಮ್ಮ ಕುಸ್ಮಾ. ಕುಸ್ಮಾ ನಡೆಸಿದ ಹೋರಾಟಕ್ಕೆ ಜಯ ಸಿಕ್ಕಿದೆ. ನಿರಂತರ ನಮ್ಮ ಹೋರಾಟಕ್ಕೆ ಸಾಥ್ ನೀಡಿದ ಸಂಸ್ಥೆಯ ಎಲ್ಲ ಸದಸ್ಯರಿಗೂ, ಕಾನೂನು ಹೋರಾಟದ ಜವಾಬ್ದಾರಿ ಹೊತ್ತ ನ್ಯಾಯವಾದಿಗಳ ತಂಡವನ್ನೂ ಕುಸ್ಮಾ ಸದಾ ಸ್ಮರಿಸುತ್ತದೆ ಎಂದರು.
ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘ(ಕುಸ್ಮಾ)ದ ಕಾರ್ಯದರ್ಶಿ ಎ. ಮರಿಯಪ್ಪ ಅವರು ಎಲ್ಲರನ್ನು ಸ್ವಾಗತಿಸಿದರು. ಕೋಶಾಧ್ಯಕ್ಷ ಎಸ್.ಎಲ್.ಭಟ್ಟ ಕುಸ್ಮಾದ ಆರ್ಥಿಕ ವರದಿ ಮಂಡಿಸಿದರು. ಉಪಾಧ್ಯಕ್ಷೆ ವಿಜಯಾ ಶೆಟ್ಟಿ ಅವರು ವಂದಿಸಿದರು. ಪ್ರಗತಿ ಸೂರ್ವೆ ಕಾರ್ಯಕ್ರಮ ನಿರೂಪಿಸಿದರು.



