ಬೆಂಗಳೂರು: ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ, ಹೊಂಬೇಗೌಡನಗರ ವಾರ್ಡ್ ನಲ್ಲಿ ಸ್ಲಮ್ ಸಂಸ್ಥೆ ಮತ್ತು ಗರುಡ ಫೌಂಡೇಷನ್ ಮತ್ತು ಮಣಿಪಾಲ್ ಇಂಗ್ಲಿಷ್ ಅಕಾಡೆಮಿ ವತಿಯಿಂದ ಉಚಿತ ಕಂಪ್ಯೂಟರ್ ತರಬೇತಿ ಪಡೆದ ಸ್ಲಂ ಪ್ರದೇಶದ ನೂರಾರು ಮಕ್ಕಳಿಗೆ ಸರ್ಟಿಫಿಕೇಟ್ ವಿತರಣೆ ಮಾಡಲಾಯಿತು.
ಶಾಸಕ ಉದಯಗರುಡಚಾರ್, ಸಮಾಜ ಸೇವಕಿ ಮೇದಿನಿ ಗರುಡಚಾರ್, ಅರಣ್ಯ ಅಭಿವೃದ್ದಿ ನಿಗಮದ ನಿರ್ದೇಶಕಿ ಭಾಗ್ಯವತಿ ಅಮರೇಶ್, ನಿರ್ಮಾಪಕ ಮಂಜುನಾಥ್ ಮತ್ತು ಮಾಹಿತಿ ಹಕ್ಕು ಅಧ್ಯಯನ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಬರೀಶ್ ಮತ್ತು ಬಿ.ಜೆ.ಪಿ. ಪ್ರಮುಖ ಮುಖಂಡರು ಪಾಲ್ಗೊಂಡಿದ್ದರು.
ಇದೇ ವೇಳೆ ಮಾತಾಡಿದ ಉದಯ ಗರುಡಚಾರ್, 21ನೇ ಶತಮಾನ ಕಂಪ್ಯೂಟರ್ ಯುಗವಾಗಿದೆ. ತಂತ್ರಜ್ಞಾನ ಮುಂದುವರೆದರೆ ದೇಶ ಮುನ್ನಡೆ ಸಾಧಿಸಲು ಸಾಧ್ಯ. ಪ್ರಧಾನಿ ನರೇಂದ್ರಮೋದಿಯವರು ಡಿಜಿಟಲ್ ಇಂಡಿಯ ಮುಖಾಂತರ ಹಳ್ಳಿ, ಹಳ್ಳಿಗೂ ಕಂಪ್ಯೂಟರ್ ತಂತ್ರಜ್ಞಾನ ತಲುಪಿದೆ ಎಂದರು.
ವಿಶ್ವದ ಸಮಗ್ರ ಸುದ್ದಿ, ಚಟುವಟಿಕೆಯನ್ನು ಒಂದು ಬಟನ್ ಒತ್ತುವ ಮೂಲಕ ತಿಳಿದುಕೊಳ್ಳಬಹುದು. ವಿದ್ಯೆ ಇದ್ದರೆ ಸಮಾಜದಲ್ಲಿ ಗೌರವ ಆದ್ದರಿಂದ ಮಕ್ಕಳು ಉತ್ತಮ ಶಿಕ್ಷಣ ಪಡೆದು ದೇಶದ ಅಭಿವೃದ್ದಿಗೆ ಕೈಜೋಡಿಸಬೇಕು ಎಂದು ಕರೆನೀಡಿದರು.
ಭಾಗ್ಯವತಿ ಅಂಬರೀಶ್ ಮಾತನಾಡಿ, ಶ್ರೀಮಂತರ ಮಕ್ಕಳು ಆರ್ಥಿಕವಾಗಿ ಸ್ಥಿತಿವಂತರಾಗಿರುತ್ತಾರೆ. ಸ್ಲಂ ಪ್ರದೇಶದ ಮಕ್ಕಳು ಶಿಕ್ಷಣ ಪಡೆಯಲು ಫೀ ಸಹ ಕಟ್ಟಲು ಸಾಧ್ಯವಿಲ್ಲ. ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಸ್ಲಂ ಪ್ರದೇಶದ ಮಕ್ಕಳಿಗೆ ಉಚಿತವಾಗಿ ಕಂಪ್ಯೂಟರ್ ತರಬೇತಿ ಕೊಟ್ಟು ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗವು ಅವರಿಗೆ ಸಿಗಲಿ ಎಂಬ ಪ್ರಯತ್ನ ನಮ್ಮದು. ಯುವಕರು ದೇಶದ ಶಕ್ತಿ, ಅವರನ್ನ ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದರು.
ಜಾಕ್ ಮಂಜು ಮಾತನಾಡಿ, ಆತ್ಮವಿಶ್ವಾಸ, ಸಾಧಿಸುವ ಛಲ ಇದ್ದರೆ ಸಾಧನೆ ಮಾಡಲು ಸಾಧ್ಯ. ಇಂದು ಶಿಕ್ಷಣ, ಆರೋಗ್ಯದ ವಿಷಯದಲ್ಲಿ ಸ್ವಯಂ ಸೇವಾ ಸಂಘಟನೆಗಳು ಸರ್ಕಾರದ ಜೊತೆಯಲ್ಲಿ ಸಹಕಾರ ನೀಡಿ ಸೇವೆ ಮಾಡುತ್ತಿವೆ. ಯುವಕರು ಶಿಕ್ಷಣದತ್ತ ಹೆಚ್ಚಿನ ಗಮನಹರಿಸಿ, ಉತ್ತಮ ವಿದ್ಯಾರ್ಥಿಗಳಾಗಿ ದೇಶ ಕಟ್ಟಬೇಕು ಎಂದರು.



