ಕೇಂದ್ರ ಸಚಿವ ವಿ.ಸೋಮಣ್ಣ ಪುತ್ರನ ವಿರುದ್ಧ ವಂಚನೆ ಪ್ರಕರಣ

2 years ago

ಬೆಂಗಳೂರು: ವಿಧಾನಸಭೆ ಚುನಾವಣೆ ಸೋಲಿನಿಂದ ಕಂಗೆಟ್ಟಿದ್ದ ಮಾಜಿ ಸಚಿವ ವಿ ಸೋಮಣ್ಣ ಅವರಿಗೆ ಲೋಕಸಭೆ ಚುನಾವಣೆ ಗೆಲುವಿನ ನಂತರ ರಾಜಕೀಯ ವನವಾಸ ಅಂತ್ಯಗೊಂಡು ಕೇಂದ್ರ ಮಂತ್ರಿಯಾಗುವ ಮೂಲಕ ಸಂಭ್ರಮದಲ್ಲಿರುವಾಗ ಮುಜುಗರಕ್ಕೀಡಾಗುವ ವಿದ್ಯಮಾನ ನಡೆದಿದೆ.

ಕೇಂದ್ರ ಸಚಿವ ಸೋಮಣ್ಣ ಪುತ್ರ ಅರುಣ್ ಸೋಮಣ್ಣ ವಿರುದ್ಧ ವಂಚನೆ, ಜೀವ ಬೆದರಿಕೆ ಸರಿ ಹಲವು ಆರೋಪದ ಅಡಿಯಲ್ಲಿ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಅರುಣ್ ಸೋಮಣ್ಣ ಜೊತೆಗೆ ಅವರ ಸ್ನೇಹಿತರಾದ ಜೀವನ್ ಕುಮಾ‌ರ್ ಮತ್ತು ಪ್ರಮೋದ್ ರಾವ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

ಇವೆಂಟ್ ಮ್ಯಾನೇಜ್ ಮೆಂಟ್ ಕಂಪನಿ ವ್ಯವಹಾರದಲ್ಲಿ ದಂಪತಿಗೆ ವಂಚನೆ, ಜೀವ ಬೆದರಿಕೆ ಹಾಕಿರುವ ಗಂಭೀರ ಆರೋಪ ಕೇಳಿ ಬಂದಿದ್ದು, ಅರುಣ್ ಸೋಮಣ್ಣ, ಜೀವನ್ ಕುಮಾ‌ರ್ ಮತ್ತು ಪ್ರಮೋದ್ ರಾವ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಸಂಜಯನಗರದ ಎಇಸಿಎಸ್ ಲೇಔಟ್ ನಿವಾಸಿ ತೃಪ್ತಿ ಹೆಗಡೆ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. 37ನೇ ಹೆಚ್ಚುವರಿ ಚೀಫ್ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶದ ಮೇರೆಗೆ ಎಫ್ಐಆರ್ ದಾಖಲಾಗಿದೆ. ದೂರುದಾರರಾದ ತೃಪ್ತಿ ಹಾಗೂ ಮಧ್ವರಾಜ್ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ನಡೆಸುತ್ತಿದ್ದರು.

2013ರಲ್ಲಿ ಸರಕಾರಿ ಕಾರ್ಯಕ್ರಮವೊಂದರಲ್ಲಿ ಮಧ್ವರಾಜ್ ಗೆ ಆರುಣ್ ಸೋಮಣ್ಣ ಪರಿಚಯವಾಗಿತ್ತು. 2017ರಲ್ಲಿ ಅರುಣ್ ಸೋಮಣ್ಣ ಪುತ್ರಿಯ ಹುಟ್ಟುಹಬ್ಬ ಕಾರ್ಯಕ್ರಮವನ್ನೂ ಮಧ್ವರಾಜ್ ಒಡೆತನದ ಕಂಪನಿ ಆಯೋಜಿಸಿತ್ತು.

ಇದರಿಂದ ಆರುಣ್ ಸೋಮಣ್ಣ ಮಧ್ವರಾಜ್ ಜತೆ ಉತ್ತಮ ಬಾಂಧವ್ಯ ಇತ್ತು, ಹೀಗಾಗಿ ಅರುಣ್, ಮಧ್ವರಾಜ್ ಜಂಟಿಯಾಗಿ ನೈಬರ್‌ ಹುಡ್ ಎಂಬ ಇವೆಂಟ್ ಮ್ಯಾನೇಜ್ ಮೆಂಟ್ ಕಂಪನಿಯನ್ನು ಪಾರ್ಟನ‌ರ್ ಶಿಪ್ ಡೀಡ್ ಮೇಲೆ ಆರಂಭಿಸಿದ್ದರು. ಕಂಪನಿಯ ಹೂಡಿಕೆ, ಪಾವತಿ ಹಾಗೂ ಸಂಗ್ರಹಣೆ ಸಂಪೂರ್ಣ ಜವಾಬ್ದಾರಿ ಅರುಣ್ ವಹಿಸಿಕೊಂಡಿದ್ದರು.

ಕೆಲ ತಿಂಗಳಲ್ಲಿ ಕಂಪನಿಯ ವ್ಯವಹಾರದಲ್ಲಿ ನಷ್ಟವಾಗಿತ್ತು. ಈ ಹಿನ್ನೆಲೆ ಮಧ್ವರಾಜ್ ಗೆ ಕಂಪನಿಗೆ ರಾಜೀನಾಮೆಗೆ ಒತ್ತಾಯಿಸಿ ಕಿರುಕುಳ, ಕುಟುಂಬಕ್ಕೆ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಕಂಪನಿಯಲ್ಲಿ ಲಾಸ್ ಆಗಿದ್ದ ಹಣವನ್ನು ನೀಡುವಂತೆ ಬೆದರಿಸಿ, ಹಲ್ಲೆ ಮಾಡಿಸಿ ಮಧ್ವರಾಜ್ ದಂಪತಿಯಿಂದ ವಸೂಲಿ ಮಾಡಿರುವ ಆರೋಪ ಕೇಳಿಬಂದಿದೆ.

ಸದ್ಯ ಪ್ರಕರಣ ದಾಖಲಿಸಿಕೊಂಡು ಸಂಜಯ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply