44,208 ರೈತರು ಮಳೆ ಸಂಬಂಧಿತ ಪರಿಹಾರ ಪಡೆಯಲು ಸಾಧ್ಯವಾಗಿಲ್ಲ: ಕೃಷ್ಣ ಬೈರೇಗೌಡ

4 months ago

ಬೆಳಗಾವಿ: ಆಧಾರ್ ಸಂಖ್ಯೆಯಲ್ಲಿನ ಗೊಂದಲ ಮೊದಲಾದ ತಾಂತ್ರಿಕ ಕಾರಣಗಳಿಂದಾಗಿ 44,208 ರೈತರು ಮಳೆ ಸಂಬಂಧಿತ ಪರಿಹಾರ ಪಡೆಯಲು ಸಾಧ್ಯವಾಗಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಧಾನ ಪರಿಷತ್ ನಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್ ನ ತಿಪ್ಪಣ್ಣ ಕಮಕನೂರು ಅವರ ಪ್ರಶ್ನೆಗೆ ಉತ್ತರಿಸಿದ ಅವರು ರೈತರ ಅಧಿಕೃತ ದಾಖಲೆಗಳಲ್ಲಿನ ತಾಂತ್ರಿಕ ಅಂಶಗಳು ಪರಿಹಾರ ನೀಡಲು ಅಡ್ಡಿ ಉಂಟು ಮಾಡಿವೆ. ಭಾರಿ ಮಳೆಯಿಂದ ಈ ರೈತರಿಗೆ ದೊಡ್ಡ ಹಾನಿಯಾಗಿದೆ ಎಂಬ ಅಂಶ ಕಣ್ಣ ಮುಂದೆ ಇದ್ದರೂ ಕೂಡ ತಾಂತ್ರಿಕ ಕಾರಣಗಳಿಂದ ಪರಿಹಾರ ನೀಡಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸಿದರು.

ಸುಮಾರು ಶೇಕಡಾ ಮೂರರಷ್ಟು ರೈತರು ಯಾವುದೇ ಪರಿಹಾರವನ್ನು ಪಡೆದಿಲ್ಲ. ಹೆಸರುಗಳಲ್ಲಿ ಹೊಂದಾಣಿಕೆ ಇಲ್ಲದಿರುವುದು ಇದಕ್ಕೆ ಕಾರಣ. ಆಧಾರ್‌ನಲ್ಲಿ ಅವರ ಹೆಸರು ಕೃಷಿ ಇಲಾಖೆಯಲ್ಲಿರುವ ಹೆಸರಿನೊಂದಿಗೆ ಹೊಂದಾಣಿಕೆಯಾಗುತ್ತಿಲ್ಲ ಎಂದರು.

ಒಟ್ಟು 44,208 ರೈತರು ಪರಿಹಾರ ಪಡೆದಿಲ್ಲ.ತಾಂತ್ರಿಕ ಸಮಸ್ಯೆ ಸರಿಪಡಿಸಿದ ನಂತರ, ಅವರ ಬ್ಯಾಂಕ್ ಖಾತೆಗಳಿಗೆ ಹಣವನ್ನು ಜಮಾ ಮಾಡಲಾಗುತ್ತದೆ. ರೈತರು ತಮ್ಮ ಹೆಸರುಗಳನ್ನು ತಿದ್ದುಪಡಿ ಮಾಡಬೇಕು ಮತ್ತು ಬ್ಯಾಂಕ್ ಖಾತೆಗಳೊಂದಿಗೆ ಆಧಾರ್ ಅನ್ನು ಲಿಂಕ್ ಮಾಡಬೇಕು ಎಂದು ಅವರು ಮನವಿ ಮಾಡಿದರು.

ಕಲಬುರಗಿ ಜಿಲ್ಲೆಯಲ್ಲಿ 3.23 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಇದಕ್ಕಾಗಿ ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ(SDRF) ಮಾನದಂಡಗಳ ಪ್ರಕಾರ 250.97 ಕೋಟಿ ರೂ. ಪರಿಹಾರ ನೀಡಲಾಗಿದೆ. ರಾಜ್ಯ ಸರ್ಕಾರ 247.75 ಕೋಟಿ ರೂ.ಗಳ ಹೆಚ್ಚುವರಿ ಪರಿಹಾರವನ್ನು ಸಹ ನೀಡಿದೆ ಎಂದರು.

ರಾಜ್ಯಾದ್ಯಂತ ಒಟ್ಟು 14.21 ಲಕ್ಷ ರೈತರಿಗೆ ಪರಿಹಾರ ನೀಡಲಾಗುತ್ತಿದೆ. SDRF ಮಾನದಂಡಗಳ ಅಡಿಯಲ್ಲಿ 1,216 ಕೋಟಿ ರೂ.ಗಳನ್ನು ನೀಡಲಾಗಿದೆ. ಇದಕ್ಕೆ ಪೂರಕವಾಗಿ ಸರ್ಕಾರವು 1,033 ಕೋಟಿ ರೂ.ಗಳ ಹೆಚ್ಚುವರಿ ಅನುದಾನವನ್ನು ನೀಡಿದೆ. ಎರಡೂ ಸೇರಿ, ರೈತರಿಗೆ 2,249 ಕೋಟಿ ರೂ.ಗಳನ್ನು ನೀಡಲಾಗಿದೆ ಎಂದರು.

Leave a Reply