ಮಂಗಳೂರು: ಸಮಾಜದಲ್ಲಿ ಸಂಪತ್ತು ಸೃಷ್ಟಿಸುವ ಕಾರ್ಮಿಕರ ಕಾನೂನುಗಳನ್ನು ತಿದ್ದುಪಡಿ ಮಾಡಿ ಅದನ್ನು ಸಂಹಿತೆಗಳನ್ನಾಗಿಸುವ ಮೂಲಕ ಕಾರ್ಮಿಕರನ್ನು ಗುಲಾಮರನ್ನಾಗಿಸುವ ಹುನ್ನಾರ ಕೇಂದ್ರ ಸರ್ಕಾರದ್ದಾಗಿದೆ ಎಂದು CITU ದ. ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ವಾಗ್ದಾಳಿ ನಡೆಸಿದರು.
CITU ನೇತೃತ್ವದಲ್ಲಿ ಮುಡಿಪುನಲ್ಲಿ ಜರುಗಿದ ಉಳ್ಳಾಲ ತಾಲೂಕು ಮಟ್ಟದ ಎರಡು ದಿನಗಳ ವಾಹನ ಪ್ರಚಾರ ಜಾಥಾದ ಮೊದಲ ದಿನದ ಕೊನೆಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಒಂದು ಕಡೆ ಬೆಲೆಯೇರಿಕೆಯ ಸಂಕೇತವಾದರೆ, ಮತ್ತೊಂದು ಕಡೆ ದಿನವಿಡೀ ದುಡಿದರೂ ಕನಿಷ್ಠ ಕೂಲಿಯಿಲ್ಲದೆ ಪರದಾಡುವಂತಹ ದುಸ್ಥಿತಿ ಒದಗಿ ಬಂದಿದೆ. ಸಾಮಾಜಿಕ ಭದ್ರತೆಯಿಲ್ಲದ ಅಸಂಘಟಿತ ಕ್ಷೇತ್ರದ ಕಾರ್ಮಿಕರ ಬದುಕು ಹೇಳತೀರದಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತಾಡಿದ CITU ಜಿಲ್ಲಾ ನಾಯಕ ಸುಕುಮಾರ್ ತೊಕ್ಕೊಟ್ಟು, ತೀವ್ರವಾದ ಬಡತನ, ನಿರುದ್ಯೋಗ, ಉದ್ಯೋಗ ಕಡಿತದಿಂದ ಜನತೆಯ ಆದಾಯ ಕಡಿತವಾಗಿ ಸುಮಾರು 20 ಕೋಟಿ ಭಾರತೀಯರು ಬಡತನದಲ್ಲಿದ್ದಾರೆ. ಪೌಷ್ಠಿಕ ಆಹಾರ ಸಿಗದೆ ಅಪೌಷ್ಠಿಕತೆ ಮತ್ತು ಹಸಿವಿನ ಸಾವುಗಳು ಹೆಚ್ಚುತ್ತಿವೆ. ಸದ್ಯಕ್ಕೆ ಭಾರತ ಹಸಿವಿನ ಸೂಚ್ಯಂಕದಲ್ಲಿ 107ನೇ ಸ್ಥಾನಕ್ಕೆ ಇಳಿದಿದೆ ಎಂದು ವಿಷಾದ ವ್ಯಕ್ತಪಡಿಸಿದರು.
CITU ಜಿಲ್ಲಾ ನಾಯಕ ಜಯಂತ ನಾಯಕ್, ಸುಂದರ ಕುಂಪಲ, ರೊಹಿದಾಸ್, ಜನಾರ್ದನ ಕುತ್ತಾರ್, ಚಂದ್ರಹಾಸ ಪಿಲಾರ್, ವಿಲಾಸಿನಿ ತೊಕ್ಕೊಟ್ಟು, ವಿಶ್ವನಾಥ್, DYFI ನಾಯಕರಾದ ರಝಾಕ್ ಮೊಂಟೆಪದವು, ರಫೀಕ್ ಹರೇಕಳ, ಅಶ್ರಫ್, ಇಬ್ರಾಹಿಂ ಮದಕ ಮುಂತಾದವರು ಉಪಸ್ಥಿತರಿದ್ದರು.



