ಕುಡಿದು ವಾಹನ ಚಲಾಯಿಸಿ ಇಬ್ಬರನ್ನು ಕೊಂದರು

3 years ago

#Drunk #driving #killed #two #people

ಬೆಂಗಳೂರು: ಕಂಠಪೂರ್ತಿ ಕುಡಿದು ಯುವಕರು ಚಲಾಯಿಸಿದ ವಾಹನಗಳ ಅಪಘಾತದಿಂದ ತಂದೆ-ಮಗ ಬಲಿಯಾಗಿ ಮತ್ತೊಬ್ಬರು ಗಾಯಗೊಂಡಿರುವ ದಾರುಣ ಘಟನೆ ಸದಾಶಿವನಗರದ ರಾಮಯ್ಯ ಆಸ್ಪತ್ರೆ ಮುಂಭಾಗದ ಇಸ್ರೋ ಸರ್ಕಲ್‌ನಲ್ಲಿ ಮಧ್ಯರಾತ್ರಿ  ನಡೆದಿದೆ. ಕುವೆಂಪು ನಗರದ ರಘು (65) ಹಾಗೂ ಅವರ ಪುತ್ರ ಚಿರಂಜೀವಿ (25) ಮೃತಪಟ್ಟವರು. ಗಾಯಗೊಂಡಿರುವ ವಾಸು, ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ.

ಕೋರಮಂಗಲದಲ್ಲಿ ಪುಸ್ತಕ ಮಾರಾಟ ಅಂಗಡಿ ನಡೆಸುತ್ತಿದ್ದ ತಂದೆ ಮಗ ಇಬ್ಬರು  ಅಂಗಡಿಯ ಬಾಗಿಲು ಹಾಕಿಕೊಂಡು ರಾತ್ರಿ  12 ಗಂಟೆಯ ವೇಳೆಗೆ ಮನೆಗೆ ಬರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಮೃತ ತಂದೆ ವಾಸು, ಪುತ್ರ ಚಿರಂಜೀವಿ ಹಾಗೂ ಗಾಯಗೊಂಡಿರುವ ವಾಸು ಮೂವರು ಇಸ್ರೋ ಸರ್ಕಲ್ ಬಳಿ ಹೋಗುತ್ತಿದ್ದ ಸಂದರ್ಭ ಹಿಂಬಂದಿಯಿಂದ ಕಂಠಪೂರ್ತಿ ಕುಡಿದ ಗುಂಪೊಂದು ಇಕೋ ಕಾರಿನಲ್ಲಿ ಅತಿವೇಗವಾಗಿ  ಬಂದಿದೆ.

ಮೊದಲು ಆಟೋಗೆ ಕಾರು ಗುದ್ದಿ ಆಟೋ ಪಲ್ಟಿಯಾಗಿದೆ. ಅಲ್ಲಿಂದ ತಪ್ಪಿಸಿಕೊಳ್ಳಲು ಮತ್ತೆ ವೇಗವಾಗಿ ಹೋಗಲು ಯತ್ನಿಸುವ ವೇಳೆ ಮುಂದೆ ಎರಡು ಕಾರು ನಿಲ್ಲಿಸಿದ್ದು  ಅವುಗಳನ್ನು ತಪ್ಪಿಸಲು ಹೋಗಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿ ವಾಸುಗೆ ಡಿಕ್ಕಿ ಹೊಡೆದು ಬಳಿಕ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಜಖಂಗೊಂಡು  ಅದರಲ್ಲಿದ್ದ ತಂದೆ ಮತ್ತು ಮಗ ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳದಲ್ಲಿದ್ದ ಆಟೋ ಚಾಲಕರು ಹಾಗೂ ಸ್ಥಳೀಯರು ಸೇರಿ ಅಪಘಾತ ಮಾಡಿದ ಕಾರನ್ನು ತಡೆದು ಕಾರಿನಲ್ಲಿದ್ದ ಆಕಾಶ್ ನನ್ನು ವಶಕ್ಕೆ ಹಿಡಿದು ಸದಾಶಿವನಗರ ಪೊಲೀಸರಿಗೆ ಒಪ್ಪಿಸಿದ್ದು, ಉಳಿದವರು ಅಪಘಾತ ಮಾಡಿದ ಕಾರಿನೊಂದಿಗೆ ಪರಾರಿಯಾಗಿದ್ದಾರೆ. ಪೊಲೀಸರ ವಶದಲ್ಲಿರುವ ಆಕಾಶ್ ಮಾಗಡಿ ಜಿಲ್ಲಾ ಪಂಚಾಯತ್ ಸದಸ್ಯೆಯ ಪುತ್ರನಾಗಿದ್ದಾನೆ.

ಆರೋಪಿಗಳು ಕಂಠಪೂರ್ತಿ ಕುಡಿದು ಅಡ್ಡಾದಿಡ್ಡಿ ವಾಹನ ಚಾಲನೆ ಮಾಡಿರುವುದೇ ಘಟನೆಗೆ ಕಾರಣ ಎಂಬುದು ಬೆಳಕಿಗೆ ಬಂದಿದೆ. ಘಟನೆಗೆ ಕಾರಣವಾದವರ ವಿರುದ್ಧ ಸದಾಶಿವ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.

Leave a Reply