ದಲಿತ ಜೀವ ರಕ್ಷಣೆ ಮಾಡದೇ ಹೋದರೆ ಉಗ್ರ ಪ್ರತಿಭಟನೆ: ಡಾ.ಎನ್.ಮೂರ್ತಿ

5 years ago

ಸಮಾಜ ಕಲ್ಯಾಣ ಇಲಾಖೆ ಸಚಿವರ ನಿರ್ಲಕ್ಷ್ಯ ಧೋರಣೆ ಆರೋಪ

ಬೆಂಗಳೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಸಮಾಜ ಕಲ್ಯಾಣ ಇಲಾಖೆಯಲ್ಲಿ ಅವ್ಯವಹಾರ ಮತ್ತು ಸಮಾಜ ಕಲ್ಯಾಣ ಸಚಿವರ ನಿರ್ಲಕ್ಷ್ಯ ಖಂಡಿಸಿ ದ.ಸಂ.ಸ. ದಾದಾ ಸಾಹೇಬ್ ಡಾ.ಎನ್.ಮೂರ್ತಿ ನೇತೃತ್ವದಲ್ಲಿ ಮೈಸೂರು ಬ್ಯಾಂಕ್ ವೃತ್ತದಿಂದ ಮುಖ್ಯಮಂತ್ರಿಗಳ ನಿವಾಸದವರೆಗೆ ದಲಿತ ಸಂಘರ್ಷ ಸಮಿತಿ ನೂರಾರು ಕಾರ್ಯಕರ್ತರ ಜೊತೆಯಲ್ಲಿ ತಮಟೆ, ಡೊಳ್ಳುಗಳೊಂದಿಗೆ ಪ್ರತಿಭಟಿಸಿದರು.

ಪ್ರತಿಭಟನೆ ವೇಳೆ ಮಾತಾಡಿದ ಡಾ.ಎನ್.ಮೂರ್ತಿ, ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಚೌಡೇಶ್ವರ ಹಾಳದಲ್ಲಿ ದಲಿತ ಮಹಿಳೆ ಪಾಲಮ್ಮಳನ್ನು ಮೇಲ್ದಾತಿ ದುಷ್ಕರ್ಮಿಗಳು ಬಲಾತ್ಕರಿಸಿ ಪೆಟ್ರೋಲ್ ಸುರಿದು ಜೀವಂತವಾಗಿ ದಹಿಸಿ ಕೊಲೆ ಮಾಡಿದ್ದಾರೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ತಾಡಿಗೋಳ ಗ್ರಾಮದ ಪರಿಶಿಷ್ಟ ವಿದ್ಯಾರ್ಥಿನಿಯರ ಮೇಲೆ ಮೇಲ್ಜಾತಿ ಸವರ್ಣೀರು ಅಮಾನುಷ ಹಲ್ಲೆ ನಡೆಸಿದ್ದಾರೆ. ಕೊಪ್ಪಳ ಜಿಲ್ಲೆಯ ಬರಗೂರಿನಲ್ಲಿ 2 ವರ್ಷದ ಮಗು ದೇವಸ್ಥಾನ ಪ್ರವೇಶ ಮಾಡಿ ಅಪವಿತ್ರಗೊಳಿಸಿತೆಂದು ತಂದೆಗೆ 25 ಸಾವಿರ ದಂಡ ವಿಧಿಸಿದರು. ಕೊಪ್ಪಳ ಜಿಲ್ಲೆ ಬರಗೂರಿನಲ್ಲಿ ದಾನಪ್ಪ ಎಂಬ ಯುವಕನ ಕಗ್ಗೊಲೆಯಾಗಿದೆ. ಶಹಾಪುರದಲ್ಲಿ ಇಬ್ಬರು ಮತ್ತು ಹುಣಸಿಗಿಯಲ್ಲಿ ಒಬ್ಬ ದಲಿತ ಯುವತಿಯನ್ನು ಬರ್ಬರ ಅತ್ಯಾಚಾರವೆಸಗಿ ಕೊಲೆಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಎಸ್.ಐ. ಅರ್ಜುನ್ ಎಂಬಾತ ದಲಿತ ಯುವಕನನ್ನು ಅಮಾನುಷವಾಗಿ ಥಳಸಿ ಮೂತ್ರ ನೆಕ್ಕಿಸಿ ಜಾತಿ ದಾಷ್ಟ್ರ್ಯ ತೋರಿದ್ದಾನೆ ಎಂದರು.

ಹೀಗೆ ಘನಘೋರ ಹಾಗೂ ಗಂಭೀರ ಕುಕೃತ್ಯಗಳ ದೊಡ್ಡ ಪಟ್ಟಯೇ ಇದೆ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ 2 ವರ್ಷಗಳಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಮೂರು ಸಚಿವರನ್ನು ಬದಲಾಯಿಸಿದೆ. ಇದೀಗ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸಪೂಜಾರಿಯವರು ದಿವ್ಯ ನಿರ್ಲಕ್ಷ್ಯ ಮತ್ತು ಜಾಣ ಮೌನ ವಹಿಸಿದ್ದಾರೆ. ಈ ಯಾವ ದೌರ್ಜನ್ಯ ಸ್ಥಳಕ್ಕೂ ಭೇಟಿ ನೀಡಿಲ್ಲ. ಸಂತ್ರಸ್ತರನ್ನು ಸಂತೈಸಿಲ್ಲ. ಪರಿಹಾರಕ್ಕಾಗಿ ಬಿಡಿಗಾಸು ಕೊಟ್ಟಿಲ್ಲ. ಯಾರಕೈಗೂ ಸಿಗುವುದಿಲ್ಲ. ಇವರಿಗೆ ಮನೆ, ಮಠವಿಲ್ಲ, ಹಿಂಬಾಗಿಲನಿಂದ ಮೆಲ್ಲಗೆ ನುಸುಳಿ ಕದ್ದು ಸಭೆ, ಸಮಾರಂಭ ಮಾಡಿ ಪಲಾಯನರಾಗುತ್ತಾರೆ. ಎಂತಹ ದುರ್ಗತಿ? ಎಂತಹ ವಿಪರ್ಯಾಸ ಎಂದರು.

ಕಳೆದ 2 ವರ್ಷಗಳಿಂದ ಕೊರೋನ, ಪ್ರವಾಹ, ಭೀಕರ ಬರದಿಂದ ಜನಸಾಮಾನ್ಯರ ಬದುಕು ಬಸವಳಿದಿದೆ. ಸಂವಿಧಾನಾತ್ಮಕವಾಗಿ ಸಮಾಜ ಕಲ್ಯಾಣ ಇಲಾಖೆ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಸಬಲೀಕರಣ ಹಗಲುಗನಸಾಗಿದೆ. 2 ವರ್ಷಗಳಿಂದ ಲಕ್ಷಾಂತರ ದಲಿತ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ನೀಡಿಲ್ಲ. ಒಂದೇ ಒಂದು ಹಾಸ್ಟೆಲ್ ಕಟ್ಟಡ ನಿರ್ಮಿಸಿಲ್ಲ. ಗಂಗಾ ಕಲ್ಯಾಣ ಯೋಜನೆಯಲ್ಲಿ ಒಂದು ಕೊಳವೆ ಬಾವಿ ಸಹ ಕೊರೆದಿಲ್ಲ ಅಥವಾ ಪಂಪ್‌ಸೆಟ್ ವಿತರಿಸಿಲ್ಲ. ಪರಿಶಿಷ್ಟರಿಗೆ ಸಾಲಸೌಲಭ್ಯ ಸ್ವಯಂ ಉದ್ಯೋಗ ಅಥವಾ ತರಬೇತಿ ಏನೂ ನಡದೇ ಇಲ್ಲ. ಹಣ ಏನಾಯಿತು? ಎಲ್ಲಿ ಹೋಯಿತು? ಶ್ವೇತಪತ್ರ ಹೊರಡಿಸಲಿ ಎಂದು ಆಗ್ರಹಿಸಿಸದರು.

ಪರಿಶಿಷ್ಟರ ಪ್ರಗತಿಗಾಗಿ ಸಾವಿರಾರು ಕೋಟಿ ಮೀಸಲಿಡುವುದಾಗಿ ಹೇಳುತ್ತಿದ್ದಾರೆ. ಲೋಕೋಪಯೋಗಿ ಸೇರಿದಂತೆ ಸುಮಾರು 34 ಇಲಾಖೆಗಳಲ್ಲಿ ಸಾವಿರಾರು ಕೋಟಿ ಹಣ ಖರ್ಚಾಗದೆ ಉಳಿದಿದೆ. ಸು. 19 ಸಾವಿರ ಕೋಟಿ ಪರಿಶಿಷ್ಟರ ಅಭಿವೃದ್ಧಿ ಹಣವನ್ನು ಬೇರೆ ಇಲಾಖೆಗಳಗೆ ವರ್ಗಾಯಿಸಲಾಗಿದೆ. ಸಾಮಾನ್ಯ ಯೋಜನೆಗೆ ಪರಿಶಿಷ್ಟರ ಅಭಿವೃದ್ಧಿ ಹಣವನ್ನು ಖರ್ಚು ಮಾಡಿ ದುರುಪಯೋಗಪಡಿಸಲಾಗಿದೆ, ಭಾರಿ ಭ್ರಷ್ಟಾಚಾರ ನಡೆದಿದೆ. ಸಮಾಜ ಕಲ್ಯಾಣ ಸಚಿವರ ಅದಕ್ಷತೆಯೇ? ಸರ್ಕಾರದ ವೈಫಲ್ಯ ಅಥವಾ ದಲಿತರ ಮೇಲಿನ ಸೇಡಿನ ಕ್ರಮವೋ ಇದು ಹಿಡನ್ ಅಜೆಂಡಾವೇ ಸರಿ. ಹೋರಾಟಕ್ಕೆ, ಚಳವಳಿಗೆ ಬಿ.ಜೆ.ಪಿ. ಸರ್ಕಾರ ತಲೆ ಬಾಗದೆ ಮೊಂಡುತನದಿಂದ ವರ್ತಿಸಿದೆ. ಸಮಾಜ ಕಲ್ಯಾಣ ಇಲಾಖೆ ತೀವ್ರ ಭ್ರಷ್ಟವಾಗಿದ್ದು ಬಿಡಿಗಾಸಿಲ್ಲದೆ ದಿವಾಳಿ ಆಗಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.

ಉದ್ದೇಶಪೂರ್ವಕವಾಗಿ ಸಮಾಜ ಕಲ್ಯಾಣ ಇಲಾಖೆಯನ್ನು ದೋಚಿ ಬರಿದು ಮಾಡಲಾಗಿದೆ. ಕಳೆದ ಬಜೆಟ್‌ನಲ್ಲಿ ಲಿಂಗಾಯಿತ ಮತ್ತು ವಕ್ಕಲಿಗ ನಿಗಮಕ್ಕೆ ತಲಾ 500 ಕೋಟಿ ನೀಡಿತು. ಇಲ್ಲಿಯೂ ಸಹ ಸಮರ್ಪಕ ಅಭಿವೃದ್ಧಿ ನಡೆದಿಲ್ಲ. ಬರೀ ಓಟಿನ ರಾಜಕಾರಣವಷ್ಟೆ. ಆದರೆ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ 16 ನಿಗಮಗಳಿಗೆ ನೀಡಿದ ಒಟ್ಟು ಹಣ 220 ಕೋಟಿ ಮಾತ್ರ. ಇದರ ಹಿಂದಿನ ಉದ್ದೇಶವೇನು? ಎಂದು ಪ್ರಶ್ನಿಸಿದರು.

ಸಮಾಜ ಕಲ್ಯಾಣ ಇಲಾಖೆಯ ವಿವಿಧ ಬೇಡಿಕೆಗಳ ಈಡೇರಿಸಬೇಕು ಮತ್ತು ಉಳಿವಿಗಾಗಿ ಪ್ರಜಾಪ್ರಭುತ್ವ ಮತ್ತು ಸಂವಿಧಾನಾತ್ಮ ಹಕ್ಕು ಮತ್ತು ರಕ್ಷಣೆಗಾಗಿ ದ.ಸಂ.ಸ. 1ನೇ ಹಂತವಾಗಿ ಇಂದು ನಗರದಲ್ಲಿ ಮುಖ್ಯಮಂತ್ರಿಗಳವರ ನಿವಾಸಕ್ಕೆ ಸಾಂಕೇತಿಕ ಪಾದಯಾತ್ರೆ ನಡೆಸಿದೆ. ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳದೇ ಹೋದರೆ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಭಾರಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ ಎಂದರು.

Leave a Reply