ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಧರಣಿ ನಡೆಸಲು ದಲಿತಪರ ಸಂಘಟನೆಗಳ ನಿರ್ಧಾರ

4 years ago

ರಾಯಚೂರು: ದಲಿತ ಮುಖಂಡರು ಮತ್ತು ಹೋರಾಟಗಾರರ ಮೇಲೆ ಹಾಕಿರುವ ಪೊಲೀಸ್ ಪ್ರಕರಣ ಕೈಬಿಡಲು, ಭೂಮಿ ಹಾಗೂ ಮೂಲಭೂತ ಹಕ್ಕುಗಳನ್ನು ಒದಗಿಸಲು, ದಲಿತರು, ಅಲ್ಪಸಂಖ್ಯಾತರ ಮೇಲೆ ನಡೆದಿರುವ ದೌರ್ಜನ್ಯಗಳನ್ನು ಖಂಡಿಸಿ ಆಗಸ್ಟ್ 25 ರಂದು ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಪ್ರತಿಭಟನೆ ಧರಣಿ ನಡೆಸಲು ದಲಿತಪರ ಸಂಘಟನೆಗಳು ನಿರ್ಧರಿಸಿವೆ.

ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟ- ಕಲ್ಯಾಣ ಕರ್ನಾಟಕ ನೇತೃತ್ವದಲ್ಲಿ ಕೊಪ್ಪಳ, ರಾಯಚೂರು, ವಿಜಯನಗರ, ಬಳ್ಳಾರಿ ಜಿಲ್ಲೆಗಳು ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ರಾಯಚೂರಿನ ಸರ್ಕಾರಿ ನೌಕರರ ಭವನದಲ್ಲಿ (NGO ಹಾಲ್) ಸಭೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಜನವರಿ 26 ಗಣರಾಜ್ಯೋತ್ಸವ ದಿನದಂದು ರಾಯಚೂರಿನ ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ, ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಮಲ್ಲಿಕಾರ್ಜುನ ಗೌಡರನ್ನು ಸೇವೆಯಿಂದ ವಜಾ ಗೊಳಿಸಲು ಒತ್ತಾಯಿಸಿ ರಾಜ್ಯಾದ್ಯಂತ ದಲಿತ ಮತ್ತು ಪ್ರಗತಿಪರ ಸಂಘಟನೆಗಳು ರಾಜ್ಯಾದ್ಯಂತ ಹೋರಾಟ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗಿತ್ತು. ಹೋರಾಟ ಕ್ಕೆ ನಾಯಕತ್ವ ವಹಿಸಿದ ದಲಿತ ಮುಖಂಡರು ಹಾಗೂ ಹೋರಾಟಗಾರರ ಮೇಲೆ ಸರ್ಕಾರ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣಗಳನ್ನು ವಾಪಸ್ ಪಡೆಯಲು ಒತ್ತಾಯಿಸಿ ವಿವಿಧ ರೀತಿಯ ಹೋರಾಟ ರೂಪಿಸಲು ಸಭೆ ಸರ್ವಾನುಮತದಿಂದ ತೀರ್ಮಾನಿಸಿತು‌.

ಮಡಿಕೆ ಮುಟ್ಟಿದ ಕಾರಣಕ್ಕೆ ರಾಜಸ್ಥಾನದಲ್ಲಿ ಶಿಕ್ಷಕರೊಬ್ಬರು ಇತ್ತೀಚೆಗೆ ದಲಿತ ವಿದ್ಯಾರ್ಥಿಯನ್ನು ಒಡೆದು ಸಾಯಿಸಿದ್ದು, ಉತ್ತರ ಪ್ರದೇಶ ಸೇರಿದಂತೆ ದೇಶಾದ್ಯಂತ ಪ್ರತಿನಿತ್ಯ ದಲಿತರ ಕೊಲೆಗಳು ನಡೆದಿವೆ. ದಲಿತ, ಅಲ್ಪಸಂಖ್ಯಾತರು ಮತ್ತು ದುರ್ಬಲರ ಮೇಲೆ ಸರಣಿ ದೌರ್ಜನ್ಯಗಳು ಕೊಲೆಗಳು ಮುಂದುವರೆದಿವೆ. ಮಹಿಳೆಯರ ಮೇಲೆ ಬಹಿರಂಗವಾಗಿ ಅತ್ಯಾಚಾರಿಗಳು ನಡೆದಿವೆ. ಈ ಎಲ್ಲ ಘಟನೆಗಳ ಹಿನ್ನೆಲೆಯಲ್ಲಿ ಆಗಸ್ಟ್ 25 ರಂದು ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಅಂಬೇಡ್ಕರ್ ಪ್ರತಿಮೆಗಳ ಮುಂದೆ ಧರಣಿ ಸತ್ಯಾಗ್ರಹ ನಡೆಸಲು ಸಭೆ ತೀರ್ಮಾನಿಸಿತು.

ಮಲ್ಲಿಕಾರ್ಜುನ ಗೌಡ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದಂತೆ, ಹೋರಾಟಗಾರರ ಮೇಲೆ ಕೇಸ್ ದಾಖಲಿಸುವ ಮೂಲಕ ಸರ್ಕಾರ ಕೂಡ ಅಂಬೇಡ್ಕರ್ ವರಿಗೆ ಮತ್ತು ದಲಿತ ಜನಾಂಗಕ್ಕೆ ಅವಮಾನ ಮಾಡಿದೆ. ದಲಿತರ, ರೈತರ, ಕಾರ್ಮಿಕರ ಹೋರಾಟಗಳನ್ನು ಹತ್ತಿಕ್ಕಲು ಮುಂದಾಗಿರುವ ಸರ್ಕಾರದ ನಿರ್ಧಾರವನ್ನು ಖಂಡಿಸಿ ಹೋರಾಡಿದ್ದರೆ, ಬಹುಜನರಿಗೆ ಭವಿಷ್ಯವಿಲ್ಲ. ಈ ಹಿನ್ನೆಲೆಯಲ್ಲಿ ಆಗಸ್ಟ್ 25 ರಂದು ನಡೆಯಲಿರುವ ಧರಣಿ ಹೋರಾಟವನ್ನು ಯಶಸ್ವಿ ಗೊಳಿಸಬೇಕೆಂದು ಕೋರಲಾಯಿತು.

ಇದಲ್ಲದೆ ಇದೆ ತಿಂಗಳು ಜಿಲ್ಲೆಗೆ ಆಗಮಿಸುವ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯವರಿಗೆ ಮನವಿ ಕೊಡಲು ಸಹ ತೀರ್ಮಾನ ವಾಗಿದೆ. ಸಭೆಯಲ್ಲಿ ಡಿ.ಹೆಚ್.ಪೂಜಾರ, ವಿಜಯ ನಗರ ಜಿಲ್ಲೆಯ ಕರಿಯಪ್ಪ ಗುಡಿಮನಿ, ಮಲ್ಲಿಕಾರ್ಜುನ, ಕೊಪ್ಪಳ ಜಿಲ್ಲೆಯ ರತ್ನಾಕರ್, ಶಿವಪುತ್ರಪ್ಪ ಗುಮಗೇರಿ, ಎಸ್.ಮಾರೆಪ್ಪ ವಕೀಲರು, ಎಂ.ಆರ್.ಬೇರಿ, ಯೊಗನೂರ ನರಸಪ್ಪ, ಎಚ್.ಎನ್.ಬಡಿಗೇರ, ಎಂ.ಈರಣ್ಣ ಜೆ.ಬಿ.ರಾಜು, ಅಶೋಕ್ ನಿಲೋಗಲ್, ರಮೇಶ್ ಪಾಟಿಲ್ ಬೇರ್ಗಿ, ಮಾರೆಪ್ಪ ಹರವಿ, ಶ್ರೀನಿವಾಸ ಕೊಪ್ಪರ, ಶ್ರೀನಿವಾಸ ರಾಯಚೂರು, ನರಸಪ್ಪ, ಇತರರು ಭಾಗವಹಿಸಿದ್ದರು.

Leave a Reply