ಸೋಂಕು ನಿಯಂತ್ರಣದಲ್ಲಿ ಮಾರ್ಗಸೂಚನೆ ಪಾಲನೆ ಆಗುತ್ತಿಲ್ಲ: ಸುಧಾಕರ್‌ ಕೆಂಡಾಮಂಡಲ

5 years ago

ಆರೋಗ್ಯ ವ್ಯವಸ್ಥೆ ಜಿಲ್ಲೆಯಲ್ಲಿ ಎಚ್ಚರ ತಪ್ಪಿದರೆ ಅನಾಹುತ ತಪ್ಪದು

ಕೋವಿಡ್‌ ಕೇರ್‌ ಸೆಂಟರ್‌, ಆಕ್ಸಿಜನ್‌ ಬಳಕೆ, ಔಷಧ ನಿರ್ವಹಣೆಯಲ್ಲಿ ವಿಫಲ

ಚಿತ್ರದುರ್ಗ: ಕೋವಿಡ್‌ ನಿಯಂತ್ರಣದಲ್ಲಿ ಸರ್ಕಾರದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡದ ಕಾರಣಕ್ಕೆ ಜಿಲ್ಲೆಯಲ್ಲಿ ಸೋಂಕು ಏರಿಕೆ ಗತಿಯಲ್ಲಿದೆ. ತಕ್ಷಣವೇ ಜಿಲ್ಲಾಡಳಿತ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಹೇಳಿದ್ದಾರೆ.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೋವಿಡ್‌ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ಬಳಿಕ ಮಾತನಾಡಿದ ಅವರು, ಸೋಂಕಿತರನ್ನು ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ ದಾಖಲು ಮಾಡದಿರುವ, ಸ್ಯಾಂಪಲ್‌ಗಳ ಪರೀಕ್ಷೆಯನ್ನು ಆಯಾ ದಿನವೇ ಸಿಗುವಂತೆ ನೋಡಿಕೊಳ್ಳದಿರುವುದೇ ಸೋಂಕು ತೀವ್ರಗತಿಯಲ್ಲಿ ಹರಡಲು ಕಾರಣವಾಗಿದೆ. ತಕ್ಷಣವೇ ಈ ಬಗ್ಗೆ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲಾಡಳಿತ ಬೇಡಿಕೆ ಇರಿಸಿರುವಂತೆ ಆಕ್ಸಿಜನ್‌ ಪ್ರಮಾಣ ಹೆಚ್ಚಿಸಲು, ವೈದ್ಯರ ಕೋರತೆ ನೀಗಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಅವರು, ಸಭೆಯಿಂದಲೇ ರಾಜ್ಯ ಮಟ್ಟದ ಅಧಿಕಾರಿಗೆ ದೂರವಾಣಿ ಕರೆ ಮಾಡಿ ಸೂಕ್ತ ಪ್ರಮಾಣದ ಆಕ್ಸಿಜನ್‌ ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು.

ಜಿಲ್ಲೆಯಲ್ಲಿ ಹೋಮ್‌ ಐಸೋಲೇಶನ್‌ ವ್ಯವಸ್ಥೆಯಲ್ಲಿ ಗೊಂದಲಗಳಿಂದ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಆಗುತ್ತಿಲ್ಲ. ಹೀಗಾಗಿ ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ಆರಂಭಿಸಿ ರೋಗ ಲಕ್ಷಣ ಇಲ್ಲದವರನ್ನು ಕಡ್ಡಾಯವಾಗಿ ಈ ಕೇಂದ್ರಗಳಿಗೆ ಕರೆತರಬೇಕು. ಹಾಸ್ಟೆಲ್‌ಗಳು, ಶಾಲೆ – ಕಾಲೇಜು ಇತ್ಯಾದಿ ಸರಕಾರಿ ಕಟ್ಟಡಗಳಲ್ಲಿ ಈ ಕೇಂದ್ರಗಳನ್ನು ತೆರೆಯಬೇಕು ಎಂದು ಸೂಚಿಸಿದರು.

ಎಚ್ಚರತಪ್ಪಿದರೆ ಅನಾಹುತ

ಜಿಲ್ಲೆಯಲ್ಲಿ ಆರೋಗ್ಯ ವ್ಯವಸ್ಥೆ ಹೆಚ್ಚಿನ ಮಟ್ಟದಲ್ಲಿ ಇಲ್ಲದಿರುವುದರಿಂದ ಕೋವಿಡ್‌ ಆರೈಕೆ ಕೇಂದ್ರಗಳ ಕಡ್ಡಾಯ ಆರಂಭ ಆಗಲೇಬೇಕು. ಹೀಗಾಗಿ ಅತ್ಯಂತ ಹೆಚ್ಚು ಕಾಳಜಿಯಿಂದ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಬೂತ್‌ ಮಟ್ಟದಲ್ಲಿ ಅಥವಾ ಗ್ರಾಮ ಮಟ್ಟದಲ್ಲಿ ರಚಿಸಿರುವ ಟಾಸ್ಕ್‌ಫೋರ್ಸ್‌ಗಳು ಹೆಚ್ಚು ಕ್ರಿಯಾಶೀಲರಾಗಿ ಮನೆಯಲ್ಲಿರುವ ಎರಡೂವರೆ ಸಾವಿರ ಸೋಂಕಿತರನ್ನು ಕೂಡಲೇ ಕೋವಿಡ್‌ ಆರೈಕೆ ಕೇಂದ್ರಗಳಿಗೆ ಸ್ಥಳಾಂತರಿಸಬೇಕು ಎಂದು ತಾಕೀತು ಮಾಡಿದರು.

ದೇಶದ ಪ್ರತಿಷ್ಠಿತ ಸಂಸ್ಥೆ ನಡೆಸಿರುವ ಸಮೀಕ್ಷೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಏರುಗತಿಯಲ್ಲಿದ್ದ ಸೋಂಕು ಈಗ ಇಳಿಕೆ ಕಂಡಿದೆ. ಆದರೆ ಚಿತ್ರದುರ್ಗದಲ್ಲಿ ಮಾತ್ರ ಆ ಟ್ರೆಂಡ್‌ ಕಂಡುಬಂದಿಲ್ಲ. ಇದಕ್ಕೆ ಸರ್ಕಾರದ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲನೆ ಮಾಡುತ್ತಿಲ್ಲ ಎಂಬ ಸಂಶಯಗಳಿವೆ. ಈ ಪರಿಸ್ಥಿತಿ ಬದಲಾಗಬೇಕು ಎಂದು ಎಚ್ಚರಿಕೆ ನೀಡಿದರು.

ವರದಿ ಅದೇ ದಿನ ಕೊಡಬೇಕು

ಕೊರೋನಾ ಟೆಸ್ಟ್‌ಗಳ ಪರೀಕ್ಷಾ ವರದಿ ಆಯಾ ದಿನ ಬರುತ್ತಿಲ್ಲ ಎಂಬ ದೂರುಗಳಿವೆ. ಆಯಾ ದಿನದ ಫಲಿತಾಂಶವನ್ನು ಅದೇ ದಿನ ಸಿಗುವಂತೆ ಮಾಡಿ ಅವರನ್ನು ಐಸೋಲೇಟ್‌ ಮಾಡುವುದು, ಆರೈಕೆ ಮಾಡುವುದನ್ನು ಮಾಡಿದರೆ ನಿಯಂತ್ರಣ ಖಂಡಿತ ಸಾಧ್ಯವಿದೆ. ಆಕ್ಟಿವ್‌ ಪ್ರಕರಣಗಳಲ್ಲಿರುವ ಎಲ್ಲರಿಗೂ ಮೆಡಿಸನ್‌ ಕಿಟ್‌ ಕಡ್ಡಾಯವಾಗಿ ನೀಡಲೇಬೇಕು. ಔಷಧಗಳ ಕೊರತೆ ಇದ್ದರೆ ತಕ್ಷಣ ಬೇಡಿಕೆ ಸಲ್ಲಿಸಿದರೆ ಒದಗಿಸಲಾಗುವುದು ಎಂದರು.

ಯಾವುದೇ ಕಾರಣಕ್ಕೂ ಸ್ಟಿರಾಯ್ಡ್‌ಗಳ ಬಳಕೆ ಮಾಡಲೇಬಾರದು. ಅನಿವಾರ್ಯ ಪ್ರಕರಣಗಳಿದ್ದಲ್ಲಿ ವೈದ್ಯರ ನಿಗಾ ವ್ಯವಸ್ಥೆಯಲ್ಲಿ ಮಾತ್ರ ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.

ಆಕ್ಸಿಜನ್‌ ಬಳಕೆಗೆ ಸಂಬಂಧಿಸಿದಂತೆ ಆಡಿಟ್‌ ಮಾಡಿಸಬೇಕು. ಇಲ್ಲವಾದಲ್ಲಿ ನಿರ್ದಿಷ್ಟ ಪ್ರಮಾಣದ ನಿರ್ದಿಷ್ಟ ಬಳಕೆ ಗೊತ್ತಾಗುವುದಿಲ್ಲ. ಅಗತ್ಯವಿದ್ದಲ್ಲಿ ಮಾತ್ರ ಬಳಕೆ ಮಾಡಬೇಕು, ಇಲ್ಲವಾದಲ್ಲಿ ರೋಗಿಗೆ ಅನುಕೂಲಕ್ಕಿಂತ ಅನಾನುಕೂಲ ಹೆಚ್ಚು. ಈ ಸಮಿತಿ ಪ್ರತಿ ತಾಲ್ಲೂಕಿನ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ವರದಿ ಸಿದ್ಧಪಡಿಸಬೇಕು ಎಂದರು.

ಸದ್ಯ ಜಿಲ್ಲಾಡಳಿತದ ವರದಿ ಪ್ರಕಾರ 591 ರೋಗಿಗಗಳಿಗೆ ಆಕ್ಸಿಜನ್‌ ನೀಡಲಾಗುತ್ತಿದೆ. ಸರ್ಕಾರ 8.5 ಕೆ.ಎಲ್‌ ಆಕ್ಸಿಜನ್‌ ಒದಗಿಸಲಾಗುತ್ತಿದೆ. ಅದರ ಗುಣಾತ್ಮಕ ಬಳಕೆ ಆಗಬೇಕು. ಹೆಚ್ಚುವರಿಯಾಗಿ 4 ಕೆ.ಎಲ್‌  ನಿಂದ 5 ಕೆಎಲ್‌ ವರೆಗೆ ನೀಡಲು ಸೂಚಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಹಾಸಿಗೆ ಸಂಖ್ಯೆ ಹೆಚ್ಚಿಸಿ

ಬಸವೇಶ್ವರ ಮೆಡಿಕಲ್‌ ಕಾಲೇಜು ಆಸ್ಪತ್ರೆಯಲ್ಲಿ ಶೇ. 75ರಷ್ಟು ಹಾಸಿಗೆಗಳನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಅದೇ ರೀತಿ ವೈದ್ಯರು ಮತ್ತು ಸಿಬ್ಬಂದಿಯನ್ನೂ ಸಂಸ್ಥೆ  ಕೋವಿಡ್‌ ನಿಯಂತ್ರಣ ವಿಷಯದಲ್ಲಿ ಒದಗಿಸಬೇಕು. ಜತೆಗೆ ಐನೂರು ಹಾಸಿಗೆಗಳಿಗೆ ಆಕ್ಸಿಜನ್‌ ಲೈನ್‌ ಅಳವಡಿಕೆ ಮಾಡಬೇಕು. ಅದಕ್ಕೆ ಬೇಕಿರುವ ಎಲ್ಲಾ ನೆರವನ್ನೂ ಸರ್ಕಾರ ನೀಡಲಿದೆ ಎಂದು ಸ್ಪಷ್ಟಪಡಿಸಿದರು.

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ಗೆ ನೋಂದಣಿ ಆಗದ ಖಾಸಗಿ ಆಸ್ಪತ್ರೆಗಳನ್ನು ತಕ್ಷಣ ನೋಂದಣಿ ಮಾಡಬೇಕು. ಮೂರು ದಿನದೊಳಗೆ ಈ ಪ್ರಕ್ರಿಯೆ ಕಡ್ಡಾಯವಾಗಿ ಪೂರ್ಣಗೊಳಿಸಬೇಕು. ಜಿಲ್ಲಾ ಆಸ್ಪತ್ರೆಗೆ ಹಿರಿಯ ಅಧಿಕಾರಿಯೊಬ್ಬರನ್ನು ತಕ್ಷಣದಿಂದಲೇ ನೋಡಲ್‌ ಅಧಿಕಾರಿಯಾಗಿ ನೇಮಕ ಮಾಡಬೇಕು. ಅವರು ಪ್ರತಿಯೊಂದು ವಿಷಯದಲ್ಲೂ ಪ್ರತಿದಿನ ಪರಿಶೀಲನೆ ನಡೆಸಿ ಲೋಪಗಳ ನಿವಾರಣೆ ಮಾಡಬೇಕು ಎಂದು ಸೂಚಿಸಿದರು.

ವಾರದೊಳಗೆ ನೇಮಕ

ಮೂವರು ವೈದ್ಯರು, ತಜ್ಞರು 9 ಮತ್ತು ಜಿಲ್ಲಾ ಆಸ್ಪತ್ರೆಗೆ 1 ಹುದ್ದೆ ಖಾಲಿ ಇವೆ. ಅವುಗಳನ್ನು ತಕ್ಷಣ ನೇಮಕ ಮಾಡಿ ಕಳುಹಿಸಲಾಗುವುದು. ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡುವ ವೈದ್ಯರಿಗೆ ಹೆಚ್ಚಿನ ವೇತನ ನೀಡಿ ಹೊಸದಾಗಿ ನೇಮಕ ಮಾಡಿಕೊಳ್ಳಬೇಕು. ಬಸವೇಶ್ವರ ಮೆಡಿಕಲ್‌ ಕಾಲೇಜಿನ ಪದವಿ ಪೂರ್ಣಗೊಳಿಸಿರುವವರು, ಪಿಜಿ ವಿದ್ಯಾರ್ಥಿಗಳನ್ನು ನಿಯೋಜಿಸಬೇಕು ಮತ್ತು ಅವರಿಗೂ ನಿಗದಿತ ಸಂಭಾವನೆ ನೀಡಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಕೋವಿಡ್‌ ಆಸ್ಪತ್ರೆಗೆ ರೋಗಿಗಳ ಸಂಬಂಧಿಕರನ್ನು ಯಾರನ್ನೂ ಒಳಗೆ ಬಿಡುವಂತಿಲ್ಲ. ಆಸ್ಪತ್ರೆಗೆ ಪೊಲೀಸ್‌ ಸಿಬ್ಬಂದಿ ನಿಯೋಜಿಸಬೇಕು. ರೆಮ್ಡಿಸಿವಿರ್‌ ಹಾಗೂ ಇತರೆ ಔಷಧಗಳ ಬಳಕೆಗೆ ಸಂಬಂಧಿಸಿದಂತೆ ಸಮರ್ಪಕ ಮಾಹಿತಿ ಇಲ್ಲದ ಜಿಲ್ಲಾ ಆರೋಗ್ಯಾಧಿಕಾರಿ ಅವರನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಪ್ರತಿದಿನ ಬೇಕಿರುವ ಔಷಧಗಳ ಎಲ್ಲಾ ವಿವರ ಅವರ ಬಳಿ ಇರಬೇಕು ಎಂದು ತಾಕೀತು ಮಾಡಿದರು.

ಸಭೆಯಲ್ಲಿ ಹಿರಿಯ ಶಾಕಸ ತಿಪ್ಪಾರೆಡ್ಡಿ, ಕೆಎಸ್‌ಆರ್‌ಟಿಸಿ ಅಧ್ಯಕ್ಷ ಚಂದ್ರಣ್ಣ, ಶಾಸಕಿ ಪೂರ್ಣಿಮಾ ಮತ್ತು ರಘುಮೂರ್ತಿ ಹಾಗೂ ಹಿರಿಯ ಅಧಿಕಾರಿಗಳು ಹಾಜರಿದ್ದರು.

Leave a Reply