ಬೆಂಗಳೂರು: ರಾಜ್ಯದಲ್ಲಿ ರಾಜಕೀಯ ಧೃವೀಕರಣ ಆರಂಭಗೊಂಡಿದೆ. ಬಿಜೆಪಿ ಪರ ಒಲವು ವ್ಯಕ್ತವಾಗುತ್ತದೆ ಪಕ್ಷಕ್ಕೆ ಹಲವರ ಸೇರ್ಪಡೆಯಿಂದಾಗಿ ಮುಂಬರುವ ದಿನಗಳಲ್ಲಿ ಕರ್ನಾಟಕದ ರಾಜಕಾರಣಕ್ಕೆ ಹೊಸ ತಿರುವು ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಮಾಜಿ ಸಂಸದ ಮುದ್ದಹನುಮೇಗೌಡ, ನಟ ಶಶಿಕುಮಾರ್, ನಿವೃತ್ತ ಐಎಎಸ್ ಅಧಿಕಾರಿ ಅನಿಲ್ ಕುಮಾರ್ ಸೇರಿದಂತೆ ಮತ್ತಿತರರನ್ನು ಪಕ್ಷ ಸೇರ್ಪಡೆ ಮಾಡಿಕೊಂಡು ಮಾತನಾಡಿದ ಅವರು, ಇವರ ಸೇರ್ಪಡೆಯಿಂದಾಗಿ ರಾಜಕಾರಣಕ್ಕೆ ಹೊಸ ತಿರುವು ಬಂದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬದಲಾವಣೆಯಾಗುವ ಸಾಧ್ಯತೆ ಇದೆ ಎಂದರು.
ಕಳೆದ 10 ವರ್ಷಗಳಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಯಾವ ವಿಶ್ವಾಸದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತೋ ಅದೇ ವಿಶ್ವಾಸವನ್ನು ಆ ಪಕ್ಷ ಕಳೆದುಕೊಂಡಿದೆ. ಪರಿಣಾಮ ದೇಶದೆಲ್ಲೆಡೆ ಎಲ್ಲಾ ಹಂತದ ಚುನಾವಣೆಯಲ್ಲೂ ಸೋತು ಸುಣ್ಣವಾಗಿದೆ. ಅಸ್ತಿತ್ವಕ್ಕಾಗಿ ಅವರು ಹೋರಾಟ ನಡೆಸುವಂತಾಗಿದೆ ಎಂದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನ ಬಹುತೇಕ ಸಚಿವರು ಸೋತು ಮನೆ ಸೇರಿದರು. ಆದರೂ ಕೂಡ ಆ ಪಕ್ಷದವರು ಹಿಂಬಾಗಿಲಿನಿಂದ ಬಂದು ಜೆಡಿಎಸ್ ಜತೆ ಮೈತ್ರಿಮಾಡಿಕೊಂಡು ಸರ್ಕಾರ ರಚಿಸಿದರು. ಆ ಪ್ರಯೋಗವು ಕೂಡ ವಿಫಲವಾಗಿದೆ. ರಾಜ್ಯದಲ್ಲೂ ಜನರಿಂದ ತಿರಸ್ಕೃತವಾಗಿರುವ ಪಕ್ಷವೆಂದರೆ ಅದು ಕಾಂಗ್ರೆಸ್ ಎಂದರು.
ಕೋವಿಡ್ನಂತಹ ಸಂಕಷ್ಟದ ಸ್ಥಿತಿಯಲ್ಲೂ ಬಿಜೆಪಿ ಜನರ ಪರವಾಗಿ ಕೆಲಸ ಮಾಡಿ ಜನಮನ್ನಣೆ ಗಳಿಸಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಜನ ಸಂಕಲ್ಪ ಯಾತ್ರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಅದು ಪಕ್ಷದ ಪರವಾಗಿ ದೊಡ್ಡ ಅಲೆಯಾಗಿ ಕಾಣುತ್ತಿದೆ ಎಂದರು
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಡಬ್ಬಲ್ ಎಂಜಿನ್ ಸರ್ಕಾರ ಕರ್ನಾಟಕದ ಅಭಿವೃದ್ಧಿಗೆ ಕಂಕಣಬದ್ಧರಾಗಿ ಕೆಲಸ ಮಾಡುತ್ತಿದ್ದೇವೆ. ನಮಗೆ ನಮ್ಮ ಕಾರ್ಯಗಳೇ ಶ್ರೀರಕ್ಷೆಯಾಗಲಿವೆ. ಮಾಜಿ ಸಂಸದ ಮುದ್ದಹನುಮೇಗೌಡರು ರಾಜಕೀಯದಲ್ಲಿ ತಮ್ಮದೇ ಆದ ದೊಡ್ಡ ಗುರುತು ಇಟ್ಟುಕೊಂಡಿದ್ದಾರೆ ಎಂದರು.
ನಟ ಶಶಿಕುಮಾರ್, ಅನಿಲ್ಕುಮಾರ್ ಸೇರಿದಂತೆ ಮತ್ತಿತರ ಆಗಮನ ಪಕ್ಷಕ್ಕೆ ದೊಡ್ಡ ಬಲ ಬಂದಿದೆ. ಶಶಿಕುಮಾರ್ ಈ ಹಿಂದೆ ನಮ್ಮ ಬಳಿಯೇ ಇದ್ದರು. ಎಸ್ಟಿ ಸಮುದಾಯದವರಾದ ಅವರ ಸೇರ್ಪಡೆ ಬಿಜೆಪಿಗೆ ದೊಡ್ಡ ಶಕ್ತಿಯಾಗಿದೆ ಎಂದರು.
ಎಲ್ಲಾ ವರ್ಗದ ಜನರು ಇಂದು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ. ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಸ್ಥಾನಮಾನದ ಬಗ್ಗೆ ಪಕ್ಷ ತೀರ್ಮಾನಿಸುತ್ತದೆ. ನಿಮ್ಮನ್ನು ಗೌರವಯುತವಾಗಿ ಪಕ್ಷ ನಡೆಸಿಕೊಳ್ಳುತ್ತದೆ ಎಂದರು.
ಪಕ್ಷದ ರಾಜ್ಯಾಧ್ಯಕ್ಷ ನಳೀನ್ಕುಮಾರ್ ಕಟೀಲ್ ಮಾತನಾಡಿ, ಇನ್ನು ಸ್ವಲ್ಪದಿನ ಕಾದು ನೋಡಿ. ಕಾಂಗ್ರೆಸ್ ಮನೆ ಬಾಗಿಲಿಗೆ ಬೀಗ ಬೀಳುತ್ತದೆ. ಎಲ್ಲರೂ ಸದ್ಯದಲ್ಲೇ ಬಿಜೆಪಿಗೆ ಸೇರುತ್ತಾರೆ. ಕಾಂಗ್ರೆಸ್ ನಾಯಕ ರಾಹುಲ್ಗಾಂಧಿ ಕಾಲಿಟ್ಟ ಕಡೆ ಪಕ್ಷ ಸೋಲುತ್ತದೆ. ಕಳೆದ ಬಾರಿ ಕೊಳ್ಳೇಗಾಲಕ್ಕೆ ಬಂದರೂ ಅಲ್ಲಿ ಪಕ್ಷ ಸೋತಿತು ಎಂದರು.
ಸಿದ್ದರಾಮಯ್ಯನವರೇ ನೀವು ಒಂದು ಬಾರಿ ಕಲಬುರಗಿಗೆ ಬಂದು ಅಲ್ಲಿ ಎಷ್ಟು ಜನ ಸೇರಿದ್ದರು ಎಂಬುದನ್ನು ನೋಡಬೇಕಿತ್ತು. ಅಶ್ವತ್ಥನಾರಾಯಣ ಅವರೇ ನೀವು ಅವರಿಗೆ ಒಂದು ಕನ್ನಡಕ ಕೊಡಿಸಿ. ಅದನ್ನು ಹಾಕಿಕೊಂಡು ಇಷ್ಟು ಜನ ಸೇರಿದ್ದಾರೆ ಎಂಬುದನ್ನು ನೋಡಲಿ. ನಾವು ಯಾರೊಬ್ಬರೂ ಕೂಡ ಎಣ್ಣೆ, ಬಿರಿಯಾನಿ ಕೊಟ್ಟು ಜನರನ್ನು ಸೇರಿಸಿಲ್ಲ ಎಂದರು.
ಪಕ್ಷಕ್ಕೆ ಸೇರ್ಪಡೆಯಾದ ಮುದ್ದಹನುಮೇಗೌಡ ಮಾತನಾಡಿ, ಬಿಜೆಪಿಯ ಪ್ರಮುಖರು, ಸಚಿವರ ಜೊತೆ ನಾನು ಕೆಲಸ ಮಾಡಿದ್ದೇನೆ. ತುಮಕೂರಿನ ಕಾರ್ಯಕರ್ತರ ಜೊತೆಗೂ ನನಗೆ ನಿಕಟ ಸಂಬಂಧ ಇತ್ತು. ಈ ಪಕ್ಷದಲ್ಲಿ ಕಾರ್ಯಕರ್ತನಾಗಿ ಸುಲಲಿತವಾಗಿ ಕೆಲಸ ಮಾಡುವ ವಿಶ್ವಾಸ ಇದೆ ಎಂದರು.
ಅತ್ಯಂತ ಆತ್ಮೀಯವಾಗಿ ನನ್ನನ್ನು ಬರಮಾಡಿಕೊಂಡಿದ್ದಾರೆ. ನಾನು ಎಲ್ಲರಿಗೂ ಕೃತಜ್ಞನಾಗಿದ್ದೇನೆ. ಪ್ರಧಾನಿಗಳ ಕಾರ್ಯವೈಖರಿ ಯನ್ನು ನಾನು ಅತ್ಯಂತ ಹತ್ತಿರದಿಂದ ನೋಡಿದ್ದೇನೆ ಎಂದು ತಿಳಿಸಿದರು. ಅವರ ನೇತೃತ್ವದಲ್ಲಿ ಕೇಂದ್ರ ಹಾಗೂ ಬೊಮ್ಮಾಯಿ ನೇತೃತ್ವದ ಜನಪರ ಯೋಜನೆಗಳು ನನಗೆ ಮೆಚ್ಚುವಂತಾಗಿದೆ. ಭಾರತದ ಘನತೆಯನ್ನು ಪ್ರಪಂಚದಲ್ಲಿ ಅತ್ಯಂತ ಎತ್ತರಕ್ಕೆ ತೆಗೆದುಕೊಂಡು ಹೋಗುವ ಕೆಲಸವನ್ನು ಪ್ರಧಾನಿಗಳು ಮಾಡುತ್ತಿದ್ದಾರೆ ಎಂದರು.
ನನಗೆ ಬಹಳ ವಿಶ್ವಾಸ ಇದೆ, ಹೊಂದಾಣಿಕೆ ಮಾಡಿಕೊಂಡು ಹೋಗ್ತೀನಿ. ಎಲ್ಲಾ ನೀತಿ ನಿಯಮ ಸಿದ್ಧಾಂತವನ್ನು ನಾನು ಬಲ್ಲೆ. ಪಕ್ಷದ ಶಕ್ತಿಯನ್ನು ಮತ್ತಷ್ಟು ಹೆಚ್ಚಾಗಿ ತೆಗೆದುಕೊಂಡು ಹೋಗುತ್ತೇನೆ ಎಂದರು.
ನಟ ಶಶಿಕುಮಾರ್ ಮಾತನಾಡಿ, ಬಿಜೆಪಿ ನನಗೆ ಹೊಸದೇನಲ್ಲ. ಕೆಲವು ಕಾರಣಾಂತರಗಳಿಂದ ಸುಳ್ಳಿನ ಆಶಾಸ್ವನೆ ಅಥವಾ ಬೇರೆ ಏನೋ ಕೆಲ ಕಾರಣಗಳಿಂದ ಸ್ವಲ್ಪ ಯಡವಟ್ಟು ಆಗಿತ್ತು. ಈಗ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾರ್ಯವೈಖರಿ ಮೆಚ್ಚಿ ಬಿಜೆಪಿ ಸೇರುತ್ತಿದ್ದೇನೆ ಎಂದರು.




