ತುಮಕೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಭಿವೃದ್ಧಿಯ ಡಬಲ್ ಇಂಜಿನ್ ಸರ್ಕಾರ ಬೇಕಾ ಅಥವಾ ಗೊತ್ತು ಗುರಿ ಇಲ್ಲದ ಡಬ್ಬಲ್ ಸ್ಟಿಯರಿಂಗ್ ಸರ್ಕಾರ ಬೇಕಾ ಎಂಬುದನ್ನು ಜನರೇ ನಿರ್ಧರಿಸಲಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದರು.
ತುಮಕೂರು ಗ್ರಾಮಾಂತರ ಮತ್ತು ನೆಲಮಂಗಲದಲ್ಲಿ ಆಯೋಜಿಸಿದ್ದ ಜನೋತ್ಸವ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನಮ್ಮದು ಡಬಲ್ ಇಂಜಿನ್ ಸರ್ಕಾರ. ಇದರಿಂದಾಗಿಯೇ ರೈತರಿಗೆ ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಸೇರಿದಂತೆ ಎಲ್ಲ ವರ್ಗದ ಜನರಿಗೆ ಹೆಚ್ಚಿನ ಅಭಿವೃದ್ಧಿ ಯೋಜನೆಗಳು ತಲುಪುತ್ತಿವೆ. ಆದರೆ ಕಾಂಗ್ರೆಸ್ ನಲ್ಲಿ ಪರಿಸ್ಥಿತಿಯೇ ಭಿನ್ನವಾಗಿದೆ ಎಂದರು.
ಕೆಪಿಸಿಸಿ ಅಧ್ಯಕ್ಷರು ಏರಿಗೆ ಎಳೆದರೆ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ನೀರಿಗೆ ಎಳೆಯುತ್ತಿದ್ದಾರೆ. ಇಂತಹ ಪಕ್ಷದಿಂದ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವೇ ಎಂದು ಪ್ರಶ್ನಿಸಿದ ಸಚಿವರು, ನಮ್ಮದು ಜನಪರ ಸರ್ಕಾರ, ಜನರಿಗಾಗಿ ಜಾರಿಗೊಳಿಸಿದ ಯೋಜನೆಗಳು ಜನರಿಗೆ ತಲುಪಿವೆ. ಹಾಗಾಗಿ ಜನರ ಮಧ್ಯೆ ಕಾರ್ಯಕ್ರಮ ಮಾಡುತ್ತಿದ್ದೇವೆ. ಆದರೆ ಕಾಂಗ್ರೆಸ್ ನವರು ವ್ಯಕ್ತಿ ಉತ್ಸವ ಮಾಡಲು ಮುಂದಾಗಿದ್ದಾರೆ ಎಂದರು.
ಪ್ರಜಾಪ್ರಭುತ್ವವೇ ಜನರ ಹಬ್ಬವಾಗಿದೆ. ಇದನ್ನು ಬಿಜೆಪಿ ಮಾಡುತ್ತಿದೆ. ಜನರಿಗಾಗಿ, ಜನರಿಗೋಸ್ಕರ ಮತ್ತು ಜನರ ಮಧ್ಯೆ ಕಾರ್ಯಕ್ರಮ ಮಾಡುತ್ತಿದ್ದೇವೆ. ಆದರೆ ವ್ಯಕ್ತಿಪೂಜೆ ಮಾಡಲು ಹೊರಟಿರುವ ಕಾಂಗ್ರೆಸ್ ಪಕ್ಷಕ್ಕೆ ಜನಪರ ಕಾಳಜಿ ಇದೆಯೇ ಎಂದು ಪ್ರಶ್ನಿಸಿದರು. ಈ ಹಿಂದೆ ಕೋವಿಡ್ ಕಾರಣ ಯಾವುದೇ ಸಮಾವೇಶ ಮಾಡಲು ಸಾಧ್ಯವಾಗಲಿಲ್ಲ. ಜನರು ಪಕ್ಷದ ಪರ ಇದ್ದಾರೆ, ಪಕ್ಷದ ಮೇಲೆ ಜನರಿಗೆ ಅಭಿಮಾನ ಇದೆ ಎಂದರು.
ಇದೇ 28ರಂದು ಸಮಾವೇಶದಲ್ಲಿ ಸೇರುವ ಜನಸಾಗರವನ್ನು ಕಂಡು ಬಿಜೆಪಿ ಶಕ್ತಿ ಏನು ಎಂಬುದು ಅರಿವಾಗಬೇಕು. ಆ ಮೂಲಕ 2023ರ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲು ಸುಲಭವಾಗಲಿದೆ. ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಎಲ್ಲರಿಗೂ ಆರೋಗ್ಯ ಸಿಗುತ್ತಿದೆ. ಇದನ್ನು ಮಧ್ಯಮವರ್ಗದ ಜನರಿಗೂ ವಿಸ್ತರಣೆ ಮಾಡಲಾಗಿದೆ ಎಂದರು.
ರಾಜ್ಯದ ಐದು ಕಡೆಗಳಲ್ಲಿ ಜನೋತ್ಸವ ಕಾರ್ಯಕ್ರಮ ನಡೆಸಲು ಉದ್ಧೇಶಿಸಲಾಗಿದೆ. ಮೊದಲ ಕಾರ್ಯಕ್ರಮ ದೊಡಬಳ್ಳಾಪುರದಲ್ಲಿ ನಡೆಯಲಿದ್ದು, ಲಕ್ಷಾಂತರ ಜನರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ನಾಲ್ಕು ಜಿಲ್ಲೆಗಳಿಂದ ಆಗಮಿಸುವ ಜನಸಾಗರ ವಿರೋಧಪಕ್ಷಗಳಿಗೆ ಎಚ್ಚರಿಕೆ ನೀಡಲಿದೆ ಎಂದರು.
ಒಂದು ಸಮುದಾಯದ ಬೆಂಬಲದಿಂದ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ, ಒಂದು ಸಮುದಾಯವನ್ನು ಮತ್ತೊಂದು ಸಮುದಾಯಕ್ಕೆ ಹೋಲಿಕೆ ಮಾಡುವುದು ಶೋಭೆ ತರಲ್ಲ. ಈ ಹೇಳಿಕೆಗೆ ಸಮುದಾಯವೂ ವಿರೋಧ ವ್ಯಕ್ತಪಡಿಸುತ್ತಿದೆ. ಹೋಲಿಕೆ ಮಾಡುವುದು, ವರ್ಗೀಕರಣ ಮಾಡುವುದು ಕಾಂಗ್ರೆಸ್ ಹುಟ್ಟುಗುಣ. ಧರ್ಮ ಧರ್ಮದ ಮಧ್ಯೆ, ವರ್ಗ ವರ್ಗಗಳ ಮಧ್ಯೆ, ಜಾತಿ ಜಾತಿಗಳ ಮಧ್ಯೆ ಬಿರುಕು ಮೂಡಿಸುವುದು ಕಾಂಗ್ರೆಸ್ ಹುಟ್ಟುಗುಣ ಎಂದರು.
ವ್ಯಕ್ತಿಯ ವೈಭವೀಕರಣ ಮಾಡುವುದರಿಂದ ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ಧಕ್ಕೆ ಬರಲಿದೆ. ನಾವು ಮಾಡುತ್ತಿರುವುದು ಪ್ರಜಾಪ್ರಭುತ್ವ ಎತ್ತಿ ಹಿಡಿಯುವ ಕಾರ್ಯಕ್ರಮ. ಅವರು ಇಡೀ ರಾಜ್ಯ ಸೇರಿಸಿ ಒಂದು ಸಮಾವೇಶ ಮಾಡುತ್ತಿದ್ದರೆ ನಾವು ರಾಜ್ಯದ ಐದು ಭಾಗಗಳಲ್ಲಿ ಐದು ಸಮಾವೇಶಗಳನ್ನು ಮಾಡುತ್ತಿದ್ದೇವೆ. ಅದಕ್ಕೂ ಇದಕ್ಕೂ ಹೋಲಿಕೆ ಮಾಡಬಾರದು ಎಂದರು.
ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇಲ್ಲ, ಪ್ಯಾರಾಮೆಡಿಕಲ್ ಸಿಬ್ಬಂದಿ ಮತ್ತು ನರ್ಸಿಂಗ್ ಸಿಬ್ಬಂದಿ ಕೊರತೆ ಇದ್ದು, ಈ ಬಗ್ಗೆ ಆರ್ಥಿಕ ಇಲಾಖೆಯೊಂದಿಗೆ ಚರ್ಚೆ ನಡೆಸಲಾಗಿದೆ. ಶೀಘ್ರದಲ್ಲಿಯೇ ಅಗತ್ಯ ಸಿಬ್ಬಂದಿಯನ್ನು ತುಂಬುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
ಬಿಜೆಪಿ ಅಭಿವೃದ್ಧಿ ಮಾಡದೆ ಸಮಾವೇಶ ಮಾಡುತ್ತಿದೆ ಎಂಬ ಮಾಜಿ ಸಂಸದ ಮೊಯ್ಲಿ ಅವರ ಹೇಳಿಕೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮೊಯ್ಲಿ ಆರೋಪ ಕಾಂಗ್ರೆಸ್ ಪಕ್ಷಕ್ಕೆ ಮತ್ತು ಸ್ವತಃ ಅವರಿಗೇ ಅನ್ವಯಿಸಲಿದೆ. ದೇಶದಲ್ಲಿಯೇ ಕಾಂಗ್ರೆಸ್ ಶೂನ್ಯಕ್ಕೆ ತಲುಪುತ್ತಿದ್ದು, ಸಂಸದರಾಗಿ ಸೋತು ಮೊಯ್ಲಿ ಅವರೂ ಮೊಲೆ ಸೇರಿದ್ದಾರೆ ಹಾಗಾಗಿ ಅವರ ಆರೋಪ ಅವರ ಪಕ್ಷಕ್ಕೆ ಮತ್ತು ಅವರಿಗೆ ಸೂಕ್ತ ಎಂದರು.
ಬಿಜೆಪಿ ಶಿಸ್ತು ಮತ್ತು ಸಂಯಮದ ಪಕ್ಷವಾಗಿದೆ. ಸುರೇಶ್ ಗೌಡರ ಸೋಲು ಅನಿರೀಕ್ಷಿತ. 2023ರಲ್ಲಿ ಜಿಲ್ಲೆಯಲ್ಲಿಯೇ ಮೊದಲ ಟಿಕೆಟ್ ಸುರೇಶ್ ಗೌಡರಗೆ ಘೋಷಣೆಯಾಗಲಿದೆ. ನನಗಿರುವ ಮಾಹಿತಿ ಮತ್ತು ಗುಪ್ತಚರ ಮಾಹಿತಿಯಿಂದ ಹೇಳುತ್ತಿದ್ದು, ಪಕ್ಷವನ್ನು ಶಕ್ತಿಯುತವಾಗಿ ಸಂಘಟಿಸಲು ಎಲ್ಲರೂ ಕೈ ಜೋಡಿಸಬೇಕು ಎಂದರು.
ಮೂರು ವರ್ಷದ ಆಡಳಿತದಲ್ಲಿ ಯಶಸ್ವಿ ಕೋವಿಡ್ ನಿರ್ವಹಣೆ ಜೊತೆಗೆ ಅತಿವೃಷ್ಟಿಯನ್ನೂ ಸಮರ್ಥವಾಗಿ ಎದುರಿಸಲಾಗಿದೆ. ಅನೇಕರಿಗೆ ಪುನರ್ವಸತಿ ಕಲ್ಪಿಸಲಾಗಿದೆ, ಅನೇಕ ದೇಶಗಳು ಕೋವಿಡ್ ನಿಂದ ಆರ್ಥಿಕವಾಗಿ ದಿವಾಳಿಯಾಗುತ್ತಿವೆ. ನಮ್ಮ ನೆರೆ ರಾಷ್ಟ್ರ ಶ್ರೀಲಂಕಾ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಆದರೆ ಕರ್ನಾಟಕ ಕಳೆದ ಒಂದು ವರ್ಷದಲ್ಲಿ ದೇಶದಲ್ಲಿಯೇ ಅತ್ಯಧಿಕ ವಿದೇಶಿ ಬಂಡವಾಳ ಹೂಡಿಕೆ ಮತ್ತು ಜಿಎಸ್ ಟಿ ಪಡೆದ ರಾಜ್ಯವಾಗಿ ಖ್ಯಾತಿಗಳಿಸಿದೆ ಎಂದರು.
ಕಳೆದ ಮೂರು ವರ್ಷಗಳಿಂದ ಇಡೀ ವಿಶ್ವವನ್ನು ಕೋವಿಡ್ ಕಾಡಿದ ಹಿನ್ನೆಲೆಯಲ್ಲಿ ಅಭಿವೃದ್ಧಿ ಕುಂಟಿತವಾಗಿತ್ತು. ಆದರೆ ಈಗ ರಾಜ್ಯದಲ್ಲಿ ಅಭಿವೃದ್ಧಿಗೆ ವೇಗ ಸಿಕ್ಕಿದೆ. ಎಲ್ಲ ವರ್ಗದ ಜನರಿಗೆ ಕಾರ್ಯಕ್ರಮ ನೀಡಲಾಗುತ್ತಿದೆ. ಡಬಲ್ ಇಂಜಿನ್ ಸರ್ಕಾರ ಎಲ್ಲರ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಇದರಿಂದ ಎರಡುಪಟ್ಟು ಅನುಕೂಲ ಜನರಿಗೆ ಆಗಲಿದೆ ಎಂದರು.
ರೈತಮಕ್ಕಳ ಅನುಕೂಲಕ್ಕಾಗಿ ದೇಶದಲ್ಲಿಯೇ ಮೊದಲಬಾರಿಗೆ ವಿದ್ಯಾನಿಧಿ ಯೋಜನೆ ಜಾರಿಗೊಳಿಸಲಾಗಿದೆ. ಇದರಿಂದ ರಾಜ್ಯದ 10 ಲಕ್ಷ ಜನರಿಗೆ ಅನುಕೂಲವಾಗಲಿದೆ. ಈ ಹಿಂದೆ ಕಾಂಗ್ರೆಸ್ ಕೆಲ ಸಮುದಾಯದ ಮಕ್ಕಳಿಗೆ ಮಾತ್ರ ಪ್ರವಾಸ ಭಾಗ್ಯ, ಕೆಲ ಸಮುದಾಯದ ಮಕ್ಕಳಿಗೆ ಮಾತ್ರ ಶೂ ನೀಡಿತ್ತು. ಆದರೆ ನಮ್ಮ ಸರ್ಕಾರ ಇಂತಹ ಯಾವುದೇ ತಾರತಮ್ಯ ಮಾಡದೆ ಜಾತಿ, ಧರ್ಮ, ಶ್ರೀಮಂತ, ಬಡವ ಎಂಬ ಯಾವುದೇ ಬೇಧವಿಲ್ಲದೆ ನೀಡುತ್ತಿದೆ ಎಂದರು.
ಸರ್ವರ ಅಭಿವೃದ್ಧಿಯೇ ಮೂಲಮಂತ್ರವಾಗಿ ಸರ್ಕಾರ ಕಾರ್ಯನಿರ್ವಹಿಸುತ್ತಿದ್ದು, ಇದು ನಮ್ಮ ಸರ್ಕಾರದ ದಿಕ್ಸೂಚಿಯಾಗಿದೆ. ನಮ್ಮ ಪ್ರಣಾಳಿಕೆಗೆ ಅನುಗುಣವಾಗಿ ನಡೆದುಕೊಂಡಿದ್ದೇವೆ. ಜನರಿಗೆ ನೀಡಿರುವ ಪ್ರತಿ ಯೋಜನೆಯ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ಹಾಗಾಗಿಯೇ ಜನೋತ್ಸವ ಆಯೋಜಿಸಲಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವ ಮೂಲಕ ಸಹಕರಿಸುವಂತೆ ಮನವಿಮಾಡಿದರು.
ಬಲಹೀನ ಪ್ರದೇಶದಲ್ಲಿಯೇ ಬಲಪ್ರದರ್ಶನ ನಡೆಯಲಿದೆ
ಕೊರಟಗೆರೆಯಲ್ಲಿ ಮಾತಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಬಲಹೀನವಾಗಿರುವ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದಲೇ ಲಕ್ಷಾಂತರ ಜನರು ಜನೋತ್ಸವದಲ್ಲಿ ಭಾಗವಹಿಸಲಿದ್ದು, ಡಬಲ್ ಇಂಜಿನ್ ಸರ್ಕಾರದ ಬಗ್ಗೆ ರಾಜ್ಯದ ಜನತೆಗೆ ಸ್ಪಷ್ಟ ಸಂದೇಶ ನೀಡಲಿದ್ದಾರೆ ಎಂದರು.
ಪಕ್ಷದ ಶಕ್ತಿ ಕಡಿಮೆ ಇರುವ ಪ್ರದೇಶದಲ್ಲಿಯೇ ಮೊದಲ ಸಮಾವೇಶ ನಡೆಯುತ್ತಿದೆ. ಇಲ್ಲಿ ಭಾಗವಹಿಸುವ ಜನಸಾಗರ ನೀಡುವ ಸಂದೇಶ ಇಡೀ ರಾಜ್ಯಕ್ಕೆ ಅರಿವಾಗಲಿದೆ. ಈ ರಾಜ್ಯದ ಜನರು ಸರ್ಕಾರದ ಆಡಳಿತ, ಕಾರ್ಯವೈಖರಿ ಇಷ್ಟಪಟ್ಟಿದ್ದಾರೆ ಎಂಬ ಸಂದೇಶ ಸ್ಪಷ್ಟವಾಗಲಿದೆ ಎಂದು ಹೇಳಿದರು.
ಅಲ್ಲದೆ ಜನಪರ ಆಡಳಿತ ನೀಡುತ್ತಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮುಂದುವರಿಸಬೇಕು ಮತ್ತು ಮುಂದುವರಿಸುತ್ತಾರೆ ಎಂಬ ಸಂದೇಶ ಇಲ್ಲಿಂದ ನೀಡಬೇಕು. ಹೆಚ್ಚಿನ ಜನರು ಸೇರುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಪಕ್ಷದ ಘನತೆ ಮತ್ತು ಗೌರವ ಎತ್ತಿಹಿಡಿಯುವ ಕೆಲಸ ಮಾಡಬೇಕು, ಶಿಸ್ತಿನಿಂದ ವರ್ತಿಸುವ ಮೂಲಕ ಪಕ್ಷದ ಗೌರವ ಎತ್ತಿಹಿಡಿಯಬೇಕು, ಜನರ ವಿಶ್ವಾಸಕ್ಕೆ ಸದಾ ಋಣಿಯಾಗಿದ್ದೇನೆ, ಪಕ್ಷ ಸಂಘಟನೆ ಮೂಲಕ ಒಗ್ಗಟ್ಟು ಪ್ರದರ್ಶಿಸುತ್ತಿರುವುದು ಕಾರ್ಯಕರ್ತರ ಶಿಸ್ತಿಗೆ ನಿದರ್ಶನವಾಗಿದೆ. ಹಾಗಾಗಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನಿಗೂ ನಾನು ಋಣಿಯಾಗಿದ್ದೇನೆ ಎಂದರು.




