ಪರಿಶೀಲಿಸಿ ಅನರ್ಹ ರೇಷನ್ ಕಾರ್ಡ್‌ಗಳನ್ನು ರದ್ದು ಮಾಡಲಾಗುವುದು: ಕೆ.ಹೆಚ್‌ ಮುನಿಯಪ್ಪ

1 year ago

ಬೆಂಗಳೂರು: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಶೀಲನೆ ಮಾಡಿ ಅನರ್ಹ ರೇಷನ್ ಕಾರ್ಡ್‌ಗಳನ್ನು ರದ್ದು ಮಾಡಲಾಗುವುದು ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ.ಹೆಚ್‌ ಮುನಿಯಪ್ಪ ಮೇಲ್ಮನೆಯಲ್ಲಿ ತಿಳಿಸಿದ್ದಾರೆ.

ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್‌ನ ತಿಪ್ಪೇಸ್ವಾಮಿ ಪ್ರಶ್ನೆ ಕೇಳಿ ರೇಷನ್ ಕಾರ್ಡ್ ಹಂಚಿಕೆಯಲ್ಲಿ ಗೊಂದಲವಾಗಿದೆ. ಸಾವಿರಾರು ರೇಷನ್ ಕಾರ್ಡ್ ರದ್ದಾಗಿದೆ. ಈ ಗೊಂದಲ ಸರಿ ಮಾಡಿ, ಮಾಹಿತಿ ಪ್ರಕಾರ 25 ಲಕ್ಷ ರೇಷನ್ ಕಾರ್ಡ್ ರದ್ದಾಗಿದೆ ಎಂದು ಆರೋಪಿಸಿದರು.

ಇದಕ್ಕೆ ಉತ್ತರ ನೀಡಿದ ಸಚಿವ ಮುನಿಯಪ್ಪ, ಆಹಾರ ಭದ್ರತಾ ಕಾಯ್ಡೆ ಯುಪಿಎ ಸರ್ಕಾರ ಜಾರಿ ಮಾಡಿತು. ಕರ್ನಾಟಕದಲ್ಲಿ 2014 ಎಲ್ಲಿ ಜಾರಿ ಆಯ್ತು? ಎಪಿಎಲ್ ,ಬಿಪಿಎಲ್  ಕಾರ್ಡ್‌ಗಳು ಸೇರಿ ಒಟ್ಟು 1,53,64,648 ಕಾರ್ಡ್ ಗೆ ರೇಷನ್ ಕೊಡಲಾಗುತ್ತಿದೆ. ಒಟ್ಟು 5,29,01,752 ಫಲಾನುಭವಿಗಳಿಗೆ ರೇಷನ್ ಕೊಡಲಾಗುತ್ತದೆ. ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಿಲ್ಲ. ಆದಾಯ 1.20 ಲಕ್ಷ ಇರುವವರಿಗೆ, ತೆರಿಗೆ ಕಟ್ಟುವವರಿಗೆ ಮಾತ್ರ ಕಾರ್ಡ್ ರದ್ದು ಆಗಿದೆ. ಉಳಿದ ಯಾರಿಗೂ ಕಾರ್ಡ್ ರದ್ದು ಮಾಡುವುದಿಲ್ಲ ಎಂದು ಭರವಸೆ ನೀಡಿದರು.

ಎಪಿಎಲ್ ಕಾರ್ಡ್ ಗೆ ರೇಷನ್ ಕೊಡುವುದನ್ನು ಈಗ ನಿಲ್ಲಿಸಿದ್ದೇವೆ‌. 25 ಲಕ್ಷ ಕಾರ್ಡ್ ನಲ್ಲಿ 1 ಲಕ್ಷ ಕಾರ್ಡ್ ಜನರು ಮಾತ್ರ ರೇಷನ್ ತೆಗೆದುಕೊಳ್ಳುತ್ತಿದ್ದರು. ಹೀಗಾಗಿ ಸದ್ಯಕ್ಕೆ ಎಪಿಎಲ್  ಕಾರ್ಡ್ ಗೆ ರೇಷನ್ ಕೊಡ್ತಿಲ್ಲ ಎಂದು ಸ್ಪಷ್ಟನೆ ನೀಡಿದರು.

ಎಪಿಎಲ್  ಕಾರ್ಡ್ ಅರ್ಹತೆ ಇರುವವರು ಬಿಪಿಎಲ್ ಲ ಕಾರ್ಡ್ ಪಡೆದಿದ್ದಾರೆ. ಈ ರೀತಿ 20% ಕಾರ್ಡ್ ಗಳು ರಾಜ್ಯದಲ್ಲಿವೆ. ಇದನ್ನು ಪರಿಷ್ಕರಣೆ ಮಾಡೋಕೆ ಮುಂದಾಗಿದ್ದೇವೆ. ಆದರೆ ಗೊಂದಲ ಆಯ್ತು, ಹೀಗಾಗಿ ಸದ್ಯಕ್ಕೆ ಪರಿಷ್ಕರಣೆ ನಿಲ್ಲಿಸಿದ್ದೇನೆ. ಗ್ರಾಮ ಪಂಚಾಯತಿ ಮಟ್ಟದಲ್ಲಿ ಇದನ್ನ ಸರಿಯಾಗಿ ಪರಿಶೀಲನೆ ಮಾಡಿ ಪರಿಷ್ಕರಣೆ ಮಾಡುತ್ತೇವೆ ಬಿಪಿಎಲ್ ಕಾರ್ಡ್ ಒಬ್ಬರಿಗೂ ಸಮಸ್ಯೆ ಇಲ್ಲದಂತೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು.

ಕರ್ನಾಟಕದಲ್ಲಿ ರೇಷನ್ ಕಾರ್ಡ್ ಹೆಚ್ಚಾಗುತ್ತಿರುವುದಕ್ಕೆ ಎಲ್ಲಾ ಸರ್ಕಾರಗಳು ಕಾರಣ. ಅದರಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಂತ ಇಲ್ಲ. ಈಗ ಕಾರ್ಡ್ ಪರಿಷ್ಕರಣೆ ಮಾಡಿದರೆ ಗೊಂದಲ ಆಗಿದೆ. ಇದಕ್ಕೂ ರಾಜಕೀಯ ಪಕ್ಷಗಳು ಕಾರಣ ಆಗುತ್ತದೆ. ಹೀಗಾಗಿ ಕೂಲಂಕಷವಾಗಿ ಪರಿಶೀಲಿಸಿ ಪರಿಷ್ಕರಣೆ ಮಾಡ್ತೀವಿ. ಗ್ರಾಮ ಪಂಚಾಯತಿ ಮಟ್ಟದಲ್ಲಿ ಸರಿಯಾಗಿ ಮಾಹಿತಿ ಪರಿಶೀಲನೆ ಮಾಡಿ ಬಿಪಿಎಲ್ ಕಾರ್ಡ್ ಪರಿಷ್ಕರಣೆ ಮಾಡ್ತೀವಿ. ಬಳಿಕ ಎಪಿಎಲ್ ಕಾರ್ಡ್ ಪರಿಷ್ಕರಣೆ ಮಾಡುವ ಕೆಲಸ ಮಾಡುತ್ತೇವೆ ಎಂದರು.

Leave a Reply