900 ಕೋಟಿ ವೆಚ್ಚದಲ್ಲಿ ಮಂಡ್ಯ ವರ್ತುಲ ರಸ್ತೆ ಯೋಜನೆ ಕೈಗೆತ್ತಿಕೊಳ್ಳಲು ಕೇಂದ್ರದ ಸಮ್ಮತಿ

1 year ago

ದೆಹಲಿ: ಮಂಡ್ಯ ನಗರ ವರ್ತುಲ ರಸ್ತೆಯನ್ನು ಅದಷ್ಟು ಬೇಗ ಕೈಗೆತ್ತಿಕೊಂಡು ಅನುಷ್ಠಾನಕ್ಕೆ ತರುವ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಚರ್ಚಿಸಿದರು.

ಸಂಸತ್ ಭವನದಲ್ಲಿರುವ ಗಡ್ಕರಿ ಅವರ ನಿವಾಸಕ್ಕೆ ತೆರಳಿ ಭೇಟಿಯಾದ ಎಚ್ ಡಿ ಕುಮಾರಸ್ವಾಮಿ, ಈಗಾಗಲೇ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ ಯೋಜನೆಗೆ ಡಿಪಿಆರ್ ಮಾಡಿದೆ. ಆದರೆ ಪ್ರಾಧಿಕಾರದ ಅಂದಾಜು ವೆಚ್ಚ ಯೋಜನೆಗೆ ಸಾಕಾಗುವುದಿಲ್ಲ. ₹900 ಕೋಟಿ ವೆಚ್ಚದ ಪರಿಷ್ಕೃತ ಯೋಜನೆಗೆ ಒಪ್ಪಿಗೆ ಕೊಟ್ಟು ಅನುಷ್ಠಾನಗೊಳಿಸಬೇಕು ಎಂದು ಸಚಿವರು ಮಾಡಿದ ಮನವಿಗೆ ನಿತಿನ್ ಗಡ್ಕರಿ ಸಕಾರಾತ್ಮಕವಾಗಿ ಸ್ಪಂದಿಸಿದರು.

ಈ ಬಗ್ಗೆ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಎಚ್ ಡಿ ಕುಮಾರಸ್ವಾಮಿ, ಭೂಸ್ವಾಧೀನಕ್ಕೆ ₹550 ಕೋಟಿ ಹಾಗೂ ನಿರ್ಮಾಣ ಕಾರ್ಯಕ್ಕೆ ₹350 ಕೋಟಿ ಬೇಕಾಗುತ್ತದೆ. ಹೀಗಾಗಿ ಯೋಜನೆಗೆ ₹900 ಕೋಟಿ ಅಗತ್ಯವಿದೆ ಎಂಬುದನ್ನು ಗಡ್ಕರಿ ಅವರಿಗೆ ಮನವರಿಕೆ ಮಾಡಿಕೊಟ್ಟರು.

ವರ್ತುಲ ರಸ್ತೆ ಯೋಜನೆ ಅನುಷ್ಠಾನಗೊಂಡರೆ ಮಂಡ್ಯ ನಗರದ ಬೆಳವಣಿಗೆ, ಅಭಿವೃದ್ಧಿಗೆ ಬಹಳ ಅನುಕೂಲ ಆಗುತ್ತದೆ ಎಂಬುದನ್ನು ಸಚಿವರಿಗೆ ಕುಮಾರಸ್ವಾಮಿ ವಿವರಿಸಿದರು.

ಜೇವರ್ಗಿ- ಚಾಮರಾಜನಗರ ನಡುವೆ ಮೇಲುಕೋಟೆ ವಿಧಾನಸಭೆ ಕ್ಷೇತ್ರದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯನ್ನು ದ್ವಿಪಥದಿಂದ ಚತುಷ್ಪಥ ಹೆದ್ದಾರಿಯನ್ನಾಗಿ ಅಭಿವೃದ್ಧಿ ಮಾಡುವ ಬಗ್ಗೆಯು ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚೆ ನಡೆಸಿದರು.

ಜೇವರ್ಗಿ- ಚಾಮರಾಜನಗರ ನಡುವೆ ಪಾಂಡವಪುರದ ಹಾಡುವ ಹೆದ್ದಾರಿ 150ಎ ದ್ವಿಪಥ ಹೆದ್ದಾರಿಯನ್ನು 597-560ರಿಂದ 606-670 ಕಿ.ಮೀ.ಚತುಷ್ಪಥ ಹೆದ್ದಾರಿಯನ್ನಾಗಿ ಅಭಿವೃದ್ಧಿಪಡಿಸಲು ಒಪ್ಪಿಗೆ ಕೊಡಬೇಕು ಹಾಗೂ ಪಾಂಡವಪುರ ರೈಲು ನಿಲ್ದಾಣದ ಬಳಿ ಇರುವ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಣೆ ಮಾಡುವ ರೈತರ ಅನುಕೂಲಕ್ಕಾಗಿ ಹೆದ್ದಾರಿ ಪಕ್ಷದಲ್ಲಿಯೇ ಟ್ರಕ್ ವೆ (Truck way) ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿದರು.

ಇತ್ತೀಚೆಗೆ ತಾವು ಯೋಜನೆಯ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿದಾಗ ಸ್ಥಳೀಯ ಜನರು ಈ ಬಗ್ಗೆ ಮನವಿ ಮಾಡಿದ್ದರು. ಅಲ್ಲದೆ, ಖುದ್ದು ಸ್ಥಳದಲ್ಲಿ ಪರಿಶೀಲನೆಯನ್ನು ನಡೆಸಿದ್ದೇನೆ. ಹೀಗಾಗಿ ಟ್ರಕ್ ವೆ ನಿರ್ಮಾಣ ಅಗತ್ಯವಾಗಿ ಆಗಬೇಕಿದೆ ಎಂದು ಗಡ್ಕರಿ ಅವರಿಗೆ ಹೇಳಿದರು.

ಹೆದ್ದಾರಿಯನ್ನು ನಾಲ್ಕು ಪಥಕ್ಕೆ ಅಭಿವೃದ್ಧಿ ಮಾಡುವುದರಿಂದ ಈ ಭಾಗದ ಅಭಿವೃದ್ಧಿ, ಸರಕು ಸಾಗಣೆಗೆ ಅನುಕೂಲ ಆಗುತ್ತದೆ. ವ್ಯಾಪಾರ ವಾಣಿಜ್ಯ ಚಟುವಟಿಕೆಗಳಿಗೆ ಉತ್ತೇಜನ ದೊರೆಯುತ್ತದೆ ಎಂದು ಕುಮಾರಸ್ವಾಮಿ ಅವರು ಗಡ್ಕರಿ ಅವರ ಗಮನ ಸೆಳೆದರು.

ಅಲ್ಲದೆ, ಕೋಲಾರ ಲೋಕಸಭೆ ಕ್ಷೇತ್ರವೂ ಸೇರಿ ಕರ್ನಾಟಕದ ಹಲವಾರು ಹೆದ್ದಾರಿ ಯೋಜನೆಗಳ ಮಂಜೂರಾತಿ ಹಾಗೂ ಚಾಲ್ತಿಯಲ್ಲಿರುವ ಯೋಜನೆಗಳನ್ನು ವೇಗಗತಿಯಲ್ಲಿ ಅನುಷ್ಠಾನಗೊಳಿಸುವ ಬಗ್ಗೆ ಗಡ್ಕರಿ ಅವರೊಂದಿಗೆ ಸಚಿವರು ಮಾತುಕತೆ ನಡೆಸಿದರು.

ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಉತ್ತಮ ಆರಂಭ ಸಿಕ್ಕಿದೆ. ಈಗಾಗಲೇ ನಿತಿನ್ ಗಡ್ಕರಿ ಅವರ ಸಹಕಾರದಿಂದ ಜಿಲೆಯಲ್ಲಿ ಹಾದು ಹೋಗುವ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿ ಮಾಡುವ ಕೆಲಸಕ್ಕೆ ಚಾಲನೆ ಸಿಕ್ಕಿದೆ. ₹900 ಕೋಟಿ ವೆಚ್ಚದಲ್ಲಿ ಮಂಡ್ಯ ನಗರ ವರ್ತುಲ ಅಭಿವೃದ್ಧಿಗೆ ಚಾಲನೆ ಸಿಗುತ್ತಿರುವುದು ನನಗೆ ಬಹಳ ಸಂತೋಷ ಉಂಟು ಮಾಡಿದೆ. ಮಂಡ್ಯ ನಗರವು ಉತ್ತಮ ಸಾರಿಗೆ ವ್ಯವಸ್ಥೆಯಿಂದ ಮುಂಚೂಣಿ ನಗರವಾಗಿ ರೂಪುಗೊಳ್ಳಬೇಕು ಎಂಬುದು ನನ್ನ ಕನಸಾಗಿದೆ ಎಂದು ಸಿ ಎಸ್ ಪುಟ್ಟರಾಜು ಹರ್ಷ ವ್ಯಕ್ತಪಡಿಸಿದರು

ಹೆಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯ ಸಂಸದರಾಗಿ ಆಯ್ಕೆಯಾಗಿ ಕೇಂದ್ರದಲ್ಲಿ ಸಂಪುಟ ದರ್ಜೆ ಸಚಿವರಾದ ಮೇಲೆ ಮಂಡ್ಯದ ಲೋಕಸಭೆ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ಸಿಕ್ಕಿದೆ. ಈಗಾಗಲೇ ಹಲವಾರು ಹೆದ್ದಾರಿ ಅಭಿವೃದ್ಧಿ ಯೋಜನೆಗಳಿಗೆ ಮಂಜೂರಾತಿ ಸಿಕ್ಕಿದೆ. ಮಂಡ್ಯ ನಗರದ ವರ್ತುಲ ರಸ್ತೆ ₹900 ಕೋಟಿ ವೆಚ್ಚದಲ್ಲಿ ಅನುಷ್ಠಾನ ಆಗುತ್ತಿದೆ. ಪಾಂಡವಪುರ ಭಾಗದ ಹೆದ್ದಾರಿಗಳನ್ನು ಮೇಲ್ದರ್ಜೆಗೆ ಏರಿಸುವ ಕೆಲಸ ವೇಗವಾಗಿ ಆಗುತ್ತಿದೆ. ಹಿಂದೆಂದೂ ಇಲ್ಲದಷ್ಟು ವೇಗವಾಗಿ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿವೆ ಎಂದರು.

Leave a Reply