ಮಂಗಳೂರು: ಗಣರಾಜ್ಯೋತ್ಸವದ ಪೆರೇಡ್ ಗಾಗಿ ಕೇರಳ ಸರಕಾರ ಆಯೋಜಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ದಚಿತ್ರವನ್ನು ಕೇಂದ್ರ ಸರ್ಕಾರದ ಗಣರಾಜ್ಯೋತ್ಸವ ಸಮಿತಿಯು ತಿರಸ್ಕರಿಸಿರುವುದನ್ನು CPIM ದ.ಕ.ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸಿದೆ.
ಒಂದೇ ಜಾತಿ, ಒಂದೇ ಮತ, ಒಂದೇ ದೇವರು – ಜಾತಿ ಮತ ಯಾವುದಾದರೇನು ಮನುಷ್ಯ ಒಳ್ಳೆಯವನಾದರೆ ಸಾಕು ಎಂಬ ಅತ್ಯಂತ ಶ್ರೇಷ್ಠವಾದ ಮಾನವೀಯ ಸಂದೇಶವನ್ನು ಜಗತ್ತಿಗೆ ಸಾರಿದ, ಜಾತಿ ತಾರತಮ್ಯ ಮೂಢನಂಬಿಕೆಗಳ ವಿರುದ್ದ ಧ್ವನಿ ಎತ್ತಿ ಸಮಾಜದ ಸುಧಾರಣೆಗೆ ದೊಡ್ಡ ಕೊಡುಗೆ ನೀಡಿದ, ಕೋಟ್ಯಾಂತರ ಜನತೆಯ ಹೃದಯ ಗೆದ್ದ ಮಹಾನ್ ಚೇತನ ನಾರಾಯಣಗುರುಗಳ ಸ್ತಬ್ಧಚಿತ್ರವನ್ನು ನಿರಾಕರಿಸುವ ಮೂಲಕ ಸಮಾನತೆಯ ಚಿಂತನೆ ಹಾಗೂ ಹಿಂದುಳಿದ ವರ್ಗಗಳ ಸ್ವಾಭಿಮಾನವನ್ನು ಅವಮಾನಿಸಿದೆ ಎಂದಿದೆ.
ಜೊತೆಗೆ, ಶಂಕರಾಚಾರ್ಯರ ಪ್ರತಿಮೆಯ ಸ್ತಬ್ದಚಿತ್ರವನ್ನು ಮಾಡಲು ಸೂಚಿಸಿರುವುದು ಶ್ರೇಣೀಕೃತ ಜಾತಿ ವ್ಯವಸ್ಥೆಯ ಹಿತಾಸಕ್ತಿಯನ್ನು ಕೇಂದ್ರದ ಬಿಜೆಪಿ ಸರಕಾರ ಹೊಂದಿರುವುದನ್ನು ಎತ್ತಿ ತೋರಿಸಿದೆ. ಇದು ಆಡಳಿತದಲ್ಲಿ ಆರ್.ಎಸ್.ಎಸ್ ಚಿಂತನೆಗಳು ಮೇಲುಗೈ ಸಾಧಿಸಿರುವುದರ ಪರಿಣಾಮ. ಕೇಂದ್ರ ಸರಕಾರವು ತಕ್ಷಣ ಆಗಿರುವ ಪ್ರಮಾದವನ್ನು ಸರಿಪಡಿಸಿ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಅವಕಾಶ ನೀಡಬೇಕು ಎಂದು CPIM ದ.ಕ.ಜಿಲ್ಲಾ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.



