ಬೆಂಗಳೂರು: ಚುನಾವಣಾ ವರ್ಷವೆಂದು ಅಗ್ಗದ ಜನಪ್ರಿಯ ಯೋಜನೆಗಳ ಬದಲಿಗೆ ರೈತರು, ಮಹಿಳೆಯರು, ದೀನ ದಲಿತರು, ಹಿಂದುಳಿದವರು, ದುಡಿಯುವ ವರ್ಗಕ್ಕೆ ಹೆಚ್ಚು ಒತ್ತು ನೀಡುವ ಜನಪರವಾದ ಬಜೆಟ್ ಮಂಡಿಸಲಿದ್ದೇನೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹುತಾತ್ಮ ದಿನದ ಅಂಗವಾಗಿ ಮಹಾತ್ಮಾ ಗಾಂಧಿಜೀ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ತೀರ್ಮಾನಿಸಿದಂತೆ ಫೆ.17 ರಂದು ಬಜೆಟ್ ಮಂಡನೆ ಮಾಡಲಿದ್ದೇನೆ. ಈ ಬಾರಿಯ ಬಜೆಟ್ನಲ್ಲಿ ಎಲ್ಲರಿಗೂ ನ್ಯಾಯ ಸಿಗಲಿದೆ ಎಂದರು.
ಬಜೆಟ್ ನಲ್ಲಿ ಪ್ರತಿಯೊಂದು ವರ್ಗಕ್ಕೂ ಸಾಮಾಜಿಕ ನ್ಯಾಯ ಒದಗಿಸಲಾಗುವುದು, ಈಗಾಗಲೇ ಇದಕ್ಕೆ ಅಗತ್ಯವಾದ ಸಿದ್ದತೆಗಳನ್ನು ಸಹ ಕೈಗೊಳ್ಳಲಾಗಿದೆ. ಇಲಾಖಾವಾರು ಸಭೆಗಳನ್ನು ಮಾಡಲಾಗುತ್ತಿದೆ. ಈ ಮೂಲಕ ಇದೊಂದು ಜನಪರವಾದ ಬಜೆಟ್ ಆಗಲಿದೆ. ಎಲ್ಲರ ನಿರೀಕ್ಷೆಗಳನ್ನು ಈಡೇರಿಸಲಿದೆ ಎಂಬ ವಿಶ್ವಾಸವಿದೆ ಎಂದರು.




