ಅರ್ಹರಿಂದ ಅರ್ಜಿ ಪಡೆದು ಮತ್ತೆ ಬಿಪಿಎಲ್ ಪಡಿತರ ಚೀಟಿಗಳನ್ನು ನೀಡಲಾಗುವುದು: ಡಿ ಕೆ ಶಿವಕುಮಾರ್

1 year ago

ಬೆಂಗಳೂರು: ಅರ್ಹರಿಂದ ಅರ್ಜಿ ಪಡೆದು ಮತ್ತೆ ಬಿಪಿಎಲ್ ಪಡಿತರ ಚೀಟಿಗಳನ್ನು ನೀಡಲಾಗುವುದು. ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ  ಅವರು, ಕೇಂದ್ರ ಸರ್ಕಾರದ ನಿಯಮಾವಳಿಗಳ ಅನುಸಾರ ಬಿಪಿಎಲ್ ಕಾರ್ಡ್ ಗಳ ಪರಿಷ್ಕರಣೆ ನಡೆಯುತ್ತಿದೆ. ಕಾರ್ಡ್ ಗಳು ರದ್ದಾದ ಅರ್ಹರು ಆತಂಕಕ್ಕೆ ಒಳಗಾಗುವುದು ಬೇಡ. ಅರ್ಹರಿಂದ ಮತ್ತೆ ಅರ್ಜಿ ಪಡೆದು ಬಿಪಿಎಲ್ ಕಾರ್ಡ್ ಮಾಡಿಕೊಡಲಾಗುವುದು ಎಂದರು.

ಕೇಂದ್ರ ಸರ್ಕಾರ ರೂಪಿಸುವ ನಿಯಮಾವಳಿಗಳ ಪ್ರಕಾರ, ವಾಹನ ಹೊಂದಿರುವವರು, 7.50 ಎಕರೆ ಜಮೀನು ಹೊಂದಿರುವವರು ಬಿಪಿಎಲ್ ವ್ಯಾಪ್ತಿಗೊಳಪಡುವುದಿಲ್ಲ. ಕೆಲವು ಆದಾಯ ತೆರಿಗೆ ಪಾವತಿದಾರರು, ಸಹಕಾರ ಸಂಘಗಳ ಖಾಯಂ ಅಧಿಕಾರಿಗಳು, ಸರ್ಕಾರಿ ನೌಕರರು ಬಿಪಿಎಲ್ ಪಡೆದಿದ್ದಾರೆ. ಕೆಲವರು ಪ್ರಮಾಣ ಪತ್ರ ಸಲ್ಲಿಸುವಾಗ ಈ ಮಾಹಿತಿಗಳು ಸಿಕ್ಕಿವೆ. ಒಂದು ಊರಿನಲ್ಲಿ 10-20 ಅರ್ಹರ ಕಾರ್ಡ್ ಗಳು ರದ್ದುಗೊಂಡಿವೆ. ಇದನ್ನೆಲ್ಲಾ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.

ಹಿಂದೆ ಅರ್ಜಿ ಸಲ್ಲಿಸಿದಾಗ ಪರಿಶೀಲನೆ ನಡೆಸಿ ಕಾರ್ಡ್ ನೀಡಲಾಗಿತ್ತು. ಮನೆಮನೆ ಸಮೀಕ್ಷೆಗಳು ನಡೆದಿಲ್ಲ. ನಮ್ಮ ಸರ್ಕಾರ ಇರುವುದೇ ಬಡವರಿಗಾಗಿ. ಅವರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ದಾಖಲೆಗಳನ್ನು ಆಧರಿಸಿ ಕ್ರಮ ಕೈಗೊಂಡಾಗ ಕೆಲವರಿಗೆ ತೊಂದರೆಯಾಗಿದೆ. ಸಹಕಾರ ನೀಡಿದರೆ ಮುಂದಿನ ದಿನಗಳಲ್ಲಿ ಸರಿಪಡಿಸಲಾಗುವುದು ಎಂದರು.

ಮುಖ್ಯಮಂತ್ರಿಯವರು ಈಗಾಗಲೇ ಸಚಿವರಿಗೆ, ಶಾಸಕರಿಗೆ ಸೂಚನೆ ನೀಡಿದ್ದಾರೆ. ಶಾಸಕರು ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಲ್ಲಿಕೆಯ ಪದಾಧಿಕಾರಿಗಳು ಖುದ್ದಾಗಿ ಹೋಗಿ ಅರ್ಹರಿಗೆ ಅನ್ಯಾಯವಾಗಿದ್ದರೆ ಅದನ್ನು ಸರಿಪಡಿಸಲಿದ್ದಾರೆ ಎಂದರು.

Leave a Reply