ಬೆಂಗಳೂರು: ರಾಜಧಾನಿ ಬೆಂಗಳೂರಿನ ವೈಟ್ಫೀಲ್ಡ್ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ,ಕೇವಲ ಟ್ರಯಲ್ ಮಾತ್ರ. ಸ್ಫೋಟ ಪ್ರಕರಣದಲ್ಲಿ ಬಂಧಿತ ಇಬ್ಬರು ಶಂಕಿತ ಉಗ್ರರು ರಾಜ್ಯದ ಪ್ರಮುಖ ನಗರಗಳು ಹಾಗೂ ದೇಶದ ಹಲವೆಡೆ ವಿಧ್ವಂಸಕ ನಡೆಸಲು ತಯಾರಿ ನಡೆಸಿದ್ದರು. ದೊಡ್ಡ ಪ್ರಮಾಣದಲ್ಲಿ ಸ್ಪೋಟ ನಡೆಸುವ ಮುನ್ನ ಪೂರ್ವಭಾವಿಯಾಗಿ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಪೋಟ ನಡೆಸಲಾಯಿತು ಎಂಬ ಆತಂಕಕಾರಿ ಸಂಗತಿಯನ್ನು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಇನ್ನೂ ಹಲವು ರಾಜ್ಯಗಳಲ್ಲಿ ಮತ್ತಷ್ಟು ಬಾಂಬ್ ಸ್ಫೋಟಿಸುವ ಯೋಜನೆಯನ್ನು ಬಂಧಿತ ಶಂಕಿತ ಉಗ್ರರು ರೂಪಿಸಿ ಬಾಂಬ್ ತಯಾರಿಕೆ ಬಗ್ಗೆ ತರಬೇತಿ, ತಪ್ಪಿಸಿಕೊಳ್ಳುವ ಕಲೆ, ಪ್ರಯಾಣದ ಮ್ಯಾಪ್ ಮೊದಲೇ ಸಿದ್ದ ಮಾಡಿಕೊಂಡಿರುವುದನ್ನು ರಾಷ್ಟ್ರೀಯ ತನಿಖಾ ದಳ ಪತ್ತೆ ಹಚ್ಚಿದ್ದಾರೆ.
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟಿಸಿ 43 ದಿನಗಳಿಂದ ರಾಜ್ಯದಿಂದ ರಾಜ್ಯಕ್ಕೆ ಪರಾರಿಯಾಗುತ್ತಾ ತಲೆಮರೆಸಿಕೊಂಡಿದ್ದ ಮುಸಾವೀರ್ ಹುಸೇನ್ ಶಾಜೀಬ್ ಹಾಗೂ ಅಬ್ದುಲ್ ಮಥೀನ್ ಅಹಮದ್ ವಿಚಾರಣೆ ವೇಳೆ ಅನೇಕ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ.
ಶಂಕಿತ ಉಗ್ರರು ಬಾಂಬ್ ತಯಾರಿಸಿದ ಸ್ಥಳ ಯಾವುದು, ಅವರಿಗೆ ಸಹಾಯ ಮಾಡಿದವರು ಯಾರು, ಮೊದಲಿಗೆ ರಾಮೇಶ್ವರಂ ಕೆಫೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು, ಇನ್ನಷ್ಟು ಸ್ಫೋಟಗಳನ್ನು ಎಲ್ಲಿ ಮಾಡಲು ಉದ್ದೇಶಿಸಲಾಗಿತ್ತು ಎನ್ನುವುದರ ಕುರಿತು ಮಾಹಿತಿ ಸಂಗ್ರಹಿಸಿರುವ ಎನ್ಐಎ ತಂಡ ತನಿಖೆ ತೀವ್ರಗೊಳಿಸಿದೆ.
ರಾಮೇಶ್ವರಂ ಕೆರೆಯಲ್ಲಿ ಸ್ಫೋಟ ನಡೆಸಿ ಇಲ್ಲಿಂದ ಪರಾರಿಯಾದ ಅಬ್ದುಲ್ ಮತೀನ್ ತಾಹ ಚೆನ್ನೈಯಲ್ಲಿ ವಿಘ್ನೇಶ್, ಕೋಲ್ಕತ್ತಾದಲ್ಲಿ ಅನ್ಮೂಲ್ ಕುಲಕರ್ಣಿ ಮುಂತಾದ ನಕಲಿ ಹೆಸರುಗಳಿಂದ ತಲೆ ಮರೆಸಿಕೊಂಡಿದ್ದ. ಇನ್ನು ಬಾಂಬ್ ಇಟ್ಟ ಮುಸಾವೀರ್ ಹುಸೇನ್ ಶಾಜೀಬ್ ಚೆನ್ನೈಯಲ್ಲಿ ಮಹಮ್ಮದ್ ಜುನೈದ್ ಸೈಯದ್, ಕೋಲ್ಕತ್ತಾದಲ್ಲಿ ಯುಶು ಶಹನವಾಜ್ ಪಾಟೀಲ್ ಇತ್ಯಾದಿ ಹೆಸರುಗಳನ್ನಿಟ್ಟುಕೊಂಡು ಓಡಾಡುತ್ತಿದ್ದ. ಹೀಗೆ ಹೀಗೆ ಒಂದೊಂದು ಕಡೆ ಒಂದೊಂದು ಹೆಸರಲ್ಲಿ ಕಣ್ತಪ್ಪಿಸಿ ಆರೋಪಿಗಳು ಓಡಾಡುತ್ತಿದ್ದರು.
ತಮ್ಮ ಗುರುತು ಮರೆಮಾಚಲು ಇವರು ನಕಲಿ ಅಧಾರ್ ಕಾರ್ಡ್ ಬಳಕೆ ಮಾಡುತ್ತಿದ್ದರು. ಕೊನೆಗೂ ಈ ನಕಲಿ ಕಾರ್ಡ್ ಬಳಕೆಯೇ ಆರೋಪಿಗಳ ಬಂಧನದ ಮುಖ್ಯ ಕಾರಣಗಳಲ್ಲಿ ಒಂದಾಗಿದೆ.
ಪಶ್ಚಿಮ ಬಂಗಾಳದಲ್ಲಿ ನಕಲಿ ಆಧಾರ್ ಕಾರ್ಡ್ ಬಳಕೆದಾರರ ಸಂಖ್ಯೆ ಹೆಚ್ಚಿದೆ. ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿರುವ ಅಕ್ರಮ ಬಾಂಗ್ಲಾ ವಲಸಿಗರು ಹೆಚ್ಚಾಗಿ ನಕಲಿ ಆಧಾರ್ ಕಾರ್ಡ್ ಬಳಸುತ್ತಿದ್ದು, ಇದು ವ್ಯಾಪಕವಾಗಿದೆ. ಹೀಗಾಗಿ ಇವರು ಇದೇ ಭಾಗಗಳಲ್ಲಿ ಇರಬಹುದು ಎನ್ನುವ ಶಂಕೆ ಇತ್ತು. ಇದೇ ಶಂಕೆಯ ಆಧಾರದಲ್ಲಿ ಎನ್ಐಎ ಕಾರ್ಯಾಚರಣೆ ಮುಂದುವರಸಿತ್ತು.
ಕಳೆದ 12 ದಿನಗಳಿಂದ ಕೋಲ್ಕತ್ತಾದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳು, ಅಲ್ಲೂ ಒಂದೇ ಕಡೆ ಇರದೆ ಲಾಡ್ಜ್ಗಳನ್ನು ಬದಲಿಸುತ್ತಿದ್ದರು. ಕೋಲ್ಕತ್ತಾದ ಮಿಧಿನಾಪುರದ ಹಲವು ಲಾಡ್ಜ್ಗಳಲ್ಲಿ ತಂಗಿದ್ದ ಆರೋಪಿಗಳು ಪ್ರತಿ ಎರಡು ಮೂರು ದಿನಗಳಿಗೊಮ್ಮೆ ವಾಸ್ತವ್ಯ ಬದಲಿಸುತ್ತಿದ್ದರು. ಎರಡು ದಿನಗಳ ಹಿಂದೆಯಷ್ಟೆ ಮಿಡ್ನಾಪುರ ದೀಘಾ ಬಳಿ ಲಾಡ್ಜ್ ಬದಲಾಯಿಸಿದ್ದ ಆರೋಪಿಗಳು ಕೋಲ್ಕತ್ತಾದ ಹೊಟೇಲ್ ಪ್ಯಾರಡೈಸ್, ಲೇನಿನ್ ಸೇರಾನಿ ಸೇರಿ ಹಲವು ಹೊಟೇಲ್ಗಳಲ್ಲಿ ತಂಗಿದ್ದರು.
ಸಂಜಯ್ ಅಗರವಾಲ್, ಉದಯ್ ದಾಸ್, ಯಶು ಪಟೇಲ್, ವಿಘ್ನೇಶ ಹೀಗೆ ನಾನಾ ನಕಲಿ ಹೆಸರುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಮುಸಾವೀರ್ ಹುಸೇನ್ ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲೆಯ ನಕಲಿ ಆಧಾರ್ ಕಾರ್ಡ್ ನೀಡಿದ್ದ. ಕರ್ನಾಟಕದ ವಿಘ್ನೇಶ್ ಹಾಗೂ ಅಮೋಲ್ ಕುಲಕರ್ಣಿ ಹೆಸರಿನಲ್ಲಿ ಮತೀನ್ ತಾಹ ನಕಲಿ ದಾಖಲಾತಿ ನೀಡಿದ್ದ. ಹೊಟೇಲ್ ಸಿಬ್ಬಂದಿ ಬಳಿ ತಮ್ಮ ಹೆಸರುಗಳು ಸಂಜಯ್ ಅಗರ್ವಾಲ್ ಹಾಗು ಉದಯ್ ದಾಸ್ ಎಂದು ತಾವು ಜಾರ್ಖಂಡ್ ಹಾಗು ತ್ರಿಪುರಾ ಮೂಲದವರು ಎಂದು ಹೇಳಿಕೊಂಡಿದ್ದರು.
ರಾಮೇಶ್ವರಂ ಕೆಫೆ ಬಾಂಬ್ ತಯಾರಿಸಿದ್ದು ಅಬ್ದುಲ್ ಮತೀನ್ ತಾಹಾ ಎಂಬುದು ಗೊತ್ತಾಗಿದೆ. ಎಂಜಿನಿಯರಿಂಗ್ ಪದವೀಧರನಾಗಿದ್ದ ಅಬ್ದುಲ್ ತಾಹಾ, ಬಾಂಬ್ ತಯಾರಿಕೆ ಮಾಹಿತಿ ಹೊಂದಿದ್ದ. ಈತ ಇತರರಿಗೂ ಈ ವಿಷಯದಲ್ಲಿ ತರಬೇತಿಯನ್ನು ನೀಡುತ್ತಿದ್ದ. ತಾಹಾ ತಯಾರಿ ಮಾಡಿಕೊಟ್ಟ ಬಾಂಬನ್ನೇ ರಾಮೇಶ್ವರಂ ಕೆಫೆಯಲ್ಲಿ ಮುಸಾವೀರ್ ಇಟ್ಟಿದ್ದ ಎಂದು ಗೊತ್ತಾಗಿದೆ.
ಬಾಂಬ್ ಇಟ್ಟ ಮುಸಾವೀರ್ ಹುಸೇನ್ ಶಾಜೀಬ್ ತೀರ್ಥಹಳ್ಳಿಯ ಮಧ್ಯಮವರ್ಗದ ಕುಟುಂಬದವನಾಗಿದ್ದಾನೆ. ತೀರ್ಥಹಳ್ಳಿಯಲ್ಲಿ ತಾಯಿ ಮಾತ್ರ ವಾಸವಾಗಿದ್ದು, ಮನೆ ಬಾಡಿಗೆಯೇ ಮುಸಾವೀರ್ ಕುಟುಂಬಕ್ಕೆ ಆಧಾರವಾಗಿದೆ.
ಈತ ಸಾಂಪ್ರದಾಯಿಕ ಉದ್ದನೆಯ ಬಿಳಿ ನಿಲುವಂಗಿಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ. ಈತ ಸ್ಥಳೀಯರ ಜೊತೆ ಹೆಚ್ಚು ಬೆರೆಯುತ್ತಿರಲಿಲ್ಲ. ಸ್ಥಳೀಯರಿಗೆ ಹೆಚ್ಚು ಪರಿಚಯವಿಲ್ಲದ ಈತ ತನ್ನ ಸಮುದಾಯದವರು ಇರುವ ಒಂದೆರಡು ಸ್ಥಳಗಳಲ್ಲಿ ಮಾತ್ರ ಓಡಾಡುತ್ತಿದ್ದ.
ಕೆಫೆ ಬ್ಲಾಸ್ಟ್ ಮಾಸ್ಟರ್ ಮೈಂಡ್ ಆಗಿರುವ ಅಬ್ದುಲ್ ಮತೀನ್ ತಾಹಾನ ತಂದೆ ದೇಶಕ್ಕಾಗಿ ಹೋರಾಡಿದ ಯೋಧರಾಗಿದ್ದವರು. ವರ್ಷದ ಹಿಂದೆ ಅವರು ಮೃತಪಟ್ಟಿದ್ದಾರೆ. ತಾಹ ಅತ್ಯಂತ ಚುರುಕಾದ ಎಂಜಿನಿಯರಿಂಗ್ ಪದವೀಧರನಾಗಿದ್ದು, ತೀರ್ಥಹಳ್ಳಿಯಲ್ಲಿ ಪ್ರೌಢಶಾಲೆ ಮುಗಿಸಿ ಬೆಂಗಳೂರಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದ. ಬೆಂಗಳೂರಿಗೆ ಬಂದ ವೇಳೆ ಉಗ್ರರ ಸಂಪರ್ಕಕ್ಕೆ ಬಂದಿದ್ದ. ಪೋಷಕರಿಗೆ ಒಬ್ಬನೇ ಮಗನಾಗಿರುವ ಈತ ಐಇಡಿ ಬಾಂಬ್ ತಯಾರಿಕೆಯ ನಿಷ್ಣಾತನಾಗಿದ್ದ.
ಮಂಗಳೂರು ಕುಕ್ಕರ್ ಬ್ಲಾಸ್ಟ್, ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ಗಳ ಮಾಸ್ಟರ್ ಮೈಂಡ್ ಕೂಡ ಆಗಿರುವ ಮತೀನ್ ತಾಹ ಕಳೆದ ನಾಲ್ಕು ವರ್ಷಗಳಿಂದ ನಾಪತ್ತೆಯಾಗಿದ್ದ. ಈ ಹಿಂದೆ ಎನ್ಐಎ ತಾಹನ ಪತ್ತೆಗೆ ಮೂರು ಲಕ್ಷ ರಿವಾರ್ಡ್ ಘೋಷಿಸಿತ್ತು. ರಾಮೇಶ್ವರಂ ಕೆಫೆ ಸ್ಪೋಟದ ಬಳಿಕ ಹತ್ತು ಲಕ್ಷ ಬಹುಮಾನ ಘೋಷಿಸಲಾಗಿದ್ದು, ಮುಸಾವೀರ್ ಜೊತೆಗೆ ಸಿಕ್ಕಿಬಿದ್ದಿದ್ದಾನೆ.




