ಬಿಜೆಪಿಯಲ್ಲಿ ಕಾಡುತ್ತಿದೆ ಹೊಂದಾಣಿಕೆಯ ಸಮಸ್ಯೆ

2 years ago

#BJP #problem

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಬೆಳಗಾವಿ ಪಾಲಿಟಿಕ್ಸ್ ದೊಡ್ಡಮಟ್ಟದಲ್ಲಿ ಸುದ್ದಿ ಮಾಡತೊಡಗಿದೆ ಈ ಬಾರಿ ವಿವಾದಕ್ಕೆ ಸಿಲುಕಿರುವುದು ಬಿಜೆಪಿ. ಇದಕ್ಕೆ ಪ್ರಮುಖ ಕಾರಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸೋದರ ಹಾಗೂ ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರ ಬೆಂಬಲಿಗರಿಂದ ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರ ಆಪ್ತ ಹಾಗೂ ಬಿಜೆಪಿ ಮುಖಂಡ ಪೃಥ್ವಿಸಿಂಗ್ ಪೃಥ್ವಿ ಮೇಲೆ ನಡೆದ ದಾಳಿ ಮತ್ತು ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಬೆಳಗಾವಿ ಬಿಜೆಪಿ ಮುಖಂಡ ಅಭಿಜಿತ್ ಜವಳ್ಕರ್ ಪ್ರಕರಣ. ಇದರ ಸಂಬಂಧ ಪ್ರತಿಪಕ್ಷ ನಾಯಕ ಆರ್. ಅಶೋಕ್ ನಿಲುವಿಗೆ ಇದೀಗ ಹಲವು ಶಾಸಕರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಅದರಲ್ಲೂ ಏಕವಚನದಲ್ಲಿ ವಾಗ್ದಾಳಿ ಮಟ್ಟಕ್ಕೂ ಅಸಮಾಧಾನ ವ್ಯಕ್ತವಾಗಿದೆ. ಇದಕ್ಕೆ ಸುವರ್ಣ ವಿಧಾನ ಸೌಧ ಸಾಕ್ಷಿಯಾಗಿದೆ.

ವಿಧಾನಸಭೆ ಕಲಾಪದಲ್ಲಿ ಬಿಜೆಪಿ ಮುಖಂಡ ಹಾಗೂ ರಮೇಶ ಜಾರಕಿಹೊಳಿ ಆಪ್ತ ಪೃಥ್ವಿಸಿಂಗ್ ಮೇಲೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ತಮ್ಮ, ವಿಧಾನ ಪರಿಷತ್ತಿನ ಸದಸ್ಯ ಚನ್ನರಾಜ ಹಟ್ಟಿಹೊಳಿ ಮತ್ತಿತರರು ಆಯುಧಗಳಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದ ಪ್ರಕರಣದಲ್ಲಿ, ಜವಳಕರ್ ಅವರನ್ನೇ ಬಂಧಿಸಿದ್ದನ್ನು ಆರ್. ಅಶೋಕ, ಅಭಯ ಪಾಟೀಲ, ಬಸನಗೌಡ ಪಾಟೀಲ ಯತ್ನಾಳ ಅವರು ಶೂನ್ಯವೇಳೆಯಲ್ಲಿ ಪ್ರಶ್ನಿಸಿದ್ದರು.

ಗುರುವಾರ ನಡೆದ ಕಲಾಪದಲ್ಲಿ, ಗೃಹ ಸಚಿವ ಜಿ. ಪರಮೇಶ್ವರ ಉತ್ತರ ನೀಡಿದರು. ಈ ಉತ್ತರ ವಿರೋಧಿಸಿ ಅಭಯ್ ಪಾಟೀಲ್, ಎಸ್.ಆರ್. ವಿಶ್ವನಾಥ್, ಸುನಿಲ್ ಕುಮಾರ್ ಮೊದಲಾದವರು ಸಭಾಧ್ಯಕ್ಷರ ಪೀಠದ ಮುಂದೆ ಧರಣಿಗೆ ಮುಂದಾದರೆ, ಪ್ರತಿಪಕ್ಷ ನಾಯಕ ಆರ್.ಅಶೋಕ್ ಸಭಾತ್ಯಾಗದ ನಿರ್ಧಾರ ಕೈಗೊಂಡರು. ಇದು ಅಭಯ್ ಪಾಟೀಲ್ ಸೇರಿದಂತೆ ಹಲವು ಶಾಸಕರನ್ನು ಕೆರಳಿಸಿತು. ಬಹಿರಂಗವಾಗಿಯೇ ಅವರೆಲ್ಲಾ ಪ್ರತಿಪಕ್ಷ ನಾಯಕ ಅಶೋಕ್ ವಿರುದ್ಧ ಅಸಮಾಧಾನ ಹೊರಹಾಕಿದರು.

ಬಿಜೆಪಿ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಅವರ ನೇಮಕವಾಗಿತ್ತು ಮತ್ತು ವಿರೋಧ ಪಕ್ಷದ ನಾಯಕರಾಗಿ ಆರ್. ಅಶೋಕ ಅವರ ಆಯ್ಕೆ ಮಾಡಿರುವ ಕ್ರಮದ ವಿರುದ್ಧ ಅಸಮಾಧಾನಗೊಂಡ ಹಲವು ನಾಯಕರು ಈ ರೀತಿಯಲ್ಲಿ ತಮ್ಮ ಬೇಸರ ಹೊರ ಹಾಕುತ್ತಿರುವುದು ಪಕ್ಷದ ನಾಯಕತ್ವಕ್ಕೆ ದೊಡ್ಡ ರೀತಿಯಲ್ಲಿ ಮುಜುಗರ ಪಡುವಂತೆ ಮಾಡುತ್ತಿದೆ.

ಇದನ್ನು ನಿವಾರಿಸುವ ಸಲುವಾಗಿ ಪ್ರತಿಪಕ್ಷ ನಾಯಕ ಅಶೋಕ್ ಮತ್ತು ಪಕ್ಷದ ಅಧ್ಯಕ್ಷ ವಿಜಯೇಂದ್ರ ಅವರು ಈ ಬೆಳಿಗ್ಗೆ ಶಾಸಕಾಂಗ ಪಕ್ಷದ ಸಭೆ ನಡೆಸಲು ತೀರ್ಮಾನಿಸಿ ಹಲವು ಶಾಸಕರನ್ನು ಸಭೆಗೆ ಬರುವಂತೆ ಆಹ್ವಾನಿಸಿದರು. ಆದರೆ,ಅಭಯ್ ಪಾಟೀಲ್, ಬಸನಗೌಡ ಪಾಟೀಲ್ ಯತ್ನಾಳ್, ಎಸ್.ಆರ್.ವಿಶ್ವನಾಥ್, ಅರವಿಂದ ಬೆಲ್ಲದ ಸೇರಿದಂತೆ ಹಲವರು ಸಭೆಗೆ ಬರುವುದಿಲ್ಲ ಎಂದು ತಿಳಿಸಿದರು. ಇದು ನಾಯಕರ ನಿದ್ದೆಗೆಡುವಂತೆ ಮಾಡಿತು.

ಒಂದು ವೇಳೆ ತಾವು ಸಭೆ ಕರೆದು ಇವರು ಗೈರು ಹಾಜರಾದರೆ ಅದೇ ದೊಡ್ಡ ಸುದ್ದಿಯಾಗುತ್ತದೆ ಎಂದು ಭಾವಿಸಿ ಸದ್ಯಕ್ಕೆ ಸಭೆ ನಡೆಸದಿರುವ ತೀರ್ಮಾನಕ್ಕೆ ಬಂದರು ಎಂದು ವರದಿಯಾಗಿದೆ.

ಈ ಎಲ್ಲ ಬೆಳವಣಿಗೆಗಳ ಕುರಿತು ಪ್ರತಿಕ್ರಿಯೆ ನೀಡಿದ ವಿಪಕ್ಷ ನಾಯಕ ಆರ್.ಅಶೋಕ್, ಬೆಳಗಾವಿ ವಿದ್ಯಮಾನದ ವಿಚಾರದಲ್ಲಿ ಸಮನ್ವಯ ಕೊರತೆಯಿಂದ ಕೆಲವು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರ ಜತೆ ಮಾತನಾಡುತ್ತೇನೆ ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆಯಲ್ಲಿ ಧರಣಿ ಮಾಡುವ ಮೂಲಕ ಸುಮ್ಮನೆ ಸಮಯ ವ್ಯರ್ಥ ಮಾಡುವುದು ಬೇಡ ಎಂದು ಎಲ್ಲರೂ ಹೇಳಿದ್ದರು. ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಚರ್ಚೆಯಾಗಬೇಕು ಎಂಬ ಹಿನ್ನೆಲೆಯಲ್ಲಿ ನಾನು, ಯತ್ನಾಳ್, ವಿಜಯೇಂದ್ರ, ಅಶ್ವತ್ಥ್ನಾರಾಯಣ ಸೇರಿ ಬೆಳಗಾವಿಯ ಪೊಲೀಸ್ ದೌರ್ಜನ್ಯದ ಬಗ್ಗೆ ಸಭಾತ್ಯಾಗ ನಡೆಸುವ ತೀರ್ಮಾನ ಮಾಡಿದ್ದೆವು ಎಂದು ಸ್ಪಷ್ಟೀಕರಣ ನೀಡಿದರು.

ನಮ್ಮ ತೀರ್ಮಾನವನ್ನು ಹಿಂದಿನ ಸಾಲಿನಲ್ಲಿ ಇದ್ದವರಿಗೆ ತಲುಪಿಸಲಾಗಿಲ್ಲ. ಸಮನ್ವಯ ಕೊರತೆಯಿಂದ ಈ ರೀತಿಯಾಗಿದೆ. ಯಾರು ಏನೇ ಹೇಳಿದರೂ ಅದು ಅವರ ವೈಯುಕ್ತಿಕ ಅಭಿಪ್ರಾಯ. ಅಸಮಾಧಾನಗೊಂಡ ಶಾಸಕರನ್ನು ಕರೆಸಿ ಮಾತನಾಡುತ್ತೇನೆ ಎಂದರು.

ಸೋಮವಾರ ಸದನದಲ್ಲಿ ಭ್ರೂಣಹತ್ಯೆ, ಡಿಕೆಶಿ ವಿರುದ್ಧದ ಸಿಬಿಐ ಅನುಮತಿ ವಾಪಸ್, ಸಚಿವ ಜಮೀರ್ ಅಹಮದ್ ಅವರ ಸಭಾಧ್ಯಕ್ಷರ ಸ್ಥಾನದ ಬಗೆಗಿನ ಹೇಳಿಕೆ ವಿಚಾರ ಪ್ರಸ್ತಾಪ, ಉತ್ತರ ಕರ್ನಾಟಕ ಭಾಗದ ಚರ್ಚೆ ಸೇರಿದಂತೆ ಎಲ್ಲವನ್ನು ಸದನದಲ್ಲಿ ಚರ್ಚೆ ಮಾಡುತ್ತೇವೆ ಎಂದರು.

ಈ ಎಲ್ಲ ಬೆಳವಣಿಗೆಗಳ ನಡುವೆ ಸುದ್ದಿಗಾರರೊಂದಿಗೆ ಮಾತಾಡಿದ ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿಯಲ್ಲಿ ಹೊಂದಾಣಿಕೆ ರಾಜಕೀಯ ಇದೆ ಎಂದು ನಾನು ಮೊದಲಿನಿಂದಲೂ ಹೇಳುತ್ತಿದ್ದೇನೆ. ಈಗಲೂ ಅದೇ ಆಗುತ್ತಿದೆ ಎಂದರು.

Leave a Reply