ಬೆಂಗಳೂರು: ಸರ್ಕಾರಿ ಶಾಲೆ ಮಾರುವ ಬಿಜೆಪಿ ಕನ್ನಡಿಗರಿಗೆ ಬೇಕಾ? ಎಂದು ಸಾಮಾಜಿಕ ಹೋರಾಟಗಾರ ಕೆ.ನ.ಲಿ.ಗೌಡ ಪ್ರಶ್ನಿಸಿದ್ದಾರೆ.
ಚಿಕ್ಕಪೇಟೆಯ ಸರ್ಕಾರಿ ಶಾಲೆಯನ್ನು ರಾಜ್ಯ ಸರ್ಕಾರ ಮಾರಾಟಕ್ಕಿಟ್ಟಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಅವರು, ಬಡವರು, ಅಸಹಾಯಕರ ಮಕ್ಕಳು ಓದಲಿರುವ ಈ ಶಾಲೆಗಳ ಬಗೆಗೆ ಅತೀವ ಕಾಳಜಿ ಅಗತ್ಯ ಇದೆ ಎಂದಿದ್ದಾರೆ. ಇವತ್ತು ಖಾಸಗಿ ಶಿಕ್ಷಣ, ಲಾಬಿಗಳಿಂದ ಮಕ್ಕಳ ಕೊರತೆಯನ್ನು ಎದುರಿಸುತ್ತಿರುವ ಸಾವಿರಾರು ಸರ್ಕಾರೀ ಶಾಲೆಗಳು ಹೊರೆ ಎಂದು ಹೇಳಿ ಮಾರಿದರೆ ನಾಳಿನ ಭವಿಷ್ಯದ ಗತಿ ಏನು ಯೋಚಿಸಿ ಕನ್ನಡಿಗರೇ…! ಎಂದು ಜನರಲ್ಲಿ ಮನವಿ ಮಾಡಿದ್ದಾರೆ.
ಆಂಧ್ರ, ತಮಿಳುನಾಡು, ಕೇರಳಗಳಲ್ಲಿ ಮಾದರೀ ಸರ್ಕಾರಿ ಶಾಲೆಗಳ ಉಳಿಸಿ ಆಧುನೀಕರಿಸಿ ಮತ್ತೆ ಜನರ ಆಕರ್ಷಣೆಯಿಂದ ಮಕ್ಕಳ ಸೆಳೆಯುವಲ್ಲಿ ಯಶಸ್ವಿಯಾಗುತ್ತಿವೆ. ಕಾರಣ ಅಲ್ಲಿ ಸ್ಥಳೀಯ ಭಾಷೆಗೆ ಒತ್ತು ಕೊಡುವ ಪ್ರಾದೇಶಿಕ ಪಕ್ಷಗಳು ಆಡಳಿತದಲ್ಲಿವೆ. ಕನ್ನಡಿಗರು ರಾಷ್ಟ್ರೀಯ ಪಕ್ಷಗಳ ನಂಬಿ ಮತ ಹಾಕಿ ಕರ್ನಾಟಕವನ್ನು ಉತ್ತರ ಭಾರತೀಯರು ನುಂಗಿ ನೀರು ಕುಡಿವ ಗೋಮಾಳಗಳನ್ನಾಗಿಸುವ ವ್ಯವಸ್ಥೆಗೆ ತಿಲಾಂಜಲಿ ಹಾಡದೇ ಹೋದರೆ ಕನ್ನಡ ಸರ್ಕಾರೀ ಶಾಲೆಗಳು, ಕನ್ನಡ ಭಾಷೆ, ಖಂಡಿತಾ ಹಾಳಾಗಲು ನೀವೇ ಜವಾಬ್ದಾರರಾಗುತ್ತೀರಿ ಎಚ್ಚರಿಕೆ ಎಂದಿದ್ದಾರೆ.



