ಮಂಗಳೂರು: ನಗರ ಉತ್ತರ ಕ್ಷೇತ್ರದ ಗ್ರಾಮೀಣ ಭಾಗವಾಗಿರುವ ಗುರುಪುರ ಹೋಬಳಿ ಭರತ್ ಶೆಟ್ಟಿ ಶಾಸಕರಾದ ಮೇಲೆ ಅಭಿವೃದ್ದಿ ಕಾರ್ಯದಲ್ಲಿ ಪೂರ್ತಿ ಹಿಂದೆ ಬಿದ್ದಿದೆ. ಹೊಸದಾಗಿ ಸರಕಾರಿ ಶಾಲೆ, ಕಾಲೇಜು ತೆರೆಯಲು, ಆಸ್ಪತ್ರೆ ಸ್ಥಾಪಿಸಲು ಶಾಸಕ ಭರತ್ ಶೆಟ್ಟರಿಂದ ಸಾಧ್ಯವಾಗಲಿಲ್ಲ. ಗುರುಪರ ಬ್ಲಾಕ್ ವ್ಯಾಪ್ತಿಯಲ್ಲಿರುವ ಎರಡು ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಬಿದ್ದಿರುವ ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡಲಾಗಲಿ, ಆರೋಗ್ಯ ಕೇಂದ್ರಗಳಿಗೆ ವೈದ್ಯರನ್ನು ನೇಮಿಸುವುದು, ಅಗತ್ಯ ಔಷಧಿಗಳನ್ನು ಒದಗಿಸುವುದಾಗಲಿ ಶಾಸಕರಿಂದ ಸಾಧ್ಯವಾಗಲಿಲ್ಲ. ಬಿಜೆಪಿ ಶಾಸಕ ಭರತ್ ಶೆಟ್ಟಿ ವೈಫಲ್ಯಕ್ಕೆ ಗುರುಪುರ ಹೋಬಳಿ ಬಲಿಯಾಗಿದೆ ಎಂದು ಸಿಪಿಐಎಂ ರಾಜ್ಯ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ ಆರೋಪಿಸಿದರು.
ಗುರುಪುರ ಕೈಕಂಬದಲ್ಲಿ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಸಿಐಟಿಯು ಗುರುಪುರ ಗ್ರಾಮ ಸಮಿತಿ ಆಯೋಜಿಸಿದ್ದ ಕಾರ್ಮಿಕ ರಂಗದ ಪ್ರಮುಖ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸಭೆಯಲ್ಲಿ ಭಾಗವಹಿಸಿದ CPIM ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸದಾಶಿವ ದಾಸ್ ಮಾತನಾಡುತ್ತಾ, ಜಿಲ್ಲೆಯ ಅಭಿವೃದ್ಧಿಗಾಗಿ ಎಳ್ಳಷ್ಟೂ ಕಾಳಜಿ ವಹಿಸದ ಬಿಜೆಪಿ ಮತ್ತೆ ಗೆಲುವು ಸಾಧಿಸಲು ಧರ್ಮ ರಾಜಕಾರಣದ ಮೊರೆ ಹೋಗಿದೆ.ಜನತೆಯ ಬದುಕಿನಲ್ಲಿ ಚೆಲ್ಲಾಟವಾಡುವ ಬಿಜೆಪಿಯನ್ನು ಹೀನಾಯವಾಗಿ ಸೋಲಿಸಲು ಎಲ್ಲಾ ವಿಭಾಗದ ಕಾರ್ಮಿಕರು ಪಣ ತೊಡಬೇಕು ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ CITU ಗುರುಪುರ ವಲಯ ಪ್ರಧಾನ ಕಾರ್ಯದರ್ಶಿ ನೋಣಯ್ಯ ಗೌಡರವರು ಪ್ರಸ್ತುತ ರಾಜಕೀಯ ಪರಿಸ್ಥಿತಿಯನ್ನು ವಿಶ್ಲೇಷಣೆ ಮಾಡಿದರು.
ಸಭೆಯಲ್ಲಿ CITU ನಾಯಕರಾದ ಯಶೋಧಾ ಮಳಲಿ,ಸದಾಶಿವ, ನಾಗೇಶ್, DYFI ನಾಯಕರಾದ ಶ್ರೀನಾಥ್ ಕಾಟಿಪಳ್ಳ ಮುಂತಾದವರು ಉಪಸ್ಥಿತರಿದ್ದರು.




