ಸಂವಿಧಾನ, ಕಾನೂನಿನ ಬಗ್ಗೆ ಮಾತಾಡುವಾಗ ಎಚ್ಚರ ಇರಲಿ: ಬಿ ಕೆ ಹರಿಪ್ರಸಾದ್

10 months ago

7 ವರ್ಷದ ಬಾಲಕಿ ಮೇಲೆ ಶಾಸಕನ ತಮ್ಮನಿಂದ ಅತ್ಯಾಚಾರ ಆದರೂ, ಆತನ ಪರವಾಗಿ ವಾದ ಮಾಡುತ್ತಾ, ಕೋರ್ಟ್​​ನಲ್ಲಿ ಕಣ್ಣೀರು, ಕರುಣೆಗಿಂತಲೂ ಮುಖ್ಯವಾಗಿ ಬೇಕಿರುವುದು ಸಾಕ್ಷಿಗಳು ಎಂದು ‘ಯುದ್ಧಕಾಂಡ’ ಸಿನಿಮಾದಲ್ಲಿ ಡೈಲಾಗ್ ಹೊಡೆಯುವ ಪ್ರಕಾಶ್ ಬೆಳವಾಡಿಯವರಿಗೆ ನಿಜ ಜೀವನದಲ್ಲಿ ಮಾತಾಡುವಾಗ ಸಾಕ್ಷಿ, ದಾಖಲೆಗಳಿಲ್ಲದೆ ಪುಂಗುವುದನ್ನು ರೂಢಿ ಮಾಡಿಕೊಂಡಂತಿದೆ.

“ಮೋದಿಯ ಚಮಚಾಗಿರಿ ಮಾಡುತ್ತೇನೆ” ಎಂದು ಬಹಿರಂಗವಾಗಿಯೇ ಘೋಷಿಸಿಕೊಂಡಿರುವ ಬೆಳವಾಡಿ, ಕನಿಷ್ಠಪಕ್ಷ ಮೋದಿ ಗುಜರಾತಿನಲ್ಲಿ ಶಾಸಕರಾಗಿ ಮುಖ್ಯಮಂತ್ರಿಯಾದರೋ, ಇಲ್ಲ ಮುಖ್ಯಮಂತ್ರಿಯಾದ ನಂತರ ಶಾಸಕರಾದರೋ ಎಂಬ ಕನಿಷ್ಠ ಇತಿಹಾಸವೂ ಗೊತ್ತಿಲ್ಲದೇ ಇರುವುದು ದುರಂತ.

ಸಂವಿಧಾನದಲ್ಲಿ ಪ್ರಧಾನಿಗಳ ಆಯ್ಕೆ, ಅಧಿಕಾರ ಹಾಗೂ ಇನ್ನಿತರೆ ವಿಷಯಗಳ ಬಗ್ಗೆ ವಿಧಿಗಳಿವೆ. ಅದರ ಬಗ್ಗೆ ಎಳ್ಳಷ್ಟು ಬೆಳವಾಡಿಗೆ ತಿಳುವಳಿಕೆ ಇಲ್ಲ. ಜ್ಞಾನವಂತೂ ಇಲ್ಲವೇ ಇಲ್ಲ. ಭಾರತದ ಪ್ರಜೆ, ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಸದಸ್ಯರಾಗಿದ್ದರೆ ದೇಶದ ಪ್ರಧಾನಿಯಾಗಲು ಅರ್ಹತೆ ಹೊಂದಿರುತ್ತಾರೆ. ಆದರೆ ನಿಮ್ಮಂತೆ ದಿವಾಳಿಯಂತೂ ಆಗಿರಬಾರದು.

ಸಂವಿಧಾನದ ಪ್ರಖಂಡ ಪಂಡಿತರಂತೆ, ಕಾನೂನು ತಜ್ಞರಂತೆ ಸಂವಿಧಾನದ ವಿಧಿ, ವಿಧಾನಗಳು ಹಾಗೂ ಕಾನೂನುಗಳ ಬಗ್ಗೆ ವಾಚಾಮಗೋಚರ ಹಲುಬಿರುವ ಬೆಳವಾಡಿಗೆ ದೇಶದ ಮೂಲೆಯ ಯಾವ ಪ್ರಜೆಯಾದರೂ ಪ್ರಧಾನಿಯಾಗುವ ಹಕ್ಕು, ಅಧಿಕಾರ, ಅರ್ಹತೆ  ಸಂವಿಧಾನವೇ ನೀಡಿದೆ ಎಂಬುದು ಗೊತ್ತಿಲ್ಲದೆ ಇರುವುದು ವಿಪರ್ಯಾಸ.

ರಾಜ್ಯಸಭೆಯ ಸದಸ್ಯರಾದವರು ಪ್ರಧಾನಿಯಾಗಬಾರದೆಂದು ಯಾವ ಸಂವಿಧಾನ, ಕಾನೂನಿನಲ್ಲಿದೆ ಎಂದು ಬೆಳವಾಡಿ ಜನರಿಗೆ ತಿಳಿಸಲಿ. ಜಗತ್ತು ಕಂಡ ಖ್ಯಾತ ಅರ್ಥಶಾಸ್ತ್ರಜ್ಞ ಡಾ.ಮನಮೋಹನ್ ಸಿಂಗ್ ಅವರು ಅಸ್ಸಾಂ ರಾಜ್ಯದಿಂದ ರಾಜ್ಯಸಭೆಗೆ ಸದಸ್ಯರಾಗಿ ಪ್ರಧಾನಿಯಾದದ್ದು ಯಾವ ಅಪರಾಧ? ಅಸ್ಸಾಂ ದೇಶದಲ್ಲಿರುವ ರಾಜ್ಯವಲ್ಲವೇ? ಕರ್ನಾಟಕದಿಂದಲೇ ಪ್ರಧಾನಿಯಾದ ಹೆಚ್ ಡಿ ದೇವೇಗೌಡರು ಕೂಡ ರಾಜ್ಯಸಭೆಯ ಸದಸ್ಯರಾಗಿಯೇ ಎನ್ನುವುದು ಬಹಿರಂಗ ಸತ್ಯವಲ್ಲವೇ?

ಖ್ಯಾತ ಪತ್ರಕರ್ತರಾದ ಕುಲದೀಪ್ ನಯ್ಯರ್ ಅವರು ಸುಪ್ರೀಂಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ದೇಶದ ಪ್ರಜೆಯಾದವರು ಯಾವ ರಾಜ್ಯದಿಂದಲೂ ರಾಜ್ಯಸಭೆ ಸದಸ್ಯರಾಗಲು ಅರ್ಹರು ಎಂದು ದಾವೆ ಹೂಡಿದ ನಂತರ ಸುಪ್ರೀಂಕೋರ್ಟ್ ಕೂಡ ಅದಕ್ಕೆ ಅವಕಾಶ ನೀಡಿದೆ. ಇದು “ಪ್ರಖಂಡ ಪಂಡಿತ” ಬೆಳವಾಡಿಗೆ ತಿಳಿದಿದೆಯೇ? ಸಂವಿಧಾನ, ಕಾನೂನಿನ ಬಗ್ಗೆ ಮಾತಾಡುವಾಗ ಎಚ್ಚರ ಇರಲಿ.

– ಬಿ ಕೆ ಹರಿಪ್ರಸಾದ್, ವಿಧಾನ ಪರಿಷತ್ ಸದಸ್ಯ

Leave a Reply