ರಾಜ್ಯದಲ್ಲಿದೆ 100 ಕೋಟಿ ಪುಟ ದಾಖಲೆ
ಈ ಪೈಕಿ 35.36 ಕೋಟಿ ಪುಟಗಳ ಸ್ಕ್ಯಾನ್
ವರ್ಷಾಂತ್ಯದೊಳಗೆ ಸ್ಕ್ಯಾನಿಂಗ್ ಪೂರ್ಣ
ಕಚೇರಿಗೆ ಅಲೆಯದೆ ಮನೆಯಿಂದಲೇ ಪಡೆಯಿರಿ ದಾಖಲೆ
ಬೆಂಗಳೂರು: ಸರ್ಕಾರಿ ಕಚೇರಿಗಳಿಗೆ ಅನಗತ್ಯ ಓಡಾಟ ಸೇರಿದಂತೆ ರೈತರನ್ನು ಶೋಷಿಸುವ ಎಲ್ಲಾ ವಿಚಾರಗಳಿಗೂ ಶಾಶ್ವತ ಪರಿಹಾರ ನೀಡುವುದು ಹಾಗೂ ಬೆರಳ ತುದಿಗೆ ರೆಕಾರ್ಡ್ ರೂಂ ತಲುಪಿಸುವುದೇ ʼಭೂ ಸುರಕ್ಷಾʼ ಅಭಿಯಾನದ ಮೂಲ ಧ್ಯೇಯ ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಡಳಿತ ಕಚೇರಿಯಲ್ಲಿರುವ ರೆಕಾರ್ಡ್ ರೂಂ ದಾಖಲೆಗಳನ್ನು “ಭೂ ಸುರಕ್ಷಾ” ಯೋಜನೆ ಅಡಿಯಲ್ಲಿ ಸ್ಕ್ಯಾನಿಂಗ್ ಮಾಡಿ ಡಿಜಿಟಲೀಕರಿಸುವ ಅಭಿಯಾನಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.
“ಭೂ ಮಂಜೂರಾತಿಗೆ ಸಂಬಂಧಿಸಿದ ಮೂಲ ದಾಖಲೆಗಳನ್ನು ಬಚ್ಚಿಡುವ ಹಾಗೂ ತಿದ್ದುವ ಮೂಲಕ ಬಡ ರೈತರನ್ನು ಶೋಷಿಸುವ ಕೆಲಸ ದಶಕಗಳಿಂದಲೂ ನಡೆಯುತ್ತಿದೆ. ಸರ್ಕಾರಿ ಕಚೇರಿ ಹಾಗೂ ಕೋರ್ಟು ಕೇಸು ಅಂತ ಅಲೆಯುವುದೇ ನೈಜ ರೈತರಿಗೆ ತಲೆನೋವಿನ ಕೆಲಸವಾಗಿದೆ. ಮತ್ತೊಂದೆಡೆ ಮಧ್ಯವರ್ತಿಗಳೂ ಸಹ ರೈತರನ್ನು ಇನ್ನಿಲ್ಲದಂತೆ ಶೋಷಿಸುತ್ತಿದ್ದಾರೆ. ಈ ಎಲ್ಲಾ ಶೋಷಣೆಗಳಿಂದ ಅನ್ನದಾತರಿಗೆ ನೆಮ್ಮದಿ ನೀಡಬೇಕು. ರೆಕಾರ್ಡ್ ರೂಂ ಅನ್ನು ಜನರ ಬೆರಳ ತುದಿಗೆ ತರಬೇಕು. ಜನರಿಗೆ ಸಿಗಬೇಕಾದ ಸೌಲಭ್ಯ ಸರಳ ಸುಳಲಿತವಾಗಿ ತೊಂದರೆ ಇಲ್ಲದಂತೆ ಲಭ್ಯವಾಗುವಂತಿರಬೇಕು ಎಂಬುದೇ ನಮ್ಮ ಉದ್ದೇಶ. ಹೀಗಾಗಿಯೇ “ಭೂ ಸುರಕ್ಷಾ” ಅಭಿಯಾನಕ್ಕೆ ಚಾಲನೆ ನೀಡಲಾಗಿದೆ” ಎಂದರು.
“ರಾಜ್ಯದ ಎಲ್ಲಾ ತಹಶೀಲ್ದಾರ್ ಕಚೇರಿಗಳಲ್ಲಿ ಭೂ ದಾಖಲೆಗೆ ಸಂಬಂಧಿಸಿ 100 ಕೋಟಿಗೂ ಅಧಿಕ ಭೂ ದಾಖಲೆಗಳಿವೆ ಎಂದು ಅಂದಾಜಿಸಲಾಗಿದೆ. ಈ ಪೈಕಿ 35.36 ಕೋಟಿ ಪುಟಗಳನ್ನು ಸ್ಕ್ಯಾನ್ ಮಾಡಲಾಗಿದೆ. ಇನ್ನೂ 35 ಕೋಟಿ ಪುಟಗಳು ಸ್ಕ್ಯಾನ್ಗೆ ಬಾಕಿ ಇದೆ. ಈ ಕೆಲಸ ತಹಶೀಲ್ದಾರ್ ಕಚೇರಿಗಷ್ಟೇ ಸೀಮಿತವಾಗದೆ ಎಸಿ-ಡಿಸಿ ಕಚೇರಿಯಲಿರುವ ದಾಖಲೆಗಳನ್ನೂ ಸ್ಕ್ಯಾನ್ ಮಾಡಲು ನಿರ್ಧರಿಸಲಾಗಿದೆ. ಇಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಮೂಲ ದಾಖಲೆಗಳನ್ನು ಸ್ಕ್ಯಾನ್ ಮಾಡುವ ಮೂಲಕ ಈ ಕೆಲಸಕ್ಕೂ ಅಧಿಕೃತವಾಗಿ ಚಾಲನೆ ನೀಡಲಾಗಿದೆ” ಎಂದರು.
ವರ್ಷಾಂತ್ಯದೊಳಗೆ ಸ್ಕ್ಯಾನಿಂಗ್ ಪೂರ್ಣ: ರಾಜ್ಯದ ಎಲ್ಲಾ ತಹಶೀಲ್ದಾರ್ ಕಚೇರಿಗಳಲ್ಲಿ ಪ್ರತಿದಿನ ಸರಾಸರಿಯಾಗಿ 10 ಸಾವಿರ ಪುಟಗಳನ್ನು ಸ್ಕ್ಯಾ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಕೆಲಸ ಮತ್ತಷ್ಟು ವೇಗ ಪಡೆಯಲಿದ್ದು, ಮುಂದಿನ ಡಿಸೆಂಬರ್ ಒಳಗೆ ತಹಶೀಲ್ದಾರ್ ಕಚೇರಿಯ ಎಲ್ಲಾ ಮೂಲ ದಾಖಲೆಗಳನ್ನು ಸ್ಕ್ಯಾನ್ ಮಾಡಲಾಗುವುದು. 2026 ಮಾರ್ಚ್ ವೇಳೆಗೆ ಎಸಿ (ಉಪ ವಿಭಾಗಾಧಿಕಾರಿ) ಕಚೇರಿ ರೆಕಾರ್ಡ್ ರೂಂ ಗಳಲ್ಲಿರುವ ದಾಖಲೆಗಳ ಸ್ಕ್ಯಾನಿಂಗ್ ಮುಗಿಸಲಾಗುವುದು ಎಂದರು.
ಕಚೇರಿಗೆ ಅಲೆಯದೆ ಮನೆಯಿಂದಲೇ ಪಡೆಯಿರಿ ದಾಖಲೆ: ಸ್ಕ್ಯಾನ್ ಮಾಡಿ ಡಿಜಿಟಲೀಕರಿಸಿದ ದಾಖಲೆಗಳನ್ನು ರೈತರು ಸರ್ಕಾರಿ ಕಚೇರಿಗಳಿಗೆ ಅಲೆಯದೆ ಮನೆಯಿಂದಲೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಪಡೆಯಬಹುದು. ರೈತರಿಗೆ ಮೊಬೈಲ್ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಗೊತ್ತಿಲ್ಲದಿದ್ದರೂ ಅವರು ಇನ್ಮುಂದೆ ತಹಶೀಲ್ದಾರ್ ಕಚೇರಿಗೆ ಅಲೆಯಬೇಕಿಲ್ಲ. ಪಕ್ಕದ ನಾಡ ಕಚೇರಿಗೆ ಬೇಕಿದ್ದರೂ ಹೋಗಿ ಅಲ್ಲಿನ ಅಧಿಕಾರಿಗಳ ಸಹಾಯದಿಂದ ಅರ್ಜಿ ಸಲ್ಲಿಸಬಹುದು. ಸ್ಥಳೀಯವಾಗಿ ಜನರಿಗೆ ಸಹಾಯವಾಗಬೇಕು ಎಂಬ ಕಾರಣಕ್ಕೆ ನಾಡ ಕಚೇರಿಯಲ್ಲಿ ಅರ್ಜಿ ಸಲ್ಲಿಸಲು ಇಂದಿನಿಂದ ಅವಕಾಶ ನೀಡಲಾಗಿದೆ. ಅಲ್ಲದೆ, ಈವರೆಗೆ ರಾಜ್ಯಾದ್ಯಂತ 4 ಲಕ್ಷ ದಾಖಲೆಗಳನ್ನು ಹೀಗೆ ಡಿಜಿಟಲ್ ರೂಪದಲ್ಲಿ ಜನರಿಗೆ ನೀಡಿದ್ದೇವೆ. ಜನ ಯಾವ ದಾಖಲೆ ಅರ್ಜಿ ಸಲ್ಲಿಸುತ್ತಾರೆ ಆ ದಾಖಲೆಯನ್ನೇ ಮೊದಲು ಸ್ಕ್ಯಾನ್ ಮಾಡುತ್ತೇವೆ ಎಂದರು.
ಭೂ ಸುರಕ್ಷಾ ಮೂಲಕ ಭೂ ಮಾಫಿಯಾಗೂ ಪೆಟ್ಟು: ಬೆಂಗಳೂರು ಸುತ್ತಮುತ್ತ ಅನೇಕ ದಾಖಲೆಗಳಲ್ಲಿ ಬೋಗಸ್ ಎಂಟ್ರಿ ಮಾಡಲಾಗಿದೆ. ಈ ಕೃತ್ಯದಲ್ಲಿ ಕೆಲವು ಅಧಿಕಾರಿಗಳ ಕೈವಾಡವೂ ಇದ್ದು, ಸರ್ಕಾರಕ್ಕೆ ಸಾವಿರಾರು ಕೋಟಿ ನಷ್ಟ ಉಂಟಾಗಿದೆ. ಅಲ್ಲದೆ, ಇಂತಹ ನಕಲಿ ದಾಖಲೆಗಳ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಸರ್ಕಾರಕ್ಕೂ ಸತತ ಸೋಲಾಗುತ್ತಿದೆ ಎಂದರು.
ಈ ಹಿಂದೆ ಕೆಲವು ಅಧಿಕಾರಿಗಳ ಕುಕ್ಕುತ್ಯದಿಂದ ಸಾರ್ವಜನಿಕ ಆಸ್ತಿ ವ್ಯವಸ್ಥಿತವಾಗಿ ಭೂ ದೋಚುವವರ ಪಾಲಾಗಿದೆ. ಇನ್ಮುಂದೆ ಇಂತಹ ಅನಾಹುತ ಆಗದಂತೆ ತಡೆಯಬೇಕು. ಈ ದಂಧೆಗೆ ಭೂ ಸುರಕ್ಷಾ ಯೋಜನೆಯ ಮೂಲಕ ಕಡಿವಾಣ ಹಾಕುತ್ತಿದ್ದೇವೆ. ಹಿಂದೆ ಆಗಿರುವ ನಕಲಿ ವ್ಯವಹಾರಗಳಿಗೆ ಸೋತು ನಾವು ಕೈಕಟ್ಟಿ ಕೂರಲು ಸಾಧ್ಯವಿಲ್ಲ. ದಾಖಲೆಗಳು ನಕಲಿ ಅಂತ ಗೊತ್ತಾದ್ರೆ ಪೋರೆನ್ಸಿಕ್ ಡಿಪಾರ್ಟ್ಮೆಂಟ್ಗೆ ನೀಡಿ ಅದನ್ನು ತನಿಖೆ ಮಾಡಿ ಅತ್ಯ-ಸುಳ್ಳುನ್ನು ಸಾಬೀತು ಮಾಡಬೇಕು ಎಂದು ಅಧಿಕಾರಿಗಳಿಗೆ ಹೇಳಲಾಗಿದೆ. ಎಫ್ಎಸ್ಎಲ್ ತಂಡ ಅಧ್ಯಯನ ನಡೆಸುವುದಕ್ಕೆ ಸಹಾಯವಾಗಲು ಪ್ರಾಯೋಗಿಕ ಕೊಠಡಿಗೆ (ಲ್ಯಾಬ್) ಅಗತ್ಯ ಹಣ ಸಹಾಯ ನೀಡಲೂ ಸಹ ನಾವು ಸಿದ್ದರಿದ್ದೇವೆ. ಸೋಲನ್ನು ಒಪ್ಪುವ ಪ್ರಶ್ನೆಯೇ ಇಲ್ಲ. ಬೋಗಸ್ ದಾಖಲೆ ಎಂದು ಗೊತ್ತಾದ್ರೆ ಸಪ್ರೀಂ ಕೋರ್ಟ್ವರೆಗೆ ಹೋರಾಟ ನಡೆಸುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಆಯುಕ್ತರಾದ ಸುನೀಲ್ ಕುಮಾರ್ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ್ ಉಪಸ್ಥಿತರಿದ್ದರು.




