ಬೆಂಗಳೂರು: ಪರಮಪೂಜ್ಯ ಆದಿಚುಂಚನಗಿರಿ ಮಠದ ಪರಮಭಕ್ತ ನಾನು. ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮಿಜೀರವರ ಮತ್ತು ನನ್ನ ನಡುವೆ ತಂದೆ, ಮಗನ ಸಂಬಂಧದಂತೆ ಇತ್ತು. ಶ್ರೀಗಳ ಕೃಪಾಶೀರ್ವಾದದಿಂದ ರಾಜಕೀಯ ರಂಗದಲ್ಲಿ ನನಗೆ ಶಕ್ತಿ ಬಂದಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಬಿ.ಜಿ.ಎಸ್.ಆಟದ ಮೈದಾನದಲ್ಲಿ ಪದ್ಮಭೂಷಣ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ 78ನೇ ಜಯಂತ್ಯುತ್ಸವ ಕಾರ್ಯಕ್ರಮ ಮತ್ತು ಸನ್ಮಾನ ಸಮಾರಂಭದಲ್ಲಿ ಮಾತಾಡಿದ ಅವರು,
ಇಂದು ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿರವರ 78ನೇ ಜಯಂತ್ಯುತ್ಸವ ಶುಭಾ ದಿನ. ಗೋವಿಂದರಾಜನಗರ, ವಿಜಯನಗರ ಭಾಗದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ದಿ ಪಡಿಸಲು ಶ್ರೀಗಳಾದ ಬಾಲಗಂಗಾಧರನಾಥ ಸ್ವಾಮಿಜೀರವರು ಕಾರಣ. ಪಾಳುಬಿದ್ದ ಜಾಗ ಮತ್ತು ಭೂಕಬಳಿಕೆದಾರರ ವಿರುದ್ಧ ಸತತ ಹೋರಾಟ ಮಾಡಿ ನ್ಯಾಯಲಯದಲ್ಲಿ ನಮ್ಮ ಪರ ತೀರ್ಮಾನ ಬಂದು ಸುಸ್ಜಜಿತ ಕ್ರೀಡಾಂಗಣವಾಗಲು ಶ್ರೀಗಳ ಆಶೀರ್ವಾದ ಕಾರಣ ಎಂದರು.
ಆದಿಚುಂಚನಗಿರಿ ಮತ್ತು ಸಿದ್ದಗಂಗಾ ಮಠ ಲಕ್ಷಾಂತರ ಮಕ್ಕಳಿಗೆ ಶಿಕ್ಷಣ ನೀಡಿ, ವಿದ್ಯಾವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಿದೆ. ದಾಸರಹಳ್ಳಿಯಲ್ಲಿ 300 ಹಾಸಿಗೆಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಬಾಲಗಂಗಾಧರನಾಥ ಸ್ವಾಮೀಜಿರವರು ಪ್ರೇರಣೆಯಾಗಿದ್ದಾರೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಬಾಲಗಂಗಾಧರನಾಥ ಸ್ವಾಮಿಜೀ ಹೆಸರು ನಾಮಕರಣ ಮಾಡಲಾಗುವುದು ಎಂದರು.
ಬಾಳಯ್ಯನಕೆರೆ 8ವಎಕರೆ ಜಾಗವನ್ನು ಶ್ರೀಗಳ ಆಶೀರ್ವಾದದಿಂದ ಭೂಕಬಳಿಕೆದಾರರಿಂದ ವಶಕ್ಕೆ ಪಡೆದು 5000 ಸಸಿಗಳನ್ನು ನೆಡಲಾಗಿದೆ. ಆದಿ ಚುಂಚನಗಿರಿ ಶ್ರೀ ಬಾಲಗಂಗಾಧರನಾಥ ಸ್ವಾಮಿಜೀರವರು, ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಜೀರವರು ನನ್ನ ಸಮಾಜ ಸೇವೆ, ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಲು ಸ್ಪೂರ್ತಿ, ಪೇರಣೆಯಾಗಿದ್ದಾರೆ ಎಂದರು.
ನಾಡೋಜ ಡಾ. ವೊಡೇ ಪಿ. ಕೃಷ್ಣ ಅಧ್ಯಕ್ಷರು, ಕರ್ನಾಟಕ ಗಾಂಧೀ ಸ್ಮಾರಕ ನಿಧಿ, ಡಾ.ಎಂ.ಜಿ.ನಾಗರಾಜ್ ಉಪಾಧ್ಯಕ್ಷರು, ಕರ್ನಾಟಕ ಇತಿಹಾಸ ಅಕಾಡೆಮಿ, ಡಾ. ಬಾನಂದೂರು ಕೆಂಪಯ್ಯ ಮಾಜಿ ಅಧ್ಯಕ್ಷರು, ಕರ್ನಾಟಕ ಜಾನಪದ ಅಕಾಡೆಮಿ, ಚಲನಚಿತ್ರ ಸಾಹಿತಿ ಸಿ.ವಿ.ಶಿವಶಂಕರ್, ಡಾ. ಎಸ್.ಜಿ. ಸುಶೀಲಮ್ಮ, ಸುಮಂಗಲಿ ಸೇವಾ ಆಶ್ರಮರವರಿಗೆ ಗೌರವ ಸಮರ್ಪಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಎಡೆಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ. ಶ್ರೀ ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಆದಿ ಚುಂಚನಗಿರಿ ಶಾಖಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ, ಡಾ. ದೊಡ್ಡರಂಗೇಗೌಡ, ವಿಧಾನಪರಿಷತ್ ಸದಸ್ಯ ಅ.ದೇವೇಗೌಡ, ವಿ. ಸೋಮಣ್ಣ ಪ್ರತಿಷ್ಠಾನ ಅಧ್ಯಕ್ಷರಾದ ಶೈಲಜಾ ಸೋಮಣ್ಣ, ಕನ್ನಡ ಪರ ಹೋರಾಟಗಾರ ಪಾಲನೇತ್ರ, ಪ್ರತಿಷ್ಠಾನದ ಡಾ.ನವೀನ್ ಸೋಮಣ್ಣ, ದಿವ್ಯ ಆವಿನಾಶ್, ವಿಶ್ವನಾಥಗೌಡ, ಗಂಗಭೈರಯ್ಯ, ರಾಮಪ್ಪ, ಕೆ.ಉಮೇಶ್ ಶೆಟ್ಟಿ, ಮೋಹನ್ ಕುಮಾರ್, ದಾಸೇಗೌಡ, ರೂಪ ಲಿಂಗೇಶ್ವರ್ ಮೊದಲಾದವರು ಪಾಲ್ಗೊಂಡಿದ್ದರು.




