ತೇಜಸ್ವಿ ಸೂರ್ಯ ಹತ್ಯೆಗೆ ಸಂಚು ರೂಪಿಸಿದ ಆರೋಪಿಯ ಬಂಧನ

2 years ago

ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಕೆಲವು ಬಿಜೆಪಿ ನಾಯಕರು ಮತ್ತು ಹಿಂದುತ್ವ ಪರ ಸಂಘಟನೆಗಳ ಕಾರ್ಯಕರ್ತರ ಹತ್ಯೆಗೆ ಸಂಚು ರೂಪಿಸಿದ್ದ ಪ್ರಮುಖ ಆರೋಪಿಯನ್ನು ಬೆಂಗಳೂರಿನ ಕಲಾಸಿಪಾಳ್ಯಂ ಪೊಲೀಸರು ಬಂಧಿಸಿದ್ದಾರೆ.

ಕಳೆದ 2019ರಲ್ಲಿ ಟೌನ್ ಹಾಲ್ ಬಳಿ ಸಿಎಎ ಬೆಂಬಲಿಸಿ ಕಾರ್ಯಕ್ರಮ ನಡೆದಿತ್ತು.ಈ ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿಸೂರ್ಯ, ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಕೆಲವು ನಾಯಕರು ಸಿಎಎ ಪರ ಭಾಷಣ ಮಾಡಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿ ತೆರಳುತ್ತಿದ್ದ ವರುಣ್ ಎಂಬಾತನ ಮಾರಣಾಂತಿಕ ಮೇಲೆ ನಡೆದಿತ್ತು.

ಘಟನೆ ನಂತರ 6 ಆರೋಪಿಗಳನ್ನ ಬಂಧಿಸಲಾಗಿತ್ತು. ಈ ವೇಳೆ ತಾವು ಸಂಸದ ತೇಜಸ್ವಿ ಸೂರ್ಯ ಅವರ ಹತ್ಯೆ ಮಾಡಲು ಬಂದಿದ್ದು, ಹಲ್ಲೆಗೊಳಗಾದ ವರುಣ್ ಅವರನ್ನು ತೇಜಸ್ವಿ ಸೂರ್ಯ ಎಂದು ಭಾವಿಸಿ ದಾಳಿ ಮಾಡಿದ್ದೆವು ಎಂದು ತಿಳಿಸಿದ್ದರು.

ಘಟನೆ ಸಂಬಂಧ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಂಧಿತರು ವಿಚಾರಣೆ ವೇಳೆ ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರ ಮೇಲೆ ದಾಳಿ ನಡೆಸಿ ಹತ್ಯೆ ಮಾಡಲು ನಡೆಸಿದ್ದ ಸಂಚಿನ ಸಂಪೂರ್ಣ ವಿವರ ನೀಡಿದ್ದರು.

ಈ ಸಂಚಿನ ಪ್ರಮುಖ ರೂವಾರಿ ಅಜರ್ ಎಂಬಾತನಿಗಾಗಿ ಹುಡುಕಾಟ ನಡೆದಿತ್ತು. ದಾಳಿಗೆ ಯತ್ನಿಸಿದವರು ಬಂಧಿತರಾಗಿದ್ದ ಸುದ್ದಿ ಹೊರಬೀಳುತ್ತಿದ್ದಂತೆ ನಾಪತ್ತೆಯಾಗಿದ್ದ ಅಜರ್ ಸೌದಿ ಅರೇಬಿಯಾದಲ್ಲಿ ನೆಲೆಸಿದ್ದ ಎನ್ನಲಾಗಿದೆ.

ಕಳೆದ ಎರಡು ವರ್ಷಗಳ ಹಿಂದೆ ಆತ ಸ್ವದೇಶಕ್ಕೆ ಹಿಂತಿರುಗಿದ್ದು, ಕೆಜಿಎಫ್ ನಲ್ಲಿ ವಾಸ್ತವ್ಯ ಹೂಡಿದ್ದ. ಅಲ್ಲಿ ಕಾರು ಡೀಲಿಂಗ್ ಮಾಡಿಕೊಂಡು ಜೀವನ ಮಾಡುತ್ತಿದ್ದ. ಈತ ಯಾವುದೇ ಅನುಮಾನ ಬಾರದಂತೆ ಕೆಲಸ ಮಾಡುತ್ತಿದ್ದ. ಈ ವೇಳೆ ಆತ ಶಂಕಿತ ಅಪರಾಧಿ ಒಬ್ಬನಿಗೆ ದೂರವಾಣಿ ಕರೆ ಮಾಡಿದ್ದು, ಆ ಸಂಖ್ಯೆ ಜಾಡು ಹಿಡಿದು ಹೊರಟ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

Leave a Reply