ದಾವಣಗೆರೆ: ಬ್ಯಾಂಕ್ ದರೋಡೆಗೆ ಹೊಂಚು ಹಾಕಿ ಬ್ಯಾಂಕ್ ನ ಸಮೀಪದಲ್ಲಿಯೇ ಬೇಕರಿ ತೆಗೆದು ವ್ಯಾಪಾರಿಗಳ ಸೋಗಿನಲ್ಲಿ ನಿಗಾವಹಿಸಿ ಅತ್ಯಂತ ವ್ಯವಸ್ಥಿತವಾಗಿ ದರೋಡೆ ಮಾಡಿ ಪರಾರಿಯಾಗಿದ್ದ ತಂಡವನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ.
ನ್ಯಾಮತಿ ಪಟ್ಟಣದ ಎಸ್ಬಿಐ ಬ್ಯಾಂಕ್ ಗೆ ನುಗ್ಗಿ 12.96 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಲೂಟಿ ಮಾಡಿದ್ದ ದರೋಡೆಕೋರರ ಗ್ಯಾಂಗ್ ಒಂದು ವರ್ಷಗಳಿಂದ ನಾಪತ್ತೆಯಾಗಿತ್ತು. ಈ ತಂಡಕ್ಕಾಗಿ ಸತತ ಹುಡುಕಾಟ ನಡೆಸಿದ ಪೊಲೀಸರ ಕೊನೆಗೂ ತಂಡ ಬಲೆಗೆ ಕೆಡವುವಲ್ಲಿ ಯಶಸ್ವಿಯಾಗಿದೆ.
ತಮಿಳುನಾಡಿನ ಅಜಯ್ ಕುಮಾರ್, ವಿಜಯ್ ಕುಮಾರ್, ನ್ಯಾಮತಿಯ ಮಂಜುನಾಥ್, ಹೊನ್ನಾಳಿಯ ನಿವಾಸಿ ಅಭಿಷೇಕ್ ಹಾಗೂ ಚಂದ್ರಶೇಖರ್ ಬಂಧಿತ ಆರೋಪಿಗಳಾಗಿದ್ದಾರೆ.
ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಈ ದರೋಡೆ ನಡೆದಿತ್ತು. ಬ್ಯಾಂಕ್ ಕಿಟಕಿಯ ಸರಳನ್ನು ಮುರಿದು, 12.96 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ದೋಚಿಕೊಂಡು ಹೋಗಿದ್ದ ಕಳ್ಳರು ಬ್ಯಾಂಕ್ ತುಂಬೆಲ್ಲಾ ಕಾರದ ಪುಡಿಯನ್ನು ಚೆಲ್ಲಿ ಪರಾರಿಯಾಗಿದ್ದರು.
ಇದರಿಂದಾಗಿ ಆರೋಪಿಗಳ ಪತ್ತೆ ದೊಡ್ಡ ತಲೆನೋವಾಗಿತ್ತು.
ದರೋಡೆ ನಡೆದ ನಂತರ ಬ್ಯಾಂಕ್ ಪಕ್ಕದಲ್ಲಿದ್ದ ಬೇಕರಿ ಏಕಾಏಕಿ ಮುಚ್ಚಲಾಗಿತ್ತು. ಇದರ ಜಾಡು ಹಿಡಿದು ಎಸ್ಪಿ ಉಮಾ ಪ್ರಶಾಂತ್ ಹಾಗೂ ಎ.ಎಸ್.ಪಿ. ಸ್ಯಾಮ್ ವರ್ಗೀಸ್ ನೇತೃತ್ವದ ತಂಡ ದರೋಡೆಕೋರರನ್ನು ಪತ್ತೆ ಹಚ್ಚಿದೆ. ಇದರಲ್ಲಿ ಶಾಮೀಲಾಗಿರುವ ಮೂವರು ಸ್ಥಳೀಯರನ್ನು ಸೇರಿ ಐವರು ದರೋಡೆಕೋರರನ್ನು ಬಂಧಿಸಲಾಗಿದೆ.
ತಮಿಳುನಾಡು ಮೂಲದ ಪರಮಾನಂದ ಎನ್ನುವ ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಸದ್ಯ ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ.
ಆರೋಪಿಗಳು ದರೋಡೆ ಮಾಡಲು ನ್ಯಾಮತಿಯಲ್ಲಿ ಬೇಕರಿ ಹಾಕಿಕೊಂಡು ಹಲವು ವರ್ಷಗಳಿಂದ ಸ್ಕೆಚ್ ಹಾಕಿದ್ದರು ಎನ್ನಲಾಗಿದೆ.
ಪೊಲೀಸರು ಕೆಲ ತಾಂತ್ರಿಕ ಸಾಕ್ಷ್ಯಧಾರದ ಮೇರೆಗೆ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ದರೋಡೆ ಪ್ರಕರಣ ಹೊರಬಂದಿದೆ. ಹೆಚ್ಚಿನ ವಿಚಾರಣೆ ನಡೆಯುತ್ತಿದ್ದು, ದರೋಡೆ ಮಾಡಿದ ಚಿನ್ನಾಭರಣ ಎಲ್ಲಿದೆ? ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ. ಇನ್ನೂ ಚಿನ್ನಾಭರಣವನ್ನು ಕಳೆದುಕೊಂಡು ಕಂಗಾಲಾಗಿದ್ದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು, ಪೊಲೀಸರ ಕಾರ್ಯಕ್ಕೆ ಶ್ಲಾಘಿಸಿದ್ದಾರೆ.




