ಧರ್ಮಸ್ಥಳದ ಬಳಿಯ ಬೆಳ್ತಂಗಡಿಯಲ್ಲಿ ಭೂ ವಿವಾದದ ಕಾರಣಕ್ಕೆ ದಲಿತ ಸಮುದಾಯದ ವ್ಯಕ್ತಿಯ ಮೇಲೆ ಭಜರಂಗದಳ ವ್ಯಕ್ತಿಯೊಬ್ಬ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಬೇಕಿದ್ದ ಹಿಂದೂ ಸಂಘಟನೆಗಳು ಇದನ್ನು ಹಿಂದೂ ಸಮಾಜದಲ್ಲಿ ನಡೆಯುವ ಸಹಜ ಸಂಗತಿಯಂತೆ ಭಾವಿಸುವ ಮೂಲಕ ದಲಿತರ ಹತ್ಯೆಯ ಸಂಗತಿಯನ್ನು ಕನಿಷ್ಠ ಪಕ್ಷ ಪ್ರಸ್ತಾಪವನ್ನೂ ಮಾಡದಂತೆ ಅದಕ್ಕೆ ತೆರೆ ಎಳೆದಿದೆ. ಇನ್ನೊಂದೆಡೆ ಸರಿಯಾದ ಶಿಕ್ಷಣವಿಲ್ಲದೇ, ಉದ್ಯೋಗವಿಲ್ಲದೇ ಜೊತೆಗೆ ಸಮಾಜಕ್ಕೆ ಕಂಟಕವಾಗದೇ ಬದುಕುವ ಮಾರ್ಗದರ್ಶನ ಇಲ್ಲದೇ ಕೆಟ್ಟದಾರಿ ಹಿಡಿದು ಪ್ರಾಣ ಕಳೆದುಕೊಳ್ಳುವ ಯುವಕರನ್ನೇ ದೇಶ ಪ್ರೇಮಿಗಳನ್ನಾಗಿಸುವ ಕೆಟ್ಟ ಕೆಲಸದಲ್ಲಿ ಅದು ನಿರತವಾಗಿದ್ದು ಶವ ರಾಜಕೀಯದ ಭಾಗವಾಗಿ ಮುಗ್ದ ಹುಡುಗರನ್ನು ತಲೆ ಕೆಡಿಸಿ ಅವರ ಬಲಿ ಪಡೆದಿದೆ.
ಹಾಗೇ ಸುಮ್ಮನೇ ಒಮ್ಮೆ ಹಿಂದುತ್ವದ ಹೆಸರಲ್ಲಿ ಪ್ರಾಣ ಕಳೆದುಕೊಂಡ ಯುವಕರ ಸಾಮಾಜಿಕ ಹಿನ್ನಲೆಯನ್ನು ನೋಡಿದರೆ ಒಂದೋ ಅವರು ಸಾಮಾಜಿಕವಾಗಿ ಹಿಂದುಳಿದ ಸಮುದಾಯಕ್ಕೆ ಸೇರಿರುತ್ತಾರೆ ಇಲ್ಲವೇ ಅವರು ಆರ್ಥಿಕವಾಗಿ ಅತ್ಯಂತ ಕಡು ಬಡವರಾಗಿರುತ್ತಾರೆ. ಇದು ನಮ್ಮ ಕಣ್ಣೆದುರಿಗೇ ನಾವು ಪರೀಕ್ಷೆ ಮಾಡಲು ಸಾಧ್ಯವಿರುವಂತಹ ವಾಸ್ತವದ ಸಂಗತಿಗಳಾಗಿದೆ.
ರಾಷ್ಟ್ರೀಯ ಅಪರಾಧಗಳ ವರದಿ ಸಂಸ್ಥೆಯು (ಎನ್ ಸಿ ಆರ್ ಬಿ) ನೀಡಿರುವ ಅಂಕಿ ಅಂಶಗಳ ಪ್ರಕಾರವೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ಪ್ರಕರಣಗಳು ಕ್ರಮವಾಗಿ 9.4% ಮತ್ತು 9.3% ರಷ್ಟು ಹೆಚ್ಚಾಗಿದ್ದು ಈ ಬಗ್ಗೆ ನಮ್ಮ ಹಿಂದುತ್ವದ ಬಾಯಿಪಾಠಕರಾದ ಬಿಜೆಪಿಗರಾಗಲೀ, ಹಿಂದುತ್ವದ ಹೆಸರಲ್ಲಿ ಬಿಜೆಪಿಯ ರಾಜಕೀಯ ಲಾಭಕ್ಕಾಗಿ ಕೆಲಸ ಮಾಡುವ ಹಿಂದುತ್ವದ ಸಂಘಟನೆಗಳಾಗಲೀ ಚಕಾರ ಎತ್ತಿಲ್ಲ. ದಲಿತರು, ಹಿಂದುಳಿದವರು ಮತ್ತು ಆದಿ ವಾಸಿಗಳ ಮೇಲಿನ ಬಿಜೆಪಿಗರ ಧೋರಣೆಯನ್ನು ಗಮನಿಸಿದವರಿಗೆ ಇದಕ್ಕೆ ಕಾರಣವು ಸುಲಭವಾಗಿ ಅರ್ಥವಾಗುತ್ತದೆ.
ಐತಿಹಾಸಿಕವಾಗಿ ಗಾಂಧೀಜಿ ಮತ್ತು ಬಾಬಾ ಸಾಹೇಬರ ನಡುವಿನ ಚರ್ಚೆಗಳನ್ನು ನೋಡುವುದಾದರೆ “ದಲಿತರನ್ನು ಹಿಂದೂ ಸಮಾಜಕ್ಕೆ ಮರಳಿ ತರುತ್ತೇನೆ ಎಂದು ಗಾಂಧೀಜಿಯವರು, ಹೇಳಿದಾಗ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಾಬಾ ಸಾಹೇಬರು “ಕಹಿಯನ್ನು ಎಂದಿಗೂ ಸಿಹಿಯಾಗಿ ಬದಲಿಸಲು ಸಾಧ್ಯವಿಲ್ಲ, ಅಂತೆಯೇ ಹಿಂದೂ ಧರ್ಮ ಎಂಬ ಸಮಾನತೆಗೆ ಬೆಲೆ ನೀಡದ ವಿಷದ ಆಚರಣೆಯನ್ನು ಮಾನವೀಯ ಮೌಲ್ಯಗಳ ಜೇನಾಗಿ ಪರಿವರ್ತಿಸಲು ಸಾಧ್ಯವಿಲ್ಲ. ಹೀಗಾಗಿಯೇ ನಾನು ಹಿಂದೂವಾಗಿ ಹುಟ್ಟಿದ್ದರೂ, ಹಿಂದೂವಾಗಿ ಮಾತ್ರ ಸಾಯಬಾರದೆಂಬ ಸ್ಪಷ್ಟತೆ ನನಗಿದೆ”ಎಂದು ಹೇಳಿದ್ದರು. ಬಾಬಾ ಸಾಹೇಬರು ಹೀಗೆ ಹೇಳುವುದಕ್ಕೂ ಮುನ್ನ ಹಿಂದೂ ಧರ್ಮದ ಸುಧಾರಣೆಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದರು ಎಂಬುದನ್ನು ನಾವಿಲ್ಲಿ ನೆನಪಿಡಬೇಕು.
ಎಲ್ಲದಕ್ಕಿಂತ ಮುಖ್ಯವಾಗಿ “ತಮ್ಮ ಸ್ವಾರ್ಥಮಯ ಬದುಕಿಗಾಗಿ ಈ ತಮ್ಮನ್ನು ಹಿಂದೂಗಳು ಎಂದು ಕರೆದುಕೊಳ್ಳುತ್ತಿರುವ ಜನರು, ಹಿಂದೂ ಧರ್ಮದಲ್ಲಿ ಶೂದ್ರರಾಗಿ ಬಾಳುತ್ತಿರುವ ಭಾರತದ ಬಹುಸಂಖ್ಯಾತ ಮೂಲ ನಿವಾಸಿಗಳಿಗೆ ಅಧಿಕಾರ ಮತ್ತು ಸೌಲಭ್ಯಗಳ ಸಮಾನ ಹಂಚಿಕೆಯನ್ನು ಮಾಡಬೇಕಾಗುತ್ತದೆ ಎಂಬ ಕಾರಣಕ್ಕೆ ರೂಢಿಸಿಕೊಂಡಿರುವ ಮೇಲು ಕೀಳು ಎಂಬ ಅಂತರವನ್ನು ಈಗಾಗಲೇ ಸ್ಪಷ್ಟವಾಗಿ ಸಾಧಿಸಿದ್ದಾರೆ. ಇದೇ ಮಾದರಿಯಲ್ಲಿ ತಮ್ಮ ಧರ್ಮದ ವ್ಯಾಪ್ತಿಗೆ ಒಳಪಡದ ಮುಸ್ಲಿಂ ಸಮುದಾಯಗಳೂ ಸಹ ಅಧಿಕಾರ ಮತ್ತು ಸಮಾನ ಸೌಲಭ್ಯಗಳಿಂದ ದೂರವೇ ಇರಬೇಕೆಂಬ ಉದ್ದೇಶದಿಂದ ಹಿಂದೂ ಮುಸ್ಲೀಮರ ನಡುವೆ ದ್ವೇಷವನ್ನು ಉಂಟು ಮಾಡುವಂತಹ ತಂತ್ರಗಾರಿಕೆಗೆ ಅವರು ಇಳಿದಿದ್ದು ಅದರಲ್ಲೂ ಬಹುತೇಕ ಯಶಸ್ಸು ಕಂಡಿದ್ದಾರೆ ಎಂದೂ ಬಾಬಾ ಸಾಹೇಬರು ಹೇಳುತ್ತಾರೆ.
ಜೊತೆಗೆ “ಹಿಂದೂ ಮುಸ್ಲಿಂ ಜಗಳದ ಸಂದರ್ಭದಲ್ಲಿ ಅಸ್ಪೃಶ್ಯರು ಹಿಂದೂಗಳಾಗುತ್ತಾರೆ, ಜಗಳ ಮುಗಿದ ಮೇಲೆ ಅವರು ಮತ್ತೆ ಅಸ್ಪೃಶ್ಯರಾಗುತ್ತಾರೆ” ಎಂಬ ಬಾಬಾ ಸಾಹೇಬರ ಮಾತೂ ಈ ಹೊತ್ತಿನ ತಿಳುವಳಿಕೆಗೆ ಬೆಳಕಿನ ದೀವಿಗೆಯಾಗಿದೆ. ಹೀಗಾಗಿ, ಅವರ ಈ ದುರುದ್ದೇಶದ ಭಾಗವಾಗಿಯೇ ಚುನಾವಣಾ ರಾಜಕಾರಣದ ಸಂದರ್ಭದಲ್ಲಿ ಹಿಂದೂ ಮುಸ್ಲಿಂ ಗಲಭೆಗಳು ಹುಟ್ಟುತ್ತವೆ. ಈ ಗಲಭೆಗಳಲ್ಲಿ ಹಿಂದುಳಿದ ಸಮುದಾಯಗಳನ್ನು ದಾಳವನ್ನಾಗಿ ಬಳಸಿಕೊಂಡು ಅವರ ಜೀವ ಮತ್ತು ಜೀವನದ ಸೌಧದ ಮೇಲೆ ಸವರ್ಣೀಯರು ತಮ್ಮ ರಾಜಕೀಯ ಅಧಿಕಾರವನ್ನು ನಡೆಸುತ್ತಾರೆ. ಇದು ಬಹುಕಾಲದಿಂದಲೂ ನಡೆಯುತ್ತಾ ಬಂದಿರುವ ಸಂಗತಿಯಾಗಿದ್ದು, ಈಗಲಾದರೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳು ಇವರ ಕುತಂತ್ರವನ್ನು ಅರ್ಥ ಮಾಡಿಕೊಳ್ಳಲೇಬೇಕು. ಮುಂದಿನ ಹೆಜ್ಜೆ ಸಂವಿಧಾನಿಕ ಒಗ್ಗಟ್ಟಿನ ಹೆಜ್ಜೆಯೇ ಆಗಬೇಕು.
ಈಗಾಗಲೇ ಮೇಲಿನ ಮಾತುಗಳಲ್ಲಿ ಬಿಜೆಪಿಯ ದುರುದ್ದೇಶ ಮತ್ತು ಅವರ ಸ್ವಾರ್ಥಮಯ ನಡೆಗಳ ಕುರಿತಂತೆ ಬಾಬಾ ಸಾಹೇಬರ ಮಾತುಗಳ ಮೂಲಕವೇ ತಿಳಿಸಿದ್ದೇನೆ. ಇನ್ನು ಮುಂದೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಇರುವುದು ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ಸಂವಿಧಾನಾತ್ಮಕ ಆಶಯಗಳಾದ “ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ“ ಮೌಲ್ಯಗಳನ್ನು ಸಾಧಿಸಬೇಕಿರುವುದು. ಈ ಸಾಧನೆಗೆ ಈ ಎಲ್ಲಾ ಕೆಳ ವರ್ಗಗಳೂ ರಾಜಕೀಯವಾಗಿ ಒಟ್ಟಾಗಬೇಕು.
ಉದಾಹರಣೆಗೆ, ಸರಿಯಾದ ಆಡಳಿತವನ್ನೇ ನಡೆಸಲು ಯೋಗ್ಯತೆಯಿಲ್ಲದ ಬಿಜೆಪಿಗರು ಈ ಚುನಾವಣಾ ವರ್ಷದಲ್ಲಿ ತಮ್ಮೊಳಗೆ ಅಡಗಿರುವ ಮನುವಾದಿ ಮತ್ತು ದೇಶದ್ರೋಹಿ ಮನಸ್ಸುಗಳ ಸಹಾಯದಿಂದ ಶಾಂತಿಯುತವಾಗಿ ಇರಬೇಕಾದ ಸಮಾಜವನ್ನು ಜಾತಿ ಮತ್ತು ಧರ್ಮದ ಆಧಾರದ ಮೇಲೆ ಒಡೆಯಲು ಆರಂಭಿಸುತ್ತಾರೆ. ಕೆಳ ಸಮುದಾಯದ ಕೆಲ ಬಡ ಹುಡುಗರನ್ನು ತಲೆ ಕೆಡಿಸಿ ಮುಸ್ಲೀಮರ ಮೇಲೆ ಛೂ ಬಿಡುತ್ತಾರೆ.
ಇಂತಹ ಸಂದರ್ಭದಲ್ಲಿ ನಡೆಯುವ ಹಿಂಸಾಚಾರಗಳ ವಿರುದ್ಧ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳು ಒಗ್ಗಟ್ಟಾಗಿ ಭಾವೈಕ್ಯತಾ ಸಂದೇಶವನ್ನು ಸಾರಬೇಕು. ಎಂದೂ ನಮ್ಮ ಬದುಕಿಗೆ ಸಹಾಯ ಮಾಡದಿದ್ದರೂ ಕೇವಲ ಗಲಭೆ ಎಬ್ಬಿಸಿ ದೈನಂದಿನ ಬದುಕಿನ ಜೊತೆಗೆ ನಮ್ಮ ರಾಜಕೀಯ ಶಕ್ತಿಯನ್ನೂ ಸಹ ಹಾಳುವ ಮಾಡುವ ಅವರ ಸಮಾಜ ಒಡೆಯುವ ಕುತಂತ್ರಗಳನ್ನು ಒಕ್ಕೋರಲಿನಿಂದ ಖಂಡಿಸಬೇಕು. ಆಗ ಮಾತ್ರ ನಮ್ಮ ಸಮಾಜ ಒಡೆಯುವ ಬಿಜೆಪಿಯ ದ್ರೋಹಿಗಳಿಗೆ ಬಿಸಿ ಮುಟ್ಟುತ್ತದೆ. ಹಾಗಲ್ಲದೇ ಚುನಾವಣಾ ಸಂದರ್ಭದಲ್ಲಿ ನಾವು ಸ್ವಲ್ಪ ಮೈಮರೆತರೂ ಕೂಡಾ ರಾಜಕೀಯ ಹಕ್ಕುಗಳ ಜೊತೆಗೆ ನಮ್ಮ ದೈನಂದಿನ ಬದುಕೂ ಸಹ ನಾಶವಾಗುತ್ತದೆ. ಹೀಗಾಗಿ ನಮ್ಮ ಎಚ್ಚರ ನಮ್ಮ ಕೈಯಲ್ಲಿರಲಿ.
ನನ್ನ ಮುಂದಿನ ಹೋರಾಟದ ನಡೆ:
ನೆಲ, ಜಲ ಮತ್ತು ಭಾಷೆಯ ಹೋರಾಟದ ಜೊತೆ ಜೊತೆಗೇ ಕಾಂಗ್ರೆಸ್ ಪಕ್ಷವು ಬಿಜೆಪಿಗರ ಕೋಮುದ್ವೇಷದ ವಿರುದ್ಧ ಜನಾಂದೋಲನವನ್ನು ರೂಪಿಸಲು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳನ್ನು ಒಗ್ಗೂಡಿಸಿ, ಭಾವೈಕ್ಯತಾ ಸಮಾವೇಶಗಳನ್ನು ಆಯೋಜಿಸುವ ಇರಾದೆಯನ್ನು ಹೊಂದಿದೆ. ನಮ್ಮ ಪ್ರಜಾಪ್ರಭುತ್ವವು ಧರ್ಮದ ಹೆಸರಲ್ಲಿ ಒಡೆಯದಂತೆ ಮತ್ತು ಕೆಳವರ್ಗಗಳ ರಾಜಕೀಯ ಶಕ್ತಿಯು ಎಷ್ಟು ಬಲಿಷ್ಠವಾಗಿರುತ್ತದೆ ಎಂಬ ಸಂಗತಿಯನ್ನು ಸಂವಿಧಾನ ವಿರೋಧಿ, ಜನ ವಿರೋಧಿ ಮತ್ತು ಸಮಾಜ ವಿರೋಧಿ ಶಕ್ತಿಯಾದ ಬಿಜೆಪಿಗರಿಗೆ ಮನದಟ್ಟು ಮಾಡಿಕೊಡುವ ಈ ಮಹತ್ವದ ಪ್ರಯತ್ನಕ್ಕೆ ಸಂವಿಧಾನವನ್ನು ಕಾಪಾಡುವ ಜವಾಬ್ದಾರಿ ಹೊತ್ತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಎಲ್ಲ ಜನರೂ ನಮ್ಮೊಡನೆ ಇರಬೇಕೆಂದು ನಾನು ಈ ಮೂಲಕ ವಿನಂತಿಸಿಕೊಳ್ಳುತ್ತೇನೆ.
ಸಂವಿಧಾನ ಉಳಿಯಲಿ, ಪ್ರಜಾಪ್ರಭುತ್ವ ಬೆಳೆಯಲಿ ಎಂಬ ಸದಾಶಯದೊಂದಿಗೆ ಎಲ್ಲರ ಒಕ್ಕೊರಲ ಬೆಂಬಲದ ನಿರೀಕ್ಷೆಯಲ್ಲಿ ನಿಮ್ಮವ.
- ಡಾ.ಎಚ್.ಸಿ.ಮಹದೇವಪ್ಪ, ಮಾಜಿ ಸಚಿವ




