ಉಪನಗರವಾಗಿ ನೆಲಮಂಗಲದ ಸಮಗ್ರ ಅಭಿವೃದ್ಧಿಗೆ ಕ್ರಮ: ಡಾ.ಕೆ.ಸುಧಾಕರ್

3 years ago

ಬೆಂಗಳೂರು: ರಾಜಧಾನಿ ಬೆಂಗಳೂರಿಗೆ ಹೊಂದಿಕೊಂಡು ಅತಿವೇಗವಾಗಿ ಬೆಳೆಯುತ್ತಿರುವ ನೆಲಮಂಗಲ ಪಟ್ಟಣವನ್ನು ಸ್ಯಾಟಲೈಟ್ ಟೌನ್ ಆಗಿ ಪರಿವರ್ತಿಸಿ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮವಹಿಸಲಾಗುವುದು ಎಂದು ಆರೋಗ್ಯ,ಕುಟುಂಬ ಕಲ್ಯಾಣ ,ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ‌.ಸುಧಾಕರ್ ಹೇಳಿದರು.

ನೆಲಮಂಗಲದ ತಾ.ಪಂ.ಆವರಣದಲ್ಲಿ ಇಂದು ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ಉಪನಗರ ರೈಲು ಹಾಗೂ ಮೆಟ್ರೋ ರೈಲುಗಳ ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದರು.

ರಾಜಧಾನಿ ಬೆಂಗಳೂರು ಸುತ್ತ ಮುತ್ತಲಿನ 7-8 ನಗರಗಳನ್ನು ಸ್ಯಾಟಲೈಟ್ ನಗರಗಳನ್ನಾಗಿ ಅಭಿವೃದ್ಧಿ ಪಡಿಸುವ ಉದ್ದೇಶ ಸರ್ಕಾರಕ್ಕಿದೆ. ಇವುಗಳಲ್ಲಿ ನೆಲಮಂಗಲ ನಗರವೂ ಪ್ರಮುಖವಾಗಿದೆ. ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಗಳ ಮೂಲಸೌಕರ್ಯಗಳ ಹೆಚ್ಚಳಕ್ಕೆ ಸರ್ಕಾರ ಆದ್ಯತೆ ನೀಡಿದೆ. ರಾಜ್ಯದ ಪ್ರತಿಯೊಂದು ತಾಲೂಕುಗಳಲ್ಲಿ 20 ರಿಂದ 30 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಸುಮಾರು 500 ಕೋಟಿ ರೂ.ಗಳನ್ನು ಸರ್ಕಾರ ಒದಗಿಸಿದೆ ಎಂದರು.

ನಗರ ಪ್ರದೇಶಗಳ ಕೊಳಗೇರಿಗಳಲ್ಲಿ ವಾಸಿಸುವ ಬಡಜನರಿಗೆ ಆರೋಗ್ಯ ಸೇವೆಗಳನ್ನು ಒದಗಿಸಲು “ನಮ್ಮ ಕ್ಲಿನಿಕ್” ಗಳಿಗೆ ಬರುವ ಡಿಸೆಂಬರ್ 14 ರಂದು ಮಂಡ್ಯ ಜಿಲ್ಲೆಯಲ್ಲಿ ಮುಖ್ಯಮಂತ್ರಿಗಳು ಚಾಲನೆ ನೀಡುವರು. ಅದೇ ದಿನ ರಾಜ್ಯದ ನೂರು ತಾಲೂಕುಗಳಲ್ಲಿ ನೂರು “ನಮ್ಮ ಕ್ಲಿನಿಕ್” ಗಳು ಕಾರ್ಯಾರಂಭ ಮಾಡಲಿವೆ ಎಂದರು.

ಜನತಾ ದರ್ಶನ ಕಾರ್ಯಕ್ರಮವು ಜನಸ್ನೇಹಿ, ಜನೋಪಯೋಗಿ ಆಡಳಿತ ನೀಡಲು ಸಹಕಾರಿಯಾಗಿವೆ. ಕಂದಾಯ ಇಲಾಖೆಯ ಸೇವೆಗಳು, ಭೂ ದಾಖಲೆಗಳ ಮಾಪನ, ಸರ್ವೆ ಸ್ಕೆಚ್, ತಿದ್ದುಪಡಿ, ಪೌತಿಖಾತೆ, ಸಾಗುವಳಿ ಚೀಟಿ ಮೊದಲಾದ ಕಾರ್ಯಗಳಿಗೆ ವೇಗ ಒದಗಿಸಲು ಸಾಧ್ಯವಾಗಿದೆ ಎಂದರು.

ಬರುವ ತಿಂಗಳಿನಿಂದ ನಿರಂತರವಾಗಿ ಜನತಾ ದರ್ಶನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರ ಅಹವಾಲುಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಲು ಶ್ರಮಿಸಲಾಗುವುದು ಎಂದ ಅವರು, ಜಿಲ್ಲೆಯ ಎಲ್ಲಾ ಗ್ರಾಮಾಂತರ ಪ್ರದೇಶಗಳಿಗೆ ಸಮರ್ಪಕ ಸಾರಿಗೆ ವ್ಯವಸ್ಥೆ ಒದಗಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಸೂಚಿಸಿದರು.

ಅಪಘಾತದಲ್ಲಿ ಮೃತರಾದ ವ್ಯಕ್ತಿಗಳ ಕುಟುಂಬಕ್ಕೆ ಪರಿಹಾರ: ದೊಡ್ಡಬಳ್ಳಾಪುರ-ನೆಲಮಂಗಲ ರಸ್ತೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ದ್ವಿಚಕ್ರ ವಾಹನ ಸವಾರರಾದ ಮಾರುತಿ ಹಾಗೂ ಮಹೇಶ ಅವರ ಕುಟುಂಬದ ವಾರಸುದಾರರಿಗೆ ತಲಾ 25 ಲಕ್ಷ ರೂ.ಪರಿಹಾರ ನೀಡಲು ಬಿಬಿಎಂಪಿಗೆ ಸೂಚಿಸಲಾಗಿತ್ತು. ಮೊದಲ ಹಂತದಲ್ಲಿ ಇಂದು ತಲಾ 10 ಲಕ್ಷ ರೂ. ಪರಿಹಾರದ ಚೆಕ್ ನೀಡಲಾಗುತ್ತಿದೆ. ಉಳಿದ ಪರಿಹಾರ ಮೊತ್ತ ಶೀಘ್ರ ನೀಡಲು ನಿರ್ದೇಶನ ನೀಡಲಾಗಿದೆ ಎಂದರು.

ನಿವೇಶನಗಳ ಹಕ್ಕು ಪತ್ರ,ಮದಲಕೋಟೆ ಆಸ್ಪತ್ರೆಗೆ ವೈದ್ಯರು ಹಾಗೂ ಸಿಬ್ಬಂದಿ, ಗ್ರಾಮಗಳ ನಕಾಶೆ, ಸರ್ವೆ, ವಿಕಲಚೇತನರೊಬ್ಬರಿಗೆ ನಗರಸಭೆಯ ಮೂಲಕ ಪೆಟ್ಟಿಗೆ ಅಂಗಡಿ ಒದಗಿಸುವುದು, ಪತ್ರಿಕಾ ಭವನ ನಿರ್ಮಾಣ ಸೇರಿದಂತೆ ಅನೇಕ ಅಹವಾಲುಗಳನ್ನು ಅವರು ಸ್ವೀಕರಿಸಿ, ಸಂಬಂಧಿಸಿದ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು.

ಜಿಲ್ಲಾಧಿಕಾರಿ ಆರ್.ಲತಾ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ರೇವಣಪ್ಪ, ಉಪವಿಭಾಗಾಧಿಕಾರಿ ತೇಜಸ್‌ಕುಮಾರ, ತಹಸೀಲ್ದಾರ ಮಂಜುನಾಥ, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಮೋಹನ್ ಮತ್ತಿತರರು ಇದ್ದರು.

Leave a Reply