ಬೆಂಗಳೂರು: ಬೇರೆ ಪಕ್ಷಗಳು ಮಹಿಳಾ ಮೀಸಲಾತಿಯನ್ನು ದುರ್ಬಳಕೆ ಮಾಡಿಕೊಂಡು, ನಾಮಕಾವಸ್ತೆಗಾಗಿ ದುರ್ಬಲ ಮಹಿಳೆಯರನ್ನು ಕಣಕ್ಕಿಳಿಸುತ್ತಾ ಬಂದಿವೆ. ಈ ಮೂಲಕ ಮಹಿಳಾ ಮೀಸಲು ಕ್ಷೇತ್ರಗಳಲ್ಲೂ ಪುರುಷ ರಾಜಕಾರಣಿಗಳು ಪರೋಕ್ಷ ಅಧಿಕಾರ ಅನುಭವಿಸುತ್ತಿದ್ದಾರೆ ಎಂದು ಬೆಂಗಳೂರು ನಗರ ಆಪ್ ಮಹಿಳಾ ಘಟಕದ ಅಧ್ಯಕ್ಷೆ ಕುಶಲ ಸ್ವಾಮಿ ಹೇಳಿದರು.
ಬೆಂಗಳೂರಿನ ಐದು ವಾರ್ಡ್ಗಳಿಗೆ ಆಪ್ ಉನ್ನತ ಶಿಕ್ಷಣ ಪಡೆದ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಐವರು ಮಹಿಳಾ ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡು, ಬಿಬಿಎಂಪಿ ಚುನಾವಣೆಗೆ ಅಭ್ಯರ್ಥಿಗಳೆಂದು ಘೋಷಿಸಿದ ನಂತರ ಮಾತನಾಡಿದ ಅವರು, ಆಪ್ ಮಹಿಳಾ ಮೀಸಲಾತಿಯ ಆಶಯವನ್ನು ಸಾರ್ಥಕಗೊಳಿಸುತ್ತಿದ್ದು, ಸಬಲೀಕರಣಗೊಂಡ ಮಹಿಳೆಯರನ್ನು ಕಣಕ್ಕಿಳಿಸುತ್ತಿದೆ ಎಂದರು.
ಉನ್ನತ ಶಿಕ್ಷಣ ಪಡೆದಿರುವ, ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಮಹಿಳೆಯರನ್ನು ಹುಡುಕಿ ಟಿಕೆಟ್ ನೀಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ಹೊಸ ಅರ್ಥ ನೀಡುತ್ತಿದೆ. ಜಡ್ಡುಗಟ್ಟಿರುವ ಚುನಾವಣಾ ರಾಜಕೀಯದಲ್ಲಿ ಪರಿವರ್ತನೆ ತರಲು ಆಮ್ ಆದ್ಮಿ ಪಾರ್ಟಿಯು ಮುನ್ನುಡಿ ಬರೆಯುತ್ತಿದೆ ಎಂದರು.
ಆಪ್ ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಿ ಜಯಗಳಿಸುವ ಅಭ್ಯರ್ಥಿಗಳು ಪಾಲಿಕೆಯಲ್ಲಿ ಜನಸಾಮಾನ್ಯರ ಭಾವನೆಗಳನ್ನು ಪ್ರತಿಧ್ವನಿಸಲಿದ್ದಾರೆ. ತಮ್ಮ ವಾರ್ಡ್ನ ವಿವಿಧ ಸಮಸ್ಯೆಗಳ ತ್ವರಿತಗತಿಯ ಇತ್ಯರ್ಥಕ್ಕೆ ಶ್ರಮಿಸಲಿದ್ದಾರೆ. ಈ ಮೂಲಕ ಬೆಂಗಳೂರಿನ ನವನಿರ್ಮಾಣವು ಆಪ್ ನಿಂದ ಸಾಧ್ಯವಾಗಲಿದೆ ಎಂದರು.
ಪಾರದರ್ಶಕ ಆಡಳಿತ ನೀಡುವ ಆಪ್ ಒಂದೇ ಬೆಂಗಳೂರಿಗೆ ಉತ್ತಮ ಗುಣಮಟ್ಟದ ಮೂಲಸೌಕರ್ಯಗಳನ್ನು ಕಲ್ಪಿಸುವ ಸಾಮರ್ಥ್ಯ ಹೊಂದಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ನಂತಹ ಭ್ರಷ್ಟ ಪಕ್ಷಗಳನ್ನು ಬದಿಗೆ ಸರಿಸಿ, ಆಪ್ ಅನ್ನು ಅಧಿಕಾರಕ್ಕೆ ತರಲು ಜನರು ಸಂಕಲ್ಪ ಮಾಡಬೇಕಾದ ಸಮಯ ಈಗ ಬಂದಿದೆ ಎಂದರು.
ಹತ್ತು ದಿನಗಳಲ್ಲಿ ಆರು ಸಾರಿಗೆ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿಂದೆ 30ಕ್ಕೂ ಹೆಚ್ಚು ಸಾರಿಗೆ ನೌಕರರು ಸರ್ಕಾರದ ನಿರ್ಲಕ್ಷ್ಯಕ್ಕೆ ಬಲಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ಶ್ರೀರಾಮುಲು ಅವರ ರಾಜೀನಾಮೆಗೆ ಆಗ್ರಹಿಸಿ ಸೆಪ್ಟೆಂಬರ್ 14ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಪಕ್ಷ ನಿರ್ಧರಿಸಿದೆ ಎಂದು ಪಕ್ಷದ ಮಾಧ್ಯಮ ವಕ್ತಾರ ಮೋಹನ್ ಮಾಹಿತಿ ನೀಡಿದರು.
ಪತ್ರಿಕಾ ಗೋಷ್ಠಿಯಲ್ಲಿ ವಕೀಲ ಲೋಹಿತ್ ಕುಮಾರ್, ಉಮೇಶ್ ಪಿಳ್ಳೇಗೌಡ ಸೇರಿದಂತೆ ಇತರರು ಹಾಜರಿದ್ದರು.
ಆಪ್ ನೀಡಿರುವ ಸಂಭಾವ್ಯ ಅಭ್ಯರ್ಥಿಗಳ ಕಿರು ಪರಿಚಯ:
1. ವಿದ್ಯಾರಣ್ಯಪುರ – ಮಾಧುರಿ ಸುಬ್ಬರಾವ್
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ವಾರ್ಡ್ ಸಂಖ್ಯೆ 14 ವಿದ್ಯಾರಣ್ಯಪುರದಲ್ಲಿ ಮಾಧುರಿ ಸುಬ್ಬರಾವ್ ಆಪ್ ನಿಂದ ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಸಲು ಇಚ್ಛೆ ವ್ಯಕ್ತಪಡಿಸಿದ್ದಾರೆ. ಮಾಧುರಿ ಸುಬ್ಬರಾವ್ರ ಲಂಡನ್ನಲ್ಲಿ ಮನಃಶಾಸ್ತ್ರ ಎಂಎಸ್ಸಿ ಸ್ನಾತಕೋತ್ತರ ಪದವಿ, ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಪಿಎಚ್ಡಿ ಮಾಡಿದ್ದಾರೆ. ಬೆಂಗಳೂರು ಪೊಲಿಟಿಕಲ್ ಆಕ್ಷನ್ ಕಮಿಟಿಯಲ್ಲಿ (ಬಿಪಿಎಸಿ) ರಾಜಕೀಯ ಹಾಗೂ ಆಡಳಿತ ತರಬೇತಿ, ಎನ್ವಿರಾನ್ಮೆಂಟ್ ಮ್ಯಾನೇಜ್ಮೆಂಟ್ ಸಿಸ್ಟಮ್ನಲ್ಲಿ ಕೈಗಾರಿಕಾ ಅನುಭವ ಹೊಂದಿದ್ದಾರೆ. ಫೆಂಡ್ಸ್ ಆಫ್ ಲೇಕ್ಸ್ ಸಂಘಟನೆಯ ಸಹ ಸಂಸ್ಥಾಪಕಿಯಾಗಿರುವ ಇವರು ಪರಿಸರ ಹೋರಾಟ ಹಾಗೂ ಸಾಮಾಜಿಕ ಹೋರಾಟಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
2. ಜಲಕಂಠೇಶ್ವರ ನಗರ ವಾರ್ಡ್ – ಪ್ರತಿಭಾ ಕೆ.ಸಿ. ರೆಡ್ಡಿ
ಸಿವಿ ರಾಮನ್ ನಗರ ವಿಧಾನಸಭಾ ಕ್ಷೇತ್ರದ ವಾರ್ಡ್ ಸಂಖ್ಯೆ 123 ಜಲಕಂಠೇಶ್ವರ ನಗರದಲ್ಲಿ ಪ್ರತಿಭಾ ಕೆ.ಸಿ ರೆಡ್ಡಿಯವರು ಆಪ್ ನಿಂದ ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಲು ಇಚ್ಛೆ ವ್ಯಕ್ತಪಡಿಸಿದ್ದಾರೆ. ಬಿಇ ಮಾಹಿತಿ ವಿಜ್ಞಾನ ವಿಭಾಗದಲ್ಲಿ ಪದವಿ ಪಡೆದಿರುವ ಇವರು ಕಾರ್ಪೊರೇಟ್ ವಲಯದಲ್ಲಿ 18 ವರ್ಷ ಕಾರ್ಯ ನಿರ್ವಹಿಸಿದ್ದಾರೆ. ವುಮೆನ್ ಇನ್ಕ್ಲುಸನ್ ಆಂಡ್ ಡೈವೆರ್ಸಿಟಿ ಇನಿಶಿಯೇಟಿವ್ನ ಸಹ ಅಧ್ಯಕ್ಷರಾಗಿ ಹಾಗೂ ಗ್ರಾಮೀಣ ಮಕ್ಕಳ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸಾಮಾಜಿಕ ಹೋರಾಟಗಾರರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.
3. ವಿಜ್ಞಾನ ನಗರ ವಾರ್ಡ್ – ಸತ್ಯವಾಣಿ ಶ್ರೀಧರ್
ಕೆಆರ್ ಪುರಂ ವಿಧಾನಸಭಾ ಕ್ಷೇತ್ರದ ವಾರ್ಡ್ ಸಂಖ್ಯೆ 92 ವಿಜ್ಞಾನ ನಗರದಲ್ಲಿ ಸತ್ಯವಾಣಿ ಶ್ರೀಧರ್ ಆಪ್ ನಿಂದ ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಲು ಇಚ್ಛೆ ವ್ಯಕ್ತಪಡಿಸಿದ್ದಾರೆ. ಸತ್ಯವಾಣಿ ಶ್ರೀಧರ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಪದವೀಧರರು ಹಾಗೂ ಬಿಪ್ಯಾಕ್ನಲ್ಲಿ ತರಬೇತಿ ಪಡೆದಿರುವ ಸಿವಿಕ್ ಲೀಡರ್. ಮಹದೇವಪುರ ವಲಯದ ಮಹಿಳಾ ಸುರಕ್ಷತೆ ಹಾಗೂ ಸಬಲೀಕರಣ ಬಿಸೇಫ್ ರಾಯಭಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಿಬಿಎಂಪಿಯ ಘನ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿ ಸಿಜಿಜನ್ ಪಾರ್ಟಿಸಿಪೇಷನ್ ಪ್ರೊಗ್ರಾಮ್ (ಸಿಪಿಪಿ) ವಿಜ್ಞಾನ ನಗರ ವಾರ್ಡ್ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಸದ ರಾಶಿಗಳಿದ್ದ ಖಾಲಿ ನಿವೇಶನಗಳನ್ನು ಸುಂದರವಾದ ಉದ್ಯಾನವನವನ್ನಾಗಿ ಮಾಡಿದ್ದಕ್ಕೆ ಟೈಮ್ಸ್ ಗ್ರೂಪ್ನಿಂದ ʻಸೂಪರ್ ಸ್ಟಾರ್ ರೈತʼ ಪ್ರಶಸ್ತಿ ಪಡೆದಿದ್ದಾರೆ.
ಕೊರೊನಾ ತೀವ್ರವಾಗಿದ್ದ ಸಂದರ್ಭದಲ್ಲಿ ಹೋಮ್ ಕ್ವಾರೆಂಟೈನ್ ತಂಡದ ಸದಸ್ಯರಾಗಿ ಸೇವೆ ಸಲ್ಲಿಸಿದ ಸತ್ಯವಾಣಿ ಶ್ರೀಧರ್ರವರಿಗೆ ಕರ್ನಾಟಕ ಪೊಲೀಸ್ ಹಾಗೂ ಬಿಬಿಎಂಪಿಯ ʻಕೊರೊನಾ ವಾರಿಯರ್ʼ ಪ್ರಶಸ್ತಿ ಲಭಿಸಿದೆ. ಕಳೆದ ಐದು ವರ್ಷಗಳಿಂದ ತಲಕಾವೇರಿ ಬಡಾವಣೆ ಮಹಿಳಾ ಸಂಘಟನೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅರಣ್ಯ ಸಂರಕ್ಷಣೆ, ಕೆರೆಗಳ ಸುತ್ತ ಬೀಜ ಬಿತ್ತುವುದು, ಸ್ವಚ್ಛಗೊಳಿಸುವುದು ಮುಂತಾದ ಕೆಲಸಗಳಲ್ಲಿ ತಮ್ಮನ್ನು 15 ವರ್ಷಗಳಿಂದ ತೊಡಗಿಸಿಕೊಂಡಿದ್ದಾರೆ. ಸಾರ್ವಜನಿಕ ಸ್ಥಳಗಳು, ಪಾರ್ಕ್ಗಳು, ರಾಜಕಾಲುವೆಗಳ ಒತ್ತುವರಿ ವಿರುದ್ಧ ಬಿಬಿಎಂಪಿ, ಲೋಕಾಯುಕ್ತ, ಹೈಕೋರ್ಟ್ನಲ್ಲಿ ಹೋರಾಟ ಮಾಡುವುದರಲ್ಲಿ ನಿರತರಾಗಿದ್ದಾರೆ. ಆರೋಗ್ಯ ಶಿಬಿರಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ರೇಷನ್ ಕಿಟ್, ಮಾಸ್ಕ್ಗಳನ್ನು ವಿತರಿಸಿ ಜನರಿಗೆ ನೆರವಾಗಿದ್ದರು.
4. ನಾಗರಬಾವಿ ವಾರ್ಡ್ – ಶಾಂತಲಾ ಕಾಮತ್
ಗೋವಿಂದರಾಜ ವಿಧಾನಸಭಾ ಕ್ಷೇತ್ರದ ವಾರ್ಡ್ ಸಂಖ್ಯೆ 14 ನಾಗರಬಾವಿಯಲ್ಲಿ ಆಮ್ ಆದ್ಮಿ ಪಾರ್ಟಿಯಿಂದ ಶಾಂತಲಾ ಕಾಮತ್ ಆಪ್ ನಿಂದ ಬಿಬಿಎಂಪಿ ಚುನಾವಣೆಗೆ ಸಂಭವನೀಯ ಅಭ್ಯರ್ಥಿಯಾಗಿದ್ದಾರೆ. ಮನಃಶಾಸ್ತ್ರ, ಪತ್ರಿಕೋದ್ಯಮ ಹಾಗೂ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದಿರುವ ಇವರು ಅಂತಾರಾಷ್ಟ್ರೀಯ ಟಿಇಎಸ್ಒಎಲ್ ಸರ್ಟಿಫಿಕೇಷನ್ನಲ್ಲಿ ತೊಡಗಿಕೊಂಡಿದ್ದಾರೆ. ಅಭಿನಯದಲ್ಲಿ ಅಪಾರ ಅನುಭವ ಹೊಂದಿರುವ ಶಾಂತಲಾ ಕಾಮತ್ 16 ಧಾರಾವಾಹಿ ಹಾಗೂ 5 ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಯಶಸ್ವಿ ಉದ್ಯಮಿಯಾಗಿ ವ್ಯವಹಾರ ಅವಕಾಶಗಳನ್ನು ಸೃಷ್ಟಿಸಿದ್ದಾರೆ. ಆರ್ಡಬ್ಲ್ಯೂಎಸ್ ಹಾಗೂ ಇತರೆ ಸಾಮಾಜಿಕ ಸಂಘಟನೆಗಳ ಭಾಗವಾಗಿದ್ದಾರೆ.
5. ಥಣಿಸಂದ್ರ – ನಿಲೊಫೆರ್ ತನ್ವೀರ್ ಹುಸೇನ್
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ವಾರ್ಡ್ ಸಂಖ್ಯೆ 7 ಥಣಿಸಂದ್ರದಲ್ಲಿ ಆಪ್ ನಿಂದ ನಿಲೊಫೆರ್ ತನ್ವೀರ್ ಹುಸೇನ್ ಬಿಬಿಎಂಪಿ ಚುನಾವಣೆಗೆ ಸಂಭವನೀಯ ಅಭ್ಯರ್ಥಿಯಾಗಿದ್ದಾರೆ. ವೃತ್ತಿಯಲ್ಲಿ ವೈದ್ಯೆಯಾಗಿರುವ ನಿಲೊಫೆರ್ ತನ್ವೀರ್ ಹುಸೇನ್ ಯುನಾನಿ ತಜ್ಞೆಯಾಗಿ ಅನೇಕ ಜನರಿಗೆ ನೆರವಾಗಿದ್ದಾರೆ. ಮ್ಯಾಗ್ನೆಸಿಸ್ ಮೆಟೀರಿಯಲ್ ಹ್ಯಾಂಡ್ಲಿಂಗ್ ಆಂಡ್ ಸ್ಟೋರೇಜ್ ಸೋಲ್ಯುಷನ್ಸ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಡವರು, ಮಧ್ಯಮವರ್ಗದವರು ಸೇರಿದಂತೆ ಎಲ್ಲ ವರ್ಗದ ಜನರಿಗಾಗಿ ಜೀವನವನ್ನು ಮುಡಿಪಾಗಿಡಬೇಕೆಂಬ ಆಕಾಂಕ್ಷೆ ಹೊಂದಿದ್ದಾರೆ.




