ಬೆಂಗಳೂರು: ಮಾಜಿ ಸಿಎಂ ಆರ್.ಗುಂಡೂರಾವ್ ಅವರ ನೆನಪಿನಲ್ಲಿ ಶ್ರೀರಾಮಪುರದಲ್ಲಿ ಗುಂಡೂರಾವ್ ಮೆಮೋರಿಯಲ್ ಕಪ್-2023ರ ಫುಟ್ ಬಾಲ್ ಪಂದ್ಯಾವಳಿ ನಡೆಯಿತು.
ಹೊನಲು ಬೆಳಕಿನ ಪುಟ್ ಬಾಲ್ ಪಂದ್ಯಾವಳಿಯನ್ನು ಶಾಸಕ ದಿನೇಶ್ ಗುಂಡೂರಾವ್, ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಫುಟ್ ಬಾಲ್ ಆಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತಾಡಿದ ದಿನೇಶ್ ಗುಂಡೂರಾವ್, ಆರ್.ಗುಂಡೂರಾವ್ ಫೌಂಡೇಷನ್ ವತಿಯಿಂದ ಗುಂಡೂರಾವ್ ಮೆಮೋರಿಯಲ್ ಕಪ್ ಪುಟ್ ಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ. ಮೂರು ದಿನಗಳ ಕಾಲ 16 ತಂಡಗಳ ನಡುವೆ ಪಂದ್ಯಗಳು ಜರುಗಲಿವೆ ಎಂದರು.
ಮಾಜಿ ಮುಖ್ಯಮಂತ್ರಿಗಳಾದ ಆರ್.ಗುಂಡೂರಾವ್ ರವರು ಕ್ರೀಡಾಪ್ರೇಮಿಯಾಗಿದ್ದರು. ಅವರ ಆಡಳಿತದಲ್ಲಿ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದರು. ಪ್ರತಿಯೊಬ್ಬರ ಜೀವನದಲ್ಲಿ ಕ್ರೀಡಾ ಚಟುವಟಿಕೆ ಮುಖ್ಯ. ಯುವ ಕ್ರೀಡಾಪಟುಗಳಿಗೆ ಆರ್.ಗುಂಡೂರಾವ್ ಫೌಂಡೇಷನ್ ವತಿಯಿಂದ ಹೆಚ್ಚಿನ ನೆರವು, ಪ್ರೋತ್ಸಾಹ ನೀಡಲಾಗುವುದು ಎಂದು ಹೇಳಿದರು.
ಪಂದ್ಯಾವಳಿಯಲ್ಲಿ ನಗರದ 16 ತಂಡಗಳು ಭಾಗಿಯಾಗಲಿವೆ. ವಿಜೇತ ತಂಡಕ್ಕೆ ‘ಆರ್.ಗುಂಡೂರಾವ್ ಫೌಂಡೇಶನ್’ ವತಿಯಿಂದ ಪ್ರಥಮ ಬಹುಮಾನದ ರೂಪದಲ್ಲಿ ₹1,11,111 ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿ ನೀಡಲಾಗುತ್ತಿದೆ. ದ್ವೀತಿಯ ಸ್ಥಾನ ಪಡೆದ ತಂಡಕ್ಕೆ ₹ 55,555 ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿ ನೀಡಲಾಗುತ್ತದೆ. ಜೊತೆಗೆ ಉತ್ತಮ ಪ್ರದರ್ಶನ ತೋರಿದ ಆಟಗಾರರಿಗೆ ವೈಯುಕ್ತಿಕ ಬಹುಮಾನ ನೀಡಲಾಗುತ್ತದೆ.




