ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕ ಸರಕಾರಕ್ಕೆ ಗುರುವಾಗಿ ಕೆಲಸಮಾಡಬೇಕು: ಬಸವರಾಜ ಬೊಮ್ಮಾಯಿ

4 years ago

ಬೆಂಗಳೂರು: ಕನ್ನಡ ಭಾಷೆಯ ಶ್ರೀಮಂತಿಕೆ ಅಪಾರವಾಗಿದೆ. ಕನ್ನಡ ಭಾಷೆಗೆ ಇರುವ ಇತಿಹಾಸ ಭಾರತದ ಬೇರೆ ಯಾವ ಭಾಷೆಗೂ ಇಲ್ಲ. ನಮ್ಮಲ್ಲಿ ಅತ್ಯಂತ ಶ್ರೀಮಂತ ಸಾಹಿತ್ಯವಿದೆ. ಕನ್ನಡದ ಶ್ರೀಮಂತ ಪರಂಪರೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಭವಿಷ್ಯಕ್ಕೆ ಕರೆದುಕೊಂಡು ಹೋಗುವ ಕೆಲಸ ಮಾಡಬೇಕಿದೆ. ಅದಕ್ಕಾಗಿ ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ಪರಿಷತ್ತು ಕನ್ನಡ ನಾಡಿನ ಸಾಕ್ಷಿ ಪ್ರಜ್ಞೆಯಾಗಿ, ಕರ್ನಾಟಕ ಸರಕಾರಕ್ಕೆ ಗುರುವಾಗಿ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರ ಹಾಗೂ ಆವರಣದ ನವೀಕೃತ ಕಟ್ಟಡಗಳ ಉದ್ಘಾಟನೆ ನೆರವೇರಿಸಿ ಮಾತನಾಡದಿ ಅವರು, ನಾವೆಲ್ಲರೂ ಕನ್ನಡಿಗರೆ ಏಳಿಗೆಗೆ ನಿರಂತವಾಗಿ ಕೆಲಸ ಮಾಡಬೇಕು. ಕನ್ನಡ ಎನ್ನುವುದು ಅಭಿಮಾನ ಪ್ರದರ್ಶನದ ವಸ್ತುವಲ್ಲ, ಅದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸೀಮಿತವಾಗದೆ ನಿತ್ಯ ನಿರಂತರವಾಗಬೇಕು. ಯುವಜನಾಂಗದ ಮನಸ್ಸನ್ನು ಅರ್ಥಮಾಡಿಕೊಂಡು ಅವರಲ್ಲಿ ಕನ್ನಡ ಪ್ರಜ್ಞೆ ಬೆಳಸಬೇಕು ಎಂದರು.
ಈಗಾಗಲೇ ಹೊಸ ಶಿಕ್ಷಣ ನೀತಿಯನ್ನು ಸರಕಾರ ಸಿದ್ಧಗೊಳಿಸಿದೆ. ಎಲ್ಲಾ ಹಂತಗಳಲ್ಲೂ ಕನ್ನಡವನ್ನು ಜಾರಿಗೆ ತರಲು ಅದರಲ್ಲಿ ಅವಕಾಶವಿದೆ. ಕನ್ನಡ ಮಾಧ್ಯಮದಲ್ಲೇ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಪದವಿ ಪಡೆಯಲು ಅವಕಾಶವಿದ್ದು, ಈ ಬಗ್ಗೆ ನಾವು ಪ್ರೋತ್ಸಾಹ ನೀಡಬೇಕು. ಅದರೊಂದಿಗೆ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨ ಸಿದ್ಧವಾಗಿದ್ದು ಅದು ವಿಧಾನಮಂಡಲದಲ್ಲಿ ಚರ್ಚೆಯಾಗುವ ಮುನ್ನ ಸಾರ್ವಜನಿಕವಾಗಿ ಚರ್ಚೆಯಾಗಬೇಕು ಎಂದರು.
ಇದಕ್ಕೆ ಸ್ಪಂದಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು, ಸೆಪ್ಟೆಂಬರ್ ತಿಂಗಳಲ್ಲಿ ಈ ಕುರಿತು ಒಂದು ದಿನದ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸುವುದಾಗಿ ತಿಳಿಸಿದರು.
ಮಹೇಶ ಜೋಶಿ ಅವರು ಮನವಿ ಮಾಡಿದ ಮೂರು ಬೇಡಿಕೆಗಳಾದ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕಕ್ಕೆ ಕಾನೂನು ರೂಪ, ಕನ್ನಡ ಸಾಹಿತ್ಯ ಪರಿಷತ್ತಿನ ಕಟ್ಟಡಗಳ ನಾನಾ ಅಭಿವೃದ್ಧಿ ಕಾಮಗಾರಿಗಳು, ನವೀಕರಣ ಕಾರ್ಯಕ್ಕೆ ೧೦ ಕೋಟಿ ರೂ. ಧನಸಹಾಯ, ಚಾಮರಾಜಪೇಟೆಯ ಮಿಂಟೋ ವೃತ್ತದ ಬಳಿಯ ಪೊಲೀಸ್ ಠಾಣೆಯ ಎದುರಿನಿಂದ ಮಕ್ಕಳಕೂಟದವರೆಗಿನ ರಸ್ತೆಯನ್ನು ಕನ್ನಡಮಯ ರಸ್ತೆಯಾಗಿಸಬೇಕು ಎಂಬ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಲಾಗಿದೆ ಎಂದರು.
ಗೋವಾ, ಸೊಲ್ಲಾಪುರ, ಕಾಸರಗೋಡಿನಲ್ಲಿ ಕನ್ನಡ ಭವನ ನಿರ್ಮಾಣ ಮಾಡಲುಗುತ್ತಿದೆ. ಗಡಿನಾಡ ಕನ್ನಡಿಗರನ್ನು ಸರಕಾರ ಮರೆತಿಲ್ಲ. ಗೋವಾ, ಸೊಲ್ಲಾಪುರ, ಕಾಸರಗೋಡುಗಳಲ್ಲಿ “ಕನ್ನಡ ಭವನ” ಈ ವರ್ಷದಲ್ಲಿ ಸಿದ್ಧಪಡಿಸುತ್ತೇವೆ. ಎಲ್ಲಾ ಕನ್ನಡ ಶಾಲೆಗಳು ಉಳಿಯಲಿವೆ. ಅವುಗಳನ್ನು ಮುಚ್ಚುವ ಪ್ರಮೇಯ ಇಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ, ಕನ್ನಡ ಸಾಹಿತ್ಯ ಪರಿಷತ್ತಿನ ಪರಂಪರೆಯನ್ನು ಸ್ಮರಿಸಿ ಅದನ್ನು ಆಧುನಿಕ ಹಂತಕ್ಕೆ ಕರೆದುಕೊಂಡು ಹೋಗುವ ವಿಶ್ವಾಸ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿದಸುವ ಹಿನ್ನೆಲೆಯಲ್ಲಿ ಕೋಟಿ ಸದಸ್ಯತ್ವ ಗುರಿಯನ್ನು ಮುಟ್ಟುವ ವಿಶ್ವಾಸ ವ್ಯಕ್ತ ಪಡಿಸಿದರು. ಆ ಮೂಲಕ ಪರಿಷತ್ತು ಸ್ವಾವಲಂಬಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಂದಾಯ ಸಚಿವ ಆರ್. ಅಶೋಕ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸುಂದರವಾದ ಸನ್ನಿವೇಶ ಹಾಗೂ ವ್ಯವಸ್ಥೆ ನಿರ್ಮಾಣ ಮಾಡಿದ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರನ್ನು ಅಭಿನಂದಿಸಿದರು. ಮುಂದುವರೆದು ಮಾತನಾಡಿ, ಕನ್ನಡದ ಹೋರಾಟಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಮುಂಚೂಣಿಯಲ್ಲಿ ನಿಲ್ಲಬೇಕು. ಚಾಮರಾಜಪೇಟೆಯ ಈದ್ಗಾ ಮೈದಾನ ಕಂದಾಯ ಇಲಾಖೆಯ ಆಸ್ತಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಈದ್ಗಾ ಮೈದಾನದಲ್ಲಿ ಕನ್ನಡ ರಾಜೋತ್ಸವ ಆಚರಿಸಲು ಸರಕಾರ ಬದ್ಧವಾಗಿದೆ ಎಂದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಮಾತನಾಡಿ, ಎಂದೆದೂ ಜನರ ಪರವಾಗಿ ಕನ್ನಡ ಸಾಹಿತ್ಯ ಪರಿಷತ್ತು ಕೆಲಸ ಮಾಡುತ್ತಿದೆ. ಭಾಷಾ ಹಿತರಕ್ಷಣೆಗಾಗಿ ಕೆಲಸ ಮಾಡುವಂತಹ ಸಂಸ್ಥೆ ಬೇರೆ ಯಾವ ರಾಜ್ಯದಲ್ಲೂ ಇಲ್ಲ. ಕಾಲಕಾಲಕ್ಕೆ ಕನ್ನಡ ಭಾಷೆ ಪ್ರತಿನಿತ್ಯ ಬೆಳವಣಿಗೆಯ ಕುರಿತು ಕನ್ನಡ ಸಾಹಿತ್ಯ ಪರಿಷತ್ತು ಪರಿಶೀಲಿಸಿ ಸರಕಾರಕ್ಕೆ ಸಲಹೆ ಸೂಚನೆ ನೀಡುತ್ತ ಬಂದಿದೆ, ಹೀಗಾಗಿ ಇದು ಅತ್ಯಂತ ವಿಶಿಷ್ಟವಾದ ಸಂಸ್ಥೆ ಎಂದರು.
ಹಿರಿಯ ಸಾಹಿತಿ ನಾಡೋಜ ಡಾ. ಕಮಲಾ ಹಂಪನಾ ಮಾತನಾಡಿ, ಕೋಟಿ ಸದಸ್ಯತ್ವದ ಕನಸು ನನಸಾಗಲಿ. ನಾಡಗೀತೆಯ ಬಗ್ಗೆ ಇರುವ ಗೊಂದಲ ನಿವಾರಣೆಯಾಗಬೇಕು. ಅನಂತಸ್ವಾಮಿ ಅವರ ರಾಗ ಸಂಯೋಜನೆ ಇಟ್ಟುಕೊಳ್ಳುವುದು ಸೂಕ್ತ. ರಾಷ್ಟ್ರಗೀತೆಯಂತೆ ನಾಡಗೀತೆಯನ್ನು ಒಂದು ನಿಮಿಷದೊಳಗೆ ಮುಕ್ತಾಯಗೊಳಿಸುವಂತೆ ಮೊದಲ ಹಾಗೂ ಕೊನೆಯ ಚರಣಗಳನ್ನು ಇಟ್ಟುಕೊಂಡು ಬಳಸುವಂತೆ ನಿರ್ಣಯ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
೮೬ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡ ಮಾತನಾಡಿ, ಕನ್ನಡಿಗರ ಬದುಕು ಸುಂದರವಾಗಲು ಸಾಂಸ್ಕೃತಿಕ ಕಾರ್ಯಕ್ರಮಗಳು ಸಾಕಷ್ಟು ನಡೆಯಬೇಕು. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನಿಲುವು ಆಗಬೇಕು. ಅನೇಕ ಕನ್ನಡಿಗರು ತಮಗೂ ಕನ್ನಡ ಸಾಹಿತ್ಯ ಪರಿಷತ್ತಿಗೂ ಯಾವುದೇ ಸಂಬಂಧ ಇಲ್ಲ ಎನ್ನುವಂತೆ ವರ್ತಿಸುತ್ತಾರೆ. ಹಾಗೆ ಮಾಡಿದರೆ ಕನ್ನಡ ಭಾಷೆಗೆ ನಾವು ಮಾಡುವ ಅನ್ಯಾಯ. ಪರಿಷತ್ತು ಕೇವಲ ಸಾಹಿತಿಗಳ ಸೊತ್ತಲ್ಲ ಅದು ಕೋಟಿ ಕನ್ನಡಿಗರ ಆಸ್ತಿ. ಪರಿಷತ್ತು ಹೇಗೆ ಕನ್ನಡಿಗರಿಗೆ ಸ್ಪಂದಿಸಬೇಕೋ ಕನ್ನಡಿಗರೂ ಸಹ ಪರಿಷತ್ತಿನೊಂದಿಗೆ ಸ್ಪಂದಿಸಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ನೇ.ಭ. ರಾಮಲಿಂಗಶೆಟ್ಟಿ ಸ್ವಾಗತಿಸಿದರು. ಕೆ.ಮಹಾಲಿಂಗಯ್ಯ ವಂದಿಸಿದರು. ಗೌರವ ಕೋಶಾಧ್ಯಕ್ಷರಾದ ಬಿ.ಎಂ. ಪಟೇಲ್ಪಾಂಡು ಕಾರ್ಯಕ್ರಮ ನಿರೂಪಿಸಿದರು.

ಹಾವೇರಿಯಲ್ಲಿ ನವೆಂಬರ್ ೧೧, ೧೨, ೧೩ರಂದು ೮೬ನೇ ಕನ್ನಡ ಸಾಹಿತ್ಯ ಸಮ್ಮೇಳನ

೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಹಾವೇರಿಯಲ್ಲಿ ನವೆಂಬರ್ ೧೧, ೧೨ ಹಾಗೂ ೧೩ ರಂದು ನಡೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಕಟಿಸಿದರು. ಸಮ್ಮೇಳನವು ನನ್ನ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರ ತವರು ಜಿಲ್ಲೆಯಲ್ಲಿ ನಡೆಯಲಿದೆ ಎಂಬುದು ಸಂತಸದ ವಿಷಯ. ಸಮ್ಮೇಳನ ನಡೆಯುವ ಮೂರು ದಿನವೂ ಬೇರೆ ಬೇರೆ ಕಾರಣದಿಂದ ಸರಕಾರಿ ರಜೆ ಇದ್ದು, ಕನ್ನಡಿಗರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅದನ್ನು ಯಶಸ್ವಿಗೊಳಿಸುತ್ತಾರೆ ಎನ್ನುವ ಭರವಸೆ ನನಗಿದೆ.
– ಬಸವರಾಜ ಬೊಮ್ಮಾಯಿ, ಸಿಎಂ

Leave a Reply