ಪಂಚ ಗ್ಯಾರಂಟಿ ಯೋಜನೆಗಳಿಂದ ಅರ್ಹರು ಹೊರಗುಳಿಯದಂತೆ ನೋಡಿಕೊಳ್ಳಿ

5 months ago

ದಾವಣಗೆರೆ: ಪಂಚ ಗ್ಯಾರಂಟಿಗಳು ಸರ್ಕಾರದ ಅತ್ಯಂತ ಮಹತ್ವದ ಯೋಜನೆಗಳಾಗಿದ್ದು, ಅರ್ಹತೆ ಹೊಂದಿರುವ ಯಾವುದೇ ಫಲಾನುಭವಿಗಳು ತಂತ್ರಾಂಶದ ನೋಂದಣಿ ಸೇರಿದಂತೆ ಯಾವುದೇ ಕಾರಣದಿಂದ ವಂಚಿತರಾಗದಂತೆ ಇಲಾಖೆಗಳು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಮನೂರು .ಟಿ. ಬಸವರಾಜ ಸೂಚಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಗ್ಯಾರಂಟಿ ಯೋಜನೆಗಳು ನಾಗರಿಕರ ಜೀವನದ ಗುಣಮಟ್ಟ ಸುಧಾರಣೆಗೆ ಪೂರಕವಾಗಿದ್ದು ಬೇರೆ ಬೇರೆ ರಾಜ್ಯಗಳಲ್ಲಿ ಪ್ರಶಂಸೆಗೆ ಪಾತ್ರವಾಗಿದ್ದು, ನಮ್ಮ ಭಾಗದಲ್ಲಿ ಶೇ.100ರ ಅನುಷ್ಠಾನಕ್ಕೆ ಮುಂದಾಗಬೇಕು ಎಂದರು.

ಯುವನಿಧಿ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕಾಲೇಜುಗಳು, ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಯುವಜನತೆಗೆ ನೋಂದಣಿಗೆ ಹೆಚ್ಚಿನ ಮಾಹಿತಿ ನೀಡಲು ಮಾಹಿತಿ ಶಿಬಿರಗಳನ್ನು ಆಯೋಜಿಸುವಂತೆ ಅಧ್ಯಕ್ಷರು ಸಂಬಂಧಿಸಿದ ಇಲಾಖೆಗೆ ಸೂಚಿಸಿದರು.

ಗ್ಯಾರಂಟಿ ಯೋಜನೆಯ ಅನುಷ್ಠಾನ ಇಲಾಖೆಗಳಾದ ಬೆಸ್ಕಾಂ, ಆಹಾರ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಇಲಾಖೆ ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳು ಈ ಅವಧಿಯಲ್ಲಿ ಯೋಜನೆಗಳಡಿ ಸೌಲಭ್ಯ ಪಡೆದ ಫಲಾನುಭವಿಗಳು ಮತ್ತು ಅನುದಾನದ ವಿವರವನ್ನು ಸಭೆಗೆ ಮಂಡಿಸಿದರು.

ಗ್ಯಾರಂಟಿ ಪ್ರಗತಿ ವಿವರ:
ಶಕ್ತಿ ಯೋಜನೆ:  ಸರ್ಕಾರ ಮಹತ್ವಾಕಾಂಕ್ಷಿ ಯೋಜನೆಯಾದ ಶಕ್ತಿ ಯೋಜನೆಯಡಿ 2023ರ ಜೂನ್ ನಿಂದ 2025 ರ ಅಕ್ಟೋಬರ್ ವರೆಗೆ ದಾವಣಗೆರೆ ವಿಭಾಗದಿಂದ 11.32 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, ಇದರ ವೆಚ್ಚವಾಗಿ 331.56 ಕೋಟಿ ಪ್ರಯಾಣ ವೆಚ್ಚ ಪಾವತಿ ಮಾಡಲಾಗಿದೆ.

ಅನ್ನಭಾಗ್ಯ : ಅನ್ನಭಾಗ್ಯ ಯೋಜನೆಯಡಿ ಜುಲೈ 2023 ರಿಂದ ಡಿಸೆಂಬರ್ 2024ರ ವರೆಗೆ ಜಿಲ್ಲೆಯ 346.33 ಕೋಟಿ ಹಣವನ್ನು ಫಲಾನುಭವಿಗಳಿಗೆ ಪಾವತಿಸಲಾಗಿದೆ.

ಗೃಹ ಜ್ಯೋತಿ: ಗೃಹಜ್ಯೋತಿಯಡಿ ಅಕ್ಟೋಬರ್ ತಿಂಗಳಲ್ಲಿ ಜಿಲ್ಲೆಯಲ್ಲಿ ಒಟ್ಟು 511270 ಫಲಾನುಭವಿಗಳ ಸಂಖ್ಯೆಯಾಗಿದೆ. ಹೊಂದಾಣಿಕೆಗೆ 3404.82 ಕೋಟಿ ಬೇಡಿಕೆ ಇದ್ದು, ಈ ಪೈಕಿ ಗೃಹಜ್ಯೋತಿ ಯೋಜನೆಯಡಿ ಫಲಾನುಭವಿಗಳಿಗೆ ಪ್ರತಿ ತಿಂಗಳು ರೂ.24.22 ಕೋಟಿ ಹೊಂದಾಣಿಕೆ ಮಾಡುವ ಮುಖೇನ ಶೇ.90.85 ಪ್ರಗತಿ ಸಾಧಿಸಿದೆ.

ಗೃಹಲಕ್ಷ್ಮೀ : ಗೃಹಲಕ್ಷ್ಮೀ ಯೋಜನೆಯಡಿ 2023ರ ಆಗಸ್ಟ್ ನಿಂದ 2025ರ ಜುಲೈವರೆಗೆ ನೊಂದಣಿಯಾದ 373827 ಫಲಾನುಭವಿಗಳಿಗೆ ರೂ.1545.55 ಕೋಟಿ ಪಾವತಿ ಮಾಡಲಾಗಿದೆ. ಹಾಗೆಯೇ 2023ನೇ ಸಾಲಿನಲ್ಲಿ ನೊಂದಣಿಯಾಗಿ ಇಲ್ಲಿಯವರೆಗೂ 3725 ಫಲಾನುಭವಿಗಳು ಮರಣ ಹೊಂದಿದ್ದಾರೆ. ಇದರಲ್ಲಿ 253 ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಯಿಂದ 28.58 ಲಕ್ಷ ಮೊತ್ತವನ್ನು ಸರ್ಕಾರಕ್ಕೆ ಮರುಪಾವತಿ ಮಾಡಲಾಗಿದೆ.

ಯುವನಿಧಿ: ಯುವನಿಧಿ ಯೋಜನೆಯಡಿ ಜಿಲ್ಲೆಯಾದ್ಯಂತ 9073 ಪದವಿ ಮತ್ತು 175 ಡಿಪ್ಲೊಮಾ ಪದವಿ ಫಲಾನುಭವಿಗಳು ಸೇರಿ ಒಟ್ಟು 9248 ವಿದ್ಯಾರ್ಥಿಗಳಿಗೆ 2025 ರ ಜುಲೈ ಅಂತ್ಯಕ್ಕೆ 24.69 ಕೋಟಿ ಮೊತ್ತ ಪಾವತಿಸಲಾಗಿದೆ.
 
ಉಪಾಧ್ಯಕ್ಷ ಮಂಜುನಾಥ ಮಾತನಾಡಿ, ಕುಕ್ಕವಾಡ ಸರ್ಕಾರಿ ಶಾಲಾ, ಕಾಲೇಜುಗಳಿಗೆ ಮಕ್ಕಳು ಓಡಾಡಲು ಕೋರಿಕೆ ಮೇರೆಗೆ ಬಸ್ ನಿಲುಗಡೆ ಮಾಡುವಂತೆ ತಿಳಿಸಿದರು. 

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮಮತ ಹೊಸಗೌಡ್ರು, ಜಿ.ಪಂ ಯೋಜನಾ ನಿರ್ದೇಶಕರಾದ ಮಲ್ಲನಾಯ್ಕ, ಜಿಲ್ಲಾ ಗ್ಯಾರಂಟಿ ಸಮಿತಿ ಉಪಾಧ್ಯಕ್ಷರಾದ ರಾಜೇಶ್ವರಿ, ಕೆ.ಎನ್. ಮಂಜುನಾಥ್, ನಂಜಾನಾಯ್ಕ ಸೇರಿದಂತೆ ಸಮಿತಿ ಸದಸ್ಯರು ವಿವಿಧ ಇಲಾಖೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

Leave a Reply