ಸಾಲಬಾಧೆಯಿಂದ ಬೇಸತ್ತ ಕಲಬುರಗಿಯ ಕುಟುಂಬ ಹೈದರಾಬಾದ್‌ನಲ್ಲಿ ಸಾಮೂಹಿಕವಾಗಿ ಆತ್ಮಹತ್ಯೆ

8 months ago

ಬೆಂಗಳೂರು: ಅತಿಯಾದ ಸಾಲಬಾಧೆಯಿಂದ ಬೇಸತ್ತ ಕಲಬುರಗಿಯ ಕುಟುಂಬವೊಂದು ಹೈದರಾಬಾದ್‌ನಲ್ಲಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಹೈದರಾಬಾದ್‌ನ ಮಿಯಾಪುರದಲ್ಲಿ ಕಲಬುರಗಿಯ ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ನರಸಿಂಹ(60), ವೆಂಕಟಮ್ಮ(55), ಅಳಿಯ ಅನಿಲ್(32), ಮಗಳು ಕವಿತಾ (24) ಮತ್ತು ಅಪ್ಪು(2) ಎಂದು ಗುರುತಿಸಲಾಗಿದೆ.

ಮೃತಪಟ್ಟವರೆಲ್ಲರೂ ಕಲಬುರಗಿಯ ಲಕ್ಷ್ಮಯ್ಯ ಅವರ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಅವರು ಕೆಲವು ದಿನಗಳಿಂದ ಹೈದರಾಬಾದ್‌ನಲ್ಲಿ ವಾಸಿಸುತ್ತಿದ್ದರು. ಬುಧವಾರ ರಾತ್ರಿ ಅವರೆಲ್ಲರೂ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ದುರ್ಘಟನೆಯಲ್ಲಿ ನರಸಿಂಹ, ಅವರ ಪತ್ನಿ ವೆಂಕಟಮ್ಮ, ಮಗಳು, ಅಳಿಯ ಮತ್ತು ಮೊಮ್ಮಗು ಸಾವನ್ನಪ್ಪಿದ್ದಾರೆ ಎಂದು ಮಿಯಾಪುರ ಪೊಲೀಸರು ತಿಳಿಸಿದ್ದಾರೆ.

ನರಸಿಂಹ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಅವರಲ್ಲಿ ಒಬ್ಬ ಮಗಳು, ಅಳಿಯ ಮತ್ತು ಮೊಮ್ಮಗುವಿನೊಂದಿಗೆ ಮಕ್ತಾ ಮಹಬೂಬ್‌ಪೇಟೆಯಲ್ಲಿ ವಾಸಿಸುತ್ತಿದ್ದರು. ನರಸಿಂಹ ಮತ್ತು ಅವರ ಕುಟುಂಬ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು.

ಈ ಆತ್ಮಹತ್ಯೆಗೆ ಆರ್ಥಿಕ ಸಮಸ್ಯೆಗಳೇ ಕಾರಣವಾಯಿತೇ ಅಥವಾ ಬೇರೆ ಏನಾದರೂ ಕಾರಣವಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply